Advertisement

ಕೋವಿಡ್‌ ಹೊಡೆತಕ್ಕೆ ಶಾಮಿಯಾನ ಉದ್ಯಮ ತತ್ತರ

01:55 PM Apr 29, 2020 | Naveen |

ಸಿರುಗುಪ್ಪ: ಮದುವೆ, ಜಾತ್ರೆ ಸೇರಿದಂತೆ ವಿವಿಧ ಸಮಾರಂಭಗಳ ಅಂದ ಹೆಚ್ಚಿಸುತ್ತಿದ್ದ ಶಾಮಿಯಾನ ಉದ್ಯಮ ಕೋವಿಡ್‌-19 ಹೊಡೆತಕ್ಕೆ ತತ್ತರಿಸಿ ಹೋಗಿದ್ದು, ತಾಲೂಕಿನಲ್ಲಿ ಸುಮಾರು 500ಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ಶಾಮಿಯಾನ ಉದ್ಯಮದಲ್ಲಿ ಕೆಲಸ ಮಾಡುವವರಿದ್ದಾರೆ. ತಾಲೂಕಿನಲ್ಲಿ 200ಕ್ಕೂ ಹೆಚ್ಚು ಶಾಮಿಯಾನ ಅಂಗಡಿಗಳಿದ್ದು, ಅದರಲ್ಲಿ ಕಾರ್ಯನಿರ್ವಹಿಸುತ್ತಿರುವ ಕಾರ್ಮಿಕರ ಬದುಕು ಈಗ ಅತಂತ್ರವಾಗಿದ್ದು, ಲಾಕ್‌ಡೌನ್‌ ತೀವ್ರ ಹೊಡೆತ ನೀಡಿದೆ.

Advertisement

ಪ್ರತಿವರ್ಷ ಜನವರಿ ನಂತರ ಸಾಲು ಸಾಲು ಮದುವೆ, ಜಾತ್ರೆಗಳು ನಡೆಯುತ್ತವೆ. ಇದರಿಂದ ಸಮಾರಂಭಗಳಿಗೆ ಶಾಮಿಯಾನ, ಕುರ್ಚಿ, ಲೈಟ್‌, ವೇದಿಕೆ ಸಿದ್ಧತೆ ಮಾಡುವ ಶಾಮಿಯಾನ ಮಾಲೀಕರಿಗೆ ಒಂದು ರೀತಿಯ ಸುಗ್ಗಿಕಾಲವೇ ಆಗಿರುತ್ತದೆ. ಆದರೆ ಕೊರೊನಾ ಮಾರಿ ಒಕ್ಕರಿಸಿದ್ದರಿಂದ ಶಾಮಿಯಾನ ಮಾಲೀಕರು ಮತ್ತು ಅದನ್ನೇ ನಂಬಿಕೊಂಡು ಜೀವನ ನಡೆಸುತ್ತಿರುವ ಕಾರ್ಮಿಕರ ಬದುಕಿಗೆ ಕೊಳ್ಳಿ ಇಟ್ಟಂತಾಗಿದೆ. ಕಳೆದ 2 ತಿಂಗಳಿಂದ ಕೆಲಸವಿಲ್ಲದೆ ಸಾಕಷ್ಟು ಆರ್ಥಿಕ ಸಂಕಷ್ಟ ಎದುರಿಸುವಂತಾಗಿದೆ. ಇಂಥ ಸಂದರ್ಭದಲ್ಲಿ ಕೇಂದ್ರ ಸರ್ಕಾರ ಏಕಾಏಕಿ ಲಾಕ್‌ಡೌನ್‌ ಘೋಷಿಸಿದ್ದರ ಪರಿಣಾಮ ಮತ್ತಷ್ಟು ಸಂಕಷ್ಟ ಎದುರಿಸುವಂತಾಗಿದೆ.

ಕೋವಿಡ್ನಿಂದ ನಲುಗಿರುವ ಜನರು ಕೂಡ ಅದ್ಧೂರಿ ಮದುವೆಗೆ ಹಿಂದೇಟು ಹಾಕಿದ್ದು, ಬುಕ್ಕಿಂಗ್‌ ಕ್ಯಾನ್ಸಲ್‌ ಮಾಡಿಸಿದ್ದಾರೆ. ಅಲ್ಲದೆ ಮುಂಗಡ ಹಣ ವಾಪಸಾತಿಗೆ ಬೇಡಿಕೆ ಇಟ್ಟಿದ್ದಾರೆ.
ಆದರೆ ಮದುವೆ ಸಿದ್ಧತೆಗೆ ಬೇಕಾದ ವಸ್ತುಗಳನ್ನು ತಯಾರಿಸಲು ಹಣ ನೀಡಿದ್ದರಿಂದ ಬುಕ್ಕಿಂಗ್‌ ಮಾಡಿಸಿದವರಿಗೆ ಹಣ ವಾಪಸ್‌Õ ಕೊಡುವುದು ಕಿರಿಕಿರಿಯಾಗಿದೆ ಎಂದು ಶಾಮಿಯಾನದ ಮಾಲೀಕ ಎಸ್‌.ಎಂ.ನಾಗರಾಜಸ್ವಾಮಿ ಅಭಿಪ್ರಾಯ ಪಟ್ಟಿದ್ದಾರೆ.

ಶಾಮಿಯಾನದವರ ಕಾರ್ಯ 6 ತಿಂಗಳ ಮೊದಲೇ ಪ್ರಾರಂಭವಾಗುತ್ತವೆ. ಒಂದು ಶಾಮಿಯಾನ ಅಂಗಡಿಗೆ ಸುಮಾರು 50ಕ್ಕೂ ಹೆಚ್ಚು ಕಾರ್ಯಕ್ರಮಗಳು ಬುಕ್‌ ಆಗಿರುತ್ತವೆ.
ಆದರೆ ಈ ಬಾರಿ ಎಲ್ಲ ಕಾರ್ಯಕ್ರಮಗಳು ರದ್ದಾದ ಕಾರಣ ಸುಮಾರು 20ರಿಂದ 30ಲಕ್ಷದಷ್ಟು ಆದಾಯ ನಷ್ಟವಾಗಿದೆ ಎಂದು ಶಾಮಿಯಾನದ ಮಾಲೀಕರೊಬ್ಬರು ಬೇಸರ ವ್ಯಕ್ತಪಡಿಸಿದ್ದಾರೆ.

ಶಾಮಿಯಾನ ಹಾಕುವ ಕೆಲಸಗಾರರು ದಿನಪೂರ್ತಿ ಕಷ್ಟಪಟ್ಟು ದುಡಿಯುತ್ತಾರೆ. ಅವರೆಲ್ಲರೂ ಇದನ್ನೇ ನಂಬಿಕೊಂಡು ಜೀವನ ಸಾಗಿಸುತ್ತಿದ್ದಾರೆ. ಅವರಿಗೆ ಬೇರೆ ಕೆಲಸದ ಅನುಭವ ಇರುವುದಿಲ್ಲ. ಆದರೆ ಇವರಿಗೆ ಈಗ ಸಂಬಳ ನೀಡಲೇಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಕೆಲಸಕ್ಕೆ ಬರುವುದಿಲ್ಲ. ಆದಾಯವಿಲ್ಲದೆ ಸಂಬಳ ನೀಡುವುದು ಕಷ್ಟವಾಗಿದೆ.
ನಾಗರಾಜಸ್ವಾಮಿ,
ಶಾಮಿಯಾನ ಮಾಲೀಕರ ಸಂಘದ ಮಾಜಿ ಅಧ್ಯಕ್ಷ

Advertisement

ಲಾಕ್‌ಡೌನ್‌ನಿಂದ ನಮಗೆ ಕೆಲಸವಿಲ್ಲದಂತಾಗಿದೆ. ಶಾಮಿಯಾನ ಹಾಕುವುದನ್ನೇ ನಂಬಿಕೊಂಡು ಜೀವನ ನಡೆಸುತ್ತಿದ್ದೇವೆ. ಅದರಿಂದ ಬರುವ ಹಣದಲ್ಲಿಯೇ ಮನೆ ನಿರ್ವಹಣೆ, ಸಾಲ
ತೀರಿಸುವುದನ್ನು ಮಾಡುತ್ತಿದ್ದೇವು. ಆದರೆ ಈಗ ಕೆಲಸವಿಲ್ಲದಿರುವುದರಿಂದ ಬದುಕು ನಡೆಸುವುದು ಕಷ್ಟವಾಗಿದೆ. ಇನ್ನೂ ನಮ್ಮ ಮಾಲೀಕರು ಒಂದಷ್ಟು ಸಹಾಯ ನೀಡುವ
ನಿರೀಕ್ಷೆಯಲ್ಲಿದ್ದೇವೆ.
ಶೇಕ್ಷಾವಲಿ,
ಶಾಮಿಯಾನ ಹಾಕುವ ಕಾರ್ಮಿಕ

Advertisement

Udayavani is now on Telegram. Click here to join our channel and stay updated with the latest news.

Next