Advertisement

ಬಿಜೆಪಿ ಕ್ಯಾನ್ಸರ್ ಇದ್ದಂತೆ ಮನುಕುಲ ನಾಶ ಮಾಡಲಿದೆ : ಸಿದ್ದರಾಮಯ್ಯ ವಾಗ್ದಾಳಿ

08:03 PM May 24, 2022 | Team Udayavani |

ಮಂಡ್ಯ: ಹಿಂಬಾಗಿಲಿನಿಂದ ಅನೈತಿಕವಾಗಿ ಅಧಿಕಾರಕ್ಕೆ ಬಂದಿರುವ ಬಿಜೆಪಿ ಸರ್ಕಾರ ಭ್ರಷ್ಟಾಚಾರದಲ್ಲಿಯೇ ಮುಳುಗಿದೆ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.

Advertisement

ನಗರದ ಚಂದ್ರದರ್ಶನ ಸಮುದಾಯಭವನದಲ್ಲಿ ದಕ್ಷಿಣ ಪದವೀಧರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಮಧು ಜಿ.ಮಾದೇಗೌಡ ಪರ ಮತಪ್ರಚಾರದ ಬಹಿರಂಗಸಭೆ ಉದ್ಘಾಟಿಸಿ ಮಾತನಾಡಿದರು.

ಶೇ.40ರಷ್ಟು ಕಮೀಷನ್ ಪಡೆಯುವ ಇಂಥ ಕೆಟ್ಟ ಸರ್ಕಾರ ರಾಜ್ಯದ ಇತಿಹಾಸದಲ್ಲೇ ಬಂದಿರಲಿಲ್ಲ. ಅಭಿವೃದ್ಧಿ ಕೆಲಸಗಳೇ ನಡೆಯುತ್ತಿಲ್ಲ. ಇಂಥ ನಾಚಿಕೆಗೆಟ್ಟ ಸರ್ಕಾರದಿಂದ ರಾಜ್ಯವನ್ನು ಉಳಿಸಬೇಕಾಗಿದೆ. ಅದಕ್ಕಾಗಿ ಎಲ್ಲರೂ ಕೈಜೋಡಿಸಬೇಕಾಗಿದೆ ಎಂದರು.

ಬಿಜೆಪಿ ಕ್ಯಾನ್ಸರ್ ರೋಗ ಇದ್ದಂತೆ. ಮನುಷ್ಯತ್ವ ಹಾಗೂ ಮನುಕುಲವನ್ನೇ ನಾಶ ಮಾಡಲಿದೆ. ಇದರಿಂದ ದೂರವಿರುವುದು ಒಳ್ಳೆಯದು. ದೇಶಕ್ಕಾಗಿ ಹೋರಾಟ ಮಾಡಿದವರಲ್ಲಿ ಬಿಜೆಪಿ ನಾಯಕರು ಯಾರೂ ಇಲ್ಲ. ಇವರಿಂದ ನಾವು ದೇಶಭಕ್ತಿ ಕಲಿಯಬೇಕೇ?. ಕಾಂಗ್ರೆಸ್‌ಗೆ ದೇಶಭಕ್ತಿ ರಕ್ತಗತವಾಗಿ ಬಂದಿದೆ ಎಂದು ಕಿಡಿಕಾರಿದರು.

ದೇಶದ ಪ್ರತಿಯೊಬ್ಬ ಬಡವರು ಶಿಕ್ಷಣ ಕಲಿಯಬೇಕು ಎಂಬ ಉದ್ದೇಶದಿಂದ ಶಿಕ್ಷಣ ಕಾಯ್ದೆ ಜಾರಿಗೆ ತಂದಿದ್ದು ಕಾಂಗ್ರೆಸ್ ಸರ್ಕಾರ. ನಾಲ್ವಡಿ ಕೃಷ್ಣರಾಜ ಒಡೆಯರ್ ಕಾಲದಲ್ಲಿ ಶೇ.15ರಷ್ಟಿದ್ದ ಶಿಕ್ಷಣವನ್ನು ಶೇ.70ರಷ್ಟು ಜಾಸ್ತಿ ಮಾಡಿದ್ದು ಕಾಂಗ್ರೆಸ್ ಸರ್ಕಾರ. ಇದನ್ನು ಯಾರೂ ಮರೆಯಬಾರದು. ಶಿಕ್ಷಣ ಕ್ಷೇತ್ರಕ್ಕೆ ಸಾಕಷ್ಟು ಕೊಡುಗೆ ನೀಡಿದೆ. ಶೈಕ್ಷಣಿಕವಾಗಿ ದೇಶವನ್ನು ಅಭಿವೃದ್ಧಿಪಥದತ್ತ ಕಾಂಗ್ರೆಸ್ ಸರ್ಕಾರ ಕೊಂಡೊಯ್ದಿದಿದೆ ಎಂದರು.

Advertisement

ಇದನ್ನೂ ಓದಿ : ಆತ್ಮಹತ್ಯೆ ಪ್ರಕರಣ: ವಿಸ್ಮಯಾ ಪತಿಗೆ 10 ವರ್ಷ ಜೈಲುಶಿಕ್ಷೆ ವಿಧಿಸಿದ ಕೇರಳ ಕೋರ್ಟ್

ದೇಶದ ಸಂವಿಧಾನವನ್ನು ಉಳಿಸಬೇಕಾದರೆ ಅದು ಕಾಂಗ್ರೆಸ್‌ನಿಂದ ಮಾತ್ರ ಸಾಧ್ಯ. ಜೆಡಿಎಸ್ ಪಕ್ಷ ಒಂದು ಪ್ರಾದೇಶಿಕ ಪಕ್ಷವಾಗಿದೆ. ದೇಶ ಹಾಗೂ ಸಂವಿಧಾನ ಉಳಿಸಲು ಸಾಧ್ಯವಿಲ್ಲ. ದೇಶದ ಸಂವಿಧಾನವನ್ನು ಉಳಿಸುವ ಮೂಲಕ ದೇಶದ ಜನರಿಗೆ ಮೂಲಭೂತ ಸೌಕರ್ಯಗಳನ್ನು ಕಲ್ಪಿಸುವಲ್ಲಿ ಕಾಂಗ್ರೆಸ್ ಯಶಸ್ವಿಯಾಗಿದೆ ಎಂದು ಹೇಳಿದರು.

ಆರ್‌ಎಸ್‌ಎಸ್ ಸ್ಥಾಪಕ ಹೆಗಡೆವಾರ್ ಸ್ವಾತಂತ್ರ್ಯ ಹೋರಾಟಗಾರರಲ್ಲ:
ಬಿಜೆಪಿ ಸರ್ಕಾರ ಮಕ್ಕಳ ಜ್ಞಾನ ವಿಕಾಸ ಮಾಡುವ ಬದಲು ಹಿಂದುತ್ವ ಹಾಗೂ ಧರ್ಮ ಬೋಧನೆ ಮಾಡಲು ಹೊರಟಿದೆ. ಪಠ್ಯ ಪುಸ್ತಕದಲ್ಲಿ ಭಗತ್‌ಸಿಂಗ್, ನಾರಾಯಣಗುರು ಪಾಠವನ್ನು ಕೈಬಿಟ್ಟಿದೆ. ಅಲ್ಲದೆ, ಕುವೆಂಪು ಅವರ ನಾಡಗೀತೆಯನ್ನು ಅಪಹಾಸ್ಯ ಮಾಡುತ್ತಿದ್ದಾರೆ. ಇದರಿಂದ ಮಕ್ಕಳ ಮನಸ್ಸಿನ ಮೇಲೆ ದುಷ್ಪರಿಣಾಮ ಬೀರಲಿದೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಕಿಡಿಕಾರಿದರು.

ಆರ್‌ಎಸ್‌ಎಸ್ ಸ್ಥಾಪಕ ಹೆಗಡೆವಾರ್ ದೇಶಕ್ಕಾಗಿ ಏನು ಮಾಡಿಲ್ಲ. ಯಾವ ಸ್ವಾತಂತ್ರ್ಯ ಹೋರಾಟಗಾರರು ಅಲ್ಲ. 1925ರಲ್ಲಿ ಆರ್‌ಎಸ್‌ಎಸ್ ಸಂಘ ಸ್ಥಾಪನೆ ಮಾಡಿದರು. ಆದರೆ ಯಾವುದೇ ಸ್ವಾತಂತ್ರ್ಯ ಹೋರಾಟಗಳಲ್ಲಿ ಭಾಗವಹಿಸಿಲ್ಲ. ಇವರೆಲ್ಲ ಸೇರಿ ಕ್ವಿಟ್ ಇಂಡಿಯಾ ಚಳುವಳಿ ಹತ್ತಿಕ್ಕಲು ಬ್ರಿಟಿಷರೊಂದಿಗೆ ಕೈಜೋಡಿಸಿದ್ದವರು. ಇಂಥವರ ಪಾಠ ಮಕ್ಕಳಿಗೆ ಅಗತ್ಯವಿದೆಯೇ ಎಂದು ಪ್ರಶ್ನಿಸಿದರು.

ಕೆಪಿಸಿಸಿ ಅಧ್ಯಕ್ಷ ಮಾಜಿ ಸಚಿವರಾದ ಎನ್.ಚಲುವರಾಯಸ್ವಾಮಿ, ಪಿ.ಎಂ.ನರೇಂದ್ರ ಸ್ವಾಮಿ, ಎಂ.ಎಸ್.ಆತ್ಮಾನಂದ, ಮಾಜಿ ಸಂಸದ ಆರ್.ದ್ರುವನಾರಾಯಣ್, ಮಾಜಿ ಶಾಸಕ ರಮೇಶ್‌ಬಂಡಿಸಿದ್ದೇಗೌಡ, ಕೆ.ಬಿ.ಚಂದ್ರಶೇಖರ್, ವಿಧಾನ ಪರಿಷತ್ ಸದಸ್ಯ ದಿನೇಶ್‌ಗೂಳಿಗೌಡ, ಮಾಜಿ ಸದಸ್ಯ ಬಿ.ರಾಮಕೃಷ್ಣ, ಮುಖಂಡರಾದ ಡಾ.ಕೃಷ್ಣ, ರವಿಕುಮಾರ್‌ಗಣಿಗ, ಜಿಲ್ಲಾಧ್ಯಕ್ಷ ಸಿ.ಡಿ.ಗಂಗಾಧರ್, ಡಾ.ಎಚ್.ಎನ್.ರವೀಂದ್ರ ಸೇರಿದಂತೆ ಮತ್ತಿತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next