Advertisement

ಸಾಮಾಜಿಕ ಸ್ವಾತಂತ್ರ್ಯ ಇನ್ನೂ ಸಿಕ್ಕಿಲ್ಲ: ಪ್ರೊ|ನಿರಂಜನ್‌

10:38 AM Aug 16, 2017 | Team Udayavani |

ಕಲಬುರಗಿ: ಇವತ್ತು ಭಾರತ ಭೌತಿಕವಾಗಿ ಅಷ್ಟು ಸಾಧನೆ, ಇಷ್ಟು ಸಾಧನೆ ಮಾಡಿದ್ದೇವೆ ಎಂದು ಹೇಳಿಕೊಳ್ಳಬಹುದು. ಆದರೆ, ನಿಜವಾಗಿಯೂ ಇನ್ನೂ ನಮಗೆ ಸಾಮಾಜಿಕ ಸ್ವಾತಂತ್ರ್ಯ ಸಿಕ್ಕಿಲ್ಲ, ಅದಕ್ಕಾಗಿ ಪರಿತಾಪ ಪಡುತ್ತಿದ್ದೇವೆ ಎಂದು ಗುವಿವಿ ಕುಲಪತಿ ಪ್ರೊ| ಎಸ್‌.ಆರ್‌.ನಿರಂಜನ್‌ ವಿಷಾದ ವ್ಯಕ್ತಪಡಿಸಿದರು. ಗುಲಬರ್ಗಾ ವಿಶ್ವವಿದ್ಯಾಲಯದಲ್ಲಿ ಮಂಗಳವಾರ 71ನೇ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು.ರಾಜಕೀಯ ಸ್ವಾತಂತ್ರ್ವಯನ್ನು ನಾವು ಹಾಗೋ ಹೀಗೋ ಗಳಿಸಿಕೊಂಡಿದ್ದೇವೆ. ಆದರೆ, ಸಾಮಾಜಿಕ ಸ್ವಾತಂತ್ರ್ಯ ಪಡೆಯಲು ಸಾಧ್ಯವಾಗಿಲ್ಲ. ಹಲವಾರು ಜಾತಿ-ಧರ್ಮ, ಮತ-ಪಂಥ, ಮೇಲು-ಕೀಳು, ಶ್ರೀಮಂತ-ಬಡವ ಹಾಗೂ ಇತರೆ ಒಳ ಹತೋಟಿಗಳಿಂದ ನಾವು ಹೊರ ಬಂದಿಲ್ಲ. ಇದೇ ನಮ್ಮ ಉತ್ತರೋತ್ತರ ಅಭಿವೃದ್ಧಿಗೆ, ಸಾಧನೆಗಳಿಗೆ, ಸಂಶೋಧನೆಗಳಿಗೆ, ನೆಮ್ಮದಿ ಬದುಕಿಗೆ ತೊಡಕಾಗಿದೆ ಎಂದರು. ಗಾಂಧೀಜಿ ಅವರ ಗ್ರಾಮ ಸ್ವರಾಜ್ಯವು
ಸಾಕಾರಗೊಂಡಿದೆಯೇ? ವಿನೋಭಾಜಿಯವರ ಸರ್ವೋದಯ ಸಾಧ್ಯವಾಗಿದೆಯೇ? ಇಂತಹ ಪ್ರಶ್ನೆಗಳಿಗೆ ನಮ್ಮ-ನಮ್ಮ ಆತ್ಮಗಳೇ ಉತ್ತರ ಕಂಡುಕೊಳ್ಳಬೇಕಾಗಿದೆ. ಸ್ವಾತಂತ್ರ್ಯವೆಂದರೆ ಸ್ವೆಚ್ಛಾಚಾರವಲ್ಲ. ದೇಶಕ್ಕೆ, ಸಮಾಜಕ್ಕೆ, ಜನಾಂಗಕ್ಕೆ ಹಿತವಾಗುವಂತೆ, ಸ್ವಯಂ ಪ್ರೇರಣೆಯಿಂದ ನಡೆದು ತೋರಿಸಬೇಕಾಗಿದೆ. ಈ ಕಾರಣದಿಂದಲೇ ನಮ್ಮ ಪೂರ್ವಜರು ಸ್ವಾತಂತ್ರ್ಯ ಎಂಬುದಕ್ಕೆ ಮೌಲ್ಯ, ಪ್ರಜ್ಞೆಯಸ್ಥಾನ ನೀಡಿದ್ದಾರೆ ಎಂದರು.ವಿಜ್ಞಾನ ಕ್ಷೇತ್ರದಲ್ಲಿ ನಾವು ಅಪಾರವಾದ ಸಾಧನೆ ಮಾಡಿದ್ದೇವೆ. ಆದರೆ ಸಾಮಾಜಿಕವಾಗಿ ಅನೇಕ ಅಸಮಾನ ವ್ಯವಸ್ಥೆಯಲ್ಲಿ ಬದುಕುತ್ತಿದ್ದೇವೆ. ಇದು ವಿಪರ್ಯಾವಲ್ಲವೆ? ವಿಜ್ಞಾನ ಕ್ಷೇತ್ರ ಎಂದಾಗ ಇತ್ತೀಚೆಗೆ ನಿಧನರಾದ ಮಾಜಿ ರಾಷ್ಟ್ರಪತಿ ದಿ| ಅಬ್ದುಲ್‌ ಕಲಾಂ ಅವರ ಆದರ್ಶಗಳು, ಕನಸುಗಳು ವಿದ್ಯಾರ್ಥಿಗಳು, ಪ್ರಾಧ್ಯಾಪಕರು ಅನುಸರಿಸಿದಾಗ ಅವರು ಕಂಡ ಕನಸು ನನಸಾದೀತು. ವಿದ್ಯಾರ್ಥಿಗಳು, ಶಿಕ್ಷಕರು ಈ ನಿಟ್ಟಿನಲ್ಲಿ ಶ್ರಮಿಸಬೇಕಾಗಿದೆ ಎಂದು ಹೇಳಿದರು. ಕುಲ ಸಚಿವ ಪ್ರೊ| ದಯಾನಂದ ಅಗಸರ, ಕುಲಸಚಿವ (ಮೌ)ಪ್ರೊ| ಸಿ.ಎಸ್‌ .ಪಾಟೀಲ, ವಿತ್ತಾಧಿಕಾರಿ ರಾಜನಾಳಕರ ಲಕ್ಷ್ಮಣ, ಈಶ್ವರ ಇಂಗಿನ, ಸಾಯಬಣ್ಣ ಕೆಂಗೂರಿ, ಸಿಂಡಿಕೇಟ್‌ ಸದಸ್ಯ ಸಂಗನಗೌಡ ಪೊಲೀಸ್‌ ಪಾಟೀಲ, ವಿದ್ಯಾವಿಷಯಕ ಪರಿಷತ್‌ ಸದಸ್ಯ ಸತೀಶ ಅಲ್ಲೋಳ್ಳಿ, ವಿದ್ಯಾರ್ಥಿ ಕಲ್ಯಾಣಾಧಿಕಾರಿ ಪ್ರೊ| ಸಿದ್ದಪ್ಪ ಹಾಗೂ ವಿಭಾಗಗಳ ಮುಖ್ಯಸ್ಥರು, ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next