Advertisement

ಸಣ್ಣ ಕೈಗಾರಿಕೆ: ಕೊಂಚ ಸಹಾಯವಷ್ಟೇ ಅಲ್ಲ ; ಬೇಕು ಪೂರ್ಣ ಆರೈಕೆ

02:35 AM May 12, 2020 | Sriram |

ಉಡುಪಿಯದ್ದು ಕೃಷಿ ಸಂಬಂಧಿ ಆರ್ಥಿಕತೆ. ಅದರೊಂದಿಗೇ ಸಣ್ಣ ಕೈಗಾರಿಕೆಗಳೂ ತಮ್ಮದೇ ಆದ ಕೊಡುಗೆ ನೀಡುತ್ತಿವೆ. ವಿವಿಧ ರೀತಿಯ ಉತ್ಪನ್ನಗಳನ್ನು ತಯಾರಿಸುವ ಕೈಗಾರಿಕೆ ಘಟಕಗಳು ದೇಶ ವಿದೇಶಗಳಲ್ಲಿ ಗ್ರಾಹಕರನ್ನು ಹೊಂದಿವೆ. ಪ್ರಸ್ತುತ ಲಾಕ್‌ಡೌನ್‌ ಕಾರಣದಿಂದ ಕೈಗಾರಿಕೆಗಳೆಲ್ಲಾ ಸ್ತಬ್ಧಗೊಂಡಿವೆ. ಪುನರಾರಂಭಿಸಲು ಹಲವಾರು ತಾಪತ್ರಯಗಳಿವೆ. ಮಾರುಕಟ್ಟೆ, ಕಚ್ಚಾವಸ್ತುಗಳು ಹಾಗೂ ಕಾರ್ಮಿಕರು-ತ್ರಿವಳಿ ಸಮಸ್ಯೆ ಯಿಂದ ಕೈಗಾರಿಕೆಗಳು ಬಳಲುತ್ತಿರುವಾಗ ರಾಜ್ಯ ಸರಕಾರದ ಆರ್ಥಿಕ ನೆರವಿನೊಂದಿಗೆ ಜನಪ್ರತಿನಿಧಿಗಳು ಮತ್ತು ಜಿಲ್ಲಾಡಳಿತದ ಸಹಕಾರ ಬೇಕು. ಕಾರ್ಯನಿರ್ವಹಣೆ ಮಾರ್ಗಸೂಚಿಯನ್ನು ಸ್ಥಳೀಯ ಕೈಗಾರಿಕೆಗಳು, ಅದರ ಅಗತ್ಯಗಳಿಗೆ ತಕ್ಕಂತೆ ಕೊಂಚ ಬದಲಾವಣೆ ಮಾಡಬೇಕಾದದ್ದು ತುರ್ತು ಅಗತ್ಯ.

Advertisement

  ಉದಯವಾಣಿ ಅಧ್ಯಯನ ತಂಡ-ಉಡುಪಿ: ಜಿಲ್ಲೆಯದ್ದು ಕೃಷಿ ಮತ್ತು ಕೃಷಿ ಸಂಬಂಧಿ ಉದ್ಯಮಗಳ ಆರ್ಥಿಕತೆ. ಇದು ಒಂದು ಭಾಗವಾದರೆ, ಮತ್ತೂಂದು ಭಾಗದಲ್ಲಿ ಸಣ್ಣ ಕೈಗಾರಿಕೆಗಳು ಜಿಲ್ಲೆಯ ಬಹಳಷ್ಟು ಮಂದಿಗೆ ಉದ್ಯೋಗವನ್ನು ನೀಡಿವೆ. ಆ ಕಂಪೆನಿಗಳ ಉತ್ಪಾದನೆ, ವಹಿ ವಾಟು ಎಲ್ಲದರಿಂದ ಜಿಲ್ಲೆಯ ಆರ್ಥಿಕತೆಯಲ್ಲಿ ವಾಣಿಜ್ಯ ಚಟು ವಟಿಕೆಗಳಿಗೆ ಪುಷ್ಟಿ ನೀಡಿವೆ.

ಸಣ್ಣ, ಮಧ್ಯಮ ಕೈಗಾರಿಕೆ ಇಲಾಖೆಗಳ ಮಾಹಿತಿ ಪ್ರಕಾರ ಉಡುಪಿ ಜಿಲ್ಲೆಯಲ್ಲಿ ಶಿವಳ್ಳಿ, ನಂದಿಕೂರು, ಬೆಳಪು, ಮಿಯಾರು ಸೇರಿದಂತೆ ಒಟ್ಟು 4 ಕೈಗಾರಿಕೆ ಪ್ರದೇಶ ಹಾಗೂ ಶಿವಳ್ಳಿ, ಕಾರ್ಕಳ, ಕೋಟೇಶ್ವರ ಸೇರಿದಂತೆ ಒಟ್ಟು 3 ಕೈಗಾರಿಕೆ ವಸಾಹತುಗಳಿವೆ. ಈ ಪೈಕಿ 1,17,085 ಮಂದಿಗೆ ಉದ್ಯೋಗ ನೀಡಲಾಗಿದೆ. ಇವುಗಳು ಪ್ರತ್ಯಕ್ಷ ಉದ್ಯೋಗಗಳಾಗಿದ್ದು, ಇವೆಲ್ಲವೂ ಪರೋಕ್ಷ ಉದ್ಯೋಗಗಳನ್ನು ಹೊಂದಿವೆ. ಪ್ರತಿ ಕೈಗಾರಿಕೆಗೂ ಅದರದ್ದೇ ಆದ ಮಿತಿಯೊಳಗೆ ಪರೋಕ್ಷ ಉದ್ಯೋಗ ಸೃಷ್ಟಿಸುವ ಸಾಧ್ಯತೆ ಇರುವುದರಿಂದ ಇಲ್ಲಿ ಅಂದಾಜು ಮಾಡಿಲ್ಲ. ಒಟ್ಟು ಬಂಡವಾಳ ಹೂಡಿಕೆಯನ್ನು ಗಮನಿಸುವುದಾದರೆ ಸುಮಾರು 2,000 ಕೋಟಿ ರೂ.

ಈಗ ಏನಾಗಿದೆ?
ಈ ಕೈಗಾರಿಕೆಗಳ ಪೈಕಿ ಹಲವು ಕಚ್ಚಾವಸ್ತುಗಳು, ಸಿಬಂದಿ, ಮಾರುಕಟ್ಟೆ- ಮೂರೂ ವಿಷಯಗಳಲ್ಲಿ ಸ್ಥಳೀಯ, ಹೊರಜಿಲ್ಲೆ/ಹೊರರಾಜ್ಯ ಹಾಗೂ ವಿದೇಶ ಗಳನ್ನು ಅವಲಂಬಿಸಿವೆ. ಬಹುತೇಕ ಕೈಗಾರಿಕೆಗಳು ಶೇ. 70 ರಷ್ಟು ಸ್ಥಳೀಯ ಮಾನವ ಸಂಪನ್ಮೂಲವನ್ನೇ ಬಳಸುತ್ತಿವೆ. ಉಳಿದ ಪ್ರಮಾಣಕ್ಕೆ ಹೊರ ಜಿಲ್ಲೆ, ಹೊರರಾಜ್ಯಗಳ ಅವಲಂಬನೆ. ತಾಂತ್ರಿಕ ಪರಿಣಿತರು ಇತ್ಯಾದಿಗೆ ಹೊರರಾಜ್ಯ ಅನಿವಾರ್ಯ. ಕಚ್ಚಾವಸ್ತುಗಳಿಗೂ ಹಾಗೆಯೇ. ಮಾರುಕಟ್ಟೆಗೆ ಹೋಲಿಸಿದರೆ, ಶೇ. 60 ರಷ್ಟು ಉತ್ಪನ್ನಗಳು ವಿದೇಶಗಳಿಗೆ ರಫ್ತಾದರೆ, ಶೇ. 30ರಷ್ಟು ಹೊರ ರಾಜ್ಯ/ಜಿಲ್ಲೆಗಳಲ್ಲಿ ಮಾರುಕಟ್ಟೆ ಹೊಂದಿದೆ. ಶೇ. 10 ರಷ್ಟು ಸ್ಥಳೀಯ (ಜಿಲ್ಲೆ ಮತ್ತು ಅಕ್ಕಪಕ್ಕದ) ಮಾರು ಕಟ್ಟೆಗೆ ಸೀಮಿತ. ಇದಕ್ಕೆ ಎಲ್ಲ ಬಗೆಯ ಸಾರಿಗೆ ಸಂಪರ್ಕ ಸಂಪೂರ್ಣವಾಗಿ ಪುನರಾ ರಂಭವಾಗಬೇಕು.

ಕೋವಿಡ್-19 ಹಿನ್ನೆಲೆಯಲ್ಲಿ ಲಾಕೌಡೌನ್‌ ಜಾರಿಗೊಂಡ ಕಾರಣ ಎಲ್ಲ ಬಗೆಯ ಸಾರಿಗೆ ವ್ಯವಸ್ಥೆ ನಿಂತಿತು. ಅದರೊಂದಿಗೆ ಸರಕು ವಾಹನಗಳ ಸಂಚಾರ, ವಾಣಿಜ್ಯ ಚಟುವಟಿಕೆಗಳು ಸ್ಥಗಿತಗೊಂಡವು. ಮಾರ್ಚ್‌ 26 ರಿಂದ ಮೇ 3 ರವರೆಗೂ ಬಹುಪಾಲು ಕೈಗಾರಿಕೆಗಳಿಗೆ ಅವಕಾಶವಿರಲಿಲ್ಲ. ಇದರಿಂದ ಸಣ್ಣ ಕೈಗಾರಿಕೆಗಳಿಗೆ ಉತ್ಪಾದನಾ ವೆಚ್ಚ ದುಪ್ಪಟ್ಟಾದ ಹೊರೆ ಒಂದೆಡೆಯಾದರೆ, ಘಟಕಗಳನ್ನು ನಿಲ್ಲಿಸಿದ ಕಾರಣ, ಕಾರ್ಮಿಕರ ವೇತನ ಸೇರಿದಂತೆ ಇತರೆ ವೆಚ್ಚವನ್ನು ಭರಿಸಬೇಕಾದ ಹೊರೆ ಇನ್ನೊಂದೆಡೆ. ವಿವಿಧ ಉತ್ಪನ್ನಗಳಿಗೆ ಬೇಡಿಕೆಯೇ ಇಲ್ಲವಾಯಿತು. ಹಾಗಾಗಿ ಹಲವು ಕೈಗಾರಿಕೆಗಳಿಗೆ ನಿರ್ವಹಣಾ ವೆಚ್ಚದ ಹೊರೆಯೇ ದೊಡ್ಡದಿದೆ.

Advertisement

ಮೇ 4 ರ ಬಳಿಕ ಲಾಕ್‌ಡೌನ್‌ ಹಿಂದೆಗೆದ ಮೇಲಿನ ಸಮಸ್ಯೆಯೇ ಬೇರೆ. ಉದಾಹರಣೆಗೆ ಸ್ಥಳೀಯ ಪರಿಣಿತರು/ಕಾರ್ಮಿಕರು ಇದುವರೆಗೆ ತಮ್ಮದೇ ಆದ ಜೀವನ ಶೈಲಿ ರೂಪಿಸಿಕೊಂಡಿರುತ್ತಾರೆ. ಈಗ ಬದಲಾಯಿಸುವುದು ಕಷ್ಟ ಎಂಬುದಾದರೆ, ಇನ್ನು ಕೆಲವು ಕೈಗಾರಿಕೆಗಳಿಗೆ ಇರುವ ಕಚ್ಚಾವಸ್ತುಗಳು ಮುಗಿದರೆ ತರಿಸಿಕೊಳ್ಳುವುದು ಹೇಗೆ? ಹೆಚ್ಚುತ್ತಿರುವ ಬೇಡಿಕೆಯನ್ನು ಪೂರೈಸುವುದು ಹೇಗೆ? ಎಂಬ ಸಮಸ್ಯೆ. ಇದಲ್ಲದೇ, ಹಲವು ಕೈಗಾರಿಕೆಗಳಲ್ಲಿ ರಾತ್ರಿ ಪಾಳಿ ಇತ್ಯಾದಿ ಮಾಡಿಸುವಾಗ ಹೆಚ್ಚುವರಿ ವೇತನ, ಸೌಲಭ್ಯಗಳನ್ನು ಒದಗಿಸಬೇಕು. ಆದರೆ ಈಗಲೇ ಉತ್ಪಾದನೆ ಇಲ್ಲದೇ ನಷ್ಟದಲ್ಲಿರುವಾಗ ಇವೆಲ್ಲ ಭರಿಸುವುದು ಹೇಗೆ ಎಂಬುದೇ ಕೈಗಾರಿಕೋದ್ಯಮಿಗಳ ಎದುರು ಇರುವ ಯಕ್ಷಪ್ರಶ್ನೆ.

ಸರಕಾರದಿಂದ ಏನನ್ನು ನಿರೀಕ್ಷಿಸುತ್ತಿದ್ದೇವೆ ?
1. ಸಾರಿಗೆ ವ್ಯವಸ್ಥೆ ಇರದ ಕಾರಣ ಸಿಬಂದಿಗೆ ವಾಹನ, ಆಹಾರದ ವ್ಯವಸ್ಥೆಯನ್ನು ಕೈಗಾರಿಕೆಗಳೇ ಮಾಡ ಬೇಕಾಗಿದ್ದು, ಆರ್ಥಿಕ ಹೊರೆ ಹೆಚ್ಚಾಗುತ್ತಿದೆ. ಹಾಗಾಗಿ ಸಾರಿಗೆ ವ್ಯವಸ್ಥೆಯನ್ನು ಆರಂಭಿಸಬೇಕು.

2. ವಾರ್ಷಿಕ ವಹಿವಾಟು ಕಾಯ್ದುಕೊಳ್ಳುವಾಗ ( ಮಾರ್ಚ್‌, ಎಪ್ರಿಲ್‌, ಮೇ ತಿಂಗಳಿನಲ್ಲಿ ನಡೆಯುವ ವ್ಯವಹಾರದಿಂದ ವಾರ್ಷಿಕ ಬ್ಯಾಲೆನ್ಸ್‌ ಶೀಟ್‌ ಸರಿದೂಗಿಸ ಬಹುದಾಗಿತ್ತು) ಭಾರೀ ಪ್ರಮಾಣದಲ್ಲಿ ನಷ್ಟವಾಗುವ ಕಾರಣ ವಹಿವಾಟಿಗೆ ಕಷ್ಟವಾಗುತ್ತದೆ. ಆದ್ದರಿಂದ ಈ ಹಿಂದೆ ಬ್ಯಾಂಕುಗಳ ಮೂಲಕ ನೀಡಲಾಗುತ್ತಿರುವ ಶೇ. 8 ರಷ್ಟು ಓವರ್‌ಡ್ರಾಫ್ಟ್ ಸೌಲಭ್ಯವನ್ನು ಶೇ. 30 ಕ್ಕೆ ಏರಿಸಬೇಕು.

3. ಲಾಕ್‌ಡೌನ್‌ ನಿಂದಾಗಿ ಕೈಗಾರಿಕೆಗೆ ಅಗತ್ಯವಿರುವ ಹೊಸ ಯಂತ್ರಗಳು, ಹಳೆಯ ಯಂತ್ರಗಳ ಬಿಡಿ ಭಾಗಗಳು, ಸರ್ವೀಸ್‌ ಪ್ರೊವೈಡರ್ ಸಿಗುತ್ತಿಲ್ಲ. ಅದಕ್ಕಾಗಿ ಹೊರ ಜಿಲ್ಲೆ ಹಾಗೂ ಹೊರ ರಾಜ್ಯಗಳಿಂದ ಎಂಜಿನಿಯರ್, ಟೆಕ್ನಿಷಿಯನ್ಸ್‌ ಗಳ ಸಂಚಾರಕ್ಕೆ ಅನುವು ಮಾಡಿಕೊಡಬೇಕು.

4. ಶೇ. 30 ರಷ್ಟು ಕಾರ್ಮಿಕರ ಕೊರತೆ( ಕೆಲ ಕೈಗಾರಿಕೆಗಳಲ್ಲಿ ಮಾತ್ರ) ಯನ್ನು ಸರಿದೂಗಿಸಲು ಹೊರಜಿಲ್ಲೆ/ಹೊರರಾಜ್ಯಗಳ ಸಾರಿಗೆ ಸಂಚಾರ ಆರಂಭವಾಗಬೇಕು.

5.ಸಾಮಾಜಿಕ ಅಂತರ ಪಾಲಿಸುವ ಹಿನ್ನೆಲೆಯಲ್ಲಿ ಪಾಳಿಯಲ್ಲಿ ಕೆಲಸ ಮಾಡಬೇಕಾದ ಕಾರಣ ಕಾರ್ಮಿಕರ ಮೇಲೆ ಒತ್ತಡ ಹೆಚ್ಚುತ್ತದೆ. ಇದನ್ನು ನಿರ್ವಹಿಸಲು ಮಾರ್ಗ ಸೂಚಿಯಲ್ಲಿ ಬದಲಾವಣೆ ಮಾಡಬೇಕು. ಕೈಗಾರಿಕೆ ಗಳು ಸುಸೂತ್ರವಾಗಿ ನಡೆಯವಂತೆ ಮಾರ್ಗ ಸೂಚಿ/ನಿಬಂಧನೆಗಳಲ್ಲಿ ಕೊಂಚ ಸುಧಾರಣೆ ಮಾಡಬೇಕು.

ಜಿಲ್ಲೆಯಲ್ಲಿರುವ ಸಣ್ಣ ಕೈಗಾರಿಕೆಗಳು ಹಾಗೂ
ಘಟಕಗಳು (ಮಾರ್ಚ್‌ 31, 2020 ರವರೆಗೆ)
ಆಹಾರೋದ್ಯಮ ಮತ್ತು ಪಾನೀಯ ವಲಯ 4050
ಜವಳಿ ಮತ್ತಿತರ, ಸಿದ್ಧ ಉಡುಪು ವಲಯ 1857
ಮರ ಮತ್ತು ಮರ ಸಂಬಂಧಿ ಉತ್ಪನ್ನಗಳ ವಲಯ 1329
ಮುದ್ರಣ, ಲೇಖನ ಮತ್ತು ಕಾಗದ ಉತ್ಪನ್ನಗಳು 573
ಚರ್ಮೋತ್ಪನ್ನಗಳ ವಲಯ 156
ರಬ್ಬರ್‌ ಮತ್ತು ಪ್ಲಾಸ್ಟಿಕ್ಸ್‌ 405
ರಾಸಾಯನಿಕ ಉತ್ಪನ್ನ 302
ಗಾಜು ಮತ್ತು ಕುಂಬಾರಿಕೆ 540
ಜನರಲ್‌ ಎಂಜಿನಿಯರಿಂಗ್‌/ಯಂತ್ರೋಪಕರಣ ಭಾಗಗಳು/ಕೃಷಿ ಸಂಬಂಧಿ ಸಾಮಗ್ರಿ 617
ಸಾಮಾನ್ಯ ಲೋಹ ಮತ್ತು ಲೋಹದ ಉತ್ಪನ್ನ 630
ಎಲೆಕ್ಟ್ರಿಕಲ್‌ /ಎಲೆಕ್ಟ್ರಾನಿಕ್ಸ್‌ 194
ಆಟೊಮೊಬೈಲ್‌ 47
ಸಾರಿಗೆ ಮತ್ತು ಉಪಕರಣಗಳು 8
ಕಬ್ಬಿಣ ಮತ್ತು ಕಬ್ಬಿಣೇತರ ವಲಯ 1062
ಬಿಡಿ ಕೆಲಸ/ರಿಪೇರಿ, ಸರ್ವೀಸಿಂಗ್‌ ವಲಯ 474
ಇತರ ಸೇವೆ (ಲಾಂಡ್ರಿ, ಕುಶಲಕರ್ಮಿಗಳ ಘಟಕಗಳು) 1917
ವಿವಿಧ ಬಗೆಯ ಉತ್ಪನ್ನಗಳ ಸಂಬಂಧಿ ಕೈಗಾರಿಕೆ 1119

ಸರಕಾರ ಗಮನ ಕೊಡಲಿ
ಲಾಕ್‌ಡೌನ್‌ನಿಂದಾಗಿ ಕೈಗಾರಿಕೆಗಳಿಗೆ ಅಗತ್ಯವಿರುವ ಕಚ್ಚಾವಸ್ತುಗಳು ಲಭ್ಯವಾಗು ತ್ತಿಲ್ಲ. ವಸ್ತುಗಳ ಲಭ್ಯವಿಲ್ಲದೆ ಇರುವುದರಿಂದ ಕಾರ್ಮಿಕರಿಗೂ ತೊಂದರೆಯಾಗುತ್ತಿದೆ. ಜಿಲ್ಲಾಧಿಕಾರಿ ಹಾಗೂ ಡಿಐಸಿ ಅವರ ಸಹಯೋಗದಿಂದ ಕೆಲಸ ಮಾಡಲಾಗುತ್ತಿದೆ. ಸರಕಾರವು ಕೂಡಲೇ ನೆರವು ಒದಗಿಸಬೇಕು.
-ಐ.ಆರ್‌. ಫೆರ್ನಾಂಡಿಸ್‌,
ಜಿಲ್ಲಾ ಸಣ್ಣ ಕೈಗಾರಿಕೆ ಸಂಘದ ಅಧ್ಯಕ್ಷ. ಉಡುಪಿ.

Advertisement

Udayavani is now on Telegram. Click here to join our channel and stay updated with the latest news.

Next