Advertisement

ಮಹಾತ್ಮ

06:00 AM Sep 30, 2018 | Team Udayavani |

ಮೊದಲ ಮಹಾಯುದ್ಧ- ಮುಗಿಯಿತು. 
(ಮಿತ್ರರಾಷ್ಟ್ರಗಳ ವಿಜಯದ ಸಂಭ್ರಮದಲ್ಲಿ ನಡೆದ ಕ್ರೀಡೆಗಳಲ್ಲಿ ನನಗೂ ಒಂದು ಬಹುಮಾನ!) 
ಇನ್ನೇನು, ಸ್ವಾತಂತ್ರ್ಯ ಅನತಿ ದೂರದಲ್ಲೇ ಕೈಯಳತೆಯಲ್ಲೇ ಇದೆ ಎಂಬ ಶುಭ ಶಕುನದಂತಿತ್ತು ದೇಶದ ವಾತಾವರಣ. ಆದರೆ, ಸಂಭ್ರಮವನ್ನು ಅಳಿಸಿ ಹೌಹಾರಿಸಿ ಬಂದದ್ದು ರೌಲಟ್‌ ಆ್ಯಕ್ಟ್ .  ಜಲಿಯನ್‌ವಾಲಾ ಬಾಗ್‌ ಹತ್ಯಾಕಾಂಡ.  ತಕ್ಷಣವೇ ಗಾಂಧೀಜಿಯವರ ಸತ್ಯಾಗ್ರಹ-ಅಂತರಂಗದ ಶುದ್ಧಿಗಾಗಿ. ಮಹತ್ವದ ಹೆಜ್ಜೆಗೆ ಮುಂಚೆ ಮಾಡುವ ಇಂಡಿಯಾದ ಪುರಾತನ ಆಚರಣೆಯದು.  ಆದರೆ ಗಾಂಧೀಜಿಯವರಲ್ಲಿ ಅದೊಂದು ಹೊಚ್ಚ ಹೊಸ ಆಯುಧವಾಗಿ ಕಂಡಿತು ಹೇಗೆ!  ಅದೇಕೆ ಅಷ್ಟು ಹೊಳಪಿನಿಂದ ಕೂಡಿದೆ? ಎದುರಾಳಿಯನ್ನು ನಿಶ್ಚೇತನಗೊಳಿಸುವಂತೆ?  ನಾನೂ ಸತ್ಯಾಗ್ರಹಿಯಾಗಬೇಕು. ಗಾಂಧೀಮಾರ್ಗದಲ್ಲಿ ಸಾಗಬೇಕು.  ನಿತ್ಯವೂ ಸಂಜೆ ಮುಂಜಾನೆ ಕೋಣೆೆಯ ಏಕಾಂತದಲ್ಲಿ ಧ್ಯಾನ ಮಾಡತೊಡಗಿದೆ.  ಈಗಾಗಲೇ ದೈಹಿಕವಾಗಿ ಹಾಗೂ ಮಾನಸಿಕವಾಗಿ ಸಾಕಷ್ಟು ಶಕ್ತಿವಂತಳೇ. ಆದರೆ ಅಷ್ಟು ಸಾಲದು.   ಸತ್ಯಾಗ್ರಹಿಯಾಗಲು ಪ್ರಬಲವಾದ ಸಿದ್ಧತೆ ಬೇಕೇ ಬೇಕು. 
.
.
ಗಾಂಧೀಜಿ ಸತ್ಯಾಗ್ರಹ ಸಭೆಯನ್ನು ಆರಂಭಿಸುತ್ತಾರೆ. ಅದಕ್ಕಾಗಿ ಮುಂಬಯಿಗೆ ಬರುತ್ತಾರೆ, ಇದೊಂದು ಐತಿಹಾಸಿಕ ಸಂದರ್ಭ. ಭಾವೀ ಸತ್ಯಾಗ್ರಹಿಗಳು ನಾಗರಿಕ ಅಸಹಕಾರ, ಸ್ವದೇಶೀ ಚಳುವಳಿ, ಕೋಮು ಸೌಹಾರ್ದ ಮುಂತಾ ದುವು ಎಲ್ಲಕ್ಕಿಂತ ಸಂಪೂರ್ಣ ಅಹಿಂಸೆಗೆ ಮತ್ತು ಸತ್ಯಕ್ಕೆ ತಾವು ಮುಡಿಪೆಂದು ಪ್ರತಿಜ್ಞೆ ಮಾಡುವ ಸಭೆ  - ಅಂತೆಲ್ಲ ಕೇಳಿದೆ. 

Advertisement

ಬ್ರಿಟಿಷರ ವಿರುದ್ಧ ಹೋರಾಡುವ ಎಲ್ಲರಿಗೂ ಈ ಎಲ್ಲ ಶರ್ತಗಳೂ ಒಪ್ಪಿಗೆ ಎನ್ನುವಂತಿರಲಿಲ್ಲ. ಸ್ವತಃ ಗಾಂಧೀಜಿಯೇ ನುಡಿದರು- ಆವೇಶದ ಘಟನೆಗಳಲ್ಲಿ ಜನ ಸೇರುವಷ್ಟು ಇಲ್ಲಿ ಸೇರುವುದಿಲ್ಲ. ಇಂತಹ ಶಾಂತವಾಗಿ ನಡೆಯುವ ರಚನಾತ್ಮಕ ಕಾರ್ಯಗಳಿಗೆ ತೀರಾ ಕಾಳಜಿಯುಳ್ಳ ಜನರಷ್ಟೇ ಸೇರುವರು ಅಂತ. 

ಗಾಂಧೀಜಿ ಆ ಸಭೆಗೆ ಬರುತ್ತಿದ್ದಾರೆ ಎಂದ ಮೇಲೆ ಅಲ್ಲಿಗೆ ಹೋದರೆ ಅವರನ್ನು ನೋಡಲು ಸಾಧ್ಯವಾಗಬಹುದು. ಹಂಬಲ ತಡೆಯದೆ, ಮುಂಬಯಿಗೆ ಹೊರಟ ಸಣ್ಣ ತಂಡದಲ್ಲಿ ನಾನೂ ಸೇರಿಕೊಂಡೆ. ಪಂಢರಾಪುರಕ್ಕೆ ಹೊರಟ ಭಕ್ತರ (ವಾರಕರಿ) ತಂಡದೊಂದಿಗೆ ಸೇರಿದ ಸಖೂಬಾಯಿಯಂತೆ!
ಗಾಂಧೀಜಿ, ಸತ್ಯಾಗ್ರಹವನ್ನು ಹೆದೆಗೇರಿಸಿ ಹೊರಡುವ ಯೋಧರ ಜವಾಬ್ದಾರಿ ತಿಳಿಸಿದರು. ಕ್ಲುಪ್ತ, ಸ್ಪಷ್ಟ ಹರಿತ,  ಸಾಹಿತ್ಯಿಕ, ಸರಳ ಮಾತುಗಳು.
ಅಬ್ಟಾ ! ಭಾಷೆಯೊಂದು ಗಾಂಧೀಜಿ ಮುಖೇನ ಮೆರೆಯುವ ಪರಿಯೆ! (ಲಾರ್ಡ್‌ ಇರ್ವಿನ್‌ ಒಮ್ಮೆ ಹೇಳಿದ್ದರಂತೆ- “”ಆತ ಮಾತಾಡುವ ಇಂಗ್ಲಿಷ್‌ ಕೇಳುತ್ತಿದ್ದರೆ ಮೆಲ್ಲ ಡಿಕÏನರಿ ತೆರೆದು ಹುಡುಕುವಂತಾಗುತ್ತದೆ” ಅಂತ.)

ತೂಕದ ಮಾತುಗಾರ- ಗಾಂಧೀಜಿ. 
ಒಂದಳತೆ ಹೆಚ್ಚಿಲ್ಲ, ಕಡಿಮೆಯಿಲ್ಲ…
ಹಾnಂ. ಆ ದೃಷ್ಟಿಯಿಂದ ಅಪ್ಪಟ ವೈಶ್ಯ!
ಇರಲಿ –
ಅಂದು, “”ಸತ್ಯಾಗ್ರಹವನ್ನು ಕೈಗೆತ್ತಿಕೊಂಡರೆ ಎಲ್ಲ ಕಳೆದುಕೊಳ್ಳಲು ಸಿದ್ಧರಾಗಿ. ಕಟ್ಟಾ ಅಹಿಂಸಾ ವ್ರತಧಾರಿಯಾಗೋದು, ಕಠಿನ ಶಿಸ್ತಿನ ಸಿಪಾಯಿಯಾಗೋದು ಸುಲಭವಲ್ಲ” ಎಂದರು.

ಕೇಳುತ್ತಿದ್ದಂತೆ ನನಗೆ ಇದು ಕಷ್ಟ ಅನಿಸಿತು.
ಹೋಗಿ ಹೋಗಿ ನಾನು ಮೆಲ್ಲಗೆ ಗಾಂಧೀಜಿಯ ನಿಕಟವರ್ತಿಯೊಬ್ಬರೊಡನೆಯೇ ಪಿಸು ನುಡಿದೆ.
“”ಹಿಂಸಾತ್ಮಕ ಹೋರಾಟವಿಲ್ಲದೆ ಗೆದ್ದವರಾರು ಇತಿಹಾಸದಲ್ಲಿ?”
-ಅದು ನನ್ನ ಟೀಕೆಯಲ್ಲ, ಸಂದೇಹವಾಗಿತ್ತು.
ಆದರೆ ಗ್ರಹಚಾರವೆ! 
ಆ ವ್ಯಕ್ತಿ ಅದನ್ನು ಹಾಗೆಯೇ ಗಾಂಧೀಜಿಯವರಿಗೆ ತಲುಪಿಸುತ್ತಾರೆಂದು ನನಗೇನು ಗೊತ್ತು? 
ಗಾಂಧೀಜಿಯಿಂದ ನನಗೊಂದು ಅನಿರೀಕ್ಷಿತ ಪತ್ರ
“”ಅಹಿಂಸೆಯಲ್ಲಿ ನಂಬಿಕೆೆಯಿಲ್ಲದೆ ಹೋದಲ್ಲಿ ಅಹಿಂಸಾ ಆಂದೋಲನಕ್ಕೆ ಸೇರಬೇಡ”
ಹn! 
ಓದಿ ಉಸಿರು ಒಮ್ಮೆ ಸಿಕ್ಕಿಕೊಂಡಂತಾಯ್ತು.
.
.
ಆಯಿತು, ಜೀವನ ಮುಗಿಯಿತು. ದಾರಿಯೆಲ್ಲ ಮುಚ್ಚಿ ಹೋಯಿತು ಎನ್ನುವಂತೆ ಕಾಣುವುದಿದೆ, ಎಲ್ಲರ ಬದುಕಲ್ಲಿಯೂ ಒಮ್ಮೆಯಲ್ಲ ಒಮ್ಮೆ. 
ಆದರೆ, ಅದು ಹಾಗನಿಸುವುದಷ್ಟೆ. ಹರೀಂದ್ರರಿಂದ ಹೊರಬಂದ ನಾನೂ ಆ ಹೊತ್ತಿನಲ್ಲಿ ಅಂತಹ ಭ್ರಮೆಗೆ ಒಳಗಾಗಿದ್ದೆ. ಆದರೆ, ಗಾಂಧೀಜಿಯವರಿಂದಾಗಿ ಹೊಸ ದಾರಿಗೆ ಹೊರಳಿಕೊಂಡೆ. ಹೊಸ ದಾರಿ ಅದು ಹೋರಾಟದ ದಾರಿ.  ಕೇವಲ ದೇಶದ ಸ್ವಾತಂತ್ರ್ಯಕ್ಕಾಗಿ ಮಾತ್ರವಲ್ಲ, ಅದು ಮಹಿಳೆಯ ಅಸ್ಮಿತೆಗಾಗಿ ಹೋರಾಟ ಕೂಡ.  ಮಹಿಳೆಯರಿಗೆ ತಕ್ಕ ಸ್ಥಾನ-ಮಾನ ಸಿಗಬೇಕೆಂದು ನಂಬಿದವರು ಗಾಂಧೀಜಿ. ನನಗೆ ಅವರಿಗಿಂತ ಆಪ್ತರಾಗಲು ಯಾರು ಸಾಧ್ಯ? ಸಾಮಾನ್ಯನಲ್ಲ ಆತ, ಸಾಮಾನ್ಯರಲ್ಲಿ ಸಾಮಾನ್ಯರ ಪ್ರತಿನಿಧಿ. ನೇತಾರ, ಮಾರ್ಗದರ್ಶಕ, ನನ್ನ ಪರಮೋಚ್ಚ ಹಿರಿಯ ಗೆಳೆಯ, ರಾಜಕೀಯವೆಂದರೆ ಆತನಿಗೆ ಹೊಸ ಜೀವನದ ಕಡೆಗೆ ಸಾಗುವ ಕ್ರಿಯಾತ್ಮಕ ಶೋಧನೆ. ನ‌ೂರಾರು ಛಿದ್ರಗಳನ್ನು ಹೊಲಿದು ಜೋಡಿಸಿ ಅಂತದೃìಷ್ಟಿಯನ್ನು ಸ್ಪುಟಗೊಳಿಸಿಕೊಡುವ ನಿಜದ ಮೊನೆ. ದೇಶವೆಂದರೇನೇ ಆತನಿಗೆ ಮನೆ.

Advertisement

ಮಹಾಮನೆ.
ಆತನ ಅಹಿಂಸಾಮಂಟಪದ ಸದಸ್ಯೆಯಾದೆ ನಾನು.
ನೇತಾರ ಸಿಗದೆ ಅಲೆಯುತ್ತಿದ್ದ ನನ್ನ ಮನ-ನಿಶ್ಚಿಂತವಾಯ್ತು.
.
.
ವಿಭಜನೆಯ ಮಾತುಕತೆ ಸಾಗುತ್ತಿದ್ದ ದಿನಗಳವು. 
ಗಾಂಧೀಜಿಯ ಭೇಟಿಗೆ ಬಂದಿದ್ದರು ಗಫಾರ್‌ ಖಾನ್‌. ಅಂದಲ್ಲಿ ನಾನೂ ಇದ್ದೆ. 
“ಈತ ದೇವಮಾನವ’ ಗಾಂಧೀಜಿ, ಖಾನ್‌ ಸಾಬ್‌ ಅವರನ್ನು ಪರಿಚಯ ಮಾಡಿಸಿದ್ದು ಹೀಗೆ ನನಗೆ.
ಅಷ್ಟು ಸತ್ಯವಂತ ಮೃದು ಹೃದಯಿ. ನೇರ, ಪ್ರೀತಿಸುವ ಸ್ವಭಾವದ ಅಬ್ದುಲ್‌ ಗಫಾರ್‌ ಖಾನ್‌. ಗಾಂಧೀಜಿಯವರ ಎದುರು ಕುಳಿತಿದ್ದಾರೆ. ವಿಭಜನೆಯ ಮಾತುಕತೆೆ ಕೇಳಿದ ಅವರು ತಲ್ಲಣಿಸಿ ಹೋಗಿದ್ದಾರೆ.  ಗಾಂಧೀಜಿಯ ಬಳಿ, 
“”ಗಾಂಧೀಜಿ, ಹಿಂದೂಸ್ಥಾನಕ್ಕೆ ನಾವು ಪರಕೀಯರಾಗೋದು. ನಿಮ್ಮಿಂದ, ನಿಮ್ಮೆಲ್ಲರಿಂದ ದೂರವಾಗೋದು… ಎಣಿಸಿದರೇನೇ…” ಎನ್ನುತ್ತಿದ್ದಾರೆ, ತಳಮಳಿಸುತ್ತಿದ್ದಾರೆ
ಗಾಂಧೀಜಿಯೋ
ಒಳಗಿಂದ ನೊಂದು ಛಿದ್ರವಾಗಿದ್ದಾರೆ.
ಆದರೂ ಶಾಂತದನಿಯಲ್ಲಿ-
“”ಅಹಿಂಸೆಗೆ ಹತಾಶೆಯೆಲ್ಲಿದೆ ಖಾನ್‌? ಮಾಡು ಇಲ್ಲವೆ ಮಡಿ ಎಂದು ಪ್ರತಿಜ್ಞೆ ಸ್ವೀಕರಿಸಿದವರು ನೀವು. ಏನು ಭಯ? ಇದು ನಿಮ್ಮ ಪರೀಕ್ಷಾ ಕಾಲ”
ಖಾನ್‌: “”ಅಲ್ಲ. ಪರೀಕ್ಷಾ ಕಾಲ ಅಲ್ಲ ಬಾಪೂ. ಇದು ಫಾಶೀ ಶಿಕ್ಷೆ”
ಮರುಗಿದರು ಗಾಂಧೀಜಿ. ವೇದನೆ ಮಡುಗಟ್ಟಿತ್ತು.
“”ಸ್ವಾತಂತ್ರ್ಯವೇನೋ ಸಿಗಬಹುದು. ಆದರೆ ವೀರ ಪಠಾಣರು ಅವರ ಸ್ವಾತಂತ್ರ್ಯ ಕಳಕೊಳ್ಳುವರು. ಬಾದಶಾಹ ಖಾನರ ಶೋಕ ನನ್ನ ಹೃದಯ ಹಿಂಡುತ್ತಿದೆ. ದೇವತಾ ಮನುಷ್ಯ ಈತ. ಇಂಥವರಿಗೆ ಸೋಲೆಂಬುದಿಲ್ಲ”- ತನ್ನೊಳಗೇ, ಬಿಸುಸುಯ್ದಂತೆ, ನುಡಿದುಕೊಂಡರು ಗಾಂಧೀಜಿ.
.
.

ಸೇವಾಗ್ರಾಮದಲ್ಲಿ ಅವತ್ತೂಂದು ದಿನ ರಾತ್ರಿ, ನಾನು ಈಚೆ ಮಲಗಿದ್ದೆ. ಆಚೆ ಕಣ್ಣಿಂದ ಮರೆಯಾದರೂ ಕಿವಿಗೆ ಕೇಳುವಷ್ಟು ದೂರದಲ್ಲಿದ್ದರು ಕಸ್ತೂರಿ ಬಾ ಮತ್ತು ಬಾಪೂ.
ಓದುತ್ತ ಮಲಗಿದವಳಿಗೆ ಅವರ ಮೆಲುಮಾತು ಕೇಳುತಿತ್ತು. ಆಕೆ ಅವರ ಪಾದ ಒತ್ತುತ್ತಿದ್ದಿರಬೇಕು ಎಂದು ನನ್ನ ಊಹೆ. ಅದು ತನ್ನ ಸಮಾಧಾನಕ್ಕೋ ಗಾಂಧೀಜಿಗಾಗಿಯೋ. ಒತ್ತುತ್ತ ಏನೋ ಹೇಳುತ್ತಿದ್ದಾರೆ, ಪ್ರಾಯಶಃ ಬೆಳಗಿಂದ ನಡೆದ ಎಲ್ಲದರ ವರದಿಯನ್ನೂ ಒಪ್ಪಿಸುತ್ತಿದ್ದಿರಬೇಕು. ಗಾಂಧೀಜಿಯೂ ಅದಕ್ಕೆ ಪ್ರತಿ ಎಂಬಂತೆ ಏನೋ ಹೇಳುತ್ತ ಇದ್ದರು. ಮಾತುಗಳನ್ನು ಈಚೆಯಿಂದ ಆಲಿಸುವ ಇಚ್ಛೆಯವಳಲ್ಲ ನಾನು. ಆದರೆ, ಅಯಾಚಿತವಾಗಿ ಅವು ಕಿವಿಯ ಮೇಲೆ ಬೀಳುತ್ತಿದ್ದವು, ಅಸ್ಪಷ್ಟವಾಗಿ. 

ಇದ್ಯಾವ ಬಗೆಯ ದಾಂಪತ್ಯ!
ಒಂದೆ ಎರಕ ಹೊಯ್ದಂಥ ಮನಸ್ಸುಗಳು. ಆದರೂ ತಂತಮ್ಮ ಮನೋಸ್ವಾತಂತ್ರ್ಯ ಬಿಟ್ಟುಕೊಡದವರು.
ಗಾಂಧೀಜಿ ಎಂಬ ಪತಿಯನ್ನು ಜಗತ್ತಿಗೆ ಬಿಟ್ಟುಕೊಟ್ಟು, ದೊಡ್ಡ ದೊಡ್ಡ ಭಿನ್ನಾಭಿಪ್ರಾಯಗಳ ಘರ್ಷಣೆಯಲ್ಲಿಯೂ ದಾಂಪತ್ಯ ಉಳಿಸಿಕೊಂಡರು ಬಾ, 
ತನ್ನ ಆಯ್ಕೆಗಳನ್ನು ಎಲ್ಲಿಯೂ ಕಳೆದುಕೊಳ್ಳದೆ! 
.
.
ಮುಂಜಾನೆಯೇ ಎದ್ದು ಚುರುಕಾಗಿ ಪುಟುಪುಟು ಹೆಜ್ಜೆಯಲ್ಲಿ ಕೆಲಸ ಮಾಡುತಿದ್ದರು ಬಾ. ನಾನು ಎದ್ದು ಬರುತ್ತಲೂ “”ಮಲಕೊ, ಇಷ್ಟು ಬೇಗ ಎದ್ದು ಏನು ಮಾಡಲಿಕ್ಕಿದೆ ನಿಂಗೆ?” ಎಂದರು.  ನಾನವರನ್ನು ಮೆಲ್ಲ ಕೇಳಿದೆ, 
“”ಇದೆಲ್ಲ ಹೇಗೆ ಸಾಧ್ಯವಾಯಿತು ಬಾ?”
“”ನಾನೇನು, ನನ್ನ ಪಾತ್ರವೇನು- ಸ್ಪಷ್ಟ ಪಡಿಸಿಕೊಂಡೆ, ಅಷ್ಟೆ” ನಕ್ಕರು ಬಾ.
ಜೊತೆಯಾತ್ರಿಕನ ಬಗೆಗಿನ ಆತ್ಮವಿಶ್ವಾಸದ ನಗೆಯದು. 
“”ಮತ್ತೆ, ಆ ಪಥ್ಯ, ವೈದ್ಯ, ರಾಶಿ ರಾಶಿ ಗಾಂಧಿಯನ್‌ ಸಿದ್ಧಾಂತಗಳು, ವಿಧಾನಗಳು- ಏನನಿಸುತ್ತೆ ನಿಮಗೆ?”
ಬಾ-ಗೆ ದೊಡ್ಡನಗೆ. ಇದೆಂತಹ ಮರುಳು ಪ್ರಶ್ನೆ ಎಂಬಂತೆ! 
ಅವರ ಆ ದೀರ್ಘ‌ ಉಪವಾಸಗಳಲ್ಲಿ ಆಕೆ ಉಳಿದುಕೊಂಡರು ಹೇಗೆ? ಕೇಳಲೆ?
ಬೇಡ, ಬೇಡ.
1942. ಬಾಪೂ ಬದಲಿಗೆ ಬಾ ಭಾಷಣ ಮಾಡುತ್ತಿದ್ದಾರೆ. ಪೊಲೀಸರು ಅವರನ್ನು ತಡೆದರು.
ಜೀವನ ಸಂಗಾತಿ ಜೊತೆಗಿನ ಕಟ್ಟಕೊನೆಯ ಪಥವದು.
ಅದೇ ಕೆಲಸಮಯದಲ್ಲೇ
ಬಾ 
ಕಣ್ಮರೆಯಾದರು.

ಸಂಗ್ರಹ ಮತ್ತು ನಿರೂಪಣೆ  :ವೈದೇಹಿ

Advertisement

Udayavani is now on Telegram. Click here to join our channel and stay updated with the latest news.

Next