Advertisement

ಹಿಂದಿನ ಜನ್ಮದಲ್ಲಿ ಕನ್ನಡಿಗನಾಗಿದ್ದೆ 

10:07 AM Jul 30, 2021 | Team Udayavani |

ಖ್ಯಾತ ಹಿನ್ನೆಲೆ ಗಾಯಕ ಸೋನು ನಿಗಮ್‌ ಕನ್ನಡ, ಪಂಜಾಬಿ, ಹಿಂದಿ, ತೆಲುಗು, ಮಲಯಾಳ, ಮರಾಠಿ ಮತ್ತು ತಮಿಳು ಭಾಷೆಗಳಲ್ಲಿ ಹಾಡುವ ಮೂಲಕ ಜನಪ್ರಿಯರಾಗಿದ್ದಾರೆ. ಜು. 30 ಸೋನು ನಿಗಮ್‌ ಅವರ 48ನೇ ಹುಟ್ಟುಹಬ್ಬದ ಸಂಭ್ರಮ. ಈ ಹಿನ್ನೆಲೆಯಲ್ಲಿ ಉದಯವಾಣಿ ಡಾಟ್‌ ಕಾಮ್‌ ಸೋನು ನಿಗಮ್‌ ಜತೆ ನಡೆಸಿರುವ ಸಂದರ್ಶನದ ಆಯ್ದ ಭಾಗ ಇಲ್ಲಿದೆ.

Advertisement

ಸೋನು ನಿಗಮ್ ಸಂದರ್ಶನದ ವಿಡಿಯೋ ವೀಕ್ಷಿಸಲು ಈ ಲಿಂಕ್ ಕ್ಲಿಕ್ ಮಾಡಿ:

ನಿಮ್ಮ ಕನ್ನಡಾಭಿಮಾನದ ಕುರಿತು ಜನರಿಗೆ ಗೊತ್ತಿದೆ. ನಿಮಗೆ ಕನ್ನಡ ಬರುತ್ತದೆಯೇ?

ಸೋನು: ನಾನು ಬೆಂಗಳೂರಿನಲ್ಲಿ ಇದ್ದಿದ್ದರೆ ಕನ್ನಡದಲ್ಲಿ ಮಾತನಾಡುತ್ತಿದ್ದೆ. ನಾನು ಕೆಲಸ ಮಾಡುವ ಕ್ಷೇತ್ರದಲ್ಲಿ ಜನರು ಹೆಚ್ಚಾಗಿ ಇಂಗ್ಲಿಷ್‌ನಲ್ಲಿ ಮಾತನಾಡುತ್ತಾರೆ.  ನಾನು ಕನ್ನಡ ಹಾಡನ್ನು ಹಾಗೇ ಸುಮ್ಮನೆ ಹಾಡುವುದಿಲ್ಲ. ಕನ್ನಡ ನನಗೆ ಬರದೇ ಇರುವುದರಿಂದ ಹಿಂದಿಯಷ್ಟೇ ಕನ್ನಡ ಹಾಡಿನ ಮೇಲೆ ಗಮನ ಕೊಡುತ್ತೇನೆ. ಹಿಂದಿ ಹಾಡು ಹಾಡುವಾಗ ಟೆಕ್ನಿಕ್‌ ಮತ್ತು ಭಾವನೆಗಳ ಮೇಲೆ ಗಮನ ಕೊಡುತ್ತೇನೆ. ಆದರೆ ಕನ್ನಡ ಹಾಡು ಹಾಡುವಾಗ ಪದಗಳ ಬಗ್ಗೆ ಹೆಚ್ಚು ಗಮನ ನೀಡುತ್ತೇನೆ. ಯಾಕೆಂದರೆ ಬೇಸರದ ಭಾವನೆಯನ್ನು ಖುಷಿ ಎಂದು ವ್ಯಕ್ತಪಡಿಸಬಾರದು; ಖುಷಿಯನ್ನು ಬೇಸರದ ಭಾವದಲ್ಲಿ ಪ್ರಸ್ತುತಪಡಿಸಬಾರದು.

ಮೊದಲ ಕನ್ನಡ ಹಾಡು ಹಾಡಿದ ದಿನವನ್ನು ನೆನಪಿಸಿಕೊಳ್ಳಿ…

Advertisement

ಸೋನು: ನಾನು ಮೊದಲ ಕನ್ನಡ ಹಾಡು ಹಾಡಲು ಕಾರಣ ಡಾ| ವಿಷ್ಣುವರ್ಧನ್‌. ಅದು 1996ರಲ್ಲಿ ಇರಬೇಕು. ಆ ಹಾಡನ್ನು ಕಂಪೋಸ್‌ ಮಾಡಿದ್ದು ಹಂಸಲೇಖ. ವಿಷ್ಣುವರ್ಧನ್‌ ಆ ಹಾಡನ್ನು ನನ್ನ ಮುಂದೆ ತುಂಬಾ ಚೆನ್ನಾಗಿ ಹಾಡಿದ್ದರು. ಅವರು ನನ್ನನ್ನು ತುಂಬಾ ಇಷ್ಟಪಟ್ಟು “ಈ ಹಾಡು ನೀನು ಹಾಡು’ ಎಂದಿದ್ದರು. ನಾನು ಬೇಗ ಹಾಡನ್ನು ಕಲಿತೆ, ಚೆನ್ನಾಗಿ ಹಾಡಿದೆ. ಹಂಸಲೇಖ ಬಹಳ ಸರಳ ವ್ಯಕ್ತಿ. ನಾನು ಇಂದಿಗೂ ಅವರನ್ನು ಅದೇ ಪ್ರೀತಿ ಮತ್ತು ಗೌರವದಿಂದ ಕಾಣುತ್ತೇನೆ. ಯಾಕೆಂದರೆ ಕನ್ನಡದಲ್ಲಿ ನನ್ನ ಮೊದಲ ಗುರು ಅವರೇ! ಕನ್ನಡದ ದಿಗ್ಗಜರ ಜತೆ ಕಳೆದ ಅಮೂಲ್ಯ ನೆನಪು ನನ್ನಲ್ಲಿದೆ ಮತ್ತು ಅಂಥವರ ಸಾನ್ನಿಧ್ಯ ಪಡೆದ ನಾನು ಧನ್ಯ.

2009- 10ರಲ್ಲಿ “ನೀನೇ ಬರೀ ನೀನೇ’ ಆಲ್ಬಮ್‌ ಬಿಡುಗಡೆಯಾಗಿತ್ತು. ಕನ್ನಡಿಗರಿಗೆ ಧನ್ಯವಾದ ಹೇಳುವ ಸಲುವಾಗಿ ಇದನ್ನು ತಯಾರಿಸುವ ಆಸಕ್ತಿ ತೋರಿದ್ದು ನೀವೇ ಅಂತ ಕೇಳಿದ್ದೇವೆ. ಈ ಆಲ್ಬಮ್‌ ಹಿಂದಿನ ನಿಮ್ಮ ಚಿಂತನೆ ಏನಾಗಿತ್ತು?

ಸೋನು: ಪ್ರಮುಖವಾಗಿ ಸ್ವತಂತ್ರ ಸಂಗೀತ ಕರ್ನಾಟಕದಲ್ಲಿ ಹೆಚ್ಚಬೇಕು ಎನ್ನುವ ಉದ್ದೇಶ ಇತ್ತು. ಸೋಲೋ ಆಲ್ಬಮ್‌, ಪ್ರಮೋಷನ್‌, ಮಾರ್ಕೆಟಿಂಗ್‌ ಜತೆಗೆ ಸಿನೆಮಾದಲ್ಲಿ ಬಳಸುವ ಯಂತ್ರೋಪಕರಣಗಳನ್ನು ಅದರಲ್ಲಿ ಬಳಸಿದ್ದೆವು. ಆ ಅನುಭವ ತುಂಬಾ ಚೆನ್ನಾಗಿತ್ತು. ಮನೋಮೂರ್ತಿ, ಜಯಂತ್‌ ಕಾಯ್ಕಿಣಿ ಅವರಿಗೆ ನನ್ನ ಜತೆ ಕೆಲಸ ಮಾಡಿದ್ದಕ್ಕೆ ಧನ್ಯವಾದ ಹೇಳುತ್ತೇನೆ. ಅದರ ಹಾಡುಗಳು ಈಗಲೂ ಜನರ ಮನಸ್ಸು ಮತ್ತು ಹೃದಯದಲ್ಲಿ ಉಳಿದಿವೆ.

ನೀವು ವಿಶ್ವದ ಯಾವುದೇ ಮೂಲೆಯಲ್ಲಿ ಕಾರ್ಯಕ್ರಮ ನೀಡುತ್ತಿದ್ದರೂ ನೆರೆದ ಪ್ರೇಕ್ಷಕರಲ್ಲಿ ಒಬ್ಬ “ಕನ್ನಡ’ ಹಾಡು ಹಾಡಿ ಎಂದು ಕೂಗಿದ್ದು ಕೇಳಿದರೆ ಅವರಿಗಾಗಿ ಒಂದು ಹಾಡು ಹಾಡುತ್ತೀರಂತೆ…

ಸೋನು: ಹೌದು, ನಾನು ಎಲ್ಲಿದ್ದೇನೆ ಅಂತ ನೋಡುವುದಿಲ್ಲ. ಪಂಜಾಬ್‌ನವರು, ಮಹಾರಾಷ್ಟ್ರದವರು, ಗುಜರಾತಿಗಳು ಇದ್ದರೂ ನನಗೆ “ಕನ್ನಡ’ ಕೇಳಿಸಿದರೆ “ಅನಿಸುತಿದೆ ಯಾಕೋ ಇಂದು’ ಹಾಡನ್ನು ಹಾಡುತ್ತೇನೆ.

ಜಯಂತ್‌ ಕಾಯ್ಕಿಣಿ ಅವರ ಸಾಹಿತ್ಯದ ಕುರಿತು ನಿಮ್ಮ ಅಭಿಪ್ರಾಯ ಏನು?

ಸೋನು: ನನಗೆ ಅವರ ಭಾವನೆಗಳನ್ನು ಹಿಂದಿಗೆ ತರ್ಜುಮೆ ಮಾಡಿ ಅವುಗಳನ್ನು ಅವರಿಂದ ಕದಿಯಬೇಕು ಅನಿಸುತ್ತದೆ. ಅವರೊಬ್ಬ ವಿಶೇಷ ವ್ಯಕ್ತಿ. ಆ ರೀತಿ ಆಲೋಚಿಸಲು ಒಂದು ವಿಶೇಷ ಆತ್ಮವಿರಬೇಕು. ಅವರು ಬಹಳ ಆಳವಾಗಿ ಆಲೋಚಿಸುತ್ತಾರೆ. ಅವರ ಚಿಂತನೆಗಳನ್ನು ಹಿಂದಿ ಮಾತ್ರ ಅಲ್ಲ, ಬೇರೆ ಯಾವುದೇ ಭಾಷೆಗೆ ಅನುವಾದಿಸಿದರೂ ಹಲವು ಕಾರಣಗಳಿಗೆ ಭಿನ್ನವಾಗಿ ಕಾಣುತ್ತದೆ. ಅವರೊಬ್ಬ ಅದ್ಭುತ ಬರಹಗಾರ.

ಇತ್ತೀಚೆಗೆ ಬೆಂಗಳೂರಿನ ಕಾರ್ಯಕ್ರಮವೊಂದ ರಲ್ಲಿ “ಹಿಂದಿನ ಜನ್ಮದಲ್ಲಿ ನಾನು ಕನ್ನಡಿಗನಾಗಿದ್ದೆ’ ಅಂದಿದ್ದಿರಲ್ಲ…

ಸೋನು: ಹೌದು, ನಾನು ಇದನ್ನು ನಂಬುತ್ತೇನೆ. ಅಸ್ತಿತ್ವದ ಬಗ್ಗೆ ಹಲವು ಗ್ರಹಿಕೆಗಳಿರಬಹುದು. ಆದರೆ ಹಿಂದಿನ ಜನ್ಮದಲ್ಲಿ ನಾನು ಕನ್ನಡಿಗನಾಗಿದ್ದೆ. ನಾನು 33 ಭಾಷೆಗಳಲ್ಲಿ ಹಾಡಿದ್ದೇನೆ. ಕರ್ನಾಟಕದಲ್ಲಿ ಸಿಕ್ಕ ಪ್ರೀತಿ ಬೇರೆಲ್ಲಿಗಿಂತಲೂ ಹೆಚ್ಚು ಅನ್ನಿಸುತ್ತದೆ. ಕನ್ನಡದಲ್ಲಿ ಅದ್ಭುತ ಹಾಡುಗಳನ್ನು ಹಾಡಿದ್ದೇನೆ.

Advertisement

Udayavani is now on Telegram. Click here to join our channel and stay updated with the latest news.

Next