Advertisement

ಸರಳ ಕನ್ನಡ ರಾಜ್ಯೋತ್ಸವ ಆಚರಣೆ

11:12 AM Nov 02, 2021 | Team Udayavani |

ಬೆಂಗಳೂರು: ಕನ್ನಡ ರಾಜ್ಯೋತ್ಸವವನ್ನು ನಗರಾದ್ಯಂತ ಸರಳವಾಗಿ ಆಚರಿಸಲಾಯಿತು. ಆದರೆ, ನಟ ಪುನೀತ್‌ ರಾಜಕುಮಾರ್‌ ನಿಧನದ ಹಿನ್ನೆಲೆಯಲ್ಲಿ ಹಿಂದಿನ ವರ್ಷಗಳ ಅದ್ದೂರಿತನ ಈ ಬಾರಿ ಇರಲಿಲ್ಲ. ನಗರದ ಎಲ್ಲಾ ಸರ್ಕಾರಿ, ಅನುದಾನಿತ ಮತ್ತು ಖಾಸಗಿ ಶಾಲಾ- ಕಾಲೇಜುಗಳು, ವಿಶ್ವವಿದ್ಯಾಲಯ, ಸರ್ಕಾರಿ ಕಚೇರಿಗಳು, ಪೊಲೀಸ್‌ ಠಾಣೆಗಳು, ಸಂಘ ಸಂಸ್ಥೆಗಳು ಸೇರಿ ದಂತೆ ನಗರದಾದ್ಯಂತ ಕನ್ನಡದ ಹಬ್ಬವನ್ನು ಆಚರಣೆ ಮಾಡಲಾಯಿತು. ಆದರೆ, ಪ್ರತಿ ಕಾರ್ಯಕ್ರಮಗಳಲ್ಲಿಯೂ ನಟ ಪುನೀತ್‌ ರಾಜಕುಮಾರ್‌ಗೆ ಶ್ರದ್ಧಾಂಜಲಿ ಸಲ್ಲಿಸಿದರು.

Advertisement

ಪ್ರತಿ ವರ್ಷ ವರ ನಟ ಡಾ. ರಾಜಕುಮಾರ್‌, ಪುನೀತ್‌ ರಾಜಕುಮಾರ್‌ ಅವರ ಹಾಡುಗಳನ್ನು ಹಾಕಿ ಸಂಭ್ರಮಿಸುತ್ತಿದ್ದವರು. ಈ ಬಾರಿಯೂ ಅವರದೇ ಅಭಿನಯದ ಹಾಡುಗಳನ್ನು ಹಾಕಿ ಸ್ಮರಿಸಿದರು. ಕನ್ನಡ ಸಾಹಿತ್ಯ ಪರಿಷತ್ತು, ಬಿಎಂಟಿಸಿ, ಕೆಎಸ್‌ಆರ್‌ಟಿಸಿ, ಉದಯಭಾನು ಕಲಾಸಂಘ, ಕನ್ನಡಭವನ ಸೇರಿದಂತೆ ಹಲವೆಡೆ ಅದ್ಧೂರಿಯಾಗಿ ದೀಪದ ಅಲಂಕಾರ ಮಾಡಲಾಗಿತ್ತು. ಆಟೋ ನಿಲ್ದಾಣ, ಟ್ಯಾಕ್ಸಿ ನಿಲ್ದಾಣ, ಬಸ್‌ಗಳು, ಸಾರ್ವಜನಿಕ ಸ್ಥಳಗಳು, ಸರ್ಕಾರಿ ಮತ್ತು ಖಾಸಗಿ ಸಂಸ್ಥೆಗಳಲ್ಲಿ ಕನ್ನಡದ ಧ್ವಜಾರೋಹಣ ಮಾಡಿ, ರಾಜ್ಯೋತ್ಸವವನ್ನು ಆಚರಿಸಲಾಯಿತು.

ಬಹುತೇಕರು ಭಾನುವಾರ ಮಧ್ಯರಾತ್ರಿಯಿಂದಲೇ ವಾಟ್ಸಪ್‌, ಟ್ವಿಟರ್‌, ಫೇಸ್‌ಬುಕ್‌, ಇನ್‌ಸ್ಟಾಗ್ರಾಮ್‌ ಮತ್ತಿತರ ಸಾಮಾಜಿಕ ಜಾಲತಾಣಗಳಲ್ಲಿ ರಾಜ್ಯೋತ್ಸವದ ಶುಭಾಶಯಗಳನ್ನು ವಿನಿಮಯ ಮಾಡಿಕೊಂಡರು. ಕೆಲವೆಡೆ ಸಂಗೀತ, ನೃತ್ಯ, ಉಪನ್ಯಾಸ ಮತ್ತಿತರ ಕಾರ್ಯಕ್ರಮಗಳ ಆಯೋಜನೆ ಮೂಲಕವೂ ಸಂಭ್ರಮಿಸಲಾಯಿತು. ತಾಯಿ ಭುವನೇಶ್ವರಿ ಭಾವಚಿತ್ರದ ಪಕ್ಕದಲ್ಲೇ ಪುನೀತ್‌ ರಾಜ್‌ಕುಮಾರ್‌ ಅವರ ಭಾವಚಿತ್ರವನ್ನಿಟ್ಟು ಪುಷ್ಪನಮನ ಸಲ್ಲಿಸಲಾಯಿತು. ಕಳೆದ ವರ್ಷ ಕೊರೊನಾ ಹೆಚ್ಚಾಗಿದ್ದುದರಿಂದ ಅತ್ಯಂತ ಸರಳವಾಗಿ ರಾಜ್ಯೋತ್ಸವವನ್ನು ಆಚರಿಸಲಾಗಿತ್ತು.

ಇದನ್ನೂ ಓದಿ:- ಪುನೀತ್‌ ಹೆಸರಲ್ಲಿ ಒಂದು ಲಕ್ಷ ರೂ. ಗೌರವಧನ

ಈ ಬಾರಿ ಪುನೀತ್‌ ನಿಧನದಿಂದ ಸರಳವಾಗಿ ಆಚರಿಸಲಾಯಿತು. ಕನ್ನಡ ಮತ್ತುಸಂಸ್ಕೃತಿ ಇಲಾಖೆಯು “ಮಾತಾಡ್‌ ಮಾತಾಡ್‌ ಕನ್ನಡ’ ಶೀರ್ಷಿಕೆಯಡಿ ಅಭಿಯಾನ ನಡೆಸಿದ ಹಿನ್ನೆಲೆಯಲ್ಲಿ ಹಲವು ಸಂಘ-ಸಂಸ್ಥೆಗಳು ಇದೇ ಶೀರ್ಷಿಕೆಯಡಿ ಆಚರಿಸಿದರು. ವಿಜಯನಗರದಲ್ಲಿ ಆಚರಣೆ ವಿಜಯನಗರ ವಿಧಾನಸಭಾ ಕ್ಷೇತ್ರದ ಅತ್ತಿಗುಪ್ಪೆ ವಾರ್ಡ್‌ ನ ವೆಂಕಟೇಶ್ವರ ಬಡಾವಣೆಯ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಆಯೋಜಿಸಿದ್ದ 66ನೇ ಕರ್ನಾಟಕ ರಾಜ್ಯೋತ್ಸವದ ಕಾರ್ಯಕ್ರಮದಲ್ಲಿ ಶಾಸಕ ಎಂ. ಕೃಷ್ಣಪ್ಪ ಧ್ವಜಾರೋಹಣ ನೆರವೇರಿಸಿದರು. ಶಾಂತಿನಗರದಲ್ಲಿ ಜೈ ಕರ್ನಾಟಕ ಸಂಘಟನೆ ವತಿಯಿಂದ ಹಮ್ಮಿಕೊಂಡಿದ್ದ ಕನ್ನಡ ರಾಜ್ಯೋತ್ಸವ ಹಾಗೂ ಪುನೀತ್‌ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಸಂಘಟನೆ ರಾಜ್ಯಾಧ್ಯಕ್ಷ ಬಿ.ಎನ್‌. ಜಗದೀಶ್‌, ರಾಮಚಂದ್ರಯ್ಯ ಇತರರು ಇದ್ದರು.

Advertisement

ಬೆಂಗಳೂರು ನಗರ ವಿವಿ

ಬೆಂ.ನಗರ ವಿಶ್ವವಿದ್ಯಾಲಯದಲ್ಲಿ ಕನ್ನಡ ರಾಜ್ಯೋತ್ಸವವನ್ನು ಕುಲಪತಿ ಡಾ. ಲಿಂಗರಾಜ ಗಾಂಧಿ ಅವರು ತಾಯಿ ಭುವನೇಶ್ವರಿ ತಾಯಿ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿ ದರು. ಎನ್‌ಎಸ್‌ಎಸ್‌ ಸಂಯೋಜಕರಾದ ಗೋವಿಂದೇಗೌಡ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ಕನ್ನಡ ಗೆಳೆಯರ ಬಳಗ

ಕನ್ನಡ ಗೆಳೆಯರ ಬಳಗವು ಕವಿ ಪ್ರತಿಮೆಗಳಿಗೆ ಮಾಲಾರ್ಪಣೆ ನಂತರ ಬಿಎಂಶ್ರೀ ಪ್ರತಿಮೆ ಎದುರು ನಡೆದ ಕನ್ನಡ ಚಿಂತನ ಸಭೆ, ಬಿಎಂಶ್ರೀ ಪ್ರತಿಮೆಯನ್ನು ನಿರ್ಮಿಸಿದ ಕೇಂದ್ರ ಶಿಲ್ಪಕಲಾ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಶಿಲ್ಪಿ ವೆಂಕಟಾಚಲಪತಿ ಅವರಿಗೆ ಗೌರವಾರ್ಪಣೆ ಂಆಡಲಾಯಿತು. ಬಳಗದ ಸಂಚಾಲಕ ರಾ.ನಂ. ಚಂದ್ರಶೇಖರ್‌ ಇದ್ದರು. ಕಸಾಪದಿಂದ ರಾಜ್ಯೋತ್ಸವ ಕನ್ನಡ ಸಾಹಿತ್ಯ ಪರಿಷತ್ತು ಆವರಣದಲ್ಲಿ ಕಸಾಪ ಆಡಳಿತಾಕಾರಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕರೂ ಆದ ಎಸ್‌. ರಂಗಪ್ಪ, ಪರಿಷತ್ತು ಮತ್ತು ಕನ್ನಡದ ಧ್ವಜಾರೋಹಣ ನೆರವೇರಿಸಿದರು.

ಬಳಿಕ ಮಾತನಾಡಿದ ರಂಗಪ್ಪ, “ಕನ್ನಡ ಸಾಹಿತ್ಯ ಪರಿಷತ್ತು ಈ ನಾಡನ್ನು ಕಟ್ಟಿ ಬೆಳೆ‌ಸುವಲ್ಲಿ ಒಂದು ಶತಮಾನಕ್ಕಿಂತಲೂ ಹೆಚ್ಚು ಕಾಲ ಕೆಲಸ ಮಾಡುತ್ತಾ ಬಂದಿದೆ. ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದಿಯಾಗಿ ಈ ಸಂಸ್ಥೆಯಲ್ಲಿ ಸೇವೆ ಸಲ್ಲಿಸಿದ ಮಹನೀಯರು ಕನ್ನಡ ಭಾಷೆಯನ್ನು ಕಟ್ಟಿ ಬೆಳೆಸುವ ನಿಟ್ಟಿನಲ್ಲಿ ಅನುಪಮ ಸೇವೆ ಸಲ್ಲಿಸಿದ್ದಾರೆ. ಸಾಹಿತ್ಯದ ಮೂಲಕ ಈ ನಾಡು, ಸಂಸ್ಕೃತಿಯನ್ನು ಬೆಳಗಿಸುವ ಕಾರ್ಯವಾಗುತ್ತಿದೆ. ಪುಸ್ತಕಗಳ ಪ್ರಕಟಣೆಯ ಮೂಲಕ, ಸಾಹಿತಿಗಳನ್ನು ಪುರಸ್ಕರಿಸಿ ಪ್ರೋತ್ಸಾಹಿಸುವ ಮೂಲಕ ಕನ್ನಡ ಸಾತ್ಯ ಪರಿಷತ್ತು ಅಪಾರ ಕಾಣಿಕೆ ನೀಡಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next