Advertisement

ಸಂಭ್ರಮದ ಬದುಕಿಗೆ ಸರಳ ಸೂತ್ರಗಳು

02:05 PM Jan 03, 2018 | |

ಹೆಂಡತಿಯಾದವಳು ಮನೆ, ಗಂಡ, ಮಕ್ಕಳಿಗೆ ಮಾತ್ರ ತನ್ನ ಬದುಕನ್ನು ಸೀಮಿತಗೊಳಿಸದೆ ಹೊರ ಪ್ರಪಂಚದ ಕುರಿತು ಅರಿವು ಮೂಡಿಸಿಕೊಳ್ಳಬೇಕು. ತನ್ನ ಪತಿ ಮಾಡುತ್ತಿರುವ ಕೆಲಸ, ಮನೆಗೆ ಸಂಬಂಧಿಸಿದ ವಿಚಾರಗಳು ಎಲ್ಲವನ್ನೂ ಅರಿತುಕೊಳ್ಳುವ ಪ್ರಯತ್ನ ಮಾಡಬೇಕು. ಹಾಗೆಂದು ಗಂಡನ ಕೆಲಸದಲ್ಲಿ ಮೂಗು ತೂರಿಸುವುದು ಎಂದಲ್ಲ. ಆದರೆ ಗಂಡನ ಕೆಲಸಗಳ ಕುರಿತು, ವ್ಯವಹಾರಗಳ ಕುರಿತು ತಿಳಿದುಕೊಳ್ಳಬೇಕು. 

Advertisement

ಬೆಚ್ಚನೆಯ ಮನೆಯಿತ್ತು. ವೆಚ್ಚಕ್ಕಾಗಿ ಮಿಗುವಷ್ಟು ಹೊನ್ನೂ ಇತ್ತು. ಇಚ್ಛೆ ಅರಿತು ನಡೆವ ಸತಿಯಿದ್ದಳು. ಇಚ್ಛೆ ಮೀರದ ಸುತರೂ ಕೂಡ. ಸರ್ವಜ್ಞನೆಂದಂತೆ ಸ್ವರ್ಗಕ್ಕೆ ಕಿಚ್ಚು ಹಚ್ಚುವಂಥದೇ ಸಂಸಾರ! ಇದ್ದಕ್ಕಿದ್ದಂತೆ ಬೀಸಿದ ಬಿರುಗಾಳಿ, ಸ್ವರ್ಗವನ್ನು ಅಲ್ಲೋಲ ಕಲ್ಲೋಲಗೊಳಿಸವಷ್ಟು ತೀವ್ರ ಥರದ್ದು. ಕುಟುಂಬದ ಯಜಮಾನ ಇನ್ನಿಲ್ಲವಾಗಿದ್ದ. ಇದಕ್ಕಿದ್ದಂತೆ ಬರಸಿಡಿಲು ಬಡಿದು ಆ ಕುಟುಂಬ ತತ್ತರಿಸಿತ್ತು. ಒಂದು ರಸ್ತೆ ಅಪಘಾತ, ಒಂದು ಹೃದಯಾಘಾತ ಅಥವಾ ಇನ್ನಾವುದೋ ಗಂಭೀರ ಕಾಯಿಲೆ ಆತನನ್ನು ಈ ಲೋಕದಿಂದಲೇ ದೂರ ಮಾಡಿತು. ಆ ಕುಟುಂಬಕ್ಕೆ ಅನುಕಂಪದ ಸಹಾಯ ಹಸ್ತಗಳು ಬಹಳ ದೂರವೇನೂ ಜೊತೆಗೆ ಬರಲಿಲ್ಲ. “ಅಯ್ಯೋ ಹೀಗಾಗಬಾರದಿತ್ತು’ ಎಂಬ ಲೊಚಗುಟ್ಟುವಿಕೆಗೆ ಕಡಲಿನಷ್ಟಾದ ಕಣ್ಣೀರನ್ನು ಒರೆಸುವಷ್ಟು ಶಕ್ತಿಯೂ ಇರಲಿಲ್ಲ. 

  ಮನೆಯ ಪ್ರತಿಯೊಂದೂ ಆಗುಹೋಗುಗಳನ್ನು ತಾನೇ ನಿಭಾಯಿಸುತ್ತಿದ್ದ ಮನೆಯೊಡೆಯ. ಜೊತೆಗಾತಿ ಸುಮ್ಮನೆ ಜೊತೆಗಷ್ಟೇ. ಸೂಪರ್‌ ಮಾರ್ಕೆಟ್‌ಗೂ ಅವನ ಜೊತೆಯೇ, ಗಾಡಿ ತರಕಾರಿಯ ಚೌಕಾಸಿಗೂ ಆತನಿರಲೇಬೇಕಿತ್ತು. ಸಾಮಾನು ಪಟ್ಟಿ ಕೊಟ್ಟರಷ್ಟೇ ಪತ್ನಿಯ ಕರ್ತವ್ಯ ಮುಗಿಯುತ್ತಿತ್ತು. ಬಿಲ್‌ ಎಷ್ಟಾಯಿತು ಎಂಬ ಗೋಜೇ ಇಲ್ಲದ ನಿಶ್ಚಿಂತೆ. ಮಕ್ಕಳ ಸ್ಕೂಲ್‌ ಆಯ್ಕೆ, ಫೀಸ್‌, ಬಟ್ಟೆ ಬರೆ ಎಲ್ಲವೂ ಆತನದೇ ನಿರ್ಧಾರವಾಗಿತ್ತು. ಕೊನೆಗೆ ಯಾವ ಹೋಟೆಲ್‌ಗೆ ಹೋಗಬೇಕು, ಯಾವ ಡಾಕ್ಟರ್‌ ಹತ್ತಿರ ಹೋಗಬೇಕೆಂಬುದನ್ನೂ ಆತನೇ ನಿರ್ಧರಿಸುವಷ್ಟರ ಮಟ್ಟಿಗೆ ಕುಟುಂಬದಲ್ಲಿ ಈಕೆ ಹಿಂದಕ್ಕೆ ಸರಿದಿದ್ದಳು. ಇಷ್ಟಾದ ಮೇಲೆ ಕರೆಂಟ್‌ ಬಿಲ್‌, ಫೋನ್‌ ಬಿಲ್‌ಗ‌ಳನ್ನು ಕೂಡ ಈಕೆಗೆ ಗಮನಿಸಿಯೇ ಗೊತ್ತಿರಲಿಲ್ಲ. ಹೊತ್ತು ಹೊತ್ತಿಗೆ ರುಚಿರುಚಿಯಾಗಿ ಬೇಯಿಸುವ “ಭೋಜೇಶು ಮಾತಾ’ಳಾದ ಆಕೆ ಕಾಯೇìಶು ದಾಸಿಯಾಗಿಯೂ, ಕ್ಷಮಯಾಧರಿತ್ರಿಯಾಗಿಯೂ ಪಾತ್ರ ನಿರ್ವಹಿಸಿದ್ದು ಹೌದು. ಆದರೆ “ಕರಣೇಶು ಮಂತ್ರಿ’ಯಾಗುವ ಪ್ರಯತ್ನವನ್ನೇ ಮಾಡಲಿಲ್ಲ. ಈಗ ಧುತ್ತನೆ ಎದುರಾದ ಪರಿಸ್ಥಿತಿಯನ್ನು ಹೇಗೆ ಎದುರಿಸಬೇಕೆಂದು ಕಿಂಚಿತ್ತೂ ಅರಿವಿಲ್ಲ. ಅಕ್ಷರಶಃ ನಡುಬೀದಿಯಲ್ಲಿ ನಿಂತ ಅನುಭವ. 

  ಇಂಥದ್ದೊಂದು ಚಿತ್ರಣವನ್ನು ಸುತ್ತಮುತ್ತಲಿನಲ್ಲಿ ಕಂಡಿರುತ್ತೀರಿ ಅಲ್ಲವೇ? ಆ ಸಂದರ್ಭದಲ್ಲಿ ಮರುಗಿಯೂ ಇರುತ್ತೀರಿ. ಪರಿಚಯವಿದ್ದರೆ, ಅವರಿಗೆ ಸಾಂತ್ವನ ಹೇಳಿ ನೆರವಿನ ಹಸ್ತವನ್ನೂ ಚಾಚಿರುತ್ತೀರಿ. ಒಮ್ಮೆ ಯೋಚಿಸಿ. ಈ ಚಿತ್ರಣದಲ್ಲಿ ಒಂದಿಷ್ಟು ಬದಲಾವಣೆಯಾಗಬಹುದಿತ್ತಲ್ಲವೇ? ಪ್ರತಿಯೊಂದೂ “ಅವರೇ’ ಆಗಿದ್ದ ಆಕೆಗೆ, ಅವರಿಲ್ಲದ ಬದುಕನ್ನು ಯೋಚಿಸಲೂ ಆಗುತ್ತಿಲ್ಲ. ದಟ್ಟಡವಿಯಲ್ಲಿ ಕತ್ತಲಲ್ಲಿ ಕಣ್ಣಿಗೆ ಬಟ್ಟೆ ಕಟ್ಟಿ ಬಿಟ್ಟಂತಾಗಿತ್ತು. ಸಮುದ್ರದ ನಡುವೆ ದಿಕ್ಕುದಿಸೆಯಿಲ್ಲದ ದೋಣಿಯಲ್ಲಿ ಏಕಾಂಗಿಯಾಗಿ ಕುಳಿತಂತಾಗಿತ್ತು. ತನ್ನ ಗಂಡನ ಉಳಿತಾಯ ಹಣ ಎಷ್ಟಿದೆ? ಎಲ್ಲಿದೆ? ಸಾಲ ಏನಿದೆ? ಎಂಬಿತ್ಯಾದಿ ಯಾವ ಮಾಹಿತಿಯೂ ಗೊತ್ತಿಲ್ಲ. ಸ್ಥಿರಾಸ್ತಿ, ಚರಾಸ್ತಿಗಳ ಬಗ್ಗೆ ಗಮನವನ್ನು ಇಲ್ಲಿಯವರೆಗೇ ನೀಡಿದ್ದೇ ಇಲ್ಲ. ಬ್ಯಾಂಕ್‌ಗೆ ಹೋಗಿ ಗೊತ್ತಿಲ್ಲದ ಆಕೆಗೆ ದಿಕ್ಕು ತೋಚದಂತಾಗಿದೆ. 

  ಅಂತ್ಯಕ್ರಿಯೆಯಂತೂ ಹೇಗೋ ಎಲ್ಲರ ನೆರವಿನೊಂದಿಗೆ ನಡೆದುಹೋಯಿತು. ಬಳಿಕವೇ ಶುರುವಾಗಿದ್ದು ಸಮಸ್ಯೆ. ಮನೆಯ ಖಾತೆ ಬದಲಾವಣೆಯಾಗಬೇಕಿತ್ತು. ಇನ್ಷೊರೆನ್ಸ್‌ ಹಣ ಕ್ಲೈಮ್‌ ಮಾಡಬೇಕಿತ್ತು. ಬ್ಯಾಂಕ್‌ ಖಾತೆಗಳು ಸರಿಯಾಗಬೇಕಿತ್ತು. ಬಾಂಡ್‌ಗಳು, ಷೇರುಗಳು ಈಕೆಯ ಹೆಸರಿಗೆ ಬದಲಾಗಬೇಕಿತ್ತು. ಸಾಲದ ಬಗ್ಗೆ ಮಾಹಿತಿ ಬೇಕಿತ್ತು. ಯಾರ್ಯಾರೋ ನನಗೆ ಸಾಲ ಬರಬೇಕಿದೆ ಎಂದು ಮನೆಗೆ ಬರತೊಡಗಿದರು. ಆಕೆಗೆ ತನ್ನ ಪತಿಯೇ ಬೇರೆಯವರಿಗೆ ಸಂದರ್ಭಕ್ಕೆ ತಕ್ಕಂತೆ ಸಾಲ ನೀಡಿದ್ದು ಗೊತ್ತಿತ್ತು. ಆದರೆ ಯಾರ್ಯಾರಿಗೆ ಎಷ್ಟು ಕೊಟ್ಟಿದ್ದಾರೆ ಎಂಬುದರ ಲೆಕ್ಕ ಆಕೆಯ ಬಳಿಯಿರಲಿಲ್ಲ. “ಅವರು’ ಆ ಮಾಹಿತಿಗಳನ್ನು ಬರೆದ ದಾಖಲೆಯೂ ಆಕೆಗೆ ಸಿಗಲಿಲ್ಲ. 

Advertisement

ಮನೆಯಲ್ಲಿ ವಯಸ್ಸಿಗೆ ಬಾರದ ಮಕ್ಕಳು. ಸಹಾಯಕ್ಕಾಗಿ ಯಾರನ್ನು ಕೇಳುವುದು? ಕೊನೆಗೆ ಮೈದುನ, ಅಕ್ಕಪಕ್ಕದ ಮನೆಯವರ ನೆರವನ್ನು ಪಡೆದು ಒಂದೊಂದೇ ಕೆಲಸ ಆರಂಭಗೊಂಡವು. ಆದರೆ ಅದನ್ನು ಪೂರ್ಣಗೊಳಿಸಲು ನಿತ್ಯ ಸಮಯ ಹೊಂದಿಸುವಷ್ಟು ಪುರುಸೊತ್ತು ಅವರ್ಯಾರಲ್ಲೂ ಇರಲಿಲ್ಲ. ಹೀಗಾಗಿ ಅವರ ಅಸಹನೆಯ ಮಾತುಗಳು ಈಕೆಯ ಮನಸ್ಸಿಗೆ ಘಾಸಿ ಮಾಡುತ್ತಿದ್ದವು. ಆದರೆ ಅನಿವಾರ್ಯ. ಮೌನವಾಗಿ ಸೆರಗಿನಲ್ಲಿ ಕಣ್ಣು ಒರೆಸಿಕೊಳ್ಳೋದು ಅಭ್ಯಾಸವಾಯಿತು. 

  ಈ ಚಿತ್ರಣ ನೋಡಿದಾಗ ಎಲ್ಲರೂ ಒಂದು ವಿಷಯ ಅರ್ಥ ಮಾಡಿಕೊಳ್ಳಬೇಕು. ಹೀಗಾಗಲು ಮನೆಯೊಡತಿಯ ಅಜ್ಞಾನವೇ ಕಾರಣ ಎನ್ನುವುದಕ್ಕಿಂತ, ಮನೆಯೊಡೆಯನ ಕರ್ತವ್ಯ ಪೂರ್ಣವಾಗಿರಲಿಲ್ಲ ಎಂಬ ಸಂಗತಿಯನ್ನು ಮನಗಾಣಬೇಕು. ಆತ ತನ್ನ ಪತ್ನಿಯನ್ನು ಪ್ರೀತಿಸಿದ್ದು, ಪೋಷಿಸಿದ್ದು ಸರಿ. ಒಂಚೂರೂ ಕಷ್ಟ ಬರದಂತೆ ತಾನೇ ಎಲ್ಲಾ ಕೆಲಸಗಳನ್ನು ನಿರ್ವಹಿಸುತ್ತಿದ್ದುದೂ ತಪ್ಪಲ್ಲ. ಆದರೆ ಅವಳನ್ನು ಮನೆಯೊಳಕ್ಕೇ ಸೀಮಿತಗೊಳಿಸಿದ್ದು, ಹೊರಗೊಂದು ವ್ಯಾವಹಾರಿಕ ಪ್ರಪಂಚ ಇದೆ ಎಂಬ ಪರಿಚಯ ಮಾಡಿಕೊಡದೇ ಇದ್ದುದು ಖಂಡಿತ ತಪ್ಪು.

 ತನ್ನ ಆದಾಯ, ಸಾಲ, ನಿತ್ಯದ ಖರ್ಚು, ಭವಿಷ್ಯದ ಉಳಿತಾಯ ಎಲ್ಲವನ್ನೂ ಆಕೆಯ ಜೊತೆಗೆ ಚರ್ಚಿಸಿ ನಿರ್ಧರಿಸಬೇಕಿತ್ತು. ಬ್ಯಾಂಕ್‌ಗಳೊಂದಿಗೆ ವ್ಯವಹರಿಸುವುದನ್ನೂ ಆಕೆಗೆ ಕಲಿಸಬೇಕಿತ್ತು. ಸ್ವತಂತ್ರವಾಗಿ ಸುತ್ತಾಡಿ ಎಲ್ಲವನ್ನೂ ನಿಭಾಯಿಸಲು ಹೇಳಿಕೊಡಬೇಕಿತ್ತು. ವರ್ತಮಾನದ ಕಷ್ಟ ಕಾರ್ಪಣ್ಯಗಳ ಕುರಿತು ಅರಿವು ಮೂಡಿಸಬೇಕಿತ್ತು. ತನ್ನ ಆಸ್ತಿಯ ನಿರ್ವಹಣೆ ಕುರಿತು ತಿಳಿವಳಿಕೆ ನೀಡಬೇಕಿತ್ತು. ತನ್ನ ವ್ಯವಹಾರದ ಲೆಕ್ಕಪತ್ರಗಳನ್ನೆಲ್ಲವನ್ನೂ ಪುಸ್ತಕದಲ್ಲಿ ಸ್ಪಷ್ಟವಾಗಿ ನಮೂದಿಸುವ ಪರಿಪಾಠ ಬೆಳೆಸಿಕೊಳ್ಳಬೇಕಿತ್ತು. ಅದನ್ನು ಪತ್ನಿಯೊಡನೆ ಹಂಚಿಕೊಳ್ಳಬೇಕಿತ್ತು.

ಹೆಂಡತಿಯಾದವಳು ಕೂಡ ಮನೆ, ಗಂಡ, ಮಕ್ಕಳಿಗೆ ಮಾತ್ರ ತನ್ನ ಬದುಕನ್ನು ಸೀಮಿತಗೊಳಿಸದೆ ಹೊರ ಪ್ರಪಂಚದ ಕುರಿತು ಅರಿವು ಮೂಡಿಸಿಕೊಳ್ಳಬೇಕು. ತನ್ನ ಪತಿ ಮಾಡುತ್ತಿರುವ ಕೆಲಸ, ಮನೆಗೆ ಸಂಬಂಧಿಸಿದ ವಿಚಾರಗಳು ಎಲ್ಲವನ್ನೂ ಅರಿತುಕೊಳ್ಳುವ ಪ್ರಯತ್ನ ಮಾಡಬೇಕು. ಹಾಗೆಂದು ಗಂಡನ ಕೆಲಸದಲ್ಲಿ ಮೂಗು ತೂರಿಸುವುದು ಎಂದಲ್ಲ. ಆದರೆ ಗಂಡನ ಕೆಲಸಗಳ ಕುರಿತು, ವ್ಯವಹಾರಗಳ ಕುರಿತು ತಿಳಿದುಕೊಳ್ಳಬೇಕು. ಸ್ವಂತ ಬ್ಯಾಂಕ್‌ ಖಾತೆ ಹೊಂದಿರಬೇಕು. ತಾನೇ ಹೋಗಿ ಒಂದಿಷ್ಟು ವ್ಯವಹಾರ ನಡೆಸುವಷ್ಟು ಜ್ಞಾನ ಇರಬೇಕು. ಆಸ್ತಿ ಖಾತೆ, ಇ.ಸಿ ಎಂದರೇನು? ಫಿಕ್ಸಡ್‌ ಡೆಪಾಸಿಟ್‌ಗೆ ಹಣ ಹೂಡುವುದು ಹೇಗೆ ಎಂಬಂಥ ಪ್ರಾಥಮಿಕ ತಿಳಿವಳಿಕೆ ಖಂಡಿತಾ ಇರಬೇಕು.

  ತನ್ನ ಬದುಕನ್ನು ತಾನೇ ನಡೆಸಿಕೊಂಡು ಹೋಗುವಷ್ಟು ಜಾಣ್ಮೆ, ಧೈರ್ಯ ಮಹಿಳೆಗೆ ಇದ್ದರೆ ಎಂಥಾ ಸನ್ನಿವೇಶದಲ್ಲೂ ಬದುಕು ದುಸ್ತರವಾಗುವುದಿಲ್ಲ. ಸಣ್ಣ ಸಣ್ಣ ವಿಚಾರಗಳಿಗೂ ಕಂಡ ಕಂಡವರ ಎದುರು ಹೋಗಿ ನಿಲ್ಲಬೇಕಾಗುವುದಿಲ್ಲ. ಇನ್ಯಾರಿಂದಲೋ ಮೋಸ ಹೋಗುವ ಸನ್ನಿವೇಶ ಎದುರಾಗುವುದಿಲ್ಲ. 

ಲತಾ ಯಡಗೆರೆ

Advertisement

Udayavani is now on Telegram. Click here to join our channel and stay updated with the latest news.

Next