Advertisement

ಸಣ್ಣ ಯಶಸ್ಸೇ ದೊಡ್ಡ ಯಶಸ್ಸಿಗೆ ಪೂರ್ವ ತಯಾರಿ

11:47 PM Oct 26, 2021 | Team Udayavani |

ಸಾಮಾನ್ಯವಾಗಿ ಜ್ಞಾನ ಎಂದರೆ ನಾನು ಮುಂದಕ್ಕೆ ಏನನ್ನು ಮಾಡುವುದು ಎಂದು ತಿಳಿಯುವುದು, ಕೌಶಲ ಎಂದರೆ ಅದನ್ನು ಹೇಗೆ ಮಾಡುವುದು ಎಂದು ತಿಳಿಯುವುದು. ಸರಿಯಾದ ಗುಣ ಎಂದರೆ ತಿಳಿದಿರುವುದನ್ನು ಕಾರ್ಯ ರೂಪಕ್ಕೆ ತರುವುದು ಎಂದು ಜ್ಞಾನಿ ಡೇವಿಡ್‌ ಸ್ಟಾರ್‌ ಜಾರ್ಡನ್‌ ಹೇಳಿದ್ದಾರೆ.

Advertisement

ಪರಿಪೂರ್ಣವಾದ ಜೀವನವನ್ನು ನಡೆ ಸಲು ನಾವೇನು ಮಾಡಬೇಕೆಂಬುದು ನಮ್ಮಲ್ಲಿ ಬಹಳಷ್ಟು ಮಂದಿಗೆ ತಿಳಿದಿದೆ. ಆದರೆ ಇಲ್ಲಿರುವ ನಿಜವಾದ ಸಮಸ್ಯೆ ಎಂದರೆ ನಮಗೆ ಏನು ತಿಳಿದಿದೆಯೋ ಅದನ್ನು ನಾವು ಮಾಡುವುದಿಲ್ಲ. ಜ್ಞಾನ ಕೇವಲ ಸಂಭಾವ್ಯವಾದ ಶಕ್ತಿ ಅಷ್ಟೇ. ನಮ್ಮಲ್ಲಿ ಇರುವ ಸೂಕ್ತ ಜ್ಞಾನವನ್ನು ಪರಿಣಾಮಕಾರಿಯಾಗಿ ಬಳಸಿಕೊಂಡು ಅದನ್ನು ಸಮರ್ಪಕವಾಗಿ ಅನುಷ್ಠಾನಿ ಸಿದರೆ ಅದು ನೈಜ ಶಕ್ತಿಯಾಗಿ ತನ್ನಿಂದ ತಾನಾಗಿಯೇ ಪರಿವರ್ತನೆಗೊಳ್ಳುತ್ತದೆ.

ದೃಢ ಮತ್ತು ಪ್ರಬಲ ವ್ಯಕ್ತಿತ್ವವಿರುವ ವ್ಯಕ್ತಿಯು ಸದಾಕಾಲ ತಾನು ಖುಷಿಯಾಗಿ ಇರುವಂಥ ಕೆಲಸವನ್ನು ಮಾಡುವುದರಲ್ಲಿ ಮತ್ತು ತನಗೆ ಇಷ್ಟವಿರುವ ಕೆಲಸವನ್ನು ಮಾತ್ರವೇ ಮಾಡುತ್ತಾ ಇರುವುದರಲ್ಲಿ ಯಶಸ್ಸನ್ನು ಕಾಣುವುದಿಲ್ಲ. ಬದಲಿಗೆ ತಾನು ತನ್ನ ಯಶಸ್ಸಿಗಾಗಿ ಏನನ್ನು ಮಾಡ ಬೇಕು ಎನ್ನುವುದನ್ನು ನಿರಂತರವಾಗಿ ಯೋಚಿ ಸುತ್ತಾ, ಆ ಕುರಿತು ಪ್ರಯತ್ನಿಸುತ್ತಾ ಇರುತ್ತಾನೆ ಮತ್ತು ಸರಿಯಾದ ಕೆಲಸವನ್ನು ಮಾಡುವುದರಲ್ಲಿ ತನ್ನ ಸಮಯವನ್ನು ಕಳೆಯುತ್ತಾನೆ. ಉದಾ: ತನ್ನ ಬಿಡುವಿಲ್ಲದ ಕೆಲಸದ ಮಧ್ಯೆ ಆಯಾಸವನ್ನು ಕಳೆಯಲು ಮನೋರಂಜನೆಗಾಗಿ 2-3 ಗಂಟೆ ಟಿ.ವಿ. ಯನ್ನು ನೋಡುತ್ತಾ ಸಮಯವನ್ನು ಕಳೆಯುವ ಬದಲು ತನಗೆ ಇಷ್ಟವಾದ ಬರೆವಣಿಗೆ, ಓದು, ಚಿತ್ರಕಲೆ, ಮಕ್ಕಳಿದ್ದರೆ ಮಕ್ಕಳಿಗೆ ಓದಿಸುವುದು, ಅಭ್ಯಾಸ ಮೊದಲಾದ ಕೆಲಸವನ್ನು ಮಾಡುವ ಧೈರ್ಯವನ್ನು ತೋರುತ್ತಾನೆ.

ಇದನ್ನೂ ಓದಿ:2 ಡೋಸ್‌ ಲಸಿಕೆ ಪಡೆದವರಿಗೆ ಹೊಸ ತಳಿ ಪರಿಣಾಮ ಬೀರದು

ಅತಿಯಾದ ಚಳಿ ಇರುವ ಚಳಿಗಾಲದ ಮುಂಜಾವಿನಲ್ಲಿ ಬೆಚ್ಚಗೆ ಹೊದ್ದುಕೊಂಡು ಮಲಗುವ ಬದಲು ಚಳಿಯ ಮಧ್ಯೆಯೂ ಜೀವನ ಶಿಸ್ತನ್ನು ರೂಪಿಸುವಂತಹ ಯೋಗ, ಪ್ರಾಣಾಯಾಮ, ಓಟ, ವ್ಯಾಯಾಮ, ಮುಂತಾದುವುಗಳಲ್ಲಿ ತನ್ನನ್ನು ತಾನು ತೊಡಗಿಸಿಕೊಳ್ಳುತ್ತಾನೆ. ಹೆಚ್ಚು ಹೆಚ್ಚು ಸಕಾರಾತ್ಮಕ ಕ್ರಿಯೆಗಳನ್ನು ನಿತ್ಯವೂ ಮಾಡುತ್ತಾ ಇದ್ದರೆ ಅದನ್ನು ಸ್ವೀಕರಿಸುವ ಮನೋಭಾವವೂ ಅಷ್ಟೇ ಗಟ್ಟಿಯಾಗುತ್ತದೆ. ಇದು ಸಹಜವಾಗಿ ನಮ್ಮನ್ನು ಕ್ರಿಯಾಶೀಲವನ್ನಾಗಿಸಿ ನಮ್ಮ ಲ್ಲಿನ ಕೌಶಲವನ್ನು ಬಳಸಿಕೊಂಡು ಜ್ಞಾನದ ಸದು ಪಯೋಗಕ್ಕೆ ಎಡೆ ಮಾಡಿಕೊಡುತ್ತದೆ.

Advertisement

ಬಹಳಷ್ಟು ಮಂದಿ ನಮಗೆ ಒಳ್ಳೆಯ ಮತ್ತು ಸರಿಯಾದ ಸಮಯ (ಅವಕಾಶ) ಬರಲಿ ಎಂದು ಕಾಯುತ್ತಾ ಕುಳಿತು, ತಮ್ಮ ಮುಂದೆ ಇರುವ ಸಮಯವನ್ನು (ಅವಕಾಶ) ಕಳೆದು ಬಿಡುತ್ತಾರೆ. ಒಳ್ಳೆಯ ಸಮಯವು ಧನಾತ್ಮಕವಾಗಿ ಮುಂದಕ್ಕೆ ಸಾಗಿದಾಗ ಬರುತ್ತದೆಯೇ ಹೊರತು ಕಾಯುತ್ತಾ ಕುಳಿತಾಗ ಬರುವುದಿಲ್ಲ ಎನ್ನುವುದನ್ನು ಮರೆಯಬಾರದು. ಜೀವನದಲ್ಲಿ ಕನಸನ್ನು ಕಾಣುವುದು ಒಳ್ಳೆಯದೇ, ಆದರೆ ಕೇವಲ ಕನಸನ್ನು ಕಾಣುವುದರಿಂದ ಯಶಸ್ಸಿನ ಉತ್ತುಂಗಕ್ಕೆ ಏರಲು, ಮಾದರಿ ವ್ಯಕ್ತಿಯಾಗಲು, ಬದುಕಿನ ಖರ್ಚುವೆಚ್ಚಗಳನ್ನು ತೂಗಿಸಿ ಕೊಳ್ಳಲು ಸಾಧ್ಯವಿಲ್ಲ. ಅದಕ್ಕಾಗಿ ಪ್ರಯತ್ನ ಬಹಳ ಮುಖ್ಯ. ವ್ಯಕ್ತಿಯೊಬ್ಬನ ವಿಚಾರ ಧಾರೆಗಳು ಎಷ್ಟೇ ಶ್ರೇಷ್ಠವಾಗಿದ್ದರೂ ಅದರ ಅನುಷ್ಠಾನವಾಗದೇ ಯಶಸ್ಸು ಸಾಧ್ಯ ವಿಲ್ಲ. ಕೇವಲ ದೊಡ್ಡ ದೊಡ್ಡ ವಿಚಾರ ಗಳನ್ನು ಮಾಡುವುದಕ್ಕಿಂತ, ದೃಢ ವಾದ ನಿರ್ಧಾರದೊಂದಿಗೆ ಚಿಕ್ಕ ಚಿಕ್ಕ ವಿಚಾರ ಗಳನ್ನು ಅನುಷ್ಠಾನಿಸುವುದು ಹೆಚ್ಚು ಶ್ರೇಷ್ಠ. ಈ ಸಣ್ಣ ಕೆಲಸಗಳೇ ಯಶಸ್ಸಿನ ಪಥದಲ್ಲಿ ನಮ್ಮನ್ನು ಕರೆದೊಯ್ಯುತ್ತದೆ. ಈ ರೀತಿ ಮಾಡಿದಾಗ ಸಣ್ಣ ಸಣ್ಣ ಯಶಸ್ಸಿನ ಮೂಲಕ ದೊಡ್ಡ ಪ್ರಮಾಣದ ಯಶಸ್ಸಿಗೆ ಅಗತ್ಯವಿರುವ ಪೂರ್ವ ತಯಾರಿಯನ್ನು ಮಾಡಿಕೊಳ್ಳಲು ಸಹಾಯವಾಗುತ್ತದೆ.

– ಸಂತೋಷ್‌ ರಾವ್‌, ಪೆರ್ಮುಡ

Advertisement

Udayavani is now on Telegram. Click here to join our channel and stay updated with the latest news.

Next