Advertisement

ಅನಧಿಕೃತ ನೀರಿನ ಘಟಕ ಕಾಮಗಾರಿ ಸ್ಥಗಿತಗೊಳಿಸಿ

02:02 PM Oct 06, 2020 | Suhan S |

ಮಂಡ್ಯ: ನಗರದ ಅಶೋಕನಗರದಲ್ಲಿನ ಬಾಲ ಭವನ ಉದ್ಯಾನವನದಲ್ಲಿ ಅನಧಿಕೃತವಾಗಿ ಶುದ್ಧ ಕುಡಿಯುವ ನೀರಿನ ಘಟಕ ನಿರ್ಮಾಣ ಮಾಡಲಾಗುತ್ತಿದೆ. ಜಿಲ್ಲಾಧಿಕಾರಿಗಳು ಕೂಡಲೇ ಕಾಮಗಾರಿಯನ್ನು ರದ್ದುಪಡಿಸಬೇಕು. ಅಕ್ರಮ ನಡೆಸಿರುವ ನಗರಸಭೆ ಆಯುಕ್ತರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ನಗರಸಭೆ ಮಾಜಿ ಅಧ್ಯಕ್ಷ ಬಿ.ಸಿದ್ದರಾಜು ಆಗ್ರಹಿಸಿದರು.

Advertisement

ನಗರಸಭೆ ಆಯುಕ್ತರು ಉದ್ದೇಶಪೂರ್ವಕವಾಗಿ ದಾಖಲೆ ಮತ್ತು ಮಾಹಿತಿಗಳನ್ನು ನೀಡದೆ, ಕರ್ತವ್ಯ ಮತ್ತು ಜವಾಬ್ದಾರಿಗಳನ್ನು ನಿರ್ವಹಿಸದೇ ಉದ್ಯಾನದಲ್ಲಿ ಅನಧಿಕೃತ ಕಟ್ಟಡಗಳನ್ನು ಕಟ್ಟಲು ಸಹಕಾರ ನೀಡಿದ್ದಾರೆ. ಆದ್ದರಿಂದ ಇವರನ್ನು ಕರ್ತವ್ಯದಿಂದ ವಜಾಗೊಳಿಸಬೇಕು ಎಂದು ಸೋಮವಾರ ಸುದ್ದಿ ಗೋಷ್ಠಿಯಲ್ಲಿ ಒತ್ತಾಯಿಸಿದರು.

ಉದ್ಯಾನವೇ ಮಾಯವಾಗುವ ಸಾಧ್ಯತೆ: ಯಾವುದೇ ಉದ್ಯಾನವನಗಳಲ್ಲಿ ಸಾರ್ವಜನಿಕ ಕಾಮಗಾರಿಗಳು ಶೇ.10ರಷ್ಟು ಜಾಗವನ್ನು ಮೀರ ಬಾರದು ಎಂಬ ಕಾನೂನಿದ್ದರೂ ಕೂಡ ಅಶೋಕ ನಗರದ ಉದ್ಯಾನವನದಲ್ಲಿ ಗ್ರಂಥಾಲಯ, ನೀರಿನ ಟ್ಯಾಂಕ್‌, ಬಾಲಭವನ ಸೇರಿ ಶೇ.25ರಷ್ಟು ಸ್ಥಳ ಬಳಕೆಯಾಗಿದೆ. ಹಾಗಿದ್ದರೂ ಕೂಡ ಉದ್ಯಾನಗಳ ಕಾಯ್ದೆಗೆ ವಿರುದ್ಧವಾಗಿ ಈಗ ಶುದ್ಧ ನೀರಿನ ಘಟಕ ಮಾಡಲು ಕಾಮಗಾರಿ ನಡೆಸಲಾಗಿದೆ. ಹೀಗೆ ಮುಂದುವರೆದರೆ ಮುಂದಿನ ದಿನಗಳಲ್ಲಿ ಉದ್ಯಾ ನವೇ ಮಾಯವಾಗಿ ಕೇವಲ ಕಟ್ಟಡಗಳೇ ಕಂಡು ಬಂದರೆ ಅಚ್ಚರಿಯಿಲ್ಲ ಎಂದುಕಳವಳ ವ್ಯಕ್ತಪಡಿಸಿದರು.

ಅನಧಿಕೃತ ಕಟ್ಟಡಕ್ಕೆ ಅವಕಾಶ ಬೇಡ: ಸದ್ಯ ಈ ಉದ್ಯಾನದಲ್ಲಿ ಆಸಕ್ತ ನಾಗರೀಕರೇ ಸ್ವಂತ ಹಣ ಬಳಸಿ ಪಾರ್ಕ್‌ನ್ನು ಅಭಿವೃದ್ಧಿಗೊಳಿಸಿದ್ದಾರೆ. ಆದ್ದ ರಿಂದ ನೀರಿನ ಘಟಕವನ್ನು ಬೇರೆ ಕಡೆ ಮಾಡಿಕೊಳ್ಳಲಿ, ಪಾರ್ಕ್‌ ತನ್ನ ಮೂಲ ಸ್ವರೂಪವನ್ನು ಉಳಿಸಿಕೊಳ್ಳಲು ಅನಧಿಕೃತ ಕಟ್ಟಡಗಳಿಗೆ ಅವಕಾಶ ನೀಡಬಾರದು ಎಂದು ಜಿಲ್ಲಾಧಿಕಾರಿಗಳನ್ನು ಒತ್ತಾಯಿಸಿದರು.

ಪೌರಾಯುಕ್ತರಿಂದ ಕರ್ತವ್ಯ ಲೋಪ: ಜಿಲ್ಲಾಧಿಕಾರಿಯವರನ್ನು 19ನೇ ವಾರ್ಡ್‌ ಅಶೋಕನಗರದ ಸಾರ್ವಜನಿಕರು ಶುದ್ಧ ಕುಡಿಯುವ ನೀರಿನ ಘಟಕ ಕಾಮಗಾರಿಯನ್ನು ನಿಲ್ಲಿಸುವಂತೆ ಮನವಿ ಮಾಡಿದ್ದರು. ಆಗ ಜಿಲ್ಲಾಧಿಕಾರಿಗಳು ಪೌರಾಯುಕ್ತರಿಗೆ ಕರೆ ಮಾಡಿ ಕಾಮಗಾರಿ ಮುಂದುವರಿಸದಂತೆ ಗುತ್ತಿಗೆದಾರರಿಗೆ ಸೂಚಿಸುವಂತೆ ತಿಳಿಸಿದ್ದರು.ಆದರೆ, ಆಯುಕ್ತರು ಗುತ್ತಿಗೆದಾರರಿಗೆ ನೋಟಿಸ್‌ ನೀಡದೆ ಕರ್ತವ್ಯ ಲೋಪ ಎಸಗಿದ್ದಾರೆ. ಇವರಜೊತೆಗೆ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ರವಿಕುಮಾರ್‌, ವಾರ್ಡ್‌ನ ಅಭಿಯಂತರ ರಾಜೇಗೌಡ, ಇವರ ಕರ್ತವ್ಯ ಲೋಪದಿಂದ ವಾರ್ಡ್‌ನ ಸಾರ್ವಜನಿಕರು ಹಾಗೂ ಅನಧಿಕೃತ ಉಪಗುತ್ತಿಗೆದಾರರಾದ ಶೇಖರ್‌ ಮಧ್ಯೆ ವಾಗ್ವಾದಗಳು ಮತ್ತು ಸಂಘರ್ಷಗಳು ನಡೆಯಲು ಕಾರಣವಾಗಿವೆ. ಇದರ ವಿರುದ್ಧ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗೆ ದೂರು ನೀಡಲಾಗಿದೆ ಎಂದರು.

Advertisement

ಇದರ ಬಗ್ಗೆ ಪೌರಾಡಳಿತ ನಿರ್ದೇಶಕರಿಗೆ ಮನವಿ ಮಾಡಲಾಗಿತ್ತು. ಡೀಸಿ ಹಾಗೂ ಪೌರಾಡಳಿತ ನಿರ್ದೇ ಶಕರ ಆದೇಶವನ್ನು ತಾತ್ಸಾರ ಹಾಗೂ ನಿರ್ಲಕ್ಷ್ಯ ಮಾಡಿದ್ದಾರೆ. ಸುಮಾರು 100 ದಿನಗಳಿಗೂ ಹೆಚ್ಚು ಅವಧಿ ಮುಗಿದಿದ್ದರೂ ಕಾಮಗಾರಿ ರದ್ದುಪಡಿಸುವ ಬಗ್ಗೆ ಯಾವುದೇ ಅಗತ್ಯಕ್ರಮಕೈಗೊಂಡಿಲ್ಲ ಎಂದರು.

ಹಣಕ್ಕಾಗಿ ಖಾಸಗಿಗೆ: ಸಾರ್ವಜನಿಕ ಹಿತಾದೃಷ್ಟಿಯಿಂದ ಶುದ್ಧ ಕುಡಿಯುವ ನೀರು ಘಟಕ ಸ್ಥಾಪಿಸುತ್ತಿಲ್ಲ.ಹಣಕ್ಕಾಗಿ ಖಾಸಗಿಯವರಿಗೆ ವಹಿಸಲಾಗುತ್ತಿದೆ. ಇದರಿಂದ ಸಾರ್ವಜನಿಕರಿಗೆಯಾವುದೇ ಅನುಕೂಲವಾಗುವುದಿಲ್ಲ. ನೀರು ಪರಿಷ್ಕರಣೆ ಮಾಡಿ ಮನೆ ಮನೆಗಳಿಗೆ ಸರಬರಾಜು ಮಾಡುವ ಉದ್ದೇಶ ಹೊಂದಲಾಗಿದೆ ಎಂದು ಆರೋಪಿಸಿದರು.

ಸ್ಲಂಗಳಲ್ಲಿ ಮಾಡಲಿ: ನಗರದಲ್ಲಿ 26 ಸ್ಲಂಗಳಿವೆ. ಆದರೆ, ಅಲ್ಲಿ ಒಂದೂ ಶುದ್ಧ ನೀರಿನ ಘಟಕ ಸ್ಥಾಪಿ ಸಿಲ್ಲ. ಜನರ ‌ ಹಿತಕ್ಕಾಗಿ ಮಾಡುವವರು ಸ್ಲಂ ಜನರಿಗೆ ಶುದ್ಧ ಕುಡಿಯುವ ನೀರನ್ನು ಸರಬರಾಜು ಮಾಡಲಿ. ಅದನ್ನು ಬಿಟ್ಟು ಸಾರ್ವಜನಿಕ ಹಣವ‌ನ್ನು ವ್ಯಯ ಮಾಡುವುದು ಸರಿಯಲ್ಲ ಎಂದು ಕಿಡಿಕಾರಿದರು. ಪೌರಾಯುಕ್ತರಾದ ಲೋಕೇಶ್‌ ಅವರು ಸಮುದಾಯ ವ್ಯವಹಾರಗಳ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸುವಅರ್ಹತೆ ಹೊಂದಿದ್ದು,ಪೌರಾಯುಕ್ತರ ಹುದ್ದೆಯಲ್ಲಿ ಕರ್ತವ್ಯ ನಿರ್ವಹಿಸುವ ಅರ್ಹತೆ ಹೊಂದಿಲ್ಲ. ಅನಧಿಕೃತ ಕಟ್ಟಡಗಳನ್ನು ತೆರವುಗೊಳಿಸ ಬೇಕಾದ ಪೌರಾಯುಕ್ತರು, ಗುತ್ತಿಗೆದಾರರಿಗೆ ಸಹ ಕಾರ ನೀಡುವುದರ ಮೂಲಕ ಅನಧಿಕೃತವಾಗಿ ಉದ್ಯಾನಗಳಲ್ಲಿ ಕಟ್ಟಡಗಳನ್ನು ನಿರ್ಮಿಸಲು ಕಾರಣರಾಗುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಗೋಷ್ಠಿಯಲ್ಲಿ ಡಾ.ಬಿ.ಕೆ.ಸುರೇಶ್‌, ನಾಗಾನಂದ, ಜಗದೀಶ್‌, ರಾಜೇಶ್‌, ರೇಣುಕ, ನೀರಜ್‌ ಇತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next