Advertisement

ದೇಶಾಭಿವೃದ್ಧಿಗೆ ಭಾವೈಕ್ಯ ಅಗತ್ಯ

05:41 PM Sep 25, 2019 | Naveen |

ಸಿಂದಗಿ: ದೇಶದ ಅಭಿವೃದ್ಧಿಗೆ ಭಾವೈಕ್ಯತೆ ಅವಶ್ಯ ಎಂದು ಕೆಪಿಸಿಸಿ ವಕ್ತಾರ ಎಸ್‌.ಎಂ. ಪಾಟೀಲ ಗಣಿಹಾರ ಹೇಳಿದರು. ಪಟ್ಟಣದ ಬಸವ ಮಂಟಪದಲ್ಲಿ ಸರ್ವಧರ್ಮ ಸೇವಾ ಸಂಸ್ಥೆ ಹಮ್ಮಿಕೊಂಡಿದ್ದ ಭಾವೈಕ್ಯ ವಿಚಾರ ಗೋಷ್ಠಿ ಹಾಗೂ ಭಾವೈಕ್ಯ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಅವರು ಮಾತನಾಡಿದರು.

Advertisement

ಎಲ್ಲ ಧರ್ಮ ಸ್ಥಾಪಕರು ಸಮಾಜವನ್ನು ಒಳ್ಳೆ ಮಾರ್ಗದಲ್ಲಿ ನಡೆಸಿಕೊಂಡು ಹೋಗಲು ಮೌಲ್ಯಾಧಾರಿತ ಬದುಕನ್ನು ಕಟ್ಟಿಕೊಳ್ಳಲು ಮಾರ್ಗ ಸೂಚಿಸಿದ್ದಾರೆ. ಆದರೆ ಪ್ರಸ್ತುತ ದಿನಗಳಲ್ಲಿ ಮನುಷ್ಯ-ಮನುಷ್ಯ ದ್ವೇಷಿಸುತ್ತಿದ್ದಾನೆ. ಸೂಫಿ-ಸಂತರು, ಶರಣರು ಕಟ್ಟಿದ ದೇಶವನ್ನು ಉಳಿಸಿಕೊಂಡು ಹೋಗಬೇಕಾದರೆ ಸಮಾಜದಲ್ಲಿ ಭಾವೈಕ್ಯತೆ ಮೂಡಬೇಕು. ಈ ನಿಟ್ಟಿನಲ್ಲಿ ಸರ್ವ ಧರ್ಮಸೇವಾ ಸಂಸ್ಥೆ ಹಮ್ಮಿಕೊಳ್ಳುತ್ತಿರುವ ಭಾವೈಕ್ಯ ಕಾರ್ಯಕ್ರಮ ಶ್ಲಾಘನಿಯ ಎಂದು ಹೇಳಿದರು.

ಪುರಸಭೆ ಮಾಜಿ ಸದಸ್ಯ ರಾಜಶೇಖರ ಕೂಚಬಾಳ ಮಾತನಾಡಿ, ಸಮಾಜದಲ್ಲಿನ ಜಾತಿ ಪದ್ಧತಿ ವ್ಯವಸ್ಥೆಯಲ್ಲಿ ಭಾವೈಕ್ಯತೆ ಕನಸಾಗಿದೆ. ನಿಸರ್ಗ ನಮಗೆ ನೀರು, ಗಾಳಿ, ಭೂಮಿ ಎಲ್ಲರಿಗೂ ಸರಿಸಮಾನವಾಗಿ ನೀಡಿದೆ. ಆದರೆ ನಾವು ಭಾವೈಕ್ಯತೆ ಮರೆಯುತ್ತಿದ್ದೇವೆ. ಎಲ್ಲ ಧರ್ಮಗಳ ಗ್ರಂಥಗಳನ್ನು ಅಧ್ಯಯನ ಮಾಡಿ ಅವುಗಳಲ್ಲಿರುವ ಸಾರವನ್ನು ಅರ್ಥೈಸಿಕೊಳ್ಳಿ. ಅವುಗಳ ಗುರಿ, ದಾರಿ, ತತ್ವ ಒಂದೇ ಆಗಿವೆ ಎಂದರು.

ಸಾನ್ನಿಧ್ಯ ವಹಿಸಿದ್ದ ಆಲಮೇಲದ ಜಗದೇವ ಮಲ್ಲಿಬೊಮ್ಮ ಸ್ವಾಮೀಜಿ, ಕಾರ್ಯಕ್ರಮ ಉದ್ಘಾಟಿಸಿದ ವಿಜಯಪುರದ ಹಿರಿಯ ಸಾಹಿತಿ ವಿ.ಸಿ. ನಾಗಠಾಣ, ಮಕ್ಕಳ ಸಾಹಿತಿ ರಾ.ಸಿ. ವಾಡೆದ, ಅಧ್ಯಕ್ಷತೆ ವಹಿಸಿದ್ದ ರಾಷ್ಟ್ರೀಯ ಸೌಹಾರ್ದ ವೇದಿಕೆಯ ಮಹಿಬೂಬ ಮುಲ್ಲಾ ಮಾತನಾಡಿದರು.

ಇದೇ ಸಂದರ್ಭದಲ್ಲಿ ಮುರುಗೇಶ ಸಂಗಮ, ಅನ್ವರ್‌ ಜಮಾದಾರ ಅವರನ್ನು ಸನ್ಮಾನಿಸಲಾಯಿತು. ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಮುದ್ದೇಬಿಹಾಳದ ಬಸವರಾಜ ಗುರೂಜಿ, ವಿಜಯಪುರದ ಶ್ರೀಧರ ಕಾಂಬಳೆ, ತಾಳಿಕೋಟೆಯ ರೇಣುಕಾ ಭೂಸಾಕಿ, ಬೀಳಗಿಯ ಸಾಬೇರಾ ಪಠಾಣ, ಮುರಡಿಯ ಶರಣಗೌಡ ಜೇವರ್ಗಿ, ಸಿಂದಗಿಯ ಹನುಮಂತ ಸುಣಗಾರ, ಎನ್‌.ಎಂ. ಚಪ್ಪರಬಂದ, ಮಹಾಂತೇಶ ನೂಲಾನವರ, ಜಗದೇವಪ್ಪ ಸಿಂಗೆ, ಶರಣು ಸಿಂಧೆ, ನವೀನ ಶಳ್ಳಗಿ, ಶರಣಪ್ಪ ಮೇತ್ರಿ, ರಾಮಚಂದ್ರ ಮಣೂರ, ನಾಗಪ್ಪ ತಮದಡ್ಡಿ, ಕಲ್ಲಪ್ಪ ನಂದರಗಿ, ಅನ್ವರ್‌ ಬಾಗವಾನ ಅವರಿಗೆ ಭಾವೈಕ್ಯ ಪ್ರಶಸ್ತಿ ಪ್ರದಾನ ಮಾಡಲಾಯಿತು.

Advertisement

ಬಸವದಳ ಅಧ್ಯಕ್ಷ ಶಿವಾನಂದ ಕಲಬುರ್ಗಿ, ಸರ್ವಧರ್ಮ ಸೇವಾ ಸಂಸ್ಥೆ ಅಧ್ಯಕ್ಷ ಜಿಲಾನಿ ಮುಲ್ಲಾ, ಕಾರ್ಯದರ್ಶಿ ಅಹ್ಮದ್‌ ಸಿಂಧೆ, ಸದ್ಯಸರಾದ ಚಂದ್ರಕಾಂತ ಸಂಗಮ, ಗಂಗಯ್ಯ ಪಟೇದ, ಅಬ್ದುಲ್‌ ಗಪೂರ ಮರತೂರ್‌, ತೊಹಿದ್‌ ಮಳ್ಳಿಕರ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next