Advertisement

ಅರಣ್ಯ ಸಂಪತ್ತಿನ ಗಡಿ ಸಮೀಕ್ಷೆಗೆ ಆರು ತಿಂಗಳ ಗಡುವು: ಈಶ್ವರ್ ಖಂಡ್ರೆ

07:25 PM Feb 10, 2024 | Team Udayavani |

ಮೈಸೂರು: ಹಸಿರು ಅರಣ್ಯೀಕರಣ ವಲಯದ ಒಂದೆ ಸರ್ವೇ ನಂಬರ್ ನಲ್ಲಿ ಅರಣ್ಯ ಭೂಮಿ, ಕೃಷಿ ಹಾಗೂ ವಾಸಸ್ಥಾನವು ಇರುವುದರಿಂದ ಅನೇಕ ತೊಂದರೆಗಳು ಎದುರಾಗುತ್ತಿದ್ದು, ಇದರ ನಿವಾರಣೆಗೆ ಜಂಟಿ ಸರ್ವೇ ನಡೆಸಿ ಅರಣ್ಯ ಸಂಪತ್ತು ಗಡಿ ನಿಗಧಿ ಪಡಿಸಲು 6 ತಿಂಗಳ ಗಡುವು ನೀಡಲಾಗಿದೆ ಎಂದು ಅರಣ್ಯ ಸಚಿವ ಈಶ್ವರ ಖಂಡ್ರೆ ತಿಳಿಸಿದರು.

Advertisement

ಮೈಸೂರಿನ ಅರಣ್ಯ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಬಹುತೇಕ ಕಡೆಗಳಲ್ಲಿ ಕಂದಾಯ ಗ್ರಾಮ, ಅರಣ್ಯ ಭೂಮಿ ಹಾಗೂ ಖಾಸಗಿ ಭೂಮಿಗಳ ವಿಂಗಡಿಸುವುದು ಬಹುದೊಡ್ಡ ಸಮಸ್ಯೆಯಾಗಿದೆ. ಹೀಗಾಗಿ ಅಂತಹ ಪ್ರದೇಶಗಳಲ್ಲಿ ಕಂದಾಯ ಹಾಗೂ ಅರಣ್ಯ ಅಧಿಕಾರಿಗಳ ತಂಡ ಜಂಟಿ ಸಮೀಕ್ಷೆ ನಡೆಸಿ ಆಯಾ ಭೂಮಿಯನ್ನು ಕಾನೂನು ರೀತಿ ವಿಂಗಡಿಸುವಂತೆ ಸೂಚಿಸಲಾಗಿದೆ ಎಂದು ಹೇಳಿದರು.

ಸ್ವಾತಂತ್ರ್ಯಪೂರ್ವ ಹಾಗೂ ನಂತರವೂ ಅರಣ್ಯ ಇಲಾಖೆಯ ವ್ಯಾಪ್ತಿಯಲ್ಲಿ ಗುತ್ತಿಗೆ ಆಧಾರ ಮೇಲೆ ಬಂದ ಅನೇಕರು ಇಂದಿಗೂ ಇಲ್ಲಿಯೇ ಅಕ್ರಮವಾಗಿದ್ದಾರೆ. ಕೆಲವರು 90 ವರ್ಷ ಗುತ್ತಿಗೆ ಪಡೆದು ಅದನ್ನು ಮರು ವಿಸ್ತರಣೆ ಕೋಡಿ ಸುಪ್ರೀಂ ಕೋರ್ಟ್ ಮೊರೆ ಸಹ ಹೋಗಿದ್ದಾರೆ. ಮೈಸೂರು, ಚಾಮರಾಜನಗರ ಹಾಗೂ ಕೊಡಗು ಜಿಲ್ಲೆಯಲ್ಲೇ 7500 ಎಕರೆವರೆಗೂ ಜಾಗ ಅನ್ಯರ ಸುಪರ್ದಿಯಲ್ಲಿದೆ. ಬಹಳ ಹಿಂದೆ ಕಾಫಿ, ರಬ್ಬರ್ ಬೆಳೆ ಬೆಳೆಯಲು ಬಳಸಿಕೊಂಡ ಮಂದಿ ಸದರಿ ಭೂಮಿಯನ್ನು ಹಿಂದುರುಗಿಸಿಲ್ಲ. ಚಾಮರಾಜನಗರ ಸಿಸಿಎಫ್ ಆಗಿದ್ದ ಬಿ.ಪಿ.ರವಿಯವರು ಇದನ್ನು ಬೆಳಕಿಗೆ ತಂದು ದೊಡ್ಡ ದೊಡ್ಡ ಕಂಪನಿಗಳಿಗೂ ಅರಣ್ಯ ಭೂಮಿ ವಾಪಾಸ್ ನೀಡುವಂತೆ ನೋಟೀಸ್ ನೀಡಿದ್ದರು‌. ಇದರ ಪರಿಣಾಮ ಗುತ್ತಿಗೆ ಅವಧಿ ಮುಗಿದರೂ ಹಾಗೂ ಹಣ ಪಾವತಿ ಮಾಡದವರು ಸಹ ಇಂದಿಗೂ ಅರಣ್ಯ ಭೂಮಿಯಲ್ಲಿದ್ದಾರೆ. ಇದನ್ನು ಗಮನಿಸಿ ಇಬ್ಬರೂ ಹಿರಿಯ ವಕೀಲರ ನೇತೃತ್ವದ ಅರಣ್ಯಾಧಿಕಾರಿಗಳ ತಂಡವನ್ನು ನೇಮಿಸಿ ನಮ್ಮ ಭೂಮಿ ವಾಪಾಸ್ ಪಡೆಯಲು ಸೂಕ್ತ ನ್ಯಾಯ ವಾದ ಮಂಡನೆಗೆ ತಾಕೀತು ಮಾಡಿರುವುದಾಗಿ ಹೇಳಿದರು. ಆ ಮೂಲಕ 2 ಲಕ್ಷ ಕ್ಕೂ ಅಧಿಕ ಅರಣ್ಯ ಭೂಮಿ ಒತ್ತುವರಿ ತೆರವು ಆಗಲಿದೆ. ಈಗಾಗಲೇ ಚಿನ್ನದ ಬೆಲೆ ಬಾಳುವ ಬೆಂಗಳೂರಿನಲ್ಲಿರುವ ಅರಣ್ಯ ಭೂಮಿ ಒತ್ತುವರಿ ತೆರವು ಕಾರ್ಯ ಮಾಡಲಾಗುತ್ತಿದೆ ಎಂದರು.

ಸುತ್ತೂರು ಜಾತ್ರಾ ಮಹೋತ್ಸವ ಕಾರ್ಯಕ್ರಮ ಮುಗಿಸಿ ಮೈಸೂರಿಗೆ ಬಂದಿದ್ದೇನೆ. ಬಂಡಿಪುರ ಪಶ್ಚಿಮ ಘಟ್ಟದ ದಟ್ಟ ಅರಣ್ಯವಾಗಿದ್ದು, ಅಪಾರ ವನ್ಯಜೀವಿಗಳ ಆವಾಸ ಸ್ಥಾನವಾಗಿದೆ. ಕಾಡು ಪ್ರಾಣಿಗಳಿಗೆ ಯಾವುದೇ ಅಪಾಯ ಆಗದಂತೆ ಮುನ್ನೆಚ್ಚರಿಕೆ ಕ್ರಮವಹಿಸುವುದು ನಮ್ಮ ಸರ್ಕಾರದ ಮೊದಲ ಆದ್ಯತೆಯಾಗಿದೆ. ಈ ಕಾರಣಕ್ಕೆ ರಾತ್ರಿ ಸಂಚಾರವನ್ನು ನಿಷೇಧಿಸಿದ್ದೇವೆ. ಅರಣ್ಯ ಭೂಮಿ ವಾಪಸ್ ಪಡೆದ ನಂತರ ಪ್ರಾಣಿಗಳ ಸಂಖ್ಯೆ ದಿನೇದಿನೇ ಹೆಚ್ಚಾಗುತ್ತಿದೆ. ರಾಜ್ಯದಲ್ಲಿ 6395 ಆನೆ, ದೇಶದಲ್ಲಿಯೇ ಹುಲಿಯಲ್ಲಿ ಎರಡನೇ ಸ್ಥಾನದಲ್ಲಿ ನಮ್ಮ ರಾಜ್ಯದಲ್ಲಿದೆ. ಈ ನಡುವೆ ಬರ ಹಿನ್ನೆಲೆಯಲ್ಲಿ ಕಾಡುಪ್ರಾಣಿ ಹಾಗೂ ಮಾನವರ ಸಂಘರ್ಷ ಹೆಚ್ಚಾಗಿದೆ. ಇದನ್ನು ತಡೆಯಲು ಅರಣ್ಯ ಭೂಮಿಯನ್ನು ವಾಪಾಸ್ ಪಡೆಯುವ ಪ್ರಯತ್ನ ನಡೆಯುತ್ತಿದೆ ಎಂದು ಹೇಳಿದರು.

ಇನ್ನೂ ರಾಜ್ಯದ ಆನೆಯ ಕಾಲ್ತುಳಿದಿಂದ ಕೇರಳ ವ್ಯಕ್ತಿ ಸಾವನ್ನಪ್ಪಿರುವ ಮಾಹಿತಿಯಿದೆ. ಆದರೆ, ಪ್ರಾಣಿಗಳಿಗೆ ಯಾವುದೇ ಗಡಿ ಇರುವುದಿಲ್ಲ. ಚಿರತೆ, ಆನೆ, ಹುಲಿಗೆ ಎಲ್ಲಾ ಪ್ರದೇಶಗಳು ಆವಾಸ ಸ್ಥಾನವಾಗಿದೆ. ಅರಣ್ಯ ಇಲಾಖೆ ವನ್ಯಜೀವಿ ಸಂರಕ್ಷಣೆಯೇ ಮೊದಲ ಆಯ್ಕೆಯಾಗಿದೆ ಎಂದು ಹೇಳಿದರು.

Advertisement

ಬಂಡಿಪುರ ರಾಷ್ಟ್ರೀಯ ಹುಲಿ ಸಂರಕ್ಷಿತ ಪ್ರದೇಶದಲ್ಲಿ ರಾತ್ರಿ 6 ರಿಂದ 9 ರವರೆಗೆ ಸಂಚಾರ ನಡೆಯುತ್ತಿದೆ. ರಾತ್ರಿ 9 ರಿಂದ ಮುಂಜಾನೆ 6 ರವರೆಗೂ ಸಂಚಾರ ನಿರ್ಬಂಧ ಮಾಡಿದ್ದೇವೆ. ಅಪಘಾತ ಸಂದರ್ಭದಲ್ಲಿ ಮಾತ್ರ ಬಿಡುವುದು ಆಗಿದೆ. ಇದುವರೆವಿಗೂ ಮೂವರು ಇಲಾಖೆ ಸಿಬ್ಬಂದಿ ಸಾವನ್ನಪ್ಪಿದ್ದಾರೆ.‌ ಆದರೂ ಅರಣ್ಯ ಇಲಾಖೆಗೆ ವನ್ಯಜೀವಿ ಹಾಗೂ ಮಾನವರನ್ನು ಸಂರಕ್ಷಣೆ ಮಾಡಬೇಕಿದೆ. ಈಗಾಗಲೇ 120 ಕಿ.ಮೀ. ಕಬ್ಬಿಣದ ಬ್ಯಾರಿಕೇಡ್ ಅಳವಡಿಸುವ ಕೆಲಸ ನಡೆದಿದ್ದು, ಬಾಕಿ 240ಕಿ.ಮೀ ಇದೆ. ಇದಕ್ಕಾಗಿ 250 ಕೋಟಿ ರೂ. ಅನುದಾನವನ್ನು ಬಜೆಟ್ ನಲ್ಲಿ ಘೋಷಿಸುವಂತೆ ಮನವಿ ಮಾಡಿದ್ದು, ನಿರೀಕ್ಷೆಯಲ್ಲಿದ್ದೇನೆಂದರು.

ಇನ್ನೂ ರಾಜ್ಯದಲ್ಲಿ ಸಿಗುವ ಚಿರತೆಗಳ ಸಂರಕ್ಷಣಾ ಕೇಂದ್ರ ಸ್ಥಾಪನೆಯ ವರದಿ ಪರಿಶೀಲನೆ ಹಂತದಲ್ಲಿದೆ ಎಂದರು.
ಇನ್ನೂ ಎಚ್.ಡಿ.ಕೋಟೆಯ ಸಮೀಪದಿಂದ ಗಾಯಗೊಂಡ ಚಿರತೆಯನ್ನು ಕೇರಳಕ್ಕೆ ಬಿಟ್ಟು ಸದರಿ ಹುಲಿ ಕೇರಳದಲ್ಲಿ ಬಾಲಕರೊಬ್ಬರ ಮೇಲೆ ಹಲ್ಲೆ ಮಾಡಿರುವ ಪ್ರಕರಣದ ಮಾಹಿತಿಯಿಲ್ಲ. ಅಂತಹ ದಾಖಲೆ ಕಂಡು ಬಂದರೆ ಪ್ರತ್ಯೇಕ ತನಿಖೆ ನಡೆಸಿ ವರದಿ ಪಡೆದು ಶಿಕ್ಷೆಗೆ ಗುರಿಪಡಿಸುವುದಾಗಿ ಸ್ಪಷ್ಟಪಡಿಸಿದರು.

ಸೋಮವಾರ ವರದಿ ಬಹಿರಂಗ
ಇನ್ನೂ ನಾಡಹಬ್ಬ ದಸರೆಯ ಜಂಬೂ ಸವಾರಿಯಲ್ಲಿ ಅಂಬಾರಿ ಹೊತ್ತಿದ್ದ ಅರ್ಜುನ ಆನೆಯ ಸಾವಿನ ತನಿಖೆ ಹಾಗೂ ಮರಣೋತ್ತರ ಪರೀಕ್ಷೆ ನಡೆದು ವರದಿ ಕೈ ಸೇರಿದೆ. ಈ ಬಗ್ಗೆ ಸೋಮವಾರ ವರದಿ ಬಿಡುಗಡೆ ಮಾಡಲಾಗುತ್ತದೆ ಎಂದು ತಿಳಿಸಿದರು.

ಕಾನೂನು ಬದ್ಧವಾಗಿ ಕ್ರಮ
ಇನ್ನೂ ಸಂಸದ ಪ್ರತಾಪಸಿಂಹ ಅವರ ಸಹೋದರರ ಪ್ರಕರಣಕ್ಕೆ ಸಂಬಂಧಿಸಿದ ಪ್ರಶ್ನೆಗೆ ಸದರಿ ಪ್ರಕರಣದಲ್ಲಿ ಕಾನೂನು ಬದ್ಧವಾಗಿ ಅಧಿಕಾರಿಗಳು ಕ್ರಮ ಕೈಗೊಂಡಿದ್ದಾರೆ‌. ಇದರಲ್ಲಿ ಯಾವುದೇ ರಾಜಕೀಯ ಹಸ್ತಕ್ಷೇಪವಿಲ್ಲ. ಇವರು ಸಹ ಹಸ್ತಕ್ಷೇಪ ಮಾಡುವುದು ಬೇಡ. ಅಂತಿಮವಾಗಿ ಕಾನೂನು ಚೌಕಟ್ಟಿನಲ್ಲಿ ಕ್ರಮ ಜರುಗಲಿದೆ ಎಂದು ಅರಣ್ಯ ಸಚಿವ ಈಶ್ವರಖಂಡ್ರೆ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next