Advertisement

ಸಿದ್ದಾಪುರ ಏತ ನೀರಾವರಿ ಯೋಜನೆ : ಮುಂದಿನ ಬಜೆಟ್‌ನಲ್ಲಿ ಅನುಮೋದನೆ ನಿರೀಕ್ಷೆ

01:22 PM Feb 27, 2022 | Team Udayavani |

ಕುಂದಾಪುರ: ವಾರಾಹಿ ಬಲದಂಡೆ ಹಾದುಹೋಗುವ ಅಚ್ಚುಕಟ್ಟು ಪ್ರದೇಶದ ಸಾವಿರಾರು ಹೆಕ್ಟೇರ್‌ ಪ್ರದೇಶಗಳಿಗೆ ನೀರು ಒದಗಿಸುವ ಸಿದ್ದಾಪುರ ಏತ ನೀರಾವರಿ ಯೋಜನೆಗೆ ಮುಂಬರುವ ಬಜೆಟ್‌ನಲ್ಲಿ ಅನುಮೋದನೆ ಸಿಗುವ ನಿರೀಕ್ಷೆಯಿದೆ. ಈ ಸಂಬಂಧ ಈಗಾಗಲೇ ಸಂಸದ ಬಿ.ವೈ. ರಾಘವೇಂದ್ರ ಅವರು ಮುಖ್ಯಮಂತ್ರಿಯನ್ನು ಸ್ವತಃ ಭೇಟಿಯಾಗಿ ಮನವಿ ಸಲ್ಲಿಸಿದ್ದಾರೆ.

Advertisement

ಹೊಳೆ ಶಂಕರನಾರಾಯಣ ಬಳಿ ವಾರಾಹಿ ನದಿಯಿಂದ ಸುಮಾರು 53.67 ಕ್ಯೂಸೆಕ್ಸ್‌ ನೀರನ್ನು ಮೇಲಕ್ಕೆತ್ತಿ ಸಿದ್ದಾಪುರ, ಆಜ್ರಿ, ಕೊಡ್ಲಾಡಿ, ಹೊಸಂಗಡಿ, ಕರ್ಕುಂಜೆ ಆಸುಪಾಸಿನ 1,200 ಹೆಕ್ಟೇರ್‌ ಭೂ ಪ್ರದೇಶಗಳಿಗೆ ನೀರಾವರಿ ಸೌಲಭ್ಯ ಒದಗಿಸುವ ಯೋಜನೆ ಇದಾಗಿದೆ.

0.54 ಟಿಎಂಸಿ ನೀರು ಅಗತ್ಯ
ಈ ಸಿದ್ದಾಪುರ ಏತ ನೀರಾವರಿ ಯೋಜನೆಗೆ ಈಗಾಗಲೇ ವಿಸ್ತೃತ ಯೋಜನಾ ವರದಿಯನ್ನು ತಯಾರಿಸಲಾಗಿದ್ದು, 165 ಕೋ.ರೂ. ವೆಚ್ಚದ ಅನುದಾನಕ್ಕಾಗಿ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಈ ಯೋಜನೆಗೆ 0.54 ಟಿಎಂಸಿ ನೀರಿನ ಆವಶ್ಯಕತೆಯಿದೆ. ಸಿದ್ದಾಪುರ ಗ್ರಾಮದ ಮೂಲಕ ಹಾದು ಹೋಗುವ ವಾರಾಹಿ ಕಾಲುವೆಯ ನೀರನ್ನು ಕಾಶಿಕಾಲು ಕೆರೆಗೆ ಹಾಯಿಸಿ, ಕುಬ್ಜಾ ನದಿ ಮೂಲಕ ಹರಿಸುವ ಯೋಜನೆಯಿದು.

ಸಿಎಂಗೆ ಪ್ರಸ್ತಾವನೆ ಸಲ್ಲಿಕೆ
ಈ ಸಿದ್ದಾಪುರ ಏತ ನೀರಾವರಿ ಯೋಜನೆಯನ್ನು 2019ರಲ್ಲಿ ಕುಮಾರಸ್ವಾಮಿ ನೇತೃತ್ವದ ಸರಕಾರ ಬಜೆಟ್‌ನಲ್ಲಿ ಘೋಷಿಸಿತ್ತು. ಆದರೆ ಬಳಿಕ ಮಾತ್ರ ಈ ಯೋಜನೆ ನನೆಗುದಿಗೆ ಬಿದ್ದಿತ್ತು. ಬಾಳ್ಕಟ್ಟು ನದಿ ನೀರು ಬಳಕೆದಾರರ ಸಮಿತಿ ಸಿದ್ದಾಪುರ, ಜಿಲ್ಲಾ ರೈತ ಸಂಘವು ಈ ಬಗ್ಗೆ ಅನೇಕ ಸಮಯದಿಂದ ಒತ್ತಾಯಿಸುತ್ತಲೇ ಇದೆ. ಈಗ ಅನುದಾನ ಬಿಡುಗಡೆಗಾಗಿ ಸಂಸದ ಬಿ.ವೈ. ರಾಘವೇಂದ್ರ ಹಾಗೂ ಬೈಂದೂರು ಶಾಸಕ ಬಿ.ಎಂ. ಸುಕುಮಾರ್‌ ಶೆಟ್ಟಿಯವರು ಈ ಬಗ್ಗೆ ಪ್ರಯತ್ನ ಮುಂದುವರಿಸಿದ್ದಾರೆ. ಫೆ.26ರಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿಯಾದ ಸಂಸದರು ಯೋಜನೆಗೆ ಮಂಜೂರಾತಿ ನೀಡುವಂತೆ ಪ್ರಸ್ತಾವನೆ ಸಲ್ಲಿಸಿದ್ದು, ಬಜೆಟ್‌ನಲ್ಲಿ ಅನುಮೋದನೆ ಸಿಗುವ ನಿರೀಕ್ಷೆಯಿದೆ.

ಸಿಎಂಗೆ ಮನವಿ ಸಲ್ಲಿಕೆ
ಸಿದ್ದಾಪುರ ಏತ ನೀರಾವರಿ ಯೋಜನೆಗೆ ಅನುದಾನ ಬಿಡುಗಡೆ ಸಂಬಂಧ ಮುಖ್ಯಮಂತ್ರಿಗಳನ್ನು ಭೇಟಿಯಾಗಿ, ಮನವಿ ಸಲ್ಲಿಸಲಾಗಿದೆ. ಈ ಬಾರಿಯ ಬಜೆಟ್‌ನಲ್ಲಿ ಅನುದಾನ ಬಿಡುಗಡೆಯಾಗುವ ಸಾಧ್ಯತೆಯಿದೆ.
– ಬಿ.ವೈ. ರಾಘವೇಂದ್ರ, ಸಂಸದ

Advertisement

ಶೀಘ್ರ ಅನುಮೋದನೆ
ಸಿದ್ದಾಪುರ ಏತ ನೀರಾವರಿ ಯೋಜನೆ ಬಗ್ಗೆ ಎಲ್ಲ ರೀತಿಯ ಪ್ರಯತ್ನಗಳನ್ನು ಮಾಡುತ್ತಿದ್ದು, ಸಂಸದರ ಗಮನಕ್ಕೂ ತರಲಾಗಿದೆ. ಈ ಸಂಬಂಧ ಸಂಸದರು ಸಿಎಂ ಅವರನ್ನು ಭೇಟಿಯಾಗಿ ಮನವಿ ಸಲ್ಲಿಸಿದ್ದಾರೆ. ಆದಷ್ಟು ಬೇಗ ಅನುಮೋದನೆ ಸಿಗುವ ನಿರೀಕ್ಷೆಯಿದೆ.
– ಬಿ.ಎಂ. ಸುಕುಮಾರ್‌ ಶೆಟ್ಟಿ, ಶಾಸಕ

ಪ್ರಯೋಜನವೇನು?
ವಾರಾಹಿ ಬಲದಂಡೆ ಕಾಲುವೆ ಹಾದುಹೋಗುವ ಸಿದ್ದಾಪುರ ಸುತ್ತಮುತ್ತಲಿನ ಕೆಲವೊಂದು ಗ್ರಾಮಗಳು ಎತ್ತರದ ಪ್ರದೇಶದಲ್ಲಿ ಅಚ್ಚುಕಟ್ಟು ಪ್ರದೇಶವನ್ನು ಹೊಂದಿದೆ. ಇದರಿಂದಾಗಿ ಈ ಎತ್ತರದ ಪ್ರದೇಶಗಳು ನೀರಾವರಿ ಸೌಲಭ್ಯದಿಂದ ವಂಚಿತರಾಗಿದ್ದು, ಇದಲ್ಲದೆ ಈ ಭಾಗದಲ್ಲಿ ಬೇಸಗೆಯಲ್ಲಿ ಕುಡಿಯುವ ನೀರಿನ ಸಮಸ್ಯೆಯು ತಲೆದೋರುತ್ತದೆ. ಇಲ್ಲಿನ 1,200 ಹೆಕ್ಟೇರ್‌ ಪ್ರದೇಶಕ್ಕೆ ವರದಾನವಾಗುವ ನಿಟ್ಟಿನಲ್ಲಿ ಸಿದ್ದಾಪುರ ಏತ ನೀರಾವರಿ ಯೋಜನೆ ಕೈಗೊಳ್ಳಲು ಉದ್ದೇಶಿಸಲಾಗಿದೆ.

– ಪ್ರಶಾಂತ್‌ ಪಾದೆ

Advertisement

Udayavani is now on Telegram. Click here to join our channel and stay updated with the latest news.

Next