Advertisement

ಶಿವಸಿಂಪಿ ಸಮಾಜದ ಹಾಸ್ಟೆಲ್‌, ಸಮುದಾಯ ಭವನಕ್ಕೆ ಅನುದಾನ

03:23 PM Jul 30, 2018 | |

ದಾವಣಗೆರೆ: ಶಿವಸಿಂಪಿ ಸಮಾಜದ ಹಾಸ್ಟೆಲ್‌, ಸಮುದಾಯ ಭವನಕ್ಕೆ ಅಗತ್ಯ ಅನುದಾನ ನೀಡಲಾಗುವುದು ಎಂದು ಸಂಸದ ಜಿ.ಎಂ. ಸಿದ್ದೇಶ್ವರ್‌ ಭರವಸೆ ನೀಡಿದ್ದಾರೆ. ಭಾನುವಾರ ಶಿವಯೋಗಿ ಮಂದಿರದಲ್ಲಿ ದಾವಣಗೆರೆ ಜಿಲ್ಲಾ ಶಿವಸಿಂಪಿ ಸಮಾವೇಶ, ಕುಲಗುರು ಶರಣ ಶಿವದಾಸಿಮಯ್ಯ ಜಯಂತ್ಯುತ್ಸವ, ಪ್ರತಿಭಾ ಪುರಸ್ಕಾರ ಮತ್ತು ಸಾಧಕರ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಶಿಕ್ಷಣದ ಮೂಲಕ ಏನನ್ನಾದರೂ ಸಾಧಿಸಲು ಸಾಧ್ಯ. ಶಿವಸಿಂಪಿ ಸಮಾಜದವರು ಹಾಸ್ಟೆಲ್‌, ಸಮುದಾಯ ಭವನ ಮಾಡಿದರೆ ಅಗತ್ಯ ಅನುದಾನ ನೀಡುವುದಾಗಿ ಹೇಳಿದರು.

Advertisement

ಸಾಕ್ಷಾತ್‌ ಶಿವನಿಗೇ ಬಟ್ಟೆ ಹೊಲಿದು ಕೊಟ್ಟಿರುವ ಇತಿಹಾಸ ಹೊಂದಿರುವ ಶಿವಸಿಂಪಿ ಸಮಾಜ ಬಾಂಧವರು ಹಿಂದಿನಿಂದಲೂ ಬಟ್ಟೆ ಹೊಲೆಯುವ ವೃತ್ತಿ ಮಾಡುತ್ತಿದ್ದವರು. ಅವರಿಂದಲೇ ಬಟ್ಟೆ ಹೊಲಿಸುವುದೂ ಇತ್ತು. ಕಾಲಾನುಕ್ರಮೇಣ ಬೇರೆ ಬೇರೆ ವೃತ್ತಿ, ಕೆಲಸದಲ್ಲಿ ತೊಡಗಿಸಿಕೊಂಡಿದ್ದಾರೆ. ಇಂದಿನ ಸಮಾಜದಲ್ಲಿ ಅಭಿವೃದ್ಧಿ ಆಗಬೇಕು ಎಂದಾದರೆ ಶಿಕ್ಷಣ ಅತಿ ಮುಖ್ಯ. ಹಾಗಾಗಿ ಶಿವಸಿಂಪಿ ಸಮಾಜದವರು ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಬೇಕು. ಮಕ್ಕಳನ್ನು ವಿದ್ಯಾವಂತರನ್ನಾಗಿ ಮಾಡಬೇಕು ಎಂದು ಸಲಹೆ ನೀಡಿದರು. 

ದೇಶದ ರಾಷ್ಟ್ರಪತಿಗಳಾಗಿದ್ದ ಅಬ್ದುಲ್‌ ಕಲಾಂರವರು ಬಡತನದಲ್ಲಿ ಬೆಳೆದವರು. ಬೀದಿ ದೀಪದ ಬೆಳಕಿನಲ್ಲಿ ಓದಿ, ಮುಂದೆ ದೊಡ್ಡ ವಿಜ್ಞಾನಿಯಾದವರು. ಪ್ರಧಾನಿ ನರೇಂದ್ರ ಮೋದಿಯವರು ಸಹ ಬಡ ಕುಟುಂಬದಿಂದ ಬಂದವರು. ಅವರ ತಾಯಿ ಬೇರೆಯವರ ಮನೆಯಲ್ಲಿ ಕೆಲಸ ಮಾಡುತ್ತಿದ್ದರು. ಮೋದಿ ಅವರು ರೈಲ್ವೆ ನಿಲ್ದಾಣದಲ್ಲಿ ಚಹಾ ಮಾರುತ್ತಿದ್ದವರು. ಶಿಕ್ಷಣದ ಮೂಲಕ ಉನ್ನತ ಸ್ಥಾನಕ್ಕೆ ಏರಿದ್ದಾರೆ. ಬಡತನ, ಸಿರಿತನ ಶಾಶ್ವತ ಅಲ್ಲ, ವಿದ್ಯೆಯೇ ಶಾಶ್ವತ ಎಂದು ತಿಳಿಸಿದರು. 

ಉಪನ್ಯಾಸ ನೀಡಿದ ತುಮಕೂರು ವಿಶ್ವವಿದ್ಯಾಲಯದ ಇತಿಹಾಸ ಮತ್ತು ಪ್ರಾಕ್ತನಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ| ಎಂ. ಕೊಟ್ರೇಶ್‌, ಶಿವದಾಸಿಮಯ್ಯನವರೇ ಶಿವಸಿಂಪಿ ಸಮಾಜದ ಕುಲಗುರು ಎನ್ನುವುದಕ್ಕೆ ಸಾಕ್ಷ್ಯ ದೊರೆತಿದೆ. ಶಿವದಾಸಿಮಯ್ಯ ನಮ್ಮ ಸಮಾಜದ ಕುಲಗುರು ಎಂದು ಸಾಬೀತುಪಡಿಸುವ 16ನೇ ಶತಮಾನ ಹಸ್ತಪ್ರತಿ ದೊರೆತಿದೆ. ಆ ಪ್ರಕಾರ ಶಿವದಾಸಿಮಯ್ಯ ಬಸವಪೂರ್ವ ಅಂದರೆ 11ನೇ ಶತಮಾನದವರು. ವೇದಗಳಲ್ಲೂ ಚಿಂಪಿಗರು… ಎನ್ನುವ ಉಲ್ಲೇಖ ಇದೆ. ಇದು ನಮ್ಮ ಸಮಾಜಕ್ಕೆ ಹೆಮ್ಮೆಯ ವಿಚಾರ. ಈ ಎಲ್ಲ ವಿಚಾರಗಳ ಆಧಾರವಾಗಿಟ್ಟುಕೊಂಡು ಶಿವದಾಸಿಮಯ್ಯನವರ ಕುರಿತಾಗಿ ಹೊಸ ಚರಿತ್ರೆಯ ಕಟ್ಟಬೇಕಾಗಿದೆ ಎಂದರು.

ನಾಗರಿಕತೆಯ ಹುಟ್ಟಿನೊಂದಿಗೆ ಕಂಡು ಬರುವ ಶಿವಸಿಂಪಿ ಸಮಾಜದ ಕುಲಗುರು ಶಿವದಾಸಿಮಯ್ಯನವರ ಜಯಂತಿ ಸರ್ಕಾರ ಮಾಡಬೇಕು ಎಂದು ಭಿಕ್ಷೆ ಬೇಡುವ ಅಗತ್ಯ ಇಲ್ಲ. ಸರ್ಕಾರವೇ ಮುಂದಾಗಿ ಶಿವದಾಸಿಮಯ್ಯನವರ ಜಯಂತಿ ಉತ್ಸವವನ್ನು ರಾಷ್ಟ್ರೀಯ ಉತ್ಸವವನ್ನಾಗಿ ಮಾಡಬೇಕು. ಶಿವಸಿಂಪಿ ಸಮಾಜವನ್ನು ಪ್ರವರ್ಗ2 ಎ ಅಡಿ ಸೇರಿಸುವ ಮೂಲಕ ಸರ್ಕಾರ ಅನುಕೂಲ ಮಾಡಿಕೊಡಬೇಕು ಎಂದು ಆಶಿಸಿದರು. 

Advertisement

ದಾವಣಗೆರೆ ವಿರಕ್ತ ಮಠದ ಶ್ರೀ ಬಸವಪ್ರಭು ಸ್ವಾಮೀಜಿ ಸಾನ್ನಿಧ್ಯ, ಶಿವಸಿಂಪಿ ಸಮಾಜದ ಜಿಲ್ಲಾ ಅಧ್ಯಕ್ಷ ಗುರುಬಸಪ್ಪ ಬೂಸ್ನೂರ್‌ ಅಧ್ಯಕ್ಷತೆ ವಹಿಸಿದ್ದರು. ಪ್ರೊ| ಮಲ್ಲಿಕಾರ್ಜುನ್‌ ಪ್ರಸ್ತಾವಿಕ ಮಾತುಗಳಾಡಿದರು. ಶಾಸಕ ಎಸ್‌.ಎ. ರವೀಂದ್ರನಾಥ್‌, ಬಿಜೆಪಿ ಜಿಲ್ಲಾ ಅಧ್ಯಕ್ಷ ಯಶವಂತರಾವ್‌ ಜಾಧವ್‌, ಯುವ ಮುಖಂಡ ಎಚ್‌.ಎಸ್‌. ನಾಗರಾಜ್‌, ಚಿಂದೋಡಿ ಚಂದ್ರಧರ್‌, ಜಗದೀಶ್‌ ಬಾವಿಕಟ್ಟಿ, ಎಸ್‌. ಷಣ್ಮುಖಪ್ಪ, ವಸಂತ್‌ಕುಮಾರ್‌, ಪಿ.ಎಸ್‌. ಲಕ್ಕುಂಡಿ, ಇ.ಸಿ.ಎಸ್‌. ಮೂರ್ತಿ, ಎಸ್‌.ಡಿ. ಕೊಟ್ರೇಶ್‌, ಮೂರಲ್‌ ರಾಜು, ಲೋಕೇಶ್‌, ಉಮಾಪತಿ ಇತರರು ಇದ್ದರು. ಸುಜಾತ
ಬೂಸ್ನೂರ್‌ ಪ್ರಾರ್ಥಿಸಿದರು. ಜ್ಞಾನೇಶ್ವರ್‌ ಜವಳಿ ನಿರೂಪಿಸಿದರು. ಪ್ರತಿಭಾ ಪುರಸ್ಕಾರ ಮತ್ತು ಸಾಧಕರ ಸನ್ಮಾನ ನಡೆಯಿತು.

Advertisement

Udayavani is now on Telegram. Click here to join our channel and stay updated with the latest news.

Next