Advertisement

ಸಮಾನತೆಯ ಸಮಾಜ ನಿರ್ಮಾಣ –ದಾನ ಧರ್ಮವೇ ಪರಮ ಪ್ರಧಾನ

12:30 AM Jun 15, 2018 | |

ನಾವು ಎಲ್ಲವನ್ನೂ ಮರೆತುಬಿಡುತ್ತವೆ. ಆಚಾರಗಳು, ಕಟ್ಟುನಿಟ್ಟುಗಳು ಕೇವಲ ರಂಝಾನ್‌ ತಿಂಗಳಿಗೆ ಮಾತ್ರ ಸೀಮಿತವಲ್ಲ ಎಂಬುದನ್ನು ನೆನಪಿಸಲು ಈದ್‌ ಹಬ್ಬದಂದು ಫಿತ್ರ ಝಕಾತ್‌ ಜಾರಿಗೊಳಿಸಿ ರುವುದಾಗಿದೆ. ನಾವು ಸಂತಸದಲ್ಲಿ ತೇಲಾಡುವಾಗ ನಮ್ಮ ನೆರೆ ಮನೆಯವರು, ನಮ್ಮ ಕುಟುಂಬಸ್ಥರು, ಹಸಿವಿನಿಂದಿರಬಾರದು ಎಂಬುದನ್ನು ಪ್ರವಾದಿವರ್ಯರು ಕಲಿಸಿಕೊಡುತ್ತಾರೆ.

Advertisement

ಆಚರಣೆ, ಆರಾಧನೆಗೆ ಮಾತ್ರ ಸೀಮಿತವಾಗಿರದೆ ಸಮಾಜದ ಒಳಿತಿಗೆ ಹಪಹಪಿಸುವ ಮನಸ್ಸುಗಳನ್ನು ಸೃಷ್ಟಿಸುವ ಅಪೂರ್ವ ಹಬ್ಬ ಈದುಲ್‌ ಫಿತ್ರ. ಮುಸ್ಲಿಂ ಲೋಕದ ಪ್ರಮುಖ ಹಬ್ಬವಾದ ಈದುಲ್‌ ಫಿತ್ರ ಸಮಾನತೆಯ ಸಮಾಜದ ಪರಿಕಲ್ಪನೆಯೊಂದಿಗೆ ಉಳ್ಳವರ ಇಲ್ಲದ ವರ ನಡುವಿನ ಅಸಮಾನತೆಯ ಪರದೆಯನ್ನು ಕಿತ್ತೆಸೆಯುವ ಅಪೂರ್ವ ಕ್ಷಣವನ್ನು ಸೃಷ್ಟಿಸುತ್ತದೆ. 

ಒಂದು ತಿಂಗಳ ಕಠಿನ ವ್ರತಾನುಷ್ಠಾನ ಕೈಗೊಂಡ ಪವಿತ್ರ ರಂಝಾನ್‌ ಪೂರ್ಣಗೊಂಡ ಸಂಭ್ರಮದಲ್ಲಿ ಮುಸ್ಲಿಂ ಲೋಕ ತೇಲಾಡುತ್ತಿರುವಾಗ ಹಸಿವು, ತ್ಯಾಗ, ಧ್ಯಾನ, ಪಾರಾಯಣದೊಂದಿಗೆ ರಂಝಾನ್‌ ತಿಂಗಳನ್ನು ಐಶ್ವರ್ಯಗೊಳಿಸಿದ 
ಮುಸಲ್ಮಾನನಿಗೆ ಈದುಲ್‌ ಫಿತ್ರ ಆಗಮನದೊಂದಿಗೆ ವ್ರತ ಪರಿ ಪೂರ್ಣತೆಯ ಸಂಭ್ರಮವನ್ನು ನೀಡುತ್ತದೆ. ಸ್ನೇಹ, ಶಾಂತಿ, ಸಮಾಧಾನ, ಸಂತೋಷದ ನಿನಾದದೊಂದಿಗೆ ಈದುಲ್‌ ಫಿತ್ರ ಪ್ರಭಾತ ಶುಭಾಗಮನವಾಗಿದೆ. ಮಾನವ ಸೌಹಾರ್ದತೆ ಹಾಗೂ ವಿಶ್ವ ಭಾತೃತ್ವದ ಮಹೋನ್ನತ ಸಂದೇಶಗಳನ್ನು ಸಾರುವ ಈದುಲ್‌ ಫಿತ್ರ ಹಬ್ಬ ಅಖಂಡ ಜಗತ್ತಿನ ಕೋಟ್ಯಾಂತರ ಜನರ ಒಳಿತಿಗಾಗಿ ಮತ್ತು ಬಡವರ ಹಾಗೂ ಹಸಿದವರ ಪಾಲಿಗೆ ಅಮೃತಘಳಿಗೆಯಾಗಿ ಕಂಗೊಳಿಸುತ್ತಿದೆ. ರಂಜಾನ್‌ ತಿಂಗಳಿನಲ್ಲಿ ನಿರ್ದಿಷ್ಟ 
ಹೊತ್ತು ಒಂದು ತೊಟ್ಟು ನೀರೂ ಕುಡಿಯದೆ ಹಸಿವಿನ ಕಠಿನತೆ ಯನ್ನು ಅರಿತು ವಿಶ್ವ ಮುಸಲ್ಮಾನರು ಬಡವ- ಶ್ರೀಮಂತರೆಂಬ ಭೇದ ಭಾವವಿಲ್ಲದೇ ಒಂದು ತಿಂಗಳ ಕಠಿನ ವ್ರತಾಚರಣೆ ನಡೆಸಿದ ಸಂತೋಷದ ಸಂತೃಪ್ತಿಯ ಉತ್ಸವವಾಗಿದೆ ಈದುಲ್‌ ಫಿತ್ರ. 

ಜಾಗತಿಕ ಮುಸಲ್ಮಾನರು ಸಂಭ್ರಮದಿಂದ ಹಾಗೂ ಅತ್ಯಂತ ಪಾವಿತ್ರ್ಯದಿಂದ ಆಚರಿಸುವ ಈದುಲ್‌ ಫಿತ್ರ ದಾನದ ಹಬ್ಬವಾಗಿದೆ. ವಾಸ್ತವದಲ್ಲಿ ಸಂಪತ್ತಿನ ಕೇಂದ್ರೀ ಕರಣವನ್ನು ಇಸ್ಲಾಂ ವಿರೋ ಧಿಸುತ್ತದೆ. ಆದುದರಿಂದಲೇ ರಂಝಾನ್‌ ಹಾಗೂ ಈದುಲ್‌ ಫಿತ್ರಗಳಲ್ಲಿ ದಾನವನ್ನು ಕಡ್ಡಾಯಗೊಳಿಸಿರುವುದು. ಒಂದು ತಿಂಗಳ ಭಕ್ತಿಸಾಂದ್ರವಾದ ಕಠಿನ ಉಪವಾಸವನ್ನು ಅನುಷ್ಠಾನಗೊಳಿಸಿ ಯಶಸ್ವಿ ವ್ರತಾಚರಣೆಯ ಮುಕ್ತಾಯದ ಪ್ರಯುಕ್ತ ಹಮ್ಮಿಕೊಳ್ಳಲಾಗಿರುವ ಈ ಹಬ್ಬ ಕೇವಲ ಸಂಭ್ರಮಾಚರಣೆಗಳಿಗೆ ಸೀಮಿತವಾಗದೆ “ಕಡ್ಡಾಯ ದಾನ’ಕ್ಕೆ ಮಹತ್ವವನ್ನು ಕಲ್ಪಿಸಿದೆ. ಅರಬ್‌ ಕ್ಯಾಲೆಂಡರಿನ 10ನೇ ತಿಂಗಳ ಶವ್ವಾಲ್‌ ಒಂದರಂದು ಈ ಹಬ್ಬವನ್ನು ಆಚರಿಸಲಾಗುತ್ತಿದ್ದು, ಚಂದ್ರ ದರ್ಶನದ ಆಧಾರದಲ್ಲಿ ಈ ಹಬ್ಬಕ್ಕೆ ಮುಹೂರ್ತ ದೊರೆಯುತ್ತದೆ.

ಕಡ್ಡಾಯ ದಾನ -ಧರ್ಮ
ಇಸ್ಲಾಂ ಧರ್ಮದಲ್ಲಿ ಎರಡು ಪ್ರಮುಖ ಹಬ್ಬಗಳಿವೆ.ಒಂದು ಈದುಲ್‌ ಅಝಾ. ವಿರಾಟ್‌ ಹಜ್‌ ಸಮಾವೇಶದ ಸಂದರ್ಭದಲ್ಲಿ ಆಚರಿಸಲ್ಪಡುವ ಈ ಹಬ್ಬ ತ್ಯಾಗ ಮತ್ತು ಬಲಿದಾನದ ಸಂದೇಶ ಸಾರುತ್ತವೆ. ಇನ್ನೊಂದು ಪವಿತ್ರ ರಂಝಾನ್‌ ವಿದಾಯದ ಸಂದರ್ಭದಲ್ಲಿ ಆಚರಿಸಲ್ಪಡುವ ಈದುಲ್‌ ಫಿತ್ರಹಬ್ಬ. ಇದು ದಾನದ ಸಂಕೇತವಾಗಿದೆ. ಈ ಹಬ್ಬದಂದು ದಾನವನ್ನು ಕಡ್ಡಾಯ ಗೊಳಿಸಲಾಗಿದೆ. ಈ ದಾನ ಮನುಷ್ಯ ಶರೀರವನ್ನು ಪಾಪಗಳಿಂದ ಮುಕ್ತಗೊಳಿಸಲಿಕ್ಕಿರುವ ದಾನ. ಹಬ್ಟಾಚರಣೆಯ ದಿನದಂದು ಈ ದಾನವನ್ನು ಕಡ್ಡಾಯಗೊಳಿಸಿದ್ದರ ಹಿಂದೆ ಅತ್ಯದ್ಭುತವಾದ ಪರಿಕಲ್ಪನೆಯಿದೆ. ಪವಿತ್ರ ಹದೀಸ್‌ ಗ್ರಂಥದಲ್ಲಿ ಈ ಪರಿಕಲ್ಪನೆ ಉಲ್ಲೇಖಗೊಂಡಿರುವುದು ಹೀಗೆ. “ರಂಝಾನ್‌ನಲ್ಲಿ ಓರ್ವ ಮುಸಲ್ಮಾನನು ಅನುಷ್ಠಾನಿಸಿದ ವ್ರತ ಆಕಾಶ ಭೂಮಿ ನಡುವೆ ಬಂಧಿಸಲ್ಪಟ್ಟಿರುತ್ತದೆ. ಫಿತ್ರ ಝಕಾತ್‌ಗಳಿಂದ ಅದನ್ನು ಮೇಲೆತ್ತ ಲಾಗುವುದು’. ಅರ್ಥಾತ್‌ ತಾನು ಒಂದು ತಿಂಗಳ ಉಪವಾಸ ವ್ರತ, ದೇಹ ದಂಡನೆ, ಆರಾಧನೆಗಳಿಂದ ಸಂಪಾದಿಸಿದ ಶುದ್ಧಿ ಪರಿಪೂರ್ಣಗೊಳ್ಳಬೇಕಾದರೆ ಈ ದಾನ ನೀಡಲೇಬೇಕಾದುದು ಅನಿವಾರ್ಯ. ಮಾತ್ರವಲ್ಲ ಇದು ಕೇವಲ ಸಾಂಕೇತಿಕವಾಗಿರದೆ ಕಡ್ಡಾಯವಾಗಿ ಪಾಲಿಸಲೇಬೇಕಾದ ಕರ್ಮವಿಧಿಗಳಲ್ಲೊಂದು.

Advertisement

ಹಬ್ಟಾಚರಣೆಯ ದಿನದಂದು ಯಾರೂ ಉಪವಾಸ ಬೀಳ ಕೂಡದು ಎಂಬ ಅತ್ಯದ್ಭುತವಾದ ಪರಿಕಲ್ಪನೆಯನ್ನು ಹೊಂದಿರು ವುದು ಈ ದಾನದ ಹಿಂದಿನ ಒಳಗುಟ್ಟು. ಹಬ್ಬದ ದಿನದಂದು ಸಮಾಜದ ಯಾವುದೇ ಓರ್ವ ವ್ಯಕ್ತಿ ಆಹಾರವಿಲ್ಲದೆ ಉಪವಾಸ ವಿರುವುದು ಸಮಾಜಕ್ಕೆ ಬಾಧಿಸುವ ಶಾಪವಾಗಿದೆಯೆಂದು ಪ್ರವಾದಿ ಮುಹಮ್ಮದ್‌ (ಸ.ಅ.) ಹೇಳುತ್ತಾರೆ. “ತಾನು ಸಂಭ್ರಮ ಪಡೆ ಯುವಾಗ ತನ್ನ ನೆರೆಕೆರೆಯವರು ಬಂಧುಗಳು ಹಸಿವಿರದಂತೆ ಜಾಗ್ರತೆ ವಹಿಸು’ ಎಂಬುದಾಗಿದೆ ಪ್ರವಾದಿ ವಚನ. ವಾಸ್ತವವಾಗಿ ದಾನ ನೀಡುವುದೆಂದರೆ ಒಬ್ಬ ವ್ಯಕ್ತಿಯ ಔದಾರ್ಯ ಗುಣ. ಅಂದರೆ ಆತನಿಗೆ ಇಚ್ಛೆಯಿದ್ದರೆ ದಾನ ನೀಡಬಹು ದೆಂದಲ್ಲವೇ? ಆದರೆ ಇಸ್ಲಾಂ ಧರ್ಮದ ತೀರ್ಪು ವಿಭಿನ್ನ. ಇಲ್ಲಿ ಓರ್ವ ವ್ಯಕ್ತಿ ತಿಂಗಳ ಕಾಲ ನಡೆಸಿದ ಕಠಿನ ವ್ರತ ಹಾಗೂ ಈದ್‌ ಹಬ್ಬ ಪರಿಪೂರ್ಣವಾಗಬೇಕಾದರೆ ಕಡ್ಡಾಯ ಝಕಾತ್‌(ದಾನ) ಕರ್ಮ ವನ್ನು ಪರಿಪಾಲಿಸಲೇಬೇಕು. ಈದ್‌ನ ಮುಂಜಾನೆ ಮಸೀದಿಗೆ ತೆರಳಿ ವಿಶೇಷ ಈದ್‌ ನಮಾಜು ನಿರ್ವಹಿಸುವ ಮೊದಲು ತನ್ನ ಪಾಲಿನ ಝಕಾತನ್ನು ಬಡಬಗ್ಗರಿಗೆ ವಿತರಿಸಿಯೇ ಆತ ಮಸೀದಿಗೆ ತೆರಳಬೇಕೆನ್ನುವ ಕಡ್ಡಾಯ ಆದೇಶವಾಗಿದೆ. ಈ ಧರ್ಮಾದೇಶ ವನ್ನು ಪ್ರತಿಯೋರ್ವ ಮುಸಲ್ಮಾನನು ಪಾಲಿಸುತ್ತಾನೆ.

ಫಿತ್ರ ಝಕಾತ್‌ ಮಾಪನ
ಆಡಂಬರದ ಹಬ್ಟಾಚರಣೆಯ ಮಧ್ಯೆ ನಾವು ನಮ್ಮನ್ನೇ ಮರೆತುಬಿಡುತ್ತೇವೆ. ತ್ಯಾಗಶುದ್ಧಿಯ ವ್ರತವನ್ನು ಆಚರಿಸಿ ಕಠಿನ ಹಸಿವನ್ನು ಅನುಭವಿಸಿದ ಬೇಗೆಯಲ್ಲಿ ಹಬ್ಬದಂದು ನಾವು ಎಲ್ಲವನ್ನೂ ಮರೆತು ಬಿಡುತ್ತವೆ. ಆಚಾರಗಳು, ಕಟ್ಟುನಿಟ್ಟುಗಳು ಕೇವಲ ರಂಝಾನ್‌ ತಿಂಗಳಿಗೆ ಮಾತ್ರ ಸೀಮಿತವಲ್ಲ ಎಂಬುದನ್ನು ನೆನಪಿಸಲು ಈದ್‌ ಹಬ್ಬದಂದು ಫಿತ್ರ ಝಕಾತ್‌ ಜಾರಿಗೊಳಿಸಿ ರುವುದಾಗಿದೆ. ನಾವು ಸಂತಸದಲ್ಲಿ ತೇಲಾಡುವಾಗ ನಮ್ಮ ನೆರೆ ಮನೆಯವರು, ನಮ್ಮ ಕುಟುಂಬಸ್ಥರು, ಹಸಿವಿನಿಂದಿರಬಾರದು ಎಂಬುದನ್ನು ಪ್ರವಾದಿವರ್ಯರು ಕಲಿಸಿಕೊಡುತ್ತಾರೆ. 

ಇಸ್ಲಾಂ ಯಾವತ್ತೂ ಝಕಾತ್‌ ನೀಡುವುದಕ್ಕೆ ಪ್ರೇರೇಪಣೆ ಯನ್ನು ನೀಡುತ್ತದೆ ಮಾತ್ರವಲ್ಲ ಸಂಪತ್ತಿನ ಕೇಂದ್ರೀಕರಣವನ್ನು ವಿರೋಧಿಸುತ್ತದೆ. ಇಸ್ಲಾಮಿನ ಪಂಚ ಪ್ರಧಾನ ಕರ್ಮಗಳಲ್ಲಿ ಝಕಾತ್‌ ಒಂದು. ಈದುಲ್‌ ಫಿತ್ರ ದಿನದಂದು ಧಾನ್ಯವನ್ನು ದಾನ ನೀಡುವಂತೆ ಆಜ್ಞಾಪಿಸಲಾಗಿದೆ. ಪ್ರತಿಯೋರ್ವನೂ ತನ್ನ ಪಾಲಿನ ಒಂದು ಸ್ವಾಹ್‌ (2 ಕಿಲೋ 600 ಗ್ರಾಂ) ಧಾನ್ಯವನ್ನು ಬಡಬಗ್ಗರಿಗೆ ದಾನ ನೀಡಬೇಕು. ಅದು ಆಯಾ ಪ್ರದೇಶದಲ್ಲಿ ಚಾಲ್ತಿಯಲ್ಲಿರುವ ಧಾನ್ಯವಾಗಿರಬೇಕು. ನಮ್ಮ ಪ್ರದೇಶದಲ್ಲಿ ಅಕ್ಕಿಯನ್ನು ಸಾಧಾರಣವಾಗಿ ಇದಕ್ಕೆ ಬಳಸಿಕೊಳ್ಳಲಾಗುತ್ತದೆ. ಇದನ್ನು ಮಸೀದಿಗೆ ತೆರಳುವ ಮೊದಲು ವಿತರಿಸಿಯಾಗ
ಬೇಕೆಂಬ ನಿಯಮವಿದೆ. 

ಇಲ್ಲಿ ಇನ್ನೊಂದು ವಿಶೇಷವೇನೆಂದರೆ ಕೋಟ್ಯಾಧೀಶನೂ, ಸಾಮಾನ್ಯನೂ ಒಂದೇ ಪ್ರಮಾಣದ ದಾನವನ್ನು ಕಡ್ಡಾಯವಾಗಿ ನೀಡಬೇಕಾಗಿರುವುದು. ಇದು ಶರೀರಕ್ಕಿ ರುವ ದಾನವಾಗಿದೆ. ಮನುಷ್ಯ ಶರೀರಗಳನ್ನು ಪಾಪಗಳಿಂದ ಮುಕ್ತಗೊಳಿಸಲಿಕ್ಕಿರುವ ದಾನ. ದಾರಿದ್ರ್ಯವನ್ನು ಅನುಭವಿಸುವವರು ಮಾತ್ರ ಇದನ್ನು ಸ್ವೀಕರಿಸಲಿಕ್ಕೆ ಅರ್ಹರು.

ಈದ್‌ ಸಂಭ್ರಮಾಚರಣೆ
“ಅಲ್ಲಾಹು ಅಕ್ಬರ್‌, ಅಲ್ಲಾಹು ಅಕ್ಬರ್‌…’ ಸಂಗೀತ ಸಾಂದ್ರವಾದ ಧ್ವನಿಗಳು ಮಸೀದಿಯ ಧ್ವನಿವರ್ಧಕದಲ್ಲಿ ಮೊಳಗುತ್ತಿದ್ದಂತೆ ಕೋಟ್ಯಾಂತರ ಮುಸಲ್ಮಾನರ ಹೃದಯದಲ್ಲಿ ನವಚೈತನ್ಯ ತುಂಬುತ್ತದೆ. ಬಾನಂಗಳದಲ್ಲಿ ಶವ್ವಾಲ್‌ ಚಂದ್ರ ದರ್ಶನವಾಗಿದೆ ಯೆಂಬುದರ ಸಂಕೇತವಿದು. ಇದರೊಂದಿಗೆ ಇಡೀ ಮುಸ್ಲಿಂ ಲೋಕ ಹಬ್ಬದ ಸಂಭ್ರಮಕ್ಕೆ ಸಡಗರದ ಸಿದ್ಧತೆ ನಡೆಸುತ್ತದೆ. ರಾತ್ರಿಯೇ ವಿವಿಧ ಸಿಹಿತಿಂಡಿಗಳನ್ನು ಮಾಡಲು ಮಹಿಳೆಯರು ಸಿದ್ಧತೆಯಲ್ಲಿ ತೊಡಗುತ್ತಾರೆ. ಸಸ್ಯಾಹಾರಕ್ಕಿಂತಲೂ ಮಾಂಸಾಹಾರಕ್ಕೆ ಹೆಚ್ಚಿನ ಪ್ರಾಧಾನ್ಯವಿದೆ. ಬಿರಿಯಾಣಿ, ಸ್ವೀಟ್ಸ್‌, ರುಚಿಕರ ಸೇವಿಗೆ, ಬಾಳೆಹಣ್ಣಿನ ಪಕೋಡಾಗಳು, ಐಸ್‌ಕ್ರಿಂ, ಸಲಾಡ್‌ಗಳು, ವೈವಿಧ್ಯಮಯ ತಿನಿಸುಗಳು ಹಬ್ಬಕ್ಕೆ ರುಚಿಯೆನಿಸುತ್ತವೆ. ಮಕ್ಕಳಿಗೆ ಮೆಹಂದಿ ಹಚ್ಚುವ ತರಾತುರಿ. ಮುಂಜಾನೆ ಈದ್‌ ಹಬ್ಬಕೆ ಪುರುಷರು ಮಸೀದಿಗೆ ತೆರಳುತ್ತಾರೆ. 

ಅಚ್ಚ ಹೊಸ ವಸ್ತ್ರ ಧರಿಸಿ, ಸುಗಂಧ ದ್ರವ್ಯಗಳನ್ನು ಸಿಂಪಡಿಸಿ, ಕೌಟುಂಬಿಕ ಸಂರ್ದಶನ, ಅತಿಥಿ ಸತ್ಕಾರ,ಪರಸ್ಪರ ಆಲಿಂಗನ, ಹಸ್ತಲಾಘವ, ರೋಗಿಗಳನ್ನು ಸಂದರ್ಶಿಸುವುದು ಇವೆಲ್ಲವೂ ಹಬ್ಬದ ಭಾಗ. ಪ್ರವಾದಿ(ಸ.ಅ.)ಯವರು ಈದ್‌ನ ದಿನಗಳಲ್ಲಿ ಇದ್ದುದರಲ್ಲಿ ಉತ್ತಮ ಬಟ್ಟೆ ಧರಿಸುತ್ತಿದ್ದರು. ಈ ನಿಟ್ಟಿನಲ್ಲಿ ಇಂದಿಗೂ ಆ ರೂಢಿಯನ್ನು ಮುಸಲ್ಮಾನರು ಅನುಸರಿಸಿಕೊಂಡುಬರುತ್ತಿದ್ದಾರೆ. ಈದ್‌ ದಿನದಂದು ವೈಷಮ್ಯಗಳನ್ನು ಮರೆತು ಪರಸ್ಪರ ಜತೆಗೂಡುವಂತೆ ಇಸ್ಲಾಂ ಆದೇಶಿಸಿದೆ. ಈದ್‌ ದಿನದಂದು ಉಪವಾಸವನ್ನು ಆಚರಿಸುವುದು ನಿಷಿದ್ಧ.

ಮಾನವ ಸಮಾನತೆಯ ಸಂದೇಶ
ಕೇವಲ ಮುಸಲ್ಮಾನರ ಒಳಿತಿಗೆ ಮಾತ್ರ ಸಂದೇಶವನ್ನು ನೀಡದೇ ಇಡೀ ಮಾನವಕುಲಕ್ಕೆ ಸಮಾನತೆಯ ಸಂದೇಶವನ್ನು ನೀಡಿದವರು ಪ್ರವಾದಿ ಮೊಹಮ್ಮದ್‌ ಪೈಗಂಬರ್‌(ಸ.ಅ.). ಇಸ್ಲಾಂ ಧರ್ಮದ ಹಬ್ಬಗಳೂ ಇದೇ ತೆರನಾಗಿ ಮನುಕುಲಕ್ಕೆ ಸಂದೇಶವನ್ನು ನೀಡುವ ಹಬ್ಬಗಳು. ಈದುಲ್‌ ಫಿತ್ರ ಬಡವ ಬಲ್ಲಿದರ ನಡುವೆ ಇರುವ ಗೋಡಗಳನ್ನು ಕೆಡವಿ ಒಂದು ಹಂತದವರೆಗೆ ಸಮಾನತೆಯನ್ನು ಕಾಯ್ದುಕೊಳ್ಳುವ‌ ಹಬ್ಬ. ಮನುಷ್ಯ ಮನುಷ್ಯರ ನಡುವೆ, ಜಾತಿ-ಜಾತಿಗಳ ನಡುವೆ ನಡೆಯುವ ತಿಕ್ಕಾಟದ ಈ ಸಂದರ್ಭದಲ್ಲಿ ನವಾಗತವಾಗುವ ಈದುಲ್‌ ಫಿತ್ರ ಹಬ್ಬ ಬಾಂಧವ್ಯದ, ಸಹೋದರತ್ವದ, ಸಮಾನತೆಯ ಬದುಕಿಗೆ ವ್ಯಾಖ್ಯಾನ ವಾಗುತ್ತಿರುವುದರ ಜತೆಗೆ ಅಶುದ್ಧಿಯಿಂದ ಮುಕ್ತಿಗೊಂಡು ಪರಮ ಪಾವನವಾಗಿ ನವಜೀವನದ ಆಕಾಂಕ್ಷೆಯೊಂದಿಗೆ ಹೊಚ್ಚಹೊಸ ಹೊಂಗನಸುಗಳೊಂದಿಗೆ ಮುಂದಡಿಯಿಡುವ ಭಾವುಕ ಕ್ಷಣಗಳಾಗಿವೆ. ಬಡವರ ಹಾಗೂ ಹಸಿದವರ ಪಾಲಿಗೆ ಅಮೃತವಾಗಿ ಕಂಗೊಳಿಸುವ ಈದುಲ್‌ ಫಿತ್ರ ನಮ್ಮ ನಡುವೆ ಪರಸ್ಪರ ಬ್ರಾತೃತ್ವದ ಸಂದೇಶವನ್ನು ಪಸರಿಸುತ್ತಾ ಸಾಂತ್ವನದ ಚಿಲುಮೆಯಾಗಿ ಸರ್ವ ಪ್ರಗತಿಗೆ ನಾಂದಿಯಾಗಲಿ, ಸೌಹಾರ್ದಪೂರ್ಣ ಬದುಕಿಗೆ ಪ್ರೇರಣೆಯಾಗಲಿ. ಈದ್‌ ಮುಬಾರಕ್‌.

ಹರ್ಷಾದ್‌ ವರ್ಕಾಡಿ

Advertisement

Udayavani is now on Telegram. Click here to join our channel and stay updated with the latest news.

Next