ಹೊಸದಿಲ್ಲಿ: ಐಸಿಸಿ ಟಿ20 ವಿಶ್ವಕಪ್ 2024ರ ಕೂಟದಲ್ಲಿ ವಿಕ್ರಮ ಸಾಧಿಸಿದ ಭಾರತ ತಂಡವು ಇಂದು ಭಾರತಕ್ಕೆ ವಾಪಾಸಾಗಿದೆ. ಬಾರ್ಬಡಾಸ್ ನಲ್ಲಿ ಚಂಡಮಾರುತದ ಕಾರಣದಿಂದ ತಂಡದ ಪ್ರಯಾಣ ನಿಗದಿತ ದಿನಕ್ಕಿಂತ ವಿಳಂಬವಾಗಿತ್ತು. ಇದೀಗ ವಿಶೇಷ ವಿಮಾನದಲ್ಲಿ ಟೀಂ ಇಂಡಿಯಾ ತಾಯ್ನಾಡಿಗೆ ಮರಳಿದೆ.
ಟಿ20 ವಿಶ್ವಕಪ್ ಟ್ರೋಫಿಯೊಂದಿಗೆ ತಾಯ್ನಾಡಿಗೆ ಮರಳಿದ ತಂಡವನ್ನು ಅಭಿಮಾನಿಗಳು ದೆಹಲಿ ವಿಮಾನ ನಿಲ್ದಾಣದಲ್ಲಿ ಸ್ವಾಗತಿಸಿದರು. ಮಳೆಯಿದ್ದರೂ ಅಭಿಮಾನಿಗಳು ಭಾರಿ ಸಂಖ್ಯೆಯಲ್ಲಿ ಸೇರಿದ್ದರು. ಕರಡಾತನದ ಮೂಲಕ ತಂಡವನ್ನು ಸ್ವಾಗತಿಸಿದರು.
ದೆಹಲಿ ಏರ್ ಪೋರ್ಟ್ ಗೆ ಬಂದಿಳಿದ ಆಟಗಾರರು, ಅವರ ಕುಟುಂಬಿಕರು ಮತ್ತು ಸಹಾಯಕ ಸಿಬ್ಬಂದಿ ಟೀಂ ಬಸ್ ನಲ್ಲಿ ಐಟಿಸಿ ಮೌರ್ಯ ಹೋಟೆಲ್ ಗೆ ತೆರಳಿದರು.
ಭಾರತೀಯ ಆಟಗಾರರನ್ನು ಸ್ವಾಗತಿಸಲು ಹೋಟೆಲ್ ಸಿಬ್ಬಂದಿ ವಿಶೇಷವಾಗಿ ತಯಾರಿಸಿದ ಕೇಕ್ ಮತ್ತು ತ್ರಿವರ್ಣದ ಸ್ವಾಗತ ಪಾನೀಯಗಳನ್ನು ಆಯೋಜಿಸಿದ್ದರು. ಆದರೆ, ಎಲ್ಲರ ಗಮನ ಸೆಳೆದ ಮತ್ತೊಂದು ವಿಷಯವೆಂದರೆ ಢೋಲ್ ವ್ಯವಸ್ಥೆ.
ಢೋಲ್ ನ ಬೀಟ್ ಗಳಿಗೆ ನಾಯಕ ರೋಹಿತ್ ಶರ್ಮಾ ಮತ್ತು ಸೂರ್ಯಕುಮಾರ್ ಯಾದವ್ ಹೆಜ್ಜೆ ಹಾಕಿದರು. ಇದನ್ನು ಕಂಡ ಜನರು ಕರಾಡತನದ ಮೂಲಕ ಮೆಚ್ಚುಗೆ ಸೂಚಿಸಿದರು.
ವಿಶ್ವಕಪ್ ವಿಜೇತ ತಂಡವು ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಲಿದ್ದಾರೆ. ಅಲ್ಲಿಂದ ಮುಂಬೈಗೆ ತೆರಳಲಿರುವ ತಂಡ, ಟಿ20 ವಿಶ್ವಕಪ್ ವಿಜಯೋತ್ಸವ ಆಚರಿಸಲು ವಿಶೇಷ ಸಮಾರಂಭ ಆಯೋಜಿಸಲಾಗಿದೆ. ಆಟಗಾರರು ಮತ್ತು ಸಿಬ್ಬಂದಿಗಳು ಸಂಜೆ 4 ಗಂಟೆಗೆ ಮುಂಬೈಗೆ ಪ್ರಯಾಣಿಸುತ್ತಾರೆ, ನಂತರ ಅವರು ಮುಂದಿನ ಎರಡು ಗಂಟೆಗಳ ಕಾಲ ತೆರೆದ ಬಸ್ ಮೆರವಣಿಗೆಯಲ್ಲಿ ತೆರಳಲಿದ್ದಾರೆ.