Advertisement

ಡಾ. ಎಚ್.ಎಸ್. ದೊರೆಸ್ವಾಮಿ: ಶತಮಾನದ ವ್ಯಕ್ತಿ : ಸಂತಾಪ ಸೂಚಿಸಿದ ಸಿದ್ದರಾಮಯ್ಯ

03:35 PM May 26, 2021 | Team Udayavani |

ಬೆಂಗಳೂರು : 20ನೇ ಶತಮಾನವಿಡೀ ಬದುಕಿ, 21ನೇ ಶತಮಾನದ ಮೊದಲೆರಡು ದಶಕಗಳನ್ನೂ ಕಂಡಿದ್ದ ಹಾರೋಹಳ್ಳಿಯ ಶ್ರೀನಿವಾಸಯ್ಯ ದೊರೆಸ್ವಾಮಿಯವರು ನಮಗೆಲ್ಲರಿಗೂ ಸ್ಫೂರ್ತಿಯ   ಕೇಂದ್ರವಾಗಿದ್ದವರು ಎಂದು ವಿರೋಧ ಪಕ್ಷದ ನಾಯಕರು ಸಿದ್ದರಾಮಯ್ಯ ಹೇಳಿದ್ದಾರೆ.

Advertisement

ಸಂತಾಪ ಸಂದೇಶದಲ್ಲಿ ಡಾ. ಎಚ್.ಎಸ್. ದೊರೆಸ್ವಾಮಿ ಅವರು ವ್ಯಕ್ತಿತ್ವದ ಬಗ್ಗೆ ಮಾತಾನಾಡಿದ್ದಾರೆ. ದೇಶದ ಸ್ವಾತಂತ್ರ್ಯ ಹೋರಾಟದಿಂದ ಹಿಡಿದು ಸರಕಾರದ ಈಚಿನ  ಭೂ ಕಬಳಿಕೆಯ ವಿರುದ್ಧದ ಅವರ ಚಟುವಟಿಕೆಗಳು ದೇಶ ವ್ಯಾಪ್ತಿ ಹಬ್ಬಿತ್ತು. ಪತ್ರಕರ್ತರಾಗಿಯೂ ಅವರು ಪ್ರಸಿದ್ಧರು.

ನಮ್ಮನ್ನು ಅಗಲಿ ಹೋದ ದೊರೆಸ್ವಾಮಿಯವರು ನಮ್ಮೆಲ್ಲರ ಆತ್ಮಸಾಕ್ಷಿಯಾಗಿದ್ದರು. ತಪ್ಪು ಕಂಡಾಗ ಎಚ್ಚರಿಸಿ ಸರಿ ಕಂಡಾಗ ಬೆಂಬಲಿಸುತ್ತಿದ್ದ ಮಾರ್ಗದರ್ಶಕರಾಗಿದ್ದರು. ಇಳಿ ವಯಸ್ಸಿನಲ್ಲಿಯೂ ಕುಗ್ಗದೆ, ಜಗ್ಗದೆ, ಅನ್ಯಾಯ, ಅಕ್ರಮ ಕಂಡಾಯ ಬೀದಿಗಿಳಿಯುತ್ತಿದ್ದ ಅವರು ಎಲ್ಲರಿಗೂ ಮಾದರಿಯಾಗಿದ್ದರು ಎಂದಿದ್ದಾರೆ.

ಅವರ ನಿಧನ ನನಗೆ ಆಘಾತ ಉಂಟು ಮಾಡಿದೆ. ಮನೆ ಹಿರಿಯನನ್ನು ಕಳೆದುಕೊಂಡ ದುಃಖ ನನ್ನದಾಗಿದೆ. ಅವರ ಕುಟುಂಬ ಸದಸ್ಯರು ಮತ್ತು ಅಪಾರ ಅಭಿಮಾನಿಗಳ ಶೋಕದಲ್ಲಿ ನಾನೂ ಭಾಗಿಯಾಗಿದ್ದೇನೆ.   ಕರ್ನಾಟಕ ಏಕೀಕರಣಕ್ಕೂ ದೊರೆಸ್ವಾಮಿ ಅವರು ದುಡಿದಿದ್ದರು. ಇಂದಿರಾಗಾಂಧೀ ಕಾಲದಲ್ಲಿ ತುರ್ತುಪರಿಸ್ಥಿತಿ ವಿರೋಧಿಸಿ ಜೈಲುವಾಸ ಅನುಭವಿಸಿದ್ದ ಅವರು, ಈಚೆಗೆ ವೇಗವಾಗಿ ಬೆಳೆಯುತ್ತಿರುವ ಫ್ಯಾಸಿಸಂನ   ವಿರುದ್ಧವೂ ಧ್ವನಿ ಎತ್ತುತ್ತಿದ್ದರು ಎಂದು ಹೇಳಿದ್ದಾರೆ.

ಇದನ್ನೂ ಓದಿ : ಸ್ವಾತಂತ್ರ್ಯ ಹೋರಾಟಗಾರ ಎಚ್ ಎಸ್ ದೊರೆಸ್ವಾಮಿ ನಿಧನಕ್ಕೆ ಗೃಹ ಸಚಿವ ಬೊಮ್ಮಾಯಿ ಸಂತಾಪ

Advertisement

ʼಗಾಂಧೀ ಮತ್ತು ಅಂಬೇಡ್ಕರ್ ಅವರುಗಳಲ್ಲಿ ಭಿನ್ನಾಭಿಪ್ರಾಯ ಇತ್ತೇ ಹೊರತು ವೈರತ್ವ ಇರಲಿಲ್ಲʼ ಎಂಬ ಅವರ ಮಾತು ಹೆಚ್ಚು ಸಮರ್ಪಕವಾಗಿತ್ತು. ದೊರೆಸ್ವಾಮಿ ಅವರು ಕೊರೋನಾ ಗೆದ್ದು ಹೃದಯಾಘಾತದಿಂದ ಮೃತಪಟ್ಟಿರುವುದು ಅತೀವ ದುಃಖದ ಸಂಗತಿ. ಸ್ವಾತಂತ್ರ್ಯ ಹೋರಾಟಗಾರ ಶಾಮಣ್ಣ ಅವರ ಮೊಮ್ಮಗರಾಗಿದ್ದ ದೊರೆಸ್ವಾಮಿ ಅವರು ಹೋರಾಟದ ಸಂಸ್ಕಾರ ಮತ್ತು ಬದ್ಧತೆಯ ಕುಟುಂಬದಲ್ಲಿ ಸಮಾಜಮುಖಿಯಾಗಿ ಬಾಲ್ಯದಿಂದ ಬೆಳೆದು ಬಂದವರು. ಕ್ವಿಟ್ ಇಂಡಿಯಾ ಚಳವಳಿಯಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದರು. ಸ್ವಾತಂತ್ರ್ಯ ನಂತರದಲ್ಲೂ ಸರ್ಕಾರಗಳನ್ನು ಪ್ರಶ್ನಿಸುವ ಮತ್ತು ಅಗತ್ಯ ಬಿದ್ದಾಗ ನಿರಂತರ ಹೋರಾಟ ನಡೆಸುತ್ತಾ ಬಂದವರು.

ಪವಿತ್ರವಾದ ಹೋರಾಟದ ಪರಂಪರೆಯನ್ನು ಕನ್ನಡ ನೆಲದಲ್ಲಿ ಮುನ್ನಡೆಸುತ್ತಾ ಹೋರಾಟವನ್ನು ಯಾವತ್ತೂ ದ್ವೇಷ ಆಗದಂತೆ ಆಚರಿಸಿಕೊಂಡು ಬಂದವರು. ಹೀಗಾಗಿ ಆಡಳಿತಗಾರರ ವಿರುದ್ಧ ಪ್ರತಿಭಟನೆ ಮತ್ತು ಸಲಹೆ ನೀಡುವ ಸಹೃದಯತೆಯನ್ನೂ ಪಾಲಿಸಿಕೊಂಡು ಬಂದವರು.

ಶಿಕ್ಷಕರಾಗಿ, ಪತ್ರಕರ್ತರಾಗಿಯೂ ಆದರ್ಶರಾಗಿದ್ದರಲ್ಲದೆ ನಾಡಿನ ವಿವೇಕವನ್ನು ನಿರಂತರವಾಗಿ ತಿದ್ದುತ್ತಾ, ವಿಸ್ತರಿಸುತ್ತಾ ಮಾರ್ಗದರ್ಶಕರಾಗಿದ್ದರು. ಇವರ ಸಾವು ನನಗೆ ಈ ಜೀವಮಾನದ ನೋವು. ಸಾರ್ಥಕ ಜೀವನ ನಡೆಸಿ ಯಾವತ್ತೂ ಅಳಿಸಲಾಗದ ಜನಪರ ಹೆಜ್ಜೆಗುರುತುಗಳನ್ನು ಕನ್ನಡ ಮಣ್ಣಿನಲ್ಲಿ ಬಿತ್ತಿ ಹೋಗಿದ್ದಾರೆ.

ಅವರು ಈ ನೆಲದಲ್ಲಿ ಬಿತ್ತಿರುವ ಹೋರಾಟದ ಬೀಜಗಳು, ಮುನ್ನಡೆಸಿಕೊಂಡು ಬಂದ ಹೋರಾಟ ಪರಂಪರೆಯನ್ನು ಈ ನಾಡು ಮುನ್ನಡೆಸುತ್ತದೆ. ಅತೀವ ದುಃಖದ ಸಂದರ್ಭ ನನಗೆ ಎಂದು ಸಂತಾಪ ಸೂಚಿಸಿದ್ದಾರೆ.

 

 

Advertisement

Udayavani is now on Telegram. Click here to join our channel and stay updated with the latest news.

Next