Advertisement

ಆರೋಗ್ಯವರ್ಧನೆಗೆ ಸರಳ ಮಾರ್ಗೋಪಾಯಗಳು

01:54 AM May 20, 2021 | Team Udayavani |

ಉಡುಪಿ: ನಾವು ನಮ್ಮ ಪಾಲಿನ ಕರ್ತವ್ಯಗಳನ್ನು ಅಗತ್ಯವಾಗಿ ಮಾಡು ವುದರ ಜತೆ ನಮಗೆ ಸಂಬಂಧ ಪಡದ ವಿಷಯಗಳ ಬಗ್ಗೆ ಚರ್ಚಿಸುತ್ತ ಕುಳಿತುಕೊಳ್ಳಬಾರದು. ಹೀಗಾದರೆ ಅನಗತ್ಯವಾಗಿ ನಮ್ಮ ಆರೋಗ್ಯವನ್ನು ನಾವೇ ಕೆಡಿಸಿಕೊಳ್ಳಬೇಕಾಗುತ್ತದೆ. ನಮ್ಮ ಆರೋಗ್ಯ ರಕ್ಷಣೆಗಾಗಿ ಆಹಾರ ವಿಹಾರ ಕ್ರಮದಲ್ಲಿ ಯಥಾಯೋಗ್ಯ ಮಾರ್ಗ ಗಳನ್ನು ಅನುಸರಿಸಬೇಕು ಎಂದು ತಜ್ಞವೈದ್ಯರು ಸಲಹೆ ನೀಡಿದ್ದಾರೆ.

Advertisement

ಬುಧವಾರ “ಉದಯವಾಣಿ’ ರೋಗ ನಿರೋಧಕ ಶಕ್ತಿ ಮತ್ತು ಮನೋಬಲ ಕುರಿತು ಆಯೋಜಿಸಿದ ಫೋನ್‌ ಇನ್‌ ಕಾರ್ಯಕ್ರಮದಲ್ಲಿ ಮಣಿಪಾಲ ಮುನಿಯಾಲು ಆಯುರ್ವೇದ ಆಸ್ಪತ್ರೆಯ ಪ್ರಾಂಶುಪಾಲ ಡಾ| ಸತ್ಯ ನಾರಾಯಣ, ಉಡುಪಿಯ ಡಾ| ಎ.ವಿ. ಬಾಳಿಗಾ ಆಸ್ಪತ್ರೆ ಮನೋವೈದ್ಯ ಡಾ| ಮಾನಸ್‌, ಯೋಗ ಚಿಕಿತ್ಸಕಿ- ಪ್ರಾಧ್ಯಾಪಕಿ ಜ್ಯೋತ್ಸ್ನಾ ಸಾರ್ವಜನಿಕರ ಪ್ರಶ್ನೆಗಳಿಗೆ ಉತ್ತರಿಸಿದರು.

ಬಹಳಷ್ಟು ಸೋಂಕಿತರು ಗುಣಮುಖರಾಗುತ್ತಿದ್ದಾರೆ. ನಾವು ನಮ್ಮ ಆರೋಗ್ಯ ವರ್ಧನ ಚಟುವಟಿಕೆಗಳನ್ನು ಬಿಡ ಬಾರದು ಮತ್ತು ಬರುವ ಸನ್ನಿವೇಶ ಗಳಿಗೆ ಹೆದರಲೂ ಬಾರದು. ಕೆಲವರು ಆತಂಕ, ಖನ್ನತೆಗೆ ಒಳಗಾಗಿ ಆತ್ಮಹತ್ಯೆ ಮಾಡಿ ಕೊಂಡವರಿದ್ದಾರೆ. ಸೋಂಕಿತರಾದ ಕೆಲವು ಶತಾಯುಷಿಗಳು, ಮಧುಮೇಹ ವನ್ನು ನಿಯಂತ್ರಣದಲ್ಲಿರಿಸಿ ಕೊರೊನಾ ದಿಂದ ಗೆದ್ದು ಬಂದವರಿದ್ದಾರೆ. ನಾವು ಪ್ರಸ್ತುತ ಎದುರಿಸುತ್ತಿರುವ ಸಮಸ್ಯೆ ಗಳ ನಿವಾರಣೆಗೆ ಹೆಚ್ಚು ಗಮನ ಕೊಡಬೇಕು. ಸಮಸ್ಯೆಗಳಿಗೆ ಧೃತಿಗೆಡಬಾರದು.  ಸರಳ ವಾಗಿ ಮಾಡಬಹುದಾದ ಯೋಗಾ ಸನ, ಪ್ರಾಣಾಯಾಮ, ಧ್ಯಾನಗಳನ್ನು ಮಾಡಬಹುದು. ಮನೆ ಹಿತ್ತಲಿನಲ್ಲಿ ಸುಲಭವಾಗಿ ಸಿಗುವ ಔಷಧೀಯ ಗುಣದ ಗಿಡಮೂಲಿಕೆ, ಸೊಪ್ಪಿನಿಂದ ಆಹಾರ ಪದಾರ್ಥ ತಯಾರಿಸಿ ಸೇವಿ ಸಿದರೆ ಆರೋಗ್ಯಕ್ಕೆ ಬಹಳ ಉತ್ತಮ. ಅದೇ ನಮಗೆ ಔಷಧ ಎಂದರು.

ಜ್ಯೋತಿ ಗುರುಪುರ
– ಹಿಂದೆ ಬಿದ್ದು ಮಿದುಳಿಗೆ ಪೆಟ್ಟಾಗಿದೆ. ಮಧುಮೇಹವೂ ಇದೆ. ಹೇಗೆ ಔಷಧೋಪಚಾರ ಮುಂದುವರಿಸಬೇಕು?

ಪ್ರಕಾಶ ಪಡಿಯಾರ್‌ ಮರವಂತೆ
– ಟಿಬಿ ಇದೆ, ಮಧುಮೇಹವಿದೆ. ಇದಕ್ಕೆ ಪರಿಹಾರ ಕ್ರಮವೇನು?
ಈಗ ತೆಗೆದುಕೊಳ್ಳುತ್ತಿರುವ ಔಷಧಗಳನ್ನು ಬಿಡಬಾರದು. ವಿವಿಧ ಆಸ್ಪತ್ರೆಗಳಲ್ಲಿ ಆಪ್ತ ಸಮಾಲೋಚನೆ, ಕೌಟುಂಬಿಕ ಸಮಾಲೋಚನೆ ಇರುತ್ತದೆ. ಮಧುಮೇಹ ನಿಯಂತ್ರಿಸದೆ ಇದ್ದರೆ ಎಲ್ಲದಕ್ಕೂ ತೊಂದರೆ ಇದೆ. ಇದಕ್ಕೆ ಯೋಗ, ವಾಕಿಂಗ್‌, ದೈಹಿಕ ಚಟುವಟಿಕೆಗಳನ್ನು ನಡೆಸಬೇಕು. ಸಕ್ಕರೆ, ಬೆಲ್ಲ, ಅಕ್ಕಿ ಬಳಕೆ ಬಿಡಿ. ಮಧುಮೇಹ ವಿದ್ದರೆ ದೈಹಿಕ, ಮಾನಸಿಕ ಖನ್ನತೆ ಬರುತ್ತದೆ. ಚಕ್ಕೆ, ಲವಂಗ, ಜೀರಿಗೆ, ಕೊತ್ತಂಬರಿ, ಕಾಳುಮೆಣಸಿನಂತಹ ನಿತ್ಯೋಪಯೋಗಿ ಸಾಂಬಾರು ಪದಾರ್ಥಗಳಿಂದ, ಜ್ಯೇಷ್ಠಮಧು, ಅಶ್ವಗಂಧ, ಅಮೃತಬಳ್ಳಿಯಿಂದ ಕಶಾಯ ಮಾಡಿ ಬಳಸಬಹುದು.

Advertisement

ಶರಣ್ಯ ಕರಂಬಳ್ಳಿ, ರಮೇಶ ಕೈಕಂಬ, ಮೂಲ್ಕಿ ಹಮೀದ್‌
– ರೋಗನಿರೋಧಕ ಶಕ್ತಿ ಹೆಚ್ಚಿಸಲು ಇರುವ ಮಾರ್ಗ ಗಳೇನು?
ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಆಹಾರ ಕ್ರಮ, ಜೀವನಶೈಲಿ, ಸರಳ ಔಷಧಗಳಿರುತ್ತವೆ. ಮನೆಯ ಸುತ್ತಮುತ್ತಲಿರುವ ಅಮೃತಬಳ್ಳಿ, ಸಾಂಬಾರುಬಳ್ಳಿ, ಬಿಲ್ವಪತ್ರೆಯಂತಹ ಉತ್ಪನ್ನಗಳಿಂದ ವಿವಿಧ ಬಗೆಯ ಖಾದ್ಯ ತಯಾರಿಸಬಹುದು, ಬಿಲ್ವ- ತುಳಸಿಯ ಕಷಾಯ ಮಾಡಿ ಸೇವಿಸಬಹುದು, ಬಿಸಿ ಹಾಲಿಗೆ ರಾತ್ರಿ ಒಂದು ಚಿಟಿಕೆ ಶುದ್ಧ ಅರಸಿನ ಪುಡಿ ಹಾಕಿ ಸ್ವೀಕರಿಸಬಹುದು. ರಾತ್ರಿ ವೇಳೆ ಮೊಸರು ಬಳಸದಿರುವುದು ಕ್ಷೇಮ. ಇದು ಎಲ್ಲ ವಯಸ್ಕರಿಗೂ ಅನ್ವಯ. ಹಿಪ್ಪಲಿ, ನಿಂಬೆಹಣ್ಣನ್ನು ನಿರಂ ತರವಾಗಿ ಸೇವಿಸಬಾರದು. ಇದನ್ನು ಜೇನು ತುಪ್ಪದಲ್ಲಿ ಸೇರಿಸಿ ಕೊಡಬಹುದು, ಹಾಲಿನ ಕಷಾಯ ಮಾಡಿ ಕೊಡಬಹುದು. ಚ್ಯವನಪ್ರಾಶವನ್ನು ನಿರಂತರವಾಗಿ ವೈದ್ಯರ ಸಲಹೆಯಂತೆ ಕೊಡಬಹುದು. ಸರಳ ಯೋಗಾ ಸನ, ಪ್ರಾಣಾಯಾಮಗಳನ್ನು ಮಾಡಬಹುದು.

ಕೃಷ್ಣ ಭಟ್‌ ಮುದರಂಗಡಿ
– ವ್ಯಾಕ್ಸಿನೇಶನ್‌ ಕುರಿತು ಗೊಂದಲಗಳಿವೆ. ಮಕ್ಕಳು ಈಗ ಮೊಬೈಲ್‌ನಲ್ಲಿ ನಿರತರಾಗಿರುತ್ತಾರೆ. ಯಾವ ರೀತಿಯಲ್ಲಿ ಮಾನಸಿಕ ಉದ್ವೇಗದಿಂದ ಪಾರಾಗಬಹುದು? ಯೋಗ ಪ್ರಾಣಯಾಮ ಯಾವ ರೀತಿ ಸಹಕಾರಿ?

ಉಮೇಶ್‌ ಕುಂದಾಪುರ, ಶ್ಯಾಮಸುಂದರ ವಿಟ್ಲ
– ಮನೋಬಲ ಎಷ್ಟು ಸಹಕಾರಿ?

ರೋಹಿಣಿ ಕರಂಬಳ್ಳಿ
– ಮಕ್ಕಳೂ ಪ್ರಾಣಾಯಾಮ ಮಾಡಬಹುದೆ?

ದಿನೇಶ್‌ ಬ್ರಹ್ಮಾವರ
– ಯೋಗದಿಂದ ಕೊರೊನಾ ನಿಯಂತ್ರಣ ಹೇಗೆ ಸಾಧ್ಯ?
ಐಸಿಎಂಆರ್‌, ರಾಜ್ಯ ಮತ್ತು ಕೇಂದ್ರ ಸರಕಾರದ ಅಧಿಕೃತ ವೆಬ್‌ಸೈಟ್‌ನಲ್ಲಿ ನಿಖರ ಮಾಹಿತಿ ದೊರಕುತ್ತದೆ. ಎಲ್ಲ ಪ್ರಾ. ಆ. ಕೇಂದ್ರಗಳಲ್ಲಿ, ಕುಟುಂಬ ವೈದ್ಯರಲ್ಲಿ ಮಾಹಿತಿ ಪಡೆಯಬಹುದು. ಈಗ ಸಾಮಾಜಿಕ ಜಾಲತಾಣಗಳ ಮೂಲಕ ಸುಳ್ಳು ಸುದ್ದಿಗಳು ಹರಡುತ್ತವೆ. ಇದರ ಬಗ್ಗೆ ತಲೆ ಕೆಡಿಸಿಕೊಳ್ಳಬಾರದು.

-ನಿಂತು ಮಾಡುವ, ಎದೆಯನ್ನು ಹಿರಿದಾಗಿಸುವ ಭುಜಂಗಾಸನ, ಧನುರಾಸನ, ಸೂರ್ಯನಮಸ್ಕಾರ, ಅರ್ಧ ಕಟಿ ಚಕ್ರಾಸನಗಳು ಶ್ವಾಸಕೋಶದ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ. 10 ನಿಮಿಷ ಪ್ರಾಣಾಯಾಮ ಮಾಡಿದರೆ ಉದ್ವೇಗ, ಅಶಾಂತಿ ಕಡಿಮೆ ಆಗುತ್ತದೆ, ಆತ್ಮಸ್ಥೈರ್ಯ ಹೆಚ್ಚುತ್ತದೆ. ಅನುಲೋಮ ವಿಲೋಮ ಪ್ರಾಣಾಯಾಮ, ಸೂರ್ಯ ಭೇದನ ಪ್ರಾಣಾಯಾಮ, ಭಾÅಮರಿ, ಉಜ್ಜಾಯಿ, ಪ್ರಾಣಮುದ್ರೆ, ಉದಾನಮುದ್ರೆಯಂತಹ ವಿವಿಧ ಮುದ್ರೆಗಳು ಪ್ರಾಣವಾಯು ಶಕ್ತಿ ಹೆಚ್ಚಿಸಲು ಸಹಕಾರಿ.

-ಮಕ್ಕಳೂ ಪ್ರಾಣಾಯಾಮ ಮಾಡಬಹುದು. ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಒಂದು ಗಂಟೆ ಯೋಗ, ಪ್ರಾಣಾಯಾಮ, ಧ್ಯಾನಗಳನ್ನು ಮಾಡಿದರೆ ಉತ್ತಮ.

– ಮಕ್ಕಳಿಗೆ ಈಗ ಆನ್‌ಲೈನ್‌ ಕ್ಲಾಸ್‌ ನಡೆಯುವುದರಿಂದ ಇದನ್ನು ಸಂಪೂರ್ಣ ತಡೆಗಟ್ಟುವುದು ಕಷ್ಟ. ಚಿತ್ರಕಲೆ, ಸಂಗೀತ ಇತ್ಯಾದಿಗಳನ್ನು ಮಕ್ಕಳಿಗೆ ಕಲಿಸುವ ಮೂಲಕ ಅವರ ಮನಸ್ಸನ್ನು ಮೊಬೈಲ್‌ನಿಂದ ದೂರ ಸರಿಸ ಬಹುದು. ದೊಡ್ಡವರೂ ಪುಸ್ತಕ ಓದುವುದೇ ಮೊದಲಾದ ರಚನಾತ್ಮಕ ಚಟುವಟಿಕೆಗಳಲ್ಲಿ ತೊಡಗಬಹುದು.

ಇಸ್ಮಾಯಿಲ್‌ ವಿಟ್ಲ
– ಯಾವ ಆಹಾರ ಪದಾರ್ಥಗಳಲ್ಲಿ ವಿಟಮಿನ್‌ ಇರುತ್ತದೆ?
ಲಿಂಬೆಹಣ್ಣು, ಕಿತ್ತಳೆ ಹಣ್ಣು, ಸೀಬೆಹಣ್ಣುಗಳಲ್ಲಿ (ಪೇರಳೆ) ವಿಟಮಿನ್‌ ಸಿ ಇರುತ್ತದೆ.

ಸುಲೈಮಾನ್‌ ಬ್ರಹ್ಮಾವರ
– ನಮ್ಮ ಮನೆ ಪಕ್ಕದಲ್ಲಿ ಸೋಂಕಿತರಿದ್ದಾರೆ. ತೊಂದರೆ ಇದೆಯೆ? ಒಣಕೆಮ್ಮಿಗೆ ಔಷಧ ಯಾವುದು?
ಆರು ಅಡಿ ದೂರವಿದ್ದರೆ ತೊಂದರೆ ಇಲ್ಲ. ಮಾಸ್ಕ್ ಹಾಕಿಕೊಂಡು ವ್ಯವಹರಿಸಬಹುದು. ಎಲರ್ಜಿ, ಅಸಿಡಿಟಿಯಿಂದ ಒಣ ಕೆಮ್ಮು ಬರುತ್ತದೆ. ಲವಂಗದಂತಹ ಕಷಾಯ ಸೇವಿಸಬಹುದು.

ಬಿಸಿ ನೀರಿಗೆ ಜೇನು ತುಪ್ಪ ಸೇರಿಸಬಾರದು
ಬಹುತೇಕರು ಜೇನುತುಪ್ಪವನ್ನು ಬಿಸಿ ನೀರಿಗೆ ಹಾಕಿ ಕುಡಿಯುತ್ತಾರೆ. ಜೇನು ತುಪ್ಪವನ್ನು ಬಿಸಿ ಮಾಡುವುದೂ ತಪ್ಪು, ಬಿಸಿ ನೀರು, ಹಾಲಿಗೆ ಸೇರಿಸುವುದೂ ತಪ್ಪು. ಕುದಿಸಿ ತಣ್ಣಗಾದ ಮೇಲೆ ಹಾಕಬಹುದು. ಇದು ಬೊಜ್ಜು, ರಕ್ತದಲ್ಲಿನ ಕೊಬ್ಬಿನ ಅಂಶ ಕಡಿಮೆ ಮಾಡಲು ಸಹಕಾರಿ.

Advertisement

Udayavani is now on Telegram. Click here to join our channel and stay updated with the latest news.

Next