Advertisement

ಹುದ್ದೆ , ವೇತನ, ಖರ್ಚು- ಎಂ.ವಿ. ದೃಷ್ಟಿ

11:14 PM Sep 09, 2022 | Team Udayavani |

ಮೂಲತಃ ಮೈಸೂರಿನವರಾಗಿ ವಿಶಾಲ ಮುಂಬಯಿ ಪ್ರಾಂತ (ಮುಂಬಯಿ ನಗರ, ಸೂರತ್‌, ಧಾರವಾಡ, ವಿಜಯಪುರ, ನಾಸಿಕ್‌, ಪುಣೆ), ಎರವಲು ಸೇವೆಯಲ್ಲಿ ಸಿಂಧ್‌ ಪ್ರಾಂತ, ಕರಾಚಿ (ಎರಡೂ ಈಗಿನ ಪಾಕಿಸ್ಥಾನದಲ್ಲಿವೆ), ಕೊಲ್ಹಾಪುರ, ಅಹ್ಮದಾಬಾದ್‌, ಹೈದರಾಬಾದ್‌ ಪ್ರಾಂತ, ಮೈಸೂರು ಪ್ರಾಂತಗಳಲ್ಲಿ ಸೇವೆ ಸಲ್ಲಿಸಿದ್ದಲ್ಲದೆ ಈ ನಡುವೆ ಬಿಹಾರದಲ್ಲಿ (90ರ ಇಳಿವಯಸ್ಸಿನಲ್ಲಿ) ಮತ್ತು ವಿಶೇಷವಾಗಿ ಯೆಮನ್‌ ದೇಶದ ಏಡನ್‌, ಇಟಲಿಯ ಮಿಲಾನ್‌ ನಗರಗಳಲ್ಲಿಯೂ ತನ್ನ ಅಚ್ಚಳಿಯದ ಗುರುತು ಛಾಪಿಸಿದ ಸರ್‌ ಎಂ. ವಿಶ್ವೇಶ್ವರಯ್ಯನವರ (1860-1962) ಜನ್ಮದಿನವನ್ನು ಸೆ. 15ರಂದು ನಾಡಿನಾದ್ಯಂತ ಆಚರಿಸಲಾಗುತ್ತಿದೆ. ಅವರ ಬಗೆಗೆ 60ಕ್ಕೂ ಹೆಚ್ಚು ಪುಸ್ತಕಗಳು ಬಂದಿವೆ. 1920-30ರಲ್ಲಿ ದೇಶವಿಡೀ ಸ್ವಾತಂತ್ರ್ಯ ಹೋರಾಟದಲ್ಲಿ ತೊಡಗಿರುವಾಗ ಎಂ.ವಿ.ಯವರು ದೇಶವನ್ನು ಹೇಗೆ ಅಭಿವೃದ್ಧಿಪಡಿಸಬೇಕು ಎಂದು ಬರೆದ ಪುಸ್ತಕಗಳೂ ಇವೆ. ಹುದ್ದೆ, ವೇತನ, ಖರ್ಚು ವೆಚ್ಚದ ಕುರಿತು ಅವರ ಜೀವನ ನೀತಿ ಇಂದಿನ ಆಡಳಿತ ನಡೆಸುವವರ ಕಣ್ತೆರೆಸಬೇಕು.

Advertisement

1883ರಲ್ಲಿ ಪುಣೆಯ ಸೈನ್ಸ್‌ ಕಾಲೇಜಿನಲ್ಲಿ ಮುಂಬಯಿ ಪ್ರಾಂತಕ್ಕೆ ಮೊದಲಿಗರಾಗಿ ಉತ್ತೀರ್ಣರಾದ ಸರ್‌ ಎಂ. ವಿಶ್ವೇಶ್ವರಯ್ಯನವರು ಮುಂಬಯಿ ಸರಕಾರದ ಅಸಿಸ್ಟೆಂಟ್‌ ಎಂಜಿನಿಯರ್‌ ಆಗಿ ವೃತ್ತಿ ಜೀವನಕ್ಕೆ ಕಾಲಿಟ್ಟರು. ಆಗ ಇಂತಹ ಹುದ್ದೆಗಳು ಸಿಗುತ್ತಿದ್ದುದು ಬ್ರಿಟಿಷರಿಗೆ. ವಿವಿಧ ಕಡೆಗಳಲ್ಲಿ ತೋರಿಸಿದ ಸಾಮರ್ಥ್ಯಕ್ಕಾಗಿ 18 ಆಂಗ್ಲ ಅಧಿಕಾರಿಗಳ ಸೇವಾ ಹಿರಿತನವನ್ನು ಮೀರಿ ಮುಖ್ಯ ಎಂಜಿನಿಯರ್‌ ಹುದ್ದೆ ದೊರಕಿತು. ಸರ್ವೀಸ್‌ ಆದಂತೆ (ವಯಸ್ಸು ಆದಂತೆ) ಉನ್ನತ ಹುದ್ದೆಗೇರುವ ವ್ಯವಸ್ಥೆಗೆ ಅಂಟಿಕೊಂಡಿದ್ದ (ಇದನ್ನೇ ಭಾರತೀಯರಿಗೆ ಕಲಿಸಿದ್ದ) ಉನ್ನತ ಆಂಗ್ಲ ಅಧಿಕಾರಿಗಳಿಗೆ ಮತ್ಸರ ಬಂದಾಗ ಇಂತಹ ವಾತಾವರಣದಲ್ಲಿ ಹುದ್ದೆಯಲ್ಲಿ ಮುಂದುವರಿಯುವುದು ಕಷ್ಟವೆಂದು ತಿಳಿದು ರಾಜೀನಾಮೆ ನೀಡಿದರು. ಇವರ ಸೇವಾತತ್ಪರತೆ ನೋಡಿದ ಗವರ್ನರ್‌ ಲಾರ್ಡ್‌ ಸಿಡನ್‌ ಹ್ಯಾಂ ಪೂರ್ಣ ನಿವೃತ್ತಿ ವೇತನಕ್ಕೆ ಆದೇಶಿಸಿದ. 1898ರಲ್ಲಿ ಜಪಾನಿಗೆ ಹೋಗಿ ಅಲ್ಲಿನ ಕಾರ್ಖಾನೆಗಳು, ಅಲ್ಲಿನ ಅಭಿವೃದ್ಧಿಗೆ ಕಾರಣಗಳನ್ನು ತಿಳಿದರು. ಮುಂಬಯಿ ಸರಕಾರದಲ್ಲಿ ನಿವೃತ್ತಿಗೆ ಮುನ್ನ ರಜೆ ಪಡೆದು ಸ್ವಂತ ಖರ್ಚಿನಿಂದ ಯೂರೋಪ್‌, ಅಮೆರಿಕಕ್ಕೆ ಹೋಗಿ ಅಣೆಕಟ್ಟು, ಕಾಲುವೆ, ನಗರಗಳಿಗೆ ನೀರು ಪೂರೈಸುವ ತಂತ್ರಜ್ಞಾನಗಳನ್ನು ಅಧ್ಯಯನ ನಡೆಸಿ ಬಂದರು.

ಜಪಾನಿಗೆ ಹೋಗುವ ಮುನ್ನವೇ ಹೈದರಾಬಾದ್‌ ನಿಜಾಮರಿಂದ ಬೇಡಿಕೆ ಬಂದಿತ್ತು. ಹೈದರಾಬಾದ್‌ನಲ್ಲಿ ಮೂಸಿ ಮತ್ತು ಇಯಾಸಿ ನದಿಗಳ ಪ್ರವಾಹದಿಂದ ಜನಜೀವನ ದುರ್ಭರವಾಗಿತ್ತು. ನಿಜಾಮ್‌ ಸರಕಾರವಾದರೂ ಸರ್ವತಂತ್ರ ಸ್ವತಂತ್ರವಲ್ಲ, ಮೈಸೂರಿನಂತೆ ಬ್ರಿಟಿಷರ ಅಂಕೆಯಂತೆ ನಿಜಾಮರೂ ಆಡಳಿತ ನಡೆಸಬೇಕಿತ್ತು. ನಿಜಾಮ್‌ ಪತ್ರಕ್ಕೆ “ವಿಭಾಗದ ರೆವಿನ್ಯೂ ಅಧಿಕಾರಿಗೆ ಕೊಡುವ ವೇತನವನ್ನೇ ತನಗೂ ಕೊಡಬೇಕು. ಸಹಾಯಕರಾಗಿ ಬೇಕಾದವರನ್ನು ನೇಮಿಸಿಕೊಳ್ಳುವ ಸ್ವಾತಂತ್ರ್ಯ ಇರಬೇಕು’ ಎನ್ನುವ ಮೂಲಕ ಉನ್ನತ ಆಂಗ್ಲ ಅಧಿಕಾರಿಗಿಂತ ಕಡಿಮೆ ವೇತನ ಪಡೆಯಲು ತಾನು ಸಿದ್ಧನಿಲ್ಲ ಎಂದು ಸ್ಪಷ್ಟಪಡಿಸಿದ್ದರು.

1912ರಿಂದ 18ರ ವರೆಗೆ ಮೈಸೂರು ಪ್ರಾಂತದ ದಿವಾನರಾಗಿ ಸೇವೆ ಸಲ್ಲಿಸುವ ಮುನ್ನ ಮೂರು ವರ್ಷ ಮುಖ್ಯ ಎಂಜಿನಿಯರ್‌ ಆಗಿದ್ದರು. ಮುಖ್ಯ ಎಂಜಿನಿಯರ್‌ ಹುದ್ದೆಯನ್ನು ಅಲಂಕರಿಸಲು ಮೈಸೂರು ರಾಜರಿಂದ ಪತ್ರ ಬಂದಾಗ “ನನಗೆ ಬೇಕಿರುವುದು ಕೆಲಸ ಮಾಡಲು ಅವಕಾಶ. ವೇತನ ನಿಮಗೆ ತೋಚಿದ್ದನ್ನು ಕೊಡಿ’ ಎಂದು ಹೇಳಿದ್ದರು. ದಿವಾನ್‌ ಆದ ಬಳಿಕ ಎರಡು ಬಾರಿ ವೇತನ ಏರಿಸಿದಾಗ (5,000 ರೂ. ಆ ಕಾಲದಲ್ಲಿ ಅತೀ ಹೆಚ್ಚು ವೇತನ) ಅದನ್ನು ನಿರಾಕರಿಸಿದವರು ಎಂ.ವಿ..

ದಿವಾನ್‌ ಹುದ್ದೆಯಿಂದ ನಿವೃತ್ತಿ ಪಡೆದ ಬಳಿಕ ಭದ್ರಾವತಿ ಕಬ್ಬಿಣ ಕಾರ್ಖಾನೆಯ ಅಧ್ಯಕ್ಷರಾಗಿ ಆರು ವರ್ಷ ಕಾರ್ಯನಿರ್ವಹಿಸಿದ್ದರು. “ಕಾರ್ಖಾನೆಗೆ ಲಾಭ ಬಂದ ಬಳಿಕ ಗೌರವಧನ ಪಡೆಯುತ್ತೇನೆ. ಗೌರವಧನದ ಲೆಕ್ಕ ಬರೆದಿಡಿ’ ಎಂದು ಹೇಳಿದ್ದರು. ಸಂಸ್ಥೆ ಲಾಭ ಬಂದ ಬಳಿಕ ಗೌರವ ಧನ 1 ಲ.ರೂ. ಕೊಡಬೇಕಾಯಿತು. ಇದರ ಚೆಕ್‌ ಪಡೆದುಕೊಂಡ ಎಂ.ವಿ. ತನ್ನ ಜೇಬಿನಿಂದ ಇನ್ನೊಂದು ಚೆಕ್‌ ಹೊರತೆಗೆದು 1 ಲ.ರೂ. ಮೊತ್ತವನ್ನು ಮೈಸೂರು ಸರಕಾರಕ್ಕೆ ನೀಡಿ ತಾಂತ್ರಿಕ ಸಂಸ್ಥೆಯನ್ನು ಆರಂಭಿಸಲು ಸಲಹೆ ನೀಡಿದರು. ಇದುವೇ ಈಗ ಬೆಂಗಳೂರಿನಲ್ಲಿ ಕಾಣುತ್ತಿರುವ ಜಯಚಾಮರಾಜೇಂದ್ರ ಪಾಲಿಟೆಕ್ನಿಕ್‌ ಕಾಲೇಜು. ತನ್ನ ಹಣ ನೀಡಿ ತನ್ನ ಹೆಸರಿನ ಬದಲು ರಾಜರ ಹೆಸರು ಇಡಲು ಹೇಳಿದವರು ಎಂ.ವಿ..

Advertisement

ದಿವಾನ್‌ ಹುದ್ದೆಯಲ್ಲಿರುವಾಗ ಬೆಂಗಳೂರಿನ ಬಾಲಬ್ರೂಯಿ ಬಂಗ್ಲೆಯಲ್ಲಿದ್ದ ಎಂ.ವಿ. ನಿವೃತ್ತಿ ಬಳಿಕ ಗಾಲ್ಫ್ಗ್ರೌಂಡ್‌ ಬಳಿಯ ಅಪ್‌ಲೆಂಡ್ಸ್‌ ಬಂಗ್ಲೆಯಲ್ಲಿದ್ದರು. ಆ ಮನೆಯನ್ನು ಇನ್ನೊಂದೆರಡು ತಿಂಗಳಲ್ಲಿ ಬಿಡಬೇಕಾಗಿತ್ತು. ಸರಕಾರವೂ ಬಾಲಬ್ರೂಯಿ ಬಂಗ್ಲೆಯಲ್ಲಿರಿ ಎಂದು ಹೇಳಿತ್ತು. ಎಂ.ವಿ. ಮಾತ್ರ 150 ರೂ. ಬಾಡಿಗೆಯ ಮನೆಯನ್ನು ಹುಡುಕುತ್ತಿದ್ದರು. “ಬಾಲಬ್ರೂಯಿಯಲ್ಲಿ ಈಗ ಯಾರೂ ಇಲ್ಲ. ನೀವು ಕೊಡುವ 150 ರೂ. ಸರಕಾರಕ್ಕೆ ಲಾಭವೇ ಆಗಿದೆ’ ಎಂದು ಪ್ರಸಿದ್ಧ ಸಾಹಿತಿ ಡಿ.ವಿ. ಗುಂಡಪ್ಪ ಸಲಹೆ ನೀಡಿದರು. “ಆ ಜಾಗಕ್ಕೆ ಹೆಚ್ಚು ಬಾಡಿಗೆ ಯುಕ್ತವಾಗಿದೆ. ನಾನು ಅಷ್ಟು ಕೊಡಲಾರೆ’ ಎಂದರು. ವಿಶ್ವೇಶ್ವರಯ್ಯನವರಿಗೆ ಬಾಡಿಗೆ ಕೊಡದಷ್ಟು ಹಣದ ಕೊರತೆಯೆ? ದಿವಾನ್‌ ಮಿರ್ಜಾ ಸಾಹೇಬ್‌ ಅವರೂ ಬೇಕಾದಂತ ಮನೆ ಕೊಡಲು ತಯಾರಿದ್ದರು. ಕೊನೆಗೆ ತಾನು ಕೊಟ್ಟ ವಿನ್ಯಾಸದಂತೆ 150 ರೂ. ಬಾಡಿಗೆ ಮೀರದಂತೆ ಸರಕಾರ ತನ್ನ ಜಾಗದಲ್ಲಿ (ಅಪ್‌ಲೆಂಡ್ಸ್‌ ಕಟ್ಟಡದ ಬಳಿ) ಕಟ್ಟಡ ಕಟ್ಟಿಸಿಕೊಡಬೇಕು ಎಂಬ ಷರತ್ತು ಹಾಕಿ ಆ ಕಟ್ಟಡದಲ್ಲಿಯೇ ಕೊನೆಯವರೆಗೆ ಎಂ.ವಿ. ವಾಸವಿದ್ದರು.

-ಮಟಪಾಡಿ ಕುಮಾರಸ್ವಾಮಿ

Advertisement

Udayavani is now on Telegram. Click here to join our channel and stay updated with the latest news.

Next