Advertisement

ನಗರದ ನೂರು ಕಡೆ ಸ್ಮಾರ್ಟ್‌ಬಿನ್‌

02:31 PM May 29, 2018 | Team Udayavani |

ಬೆಂಗಳೂರು: ನಗರದಲ್ಲಿ ಹಸಿ ಹಾಗೂ ಒಣ ತ್ಯಾಜ್ಯದ ಪ್ರತ್ಯೇಕ ಸಂಗ್ರಹಣೆಗೆ ಆಯ್ದ ಪ್ರದೇಶಗಳಲ್ಲಿ ಹೊಸದಾಗಿ 100 ಸ್ಮಾರ್ಟ್‌ಬಿನ್‌ಗಳನ್ನು ಅಳವಡಿಸಲಾಗುತ್ತದೆ ಎಂದು ಬಿಬಿಎಂಪಿ ಸೋಮವಾರ ಹೈಕೋರ್ಟ್‌ಗೆ ತಿಳಿಸಿದೆ.

Advertisement

ಘನತ್ಯಾಜ್ಯ ನಿರ್ವಹಣೆ, ವಾರ್ಡ್‌ ಕಮಿಟಿ ರಚನೆ ಸಂಬಂಧ ಸಲ್ಲಿಕೆಯಾಗಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳ ವಿಚಾರಣೆ ವೇಳೆ ನ್ಯಾಯಮೂರ್ತಿ ಬಿ.ಎಸ್‌.ಪಾಟೀಲ್‌ ಹಾಗೂ ನ್ಯಾಯಮೂರ್ತಿ ಬಿ.ವಿ.ನಾಗರತ್ನ ಅವರಿದ್ದ ವಿಭಾಗೀಯ ಪೀಠಕ್ಕೆ ಪಾಲಿಕೆ ಈ ಮಾಹಿತಿ ನೀಡಿತು.

ವಿಚಾರಣೆ ವೇಳೆ ಹಾಜರಿದ್ದ ಘನತ್ಯಾಜ್ಯ ಸಂಸ್ಕರಣೆ ವಿಭಾಗದ ಜಂಟಿ ಆಯುಕ್ತ ಡಾ.ಸಫ‌ರಾಜ್‌ ಖಾನ್‌, ತ್ಯಾಜ್ಯ ಸಂಸ್ಕರಣೆಗೆ ಪಾಲಿಕೆ ಹಲವು ಕ್ರಮಗಳನ್ನು ಕೈಗೊಂಡಿದ್ದು, ಹೊಸದಾಗಿ 1500 ಟನ್‌ ತ್ಯಾಜ್ಯ ಸಂಗ್ರಹಣೆ ಸಾಮರ್ಥ್ಯದ 100 ಸ್ಮಾರ್ಟ್‌ಬಿನ್‌ಗಳನ್ನು ನಗರದ ಆಯ್ದ ಪ್ರದೇಶಗಳಲ್ಲಿ ಅಳವಡಿಸಲಾಗುವುದು. ಒಣ ಹಾಗೂ ಹಸಿ ತ್ಯಾಜ್ಯ ಸಂಗ್ರಹಣೆಗೆ ಪ್ರತ್ಯೇಕ ಸ್ಮಾರ್ಟ್‌ ಬಿನ್‌ಗಳಲ್ಲಿ ಇಡಲಾಗುತ್ತದೆ ಎಂದು ತಿಳಿಸಿದರು.

ಈ ಹಿಂದೆ ವಾಣಿಜ್ಯ ಪ್ರದೇಶಗಳಲ್ಲಿ ಅಳವಡಿಸಿದ್ದ 2000 ಸ್ಮಾರ್ಟ್‌ಬಿನ್‌ಗಳ ಪೈಕಿ, 500 ಸ್ಮಾರ್ಟ್‌ಬಿನ್‌ಗಳನ್ನು ದುಷ್ಕರ್ಮಿಗಳು ಹಾಳುಗೆಡವಿದ್ದು, ಹಲವೆಡೆ ಕಳವು ಮಾಡಿದ್ದಾರೆ. ದುಷ್ಕರ್ಮಿಗಳ ವಿರುದ್ಧ ಕ್ರಮಕ್ಕೆ ಮುಂದಾಗಿದ್ದೇವೆ. ಇದೀಗ ಮತ್ತೆ ಸ್ಮಾರ್ಟ್‌ಬಿನ್‌ಗಳನ್ನು ಅಳವಡಿಸಲಾಗುತ್ತದೆ ಎಂದು ಪಾಲಿಕೆ ಹಮ್ಮಿಕೊಂಡಿರುವ ಕ್ರಮಗಳ ಬಗ್ಗೆ ವಿವರಣೆ ನೀಡಿದರು.

ವಾದ -ಪ್ರತಿವಾದ ಆಲಿಸಿದ ನ್ಯಾಯಪೀಠ, ಹೊಸದಾಗಿ ಸ್ಮಾರ್ಟ್‌ಬಿನ್‌ಗಳನ್ನು ಯಾವ ರೀತಿ ಅಳವಡಿಸಲಾಗುತ್ತದೆ ಮತ್ತು ಕಸ ವಿಂಗಡಣೆಗೆ ವೈಜ್ಞಾನಿಕವಾಗಿ ಕೈಗೊಳ್ಳುವ ಕ್ರಮಗಳ ಬಗ್ಗೆ ಮುಂದಿನ ಎರಡು ವಾರದಲ್ಲಿ ಪ್ರಮಾಣಪತ್ರ ಸಲ್ಲಿಸುವಂತೆ ತಾಕೀತು ಮಾಡಿತು.

Advertisement

ತ್ಯಾಜ್ಯ ಸಂಸ್ಕರಣ ಘಟಗಳಲ್ಲಿ, ತ್ಯಾಜ್ಯ ವಿಲೇವಾರಿ, ತಾಂತ್ರಿಕ ಅಳವಡಿಕೆ ಸೇರಿದಂತೆ ಕೈಗೊಂಡಿರುವ ಕ್ರಮಗಳ ಬಗ್ಗೆ ಮುಂದಿನ ವಿಚಾರಣೆ ವೇಳೆ ಖುದ್ದು ಹಾಜರಿದ್ದು ವರದಿ ನೀಡುವಂತೆ ಕರ್ನಾಟಕ ಸಾವಯವ ಗೊಬ್ಬರ  ಅಭಿವೃದ್ಧಿ ನಿಗಮ (ಕೆಸಿಡಿಸಿ) ವ್ಯವಸ್ಥಾಪಕ ನಿರ್ದೇಶಕರಿಗೆ ನ್ಯಾಯಪೀಠ ನಿರ್ದೇಶಿಸಿ ಚಾರಣೆಯನ್ನು ಜೂನ್‌ 29ಕ್ಕೆ ಮುಂದೂಡಿತು.

ತಾಂತ್ರಿಕ ಸಲಹಾ ಸಮಿತಿ ರಚನೆ: ಪಾಲಿಕೆ ವ್ಯಾಪ್ತಿಯ ಏಳು ತ್ಯಾಜ್ಯ ಸಂಸ್ಕರಣಾ ಘಟಕಗಳ ಸಮರ್ಪಕ ಕಾರ್ಯನಿರ್ವಹಣೆಗೆ ಅನುಕೂಲವಾಗುವಂತೆ ಶಿಫಾರಸುಗಳನ್ನು ನೀಡುವ ಸಲುವಾಗಿ ತಜ್ಞರನ್ನೊಳಗೊಂಡ “ತಾಂತ್ರಿಕ ಸಲಹಾ ಸಮಿತಿ’  ರಚಿಸಲಾಗಿದೆ ಎಂದು ರಾಜ್ಯಸರ್ಕಾರ ಹೈಕೋರ್ಟ್‌ಗೆ ತಿಳಿಸಿದೆ.

ಹೈಕೋರ್ಟ್‌ ಸೂಚನೆ ಮೇರೆಗೆ ರಾಜ್ಯಸರ್ಕಾರ ಮೇ 16ರಂದು ತಾಂತ್ರಿಕ ಸಲಹಾ ಸಮಿತಿ ರಚಿಸಿದೆ ಎಂದು ಸರ್ಕಾರದ ಪರ ವಕೀಲರು ಮೆಮೊ ಸಲ್ಲಿಸಿದರು. ಸಾರ್ವಜನಿಕ ಹಿತ ಹಾಗೂ ಪರಿಸರ ಸಂರಕ್ಷಣೆ ದೃಷ್ಟಿಯಿಂದ ಕಸ ಸಂಸ್ಕರಣಾ ಘಟಕಗಳು ವೈಜಾನಿಕವಾಗಿ ಮತ್ತು ಯಾವುದೇ ಲೋಪವಿಲ್ಲದೆ ಕಾರ್ಯನಿರ್ವಹಿಸಬೇಕಿದೆ.

ಆದ್ದರಿಂದ ತ್ಯಾಜ್ಯ ಸಂಸ್ಕರಣೆ, ವಿಲೇವಾರಿ, ತಾಂತ್ರಿಕ ಅಳವಡಿಕೆ ಸೇರಿದಂತೆ ಇನ್ನಿತರೆ ಅಂಶಗಳ ಬಗ್ಗೆ ಅಧ್ಯಯನ ನಡೆಸಿ ಅಗತ್ಯ ಶಿಫಾರಸುಗಳನ್ನು ನೀಡುವ ಸಲುವಾಗಿ  ಐಐಎಸ್ಸಿ, ಪರಿಸರ ವಿಜ್ಞಾನಿಗಳು, ಕೃಷಿ ವಿ.ವಿ ತಜ್ಞರು, ಮಾಲಿನ್ಯ ನಿಯಂತ್ರಣ ಮಂಡಳಿ, ವಿವಿಧ ಕ್ಷೇತ್ರಗಳ ತಜ್ಞರನ್ನೊಳಗೊಂಡತೆ ಕನಿಷ್ಟ 8 ಸದಸ್ಯರ ಉನ್ನತ ಮಟ್ಟದ “ತಾಂತ್ರಿಕ ಸಲಹಾ ಸಮಿತಿಯನ್ನು’ ರಚಿಸುವಂತೆ ಹೈಕೋರ್ಟ್‌ ಸೂಚಿಸಿತ್ತು.

Advertisement

Udayavani is now on Telegram. Click here to join our channel and stay updated with the latest news.

Next