Advertisement

ಮಟ್ಟು: ಹೊಳೆಗೆ ತುಂಬಲಾದ ಮಣ್ಣು ತೆರವು ಆರಂಭ

11:35 AM May 12, 2022 | Team Udayavani |

ಕಟಪಾಡಿ: ಮಟ್ಟು ನೂತನ ಸೇತುವೆಯಡಿ ತುಂಬಲಾಗಿದ್ದ ಮಣ್ಣನ್ನು ತೆರವುಗೊಳಿಸುವ ಕಾರ್ಯ ಬುಧವಾರ ಆರಂಭಗೊಂಡಿದೆ.

Advertisement

ಆ ಮೂಲಕ ಮೇ 9ರಂದು ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿದ ಜಿಲ್ಲಾ ಉಸ್ತುವಾರಿ ಸಚಿವ ಎಸ್‌. ಅಂಗಾರ, ಕಾಪು ಕ್ಷೇತ್ರ ಶಾಸಕ ಲಾಲಾಜಿ ಆರ್‌ ಮೆಂಡನ್‌ ಅವರು ಸ್ಥಳೀಯರು, ರೈತರು, ಕೃಷಿಕರಿಗೆ ನೀಡಿದ್ದ ಭರವಸೆಯನ್ನು ಈಡೇರಿಸಿದಂತಾಗಿದೆ.

ಮಟ್ಟು ಗ್ರಾಮದ ರಾಜಪಥವಾಗಿ ತೆರೆದುಕೊಳ್ಳಬೇಕಿದ್ದ ಮಟ್ಟು ನೂತನ ಸೇತುವೆಯ ಕಾಮಗಾರಿ ಸ್ಥಗಿತಗೊಂಡಿದ್ದು, ಈ ಸೇತುವೆ ನಿರ್ಮಾಣಕ್ಕಾಗಿ ಹೊಳೆಯನ್ನು ಮಣ್ಣಿನಿಂದ ತುಂಬಿಸಲಾಗಿತ್ತು. ಪಿನಾಕಿನಿ ಹೊಳೆಯ ನೀರು ಸರಾಗವಾಗಿ ಹರಿಯದಂತೆ ತಡೆಯೊಡ್ಡಲಾಗಿತ್ತು.

ನಿರ್ಮಾಣಗೊಂಡ ಸೇತುವೆಯ ಕೆಲ ಕಿಂಡಿಗಳ ತಳಭಾಗದ ಮಣ್ಣನ್ನು ತೆರವುಗೊಳಿಸಲಾಗಿದ್ದು, ಇನ್ನುಳಿದಂತೆ ಸುಮಾರು 4 ಕಿಂಡಿಗಳ ಭಾಗದಲ್ಲಿ ಹೊಳೆಗೆ ತುಂಬಿಸಿರುವ ಮಣ್ಣನ್ನು ತೆರವುಗೊಳಿಸದೆ ಬಾಕಿ ಇರಿಸಲಾಗಿತ್ತು. ಹಾಗಾಗಿ ಈ ಬಾರಿಯ ಮಳೆಗಾಲದಲ್ಲಿ ಮೈದುಂಬಿ ಹರಿಯುವ ಮಟ್ಟು ಪಿನಾಕಿನಿ ಹೊಳೆಯಲ್ಲಿ ಹರಿಯಬೇಕಾದ ನೀರು ನದಿತಟವನ್ನು ದಾಟಿ ಗದ್ದೆ, ತೋಟಗಳತ್ತ ಹಾಗೂ ವಾಸ್ತವ್ಯದ ಮನೆಗಳತ್ತ ಮುನ್ನುಗ್ಗಲಿದೆ ಎಂಬ ಭೀತಿ ತೀರದ ನಿವಾಸಿಗಳದ್ದಾಗಿತ್ತು.

ಅದರೊಂದಿಗೆ ಕೃಷಿ ಹಾನಿಯಾಗುವ, ತೋಟಗಾರಿಕೆ ಬೆಳೆಯು ವಿನಾಶದತ್ತ ಸಾಗುವ ಭೀತಿ ವ್ಯಕ್ತಪಡಿಸಿದ್ದ ಕೃಷಿಕರು, ಸ್ಥಳೀಯ ನಿವಾಸಿಗಳ ಆಕ್ರೋಶದ ಕುರಿತು ಉದಯವಾಣಿಯು ಜನಪರ ಕಾಳಜಿಯ ವರದಿಯನ್ನು ಮೇ 6ರಂದು ಪ್ರಕಟಿಸಿತ್ತು.

Advertisement

ಆ ಹಿನ್ನೆಲೆಯಲ್ಲಿ ಮೇ 9ರಂದು ಸಂಜೆಯ ವೇಳೆಗೆ ಜನಪ್ರತಿನಿಧಿಗಳು ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿದ್ದು ಇದೀಗ ಮೇ 11ರಂದು ಮಣ್ಣು ತೆರವು ಕಾರ್ಯಾಚರಣೆಯು ಆರಂಭಗೊಂಡಿದೆ.

ಮಣ್ಣಲ್ಲಿ ಹೂತು ಹೋದ ಯಂತ್ರ

ಮಣ್ಣು ತೆರವಿಗೆ ಆಗಮಿಸಿದ ಸಣ್ಣ ಯಂತ್ರವೊಂದು ಅಕಾಲಿಕವಾಗಿ ಸುರಿಯುತ್ತಿರುವ ಮಳೆಯ ಪರಿಣಾಮ ಮಣ್ಣು ತೆರವುಗೊಳಿಸುವ ವೇಳೆ ಹೂತು ಹೋಗಿತ್ತು. ಅದನ್ನು ಮೇಲೆಳೆಯಲು ಮತ್ತೂಂದು ದೊಡ್ಡ ಗಾತ್ರದ ಯಂತ್ರಹರಸಾಹಸ ಪಡುತ್ತಿತ್ತು. ಬಳಿಕ ಎರಡೂ ಯಂತ್ರಗಳನ್ನು ಬಳಸಿ ಮಣ್ಣು ತೆರವು ಕಾರ್ಯಾಚರಣೆಯು ನಡೆಯುತ್ತಿರುವುದು ಕಂಡು ಬಂದಿತ್ತು.

ಮಣ್ಣು ಸಂಪೂರ್ಣ ತೆರವುಗೊಂಡಲ್ಲಿ ಈ ಮಳೆಗಾಲದಲ್ಲಿ ಸ್ವಲ್ಪ ನೆಮ್ಮದಿಯ ಪರಿಸ್ಥಿತಿ ನಮ್ಮದಾಗಲಿದೆ ಎಂದು ಸ್ಥಳೀಯರು ಸಂತಸ ವ್ಯಕ್ತಪಡಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next