Advertisement

ಪುತ್ತಿಗೆಶ್ರೀ ಪರ್ಯಾಯ: ಲೇಖಕರಾಗಿ ಶ್ರೀಸುಗುಣೇಂದ್ರತೀರ್ಥರು

01:29 PM Jan 18, 2024 | Team Udayavani |

ಭಾವೀ ಪರ್ಯಾಯ ಪುತ್ತಿಗೆ ಮಠದ ಶ್ರೀಸುಗುಣೇಂದ್ರ ತೀರ್ಥರು “ಸುಗುಣಮಾಲಾ’ ಎಂಬ ಕನ್ನಡ ಮಾಸ ಪತ್ರಿಕೆ ಮತ್ತು “ಸುಗುಣ ಡೈಜೆಸ್ಟ್‌’ ಎಂಬ ಆಂಗ್ಲ ತ್ತೈಮಾಸಿಕ ಪತ್ರಿಕೆಯನ್ನು ಹೊರತರುತ್ತಿದ್ದಾರೆ. ಇವೆರಡೂ ಪತ್ರಿಕೆಗಳು ನಾಲ್ಕು ದಶಕಗಳಿಂದ ಪ್ರಕಟವಾಗುತ್ತಿದ್ದು ಇದೀಗ 40ನೆಯ ವರ್ಷಕ್ಕೆ ಪಾದಾರ್ಪಣೆ ಮಾಡುತ್ತಿವೆ.

Advertisement

ಪತ್ರಿಕೆಯ ಪ್ರಾರಂಭದ ಹೊತ್ತಿಗೇ ಸ್ಥಾಪಕರಾದ ಶ್ರೀಸುಗುಣೇಂದ್ರತೀರ್ಥರು ಧಾರ್ಮಿಕ, ಸಾಮಾಜಿಕ ವಿಚಾರಗಳ ಬಗೆಗೆ ಬರೆಯಲು ಆರಂಭಿಸಿದರು, ಹೀಗಾಗಿ ಸನ್ಯಾಸಾಶ್ರಮದ 50ರ ಸಂಭ್ರಮದಲ್ಲಿರುವ ಇವರ ಲೇಖನಿ ವ್ಯವಸಾಯಕ್ಕೆ 40ರ ಸಂಭ್ರಮ. ನಿರಂತರ
ಸರಣಿಗಳೂ ಬರುತ್ತಿವೆ. ನೀಡಿದ ಉಪನ್ಯಾಸಗಳನ್ನು ಪುಸ್ತಕ ರೂಪದಲ್ಲಿ ಹೊರಬಂದಿವೆ.

“ಗೀತಾಧ್ಯಾಯ ಭಾವಪರಿಚಯ’ (ಭಗವದ್ಗೀತೆಯ ವಿಚಾರ), “ಮರ್ಮ ಮೀಮಾಂಸೆ’ (ಸುಗುಣಮಾಲಾದಲ್ಲಿ ಪ್ರಕಟವಾದ ಸಕಾಲಿಕ ಲೇಖನಗಳ ಸಂಗ್ರಹ), “ರಾಮಾಯಣ ರಹಸ್ಯ ಸ್ವಾರಸ್ಯ’ (ರಾಮಾಯಣದ ವಿಚಾರ), “ಪರಿಮಳ ತೀರ್ಥರು’ (ಗುರು ಶ್ರೀರಾಘವೇಂದ್ರತೀರ್ಥರ ಕುರಿತು), “ನಮಸ್ಕಾರ ಏನಿದರ ಸ್ವಾರಸ್ಯ?’ (ಆಚಾರಗಳ ಕುರಿತು), “ಹೃದಯಜೀವಿ’
(ವಿದ್ಯಾಗುರು ಶ್ರೀವಿದ್ಯಾಮಾನ್ಯತೀರ್ಥರ ಕುರಿತು), “ಸುವಾಣಿ’ (ಸ್ವಾಮೀಜಿಯವರ ಉಪನ್ಯಾಸ ಸಾರಸಂಗ್ರಹ), “ಧಾರ್ಮಿಕ ಪ್ರಶ್ನೆ- ಮಾರ್ಮಿಕ ಉತ್ತರ’ (ಜಿಜ್ಞಾಸುಗಳ ಜತೆ ಪ್ರಶ್ನೋತ್ತರ), “ಸುಧಾ ಸುವಚನ’ (ಸ್ವಾಮೀಜಿಯವರ ಸಂದೇಶಗಳ ಲೇಖನಗಳು) ಇತ್ಯಾದಿ ಕೃತಿಗಳನ್ನು ಪ್ರಕಟವಾಗಿವೆ. ಗೀತಾಧ್ಯಾಯ ಭಾವಪರಿಚಯ ಮತ್ತು ರಾಮಾಯಣ ರಹಸ್ಯ ಸ್ವಾರಸ್ಯ ಕೃತಿಗಳನ್ನು ಡಾ| ಉಷಾ ಚಡಗ ಅವರು ಇಂಗ್ಲೀಷ್‌ಗೆ ಭಾಷಾಂತರಿಸಿದ್ದಾರೆ.

ಒಂದೇ ಕಡೆ ಸಹೋದರ ಸಾಮಿಗಳ ವೃಂದಾವನ

ಬೇರೆ ಬೇರೆ ಮಠಗಳ ಪೀಠಾಧಿಪತಿಗಳಾಗಿದ್ದ ಸಹೋದರ ಸ್ವಾಮಿಗಳ ವೃಂದಾವನಗಳು ಒಂದೆಡೆ ಇರುವುದು ಮೂಲ ಪುತ್ತಿಗೆ ಮೂಲ ಮಠದಲ್ಲಿ ಮಾತ್ರ. ಪುತ್ತಿಗೆ ಮಠದ 20ನೆಯವರಾದ ಶ್ರೀರಾಘವೇಂದ್ರತೀರ್ಥರು ಅಣ್ಣನಾದರೆ ಶ್ರೀಶೀರೂರು ಮಠದ 22ನೆಯ ಸ್ವಾಮೀಜಿಯವರಾದ ಶ್ರೀಲಕ್ಷ್ಮೀಧರತೀರ್ಥರು (ಶೀರೂರಿನಲ್ಲಿ ಮಠದ ಸ್ಥಾಪಕರಾದ ಶ್ರೀಲಕ್ಷ್ಮೀರಮಣತೀರ್ಥರ ಗುರುಗಳು) ತಮ್ಮನಾಗಿದ್ದರು.

Advertisement

ಶ್ರೀಮಧ್ವಾಚಾರ್ಯರ ತಮ್ಮ ಶ್ರೀವಿಷ್ಣುತೀರ್ಥರ ಬಳಿಕ ನಮಗೆ ಕಂಡುಬರುವುದು ಶ್ರೀವಾದಿರಾಜಸ್ವಾಮಿಗಳ ತಮ್ಮ ಶ್ರೀಸುರೋತ್ತಮತೀರ್ಥರು. ವಿಷ್ಣುತೀರ್ಥರನ್ನು ಶ್ರೀಸುಬ್ರಹ್ಮಣ್ಯ ಮಠಕ್ಕೆ ಮಧ್ವಾಚಾರ್ಯರು ನೇಮಿಸಿದ ಬಳಿಕ ಶ್ರೀಸೋದೆ ಮಠಕ್ಕೂ ಆದ್ಯ ಯತಿಗಳನ್ನಾಗಿ ನೇಮಿಸಿದರು.

ಶ್ರೀವಾದಿರಾಜರು ಸೋದೆ ಮಠದ ಅಧಿಪತಿಗಳಾಗಿದ್ದರೆ ತಮ್ಮ ಶ್ರೀಸುರೋತ್ತಮ ತೀರ್ಥರು ಶ್ರೀಭಂಡಾರಕೇರಿ ಮಠದಲ್ಲಿ
ಅಧಿಪತಿಗಳಾಗಿದ್ದರು. ವಾದಿರಾಜರದು ಶಿರಸಿ ಸಮೀಪದ ಸೋಂದಾ ಮಠದಲ್ಲಿ ಮೂಲ ವೃಂದಾವನವಿದ್ದರೆ ಶ್ರೀಸುರೋತ್ತಮ ತೀರ್ಥರದು ಬಾರಕೂರಿನ ಭಂಡಾರಕೇರಿ ಮಠದಲ್ಲಿದೆ.

ಉಡುಪಿ ತಾಲೂಕು ಇನ್ನಂಜೆ ಸಮೀಪದ ಉಂಡಾರಿನ ಸೋದೆಮಠದಲ್ಲಿ ಶ್ರೀವಿಶ್ವನಿಧಿತೀರ್ಥರು ಮತ್ತು ಶ್ರೀವಿಶ್ವಾಧೀಶ್ವರತೀರ್ಥರ ವೃಂದಾವನವಿದ್ದು ಇವರು ಸೋದರರು ಎಂಬ ಪ್ರತೀತಿ ಇದೆ. ಇವರು ಪರಂಪರೆಯಲ್ಲಿ ಅನುಕ್ರಮವಾಗಿ 29 ಮತ್ತು 30ನೆಯವರು.

Advertisement

Udayavani is now on Telegram. Click here to join our channel and stay updated with the latest news.

Next