Advertisement

ಮಣ್ಣಿನ ಲೂಟಿಗೆ ಬಲಿಯಾದ ಗುಡ್ಡಗಳು

03:05 PM Sep 26, 2022 | Team Udayavani |

ದೊಡ್ಡಬಳ್ಳಾಪುರ: ತಾಲೂಕಿನ ಮಾಕಳಿ ಬೆಟ್ಟ, ಹುಲುಕುಡಿ ಬೆಟ್ಟದ ಸಾಲಿನ ಗ್ರಾಮಗಳ ಸರ್ಕಾರಿ ಗೋಮಾಳದಲ್ಲಿನ ಬೃಹತ್‌ ಮಣ್ಣಿನ ದಿಬ್ಬಗಳು ಮಣ್ಣಿನ ಲೂಟಿಯಿಂದ ರಾತ್ರೋರಾತ್ರಿ ಕರಗಿ ಹೋಗುತ್ತಿರುವುದು ಪರಿಸರ ಪ್ರೇಮಿಗಳ ಆಕ್ರೋಶಕ್ಕೆ ಕಾರಣವಾಗಿದ್ದು, ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ಆಗ್ರಹ ಕೇಳಿ ಬಂದಿವೆ.

Advertisement

ತಾಲೂಕಿನ ಬಹುತೇಕ ಕೆರೆಗಳು ಈ ಬಾರಿ ತುಂಬಿ ಕೋಡಿ ಹರಿದಿವೆ. ಹೀಗಾಗಿ, ಕೆರೆ ಅಂಗಳದಲ್ಲಿ ಮಣ್ಣು ದೊರೆಯುತ್ತಿಲ್ಲ. ಇದರಿಂದ ಈಗ ಮಣ್ಣು ಲೂಟಿಕೋರರ ಕಣ್ಣು ಬೆಟ್ಟದ ಸಾಲಿನ ಮಣ್ಣಿನ ದಿಬ್ಬಗಳತ್ತ ನೆಟ್ಟಿದೆ. ಸಂಜೆಯಾಗುತ್ತಲೇ ಬೃಹತ್‌ ಹಿಟಾಚಿಯೊಂದಿಗೆ ನೂರಾರು ಸಂಖ್ಯೆಯಲ್ಲಿ ಬರುವ 10 ಚಕ್ರದ ಲಾರಿಗಳು ಬೆಳಗಾಗುಷ್ಟರಲ್ಲಿ ಮಣ್ಣಿನ ದಿಬ್ಬಗಳನ್ನು ಕರಗಿಸಿ ಇಡೀ ಪ್ರದೇಶವನ್ನು ಬಯಲು ಪ್ರದೇಶವಾಗಿಸುತ್ತಿವೆ.

ಸಂಜೆಯಾಗುತ್ತಲೇ ಕೆಲಸ ಆರಂಭ: ತಾಲೂಕಿನ ಘಾಟಿ ಸುಬ್ರಹ್ಮಣ್ಯಸ್ವಾಮಿ ದೇವಾಲಯ ಸಮೀಪದ ಬೆಟ್ಟದ ಸಾಲು, ಮೇಲಿನನಾಯಕರಂಡಹಳ್ಳಿ, ಗುಂಡಮಗೆರೆ ಹೊಸಹಳ್ಳಿ ರಸ್ತೆಯಲ್ಲಿನ ಬೆಟ್ಟದ ಸಾಲಿನಲ್ಲಿ ಸಂಜೆ 5 ಗಂಟೆಯ ನಂತರ ಮಣ್ಣು ಸಾಗಾಣಿಕೆ ಕೆಲಸ ಪ್ರಾರಂಭವಾಗುತ್ತಿದೆ. ತಾಲೂಕಿನಿಂದ ಮಣ್ಣು ಬೆಂಗಳೂರಿನ ಅಂಚಿನಲ್ಲಿ ನಿರ್ಮಾಣ ಆಗುತ್ತಿರುವ ಹೊಸ ಲೇಔಟ್‌ಗಳನ್ನು ಸಮತಟ್ಟು ಮಾಡುವ, ವಾಸ್ತುವಿಗೆ ತಕ್ಕಂತೆ ವಿನ್ಯಾಸಗೊಳಿಸಲು ಬಳಸಲಾಗುತ್ತಿದೆ.

ಕಾನೂನು ಬಾಹಿರ: ದಾಬಸ್‌ಪೇಟೆಯಿಂದ ತಾಲೂಕಿನ ಮಾರ್ಗವಾಗಿ ಹೊಸಕೋಟೆ ತಾಲೂಕಿನವರೆಗೆ ನಿರ್ಮಾಣವಾಗುತ್ತಿರುವ ರಾಷ್ಟ್ರೀಯ ಹೆದ್ದಾರಿಗೆ ಅಗತ್ಯ ಇರುವ ಮಣ್ಣು ಸರಬರಾಜಿಗೆ ಖಾಸಗಿ ವ್ಯಕ್ತಿಗಳಿಗೆ ಅನಧಿಕೃತವಾಗಿ ಹೊರಗುತ್ತಿಗೆ ನೀಡಲಾಗಿದೆ. ಹೀಗಾಗಿ, ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಎಲ್ಲಾ ನಿಯಮ ಗಾಳಿಗೆ ತೂರಿ ಸಿಕ್ಕಿದ ಕಡೆಯಲ್ಲಾ ಮಣ್ಣನ್ನು ದೋಚಲಾಗುತ್ತಿದೆ.

ಪೊಲೀಸರ ನಿರ್ಲಕ್ಷ್ಯ: ಮಣ್ಣು ದೋಚುತ್ತಿರುವ ಬಗ್ಗೆ ಪೊಲೀಸರ ಗಮಕ್ಕೆ ತಂದಿದ್ದರೂ, ಯಾವುದೇ ಕ್ರಮ ಕೈಗೊಂಡಿಲ್ಲ. ಪೊಲೀಸ್‌ ಠಾಣೆಯ ಮುಂದಿನ ರಸ್ತೆಯಲ್ಲೇ 35 ಟನ್‌ಗೂ ಹೆಚ್ಚಿನ ಮಣ್ಣು ತುಂಬಿಕೊಂಡು ಇಡೀ ರಾತ್ರಿ ಸಾಲಾಗಿ ಲಾರಿಗಳು ಹೋಗುತ್ತಿದ್ದರೂ ಕಂಡೂ ಕಾಣದಂತೆ ವರ್ತಿಸುತ್ತಿದ್ದಾರೆ ಎಂದು ಮೇಲಿನನಾಯ ಕರಂಡಹಳ್ಳಿಯ ಗೋಪಾಲ್‌ ನಾಯಕ್‌ ದೂರಿದ್ದಾರೆ.

Advertisement

ಬೆಟ್ಟಗಳು ಕುಸಿಯುವ ಆತಂಕ: ಬೆಟ್ಟದ ತಪ್ಪಲಿನ ಮಣ್ಣನ್ನು ಸಾಗಾಣಿಕೆ ಮಾಡಿದ್ದರ ಪರಿಣಾಮವೇ ಇಂದು ನಂದಿ ಬೆಟ್ಟದಲ್ಲಿ ಬೆಟ್ಟ ಕುಸಿತಕ್ಕೆ ಕಾರಣವಾಗಿದೆ. ಇದೇ ರೀತಿ ಈಗ ಮಾಕಳಿ ಹಾಗೂ ಹುಲುಕುಡಿ ಬೆಟ್ಟದ ತಪ್ಪಲಿನಲ್ಲೂ ಪ್ರಕೃತಿದತ್ತವಾದ ಮಣ್ಣಿನ ದಿಬ್ಬಗಳನ್ನು ಖಾಲಿ ಮಾಡಿದರೆ ಈ ಬೆಟ್ಟಗಳಲ್ಲೂ ಕುಸಿತ ಪ್ರಾರಂಭವಾಗಲಿದೆ. ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳು ತಕ್ಷಣ ಕ್ರಮ ಕೈಗೊಂಡು ಅಕ್ರಮ ಮಣ್ಣು ಸಾಗಾಣಿಕೆಗೆ ಕಡಿವಾಣ ಹಾಕಬೇಕಿದೆ ಎಂದು ಪರಿಸರವಾದಿ ಚಿದಾನಂದ್‌ ಆಗ್ರಹಿಸಿದ್ದಾರೆ.

ತಾಲೂಕು ಆಡಳಿತದ ವೈಫ‌ಲ್ಯ: ಗ್ರಾಮಸ್ಥರ ಆರೋಪ : ನಮ್ಮೂರಿನ ದನ, ಕುರಿಗಳು ಮೇಯುತ್ತಿದ್ದ ಗೋಮಾಳದಲ್ಲಿನ ಮಣ್ಣಿನ ದಿಬ್ಬಗಳು 20 ದಿನಗಳಿಂದ ಈಚೆಗೆ ಕರಗಿ ಹೋಗಿದ್ದು, ಇಡೀ ಪ್ರದೇಶ ಆಟದ ಮೈದಾನದಂತೆ ಆಗಿದೆ. ಇನ್ನು ಕೆಲವು ಕಡೆಗಳಲ್ಲಿ ಬೃಹತ್‌ ಗಾತ್ರದ ಗುಂಡಿಗಳು ನಿರ್ಮಾಣವಾಗಿವೆ. ಆಳವಾಗಿರುವ ಗುಂಡಿಗಳಿಗೆ ಕಾಲು ಜಾರಿ ಒಳಗೆ ಬಿದ್ದರೆ ಮತ್ತೆ ಮೇಲೆ ಬರಲು ಸಾಧ್ಯವಿಲ್ಲದಾಗಿದೆ. ಟನ್‌ಗಟ್ಟಲೆ ಮಣ್ಣು ತುಂಬಿದ ಲಾರಿಗಳ ಓಡಾಟದಿಂದ ಗ್ರಾಮದ ರಸ್ತೆಗಳು ಹಾಳಾಗಿ ಹೋಗಿವೆ. ಈ ಬಗ್ಗೆ ಪ್ರಶ್ನೆ ಮಾಡುವವರ ವಿರುದ್ಧ ಮಣ್ಣು ಸಾಗಾಣಿಕೆದಾರರು ಕುಡುಕರನ್ನು ಜಗಳಕ್ಕೆ ಕಳಿಸುವ ಮೂಲಕ ಬೆದರಿಸುತ್ತಿದ್ದಾರೆ. ಮಣ್ಣಿನ ಲೂಟಿಗೆ ತಾಲೂಕು ಆಡಳಿತದ ವೈಫ‌ಲ್ಯವೇ ಕಾರಣವಾಗಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next