Advertisement

ಕಾರಟಗಿ: ಶ್ರೀ ಶರಣಬಸವೇಶ್ವರ ಜಾತ್ರೋತ್ಸವ

04:23 PM Sep 04, 2022 | Team Udayavani |

ಕಾರಟಗಿ: ಪಟ್ಟಣದಲ್ಲಿ ಆರಾಧ್ಯ ದೈವ ಶ್ರೀ ಶರಣಬಸವೇಶ್ವರರ 48ನೇ ವರ್ಷದ ಪುರಾಣ ಮಹಾಮಂಗಲೋತ್ಸವ, ಜೋಡು ಮಹಾ ರಥೋತ್ಸವ ಸೆ.4-5ರಂದು ಅದ್ಧೂರಿಯಾಗಿ ನಡೆಯಲಿದೆ.

Advertisement

ಪುರಾಣ ಮಂಗಲೋತ್ಸವ ಮುನ್ನಾ ದಿನ ಸೆ.4ರಂದು ವೀರಭದ್ರೇಶ್ವರ, ಶರಣಬಸವೇಶ್ವರ ಮೂರ್ತಿಗೆ ರುದ್ರಾಭಿಷೇಕ, ಗಂಗೆ ಸ್ಥಳಕ್ಕೆ ಹೋಗಿ ಬರುವುದು ಸೇರಿದಂತೆ ವಿವಿಧ ಕಾರ್ಯಗಳು ನೆರವೇರುವವು. ಮಕ್ಕಳು, ಮಹಿಳೆಯರು ಸೇರಿ ಭಕ್ತಾದಿಗಳು ಶಸ್ತ್ರ ಹಾಕಿಸಿಕೊಂಡು ಭಕ್ತಿ ಮೆರೆಯುತ್ತಾರೆ. ಮರು ದಿನ ಪುರಾಣ ಮಹಾ ಮಂಗಲೋತ್ಸವ, ಶ್ರೀ ಶರಣಬಸವೇಶ್ವರ ಜೋಡು ರಥೋತ್ಸವ ನಡೆಯುತ್ತದೆ.

ಹಿನ್ನೆಲೆ: ಕ್ರಿ.ಶ. 973ರಲ್ಲಿ ಕಲ್ಯಾಣದ ಚಾಲುಕ್ಯರು ರಾಷ್ಟ್ರಕೂಟರನ್ನು ಬಗ್ಗು ಬಡಿದು ಗಂಗಾವತಿಯನ್ನು ತಮ್ಮ ಅಧಿಕಾರ ವ್ಯಾಪ್ತಿಗೆ ತೆಗೆದುಕೊಳ್ಳುತ್ತಾರೆ. ಇವರ ಆಳ್ವಿಕೆ ವೇಳೆ ಕಾರಟಗಿಯಲ್ಲಿ ಕೆಂಪುಮಣ್ಣಿನ ಕೆರೆ ನಿರ್ಮಿಸಿ ಈ ಸ್ಥಳಕ್ಕೆ ಕೆರೆ ಇಟಗಿ ಎಂದು ಹೆಸರಿಸಿದರು. ನಂತರ ಅದು ಕಾಲಾನುಕ್ರಮದಲ್ಲಿ ಕಾರಟಗಿ ಆಗಿ ಬದಲಾಯಿತೆಂಬುದು ಸ್ಥಳೀಯರ ಅಭಿಪ್ರಾಯ. ಅಂದಿನ ಕಾಲದಲ್ಲಿ ಹೋರಾಟದಲ್ಲಿ ಮೃತಪಟ್ಟ ಸೇನಾನಿಗಳ ನೆನಪಿಗಾಗಿ ವೀರಗಲ್ಲುಗಳನ್ನು ಪಟ್ಟಣದಲ್ಲಿ ಕಾಣಬಹುದು.

ಶಿವದೇವಾಲಯ, ವಿಷ್ಣು ಗಜಾನನ ಹಾಗೂ ಸಪ್ತಮಾತೃಕೆ ಪುಷ್ಕರಣಿಗಳು ಇಲ್ಲಿವೆ. ಶ್ರೀ ಮಹಾದೇಶ್ವರ ದೇವಾಲಯ ಮುಂಭಾಗ ಪುಷ್ಕರಣಿ ಸುಂಕಲ ವೀರಪ್ಪನ ಬಾವಿ ಇದ್ದು, ಅದರಲ್ಲಿ ಮಿಂದೆದ್ದು ಉತ್ತರಕ್ಕೆ ತಿರುಗಿದರೆ ಶಿವ, ದಕ್ಷಿಣಕ್ಕೆ ತಿರುಗಿದರೆ ವೆಂಕಟೇಶ್ವರಸ್ವಾಮಿ, ಪೂರ್ವಕ್ಕೆ ತಿರುಗಿದರೆ ವೀರಭದ್ರಸ್ವಾಮಿ, ವಿನಾಯಕ, ಪಶ್ಚಿಮಕ್ಕೆ ತಿರುಗಿದರೆ ಗ್ರಾಮದೇವತೆ ಮತ್ತು ಕೋಟೆ ಆಂಜನೇಯಸ್ವಾಮಿಗೆ ನಮಸ್ಕಾರ ಮಾಡಬಹುದು.

ತೀರಾ ಶಿಥಿಲಾವಸ್ಥೆಯಲ್ಲಿದ್ದ ಗಣೇಶ ದೇವಾಲಯವನ್ನು ಹಿರಿಯರ ಮಾರ್ಗದರ್ಶನ, ಸಹಾಯದಿಂದ ಕ್ರಿ.ಶ. 1973ರಲ್ಲಿ ನವೀಕರಿಸಲಾಗಿದೆ. ಮರುವರ್ಷವೇ ಶ್ರೀ ವೀರಭದ್ರೇಶ್ವರ ದೇವಸ್ಥಾನ ಮುಂಭಾಗದಲ್ಲಿ ಭವ್ಯ ವೇದಿಕೆ ನಿರ್ಮಿಸಿ ಶ್ರೀ ಶರಣಬಸವೇಶ್ವರ ಪುರಾಣ ಆರಂಭಿಸಲಾಗಿದೆ. ಆ ವರ್ಷ ಶ್ರೀ ಮುಪ್ಪಿನ ಶಾಸ್ತ್ರಿಗಳು ಕಾರ್ಯಕ್ರಮಕ್ಕೆ ಒಂದು ಹೊಸ ಆಯಾಮವನ್ನಿತ್ತರಲ್ಲದೇ ಉಳಿದ ಹಣದಲ್ಲಿ ಭವ್ಯವಾದ ಮಂಟಪ ನಿರ್ಮಿಸಿ ಶರಣರ ಪುರಾಣ ಮುಂದುವರಿಸಿದರು.

Advertisement

ಈ ಸಂಪ್ರದಾಯ ಪಾಲಿಸಿಕೊಂಡು ಬಂದ ಕಾರಟಗಿ ಮತ್ತು ಸುತ್ತಮುತ್ತಲಿನ ಭಕ್ತ ಸಮೂಹ 48 ವರ್ಷಗಳಿಂದ ವಿಜೃಂಭಣೆಯಿಂದ ಜಾತ್ರೆ ಆಚರಿಸುತ್ತಿದ್ದಾರೆ. ಜಾತ್ರೆ ನಡೆಯುವ ಎರಡು ದಿನಗಳ ಮುಂಚೆಯೇ ಪಟ್ಟಣದೆಲ್ಲೆಡೆ ಹಬ್ಬದ ವಾತಾವರಣ ನಿರ್ಮಾಣವಾಗಿರುತ್ತದೆ. ಮಂಗಲೋತ್ಸವ-ರಥೋತ್ಸವದಲ್ಲಿ ಅಪಾರ ಸಂಖ್ಯೆಯ ಭಕ್ತ ಸಮೂಹ ಕಿಕ್ಕಿರಿದು ತುಂಬಿರುತ್ತದೆ.

-ದಿಗಂಬರ್‌ ಎನ್‌. ಕುರ್ಡೆಕರ

Advertisement

Udayavani is now on Telegram. Click here to join our channel and stay updated with the latest news.

Next