Advertisement

ಪ್ರಧಾನಿಗೆ ಧನ್ಯವಾದ ಅರ್ಪಿಸಿದ ಶ್ರೀ ಗುರುರಾಘವೇಂದ್ರ ಬ್ಯಾಂಕ್ ನ ಠೇವಣಿದಾರರು

05:01 PM Dec 12, 2021 | Team Udayavani |

ಬೆಂಗಳೂರು: ನಗರದ ಶ್ರೀ ಗುರು ರಾಘವೇಂದ್ರ ಕೋ ಆಪರೇಟಿವ್ ಬ್ಯಾಂಕ್ ನ 5 ಜನ ಠೇವಣಿದಾರರು, ಪ್ರಧಾನಿ  ನರೇಂದ್ರ ಮೋದಿಯವರನ್ನು ಭೇಟಿಯಾಗಿ, ಸಕಾಲಿಕವಾಗಿ ಸ್ಪಂದಿಸಿ, ಠೇವಣಿ ವಿಮೆ ಮರುಪಾವತಿಗೆ ಕ್ರಮ ಕೈಗೊಂಡಿದ್ದಕ್ಕೆ ಧನ್ಯವಾದಗಳನ್ನು ಸಲ್ಲಿಸಿ ಸಂತಸ ವ್ಯಕ್ತಪಡಿಸಿದ್ದಾರೆ.

Advertisement

ಬೆಂಗಳೂರು ದಕ್ಷಿಣ ಸಂಸದರಾದ  ತೇಜಸ್ವಿ ಸೂರ್ಯ ರವರ ವಿಶೇಷ ಪ್ರಯತ್ನದಿಂದ ನವದೆಹಲಿಗೆ ತೆರಳಿರುವ ನಗರದ 5 ಜನ ಠೇವಣಿದಾರರು, ಪ್ರಧಾನಿ ಶ್ರೀ ನರೇಂದ್ರ ಮೋದಿ ರವರನ್ನು ಭೇಟಿಯಾಗಿ ಧನ್ಯವಾದಗಳನ್ನು ಸಲ್ಲಿಸಿದ್ದು ವಿಶೇಷ. ದೇಶಾದ್ಯಂತ ಇರುವ 16 ಅರ್ಬನ್ ಕೋ ಆಪರೇಟಿವ್ ಬ್ಯಾಂಕ್ ಗಳ ಠೇವಣಿದಾರರಿಗೆ, ಠೇವಣಿ ವಿಮೆ ಪಾವತಿಯಾದ ನಂತರದಲ್ಲಿ ‘ಡಿಪಾಸಿಟರ್ಸ್ ಫರ್ಸ್ಟ್’ ಕಾರ್ಯಕ್ರಮದ ಅಂಗವಾಗಿ ಮಾತನಾಡಿದ ಶ್ರೀ ನರೇಂದ್ರ ಮೋದಿಯವರು, 1 ಲಕ್ಷಕ್ಕೂ ಅಧಿಕ ಠೇವಣಿದಾರರು 1300 ಕೋಟಿ ರೂ, ಗಳಿಗೂ ಅಧಿಕ ಮೊತ್ತದ ಹಣವನ್ನು, ಠೇವಣಿ ಖಾತರಿ & ಸಾಲ ಖಾತರಿ ನಿಗಮ (ತಿದ್ದುಪಡಿ) ಮಸೂದೆ- 2021 ಅಡಿಯಲ್ಲಿ ವಿತರಿಸಿರುವ ಕುರಿತು ತಿಳಿಸಿದರು.

ಇದರಲ್ಲಿ ಶ್ರೀ ಗುರು ರಾಘವೇಂದ್ರ ಬ್ಯಾಂಕ್ ನ 12,014 ಠೇವಣಿದಾರರಿಗೆ 401 ಕೋಟಿ ರೂ, ಗಳಷ್ಟು ಠೇವಣಿ ವಿಮೆ ಪಾವತಿಯಾಗಿರುವುದನ್ನು ಸ್ಮರಿಸಬಹುದು.

ಪ್ರಧಾನಿ  ನರೇಂದ್ರ ಮೋದಿಯವರನ್ನು ಭೇಟಿ ಮಾಡಿದ ನಂತರ ಮಾತನಾಡಿದ ಬೆಂಗಳೂರಿನ ಶ್ರೀ ನಾಗರಾಜ್ ಭಾರತಿ ರವರು, ” ಬ್ಯಾಂಕ್ ನ ಹಲವೊಂದು ನಿರ್ಧಾರಗಳಿಂದ ನಾವು ಹೂಡಿಕೆ ಮಾಡಿದ್ದ (6 ಲಕ್ಷ ರೂ, ಗಳು) ಹಣ ಮರಳಿ ಪಡೆಯುವ ಕುರಿತು ತುಂಬಾ ಆತಂಕದಲ್ಲಿದ್ದ ಠೇವಣಿದಾರರಿಗೆಲ್ಲ ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಅಗತ್ಯ ಕ್ರಮ ಕೈಗೊಂಡು ಸಕಾಲಿಕವಾಗಿ ಸ್ಪಂದಿಸಿದ್ದು, ಇಂದು ಮಾನ್ಯ ಪ್ರಧಾನಿಯವರನ್ನು ಭೇಟಿಯಾಗಿ ಠೇವಣಿದಾರರ ಪರವಾಗಿ ಕೃತಜ್ಞತೆ ಸಲ್ಲಿಸಿದ್ದೇವೆ, ಬಡ ಮತ್ತು ಮಧ್ಯಮ ವರ್ಗದ ಜನರ ಹಿತಾಸಕ್ತಿಗೆ ಹಗಲಿರುಳು ಶ್ರಮಿಸುವ ಪ್ರಧಾನಿ ಸಿಕ್ಕಿದ್ದು ನಮ್ಮ ದೇಶದ ಸೌಭಾಗ್ಯ ” ಎಂದು ಸಂತಸ ವ್ಯಕ್ತಪಡಿಸಿದರು.

ಇದೇ ಸಂದರ್ಭದಲ್ಲಿ ಪ್ರಧಾನಿ  ನರೇಂದ್ರ ಮೋದಿಯವರು ಮತ್ತು ಠೇವಣಿದಾರರೊಂದಿಗೆ ನಡೆದ ವರ್ಚುವಲ್ ಸಭೆಯಲ್ಲಿ ಬೆಂಗಳೂರಿನ ನಗರ ಜಿಲ್ಲಾ ಪಂಚಾಯತ್ ಕಚೇರಿಯಲ್ಲಿ ಇತರ 150 ಠೇವಣಿದಾರರೊಂದಿಗೆ ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ ರವರು ಭಾಗವಹಿಸಿದ್ದು ಗಮನಾರ್ಹ.

Advertisement

ವರ್ಚುವಲ್ ಸಭೆಯ ನಂತರ ಮಾತನಾಡಿದ ಸಂಸದ ತೇಜಸ್ವೀ ಸೂರ್ಯ, ” ಮಾನ್ಯ ನರೇಂದ್ರ ಮೋದಿ ನೇತೃತ್ವದ ಸರ್ಕಾರವು ಬ್ಯಾಂಕಿಂಗ್ ಕ್ಷೇತ್ರ & ಠೇವಣಿದಾರರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಅನೇಕ ಸುಧಾರಣೆಗಳನ್ನು ಜಾರಿಗೆ ತಂದಿದ್ದು, ಕೇವಲ 1 ಲಕ್ಷ ವರೆಗೆ ಮಾತ್ರವಿದ್ದ ಠೇವಣಿ ವಿಮೆ ಮೊತ್ತವನ್ನು, 5 ಲಕ್ಷ ರೂ, ಗಳಿಗೆ ಏರಿಸುವುದರೊಂದಿಗೆ, ಕೋ-ಆಪರೇಟಿವ್ ಬ್ಯಾಂಕ್ ಗಳನ್ನು ಸಹ ಆರ್.ಬಿ.ಐ ವ್ಯಾಪ್ತಿಗೆ ತಂದು ಪಾರದರ್ಶಕತೆಗೆ ಅನುವು ಮಾಡಿಕೊಟ್ಟಿದ್ದು ಶ್ಲಾಘನೀಯ’ಎಂದರು.

ಈ ವರ್ಷದ ಆಗಸ್ಟ್ ನಲ್ಲಿ ಕೇಂದ್ರ ಸರಕಾರವು, 1961 ರ ಠೇವಣಿ ಖಾತರಿ ಮತ್ತು ಸಾಲ ಖಾತರಿ ನಿಗಮ ಮಸೂದೆಗೆ ತಿದ್ದುಪಡಿ ತಂದು, ಬ್ಯಾಂಕ್ ಗಳು ದಿವಾಳಿ ಹೊಂದಿದ 90 ದಿನಗಳ ಒಳಗಾಗಿ, ಠೇವಣಿದಾರರಿಗೆ 5 ಲಕ್ಷ ರೂ, ಗಳ ಠೇವಣಿ ವಿಮಾ ಮೊತ್ತ ಸಂದಾಯಗೊಳಿಸುವ ಕಾಯ್ದೆಯನ್ನು ಜಾರಿಗೆ ತಂದಿರುವುದರಿಂದ ಅಮೂಲಾಗ್ರ ಬದಲಾವಣೆಗೆ ಕಾರಣವಾಗಿದ್ದು, ಇದರಿಂದ ಶ್ರೀ ಗುರುರಾಘವೇಂದ್ರ ಬ್ಯಾಂಕ್‌ ನ 12,014 ಠೇವಣಿದಾರರು 90 ದಿನಗಳ ನಿಗದಿತ ಅವಧಿಪೂರ್ವದಲ್ಲಿಯೇ ಠೇವಣಿ ವಿಮೆ ಮೊತ್ತ ಪಡೆದಿರುವುದಕ್ಕೆ ಪ್ರಧಾನಿ  ನರೇಂದ್ರ ಮೋದಿ ಹಾಗೂ ಹಣಕಾಸು ಸಚಿವೆ ಶ್ರೀಮತಿ ನಿರ್ಮಲಾ ಸೀತಾರಾಮನ್‌ ರಿಗೆ ಕೃತಜ್ಞತೆ ಸಲ್ಲಿಸುತ್ತೇನೆ “ ಎಂದರು.

ಡಿಪಾಸಿಟರ್ಸ್ ಫರ್ಸ್ಟ್’ ಸಮಾರಂಭದಲ್ಲಿ ಮಾತನಾಡಿದ ಮಾನ್ಯ ಪ್ರಧಾನಿಗಳು, ” ಕಳೆದ ಕೆಲವು ದಶಕಗಳಿಂದ ಸುಧಾರಣೆಗೆ ಒಡ್ಡಿಕೊಳ್ಳಬೇಕಾಗಿದ್ದ ಬ್ಯಾಂಕಿಂಗ್ ಕ್ಷೇತ್ರದ ಹಲವು ಸಮಸ್ಯೆಗಳಿಗೆ ನಮ್ಮ ಸರ್ಕಾರವು ಆಮೂಲಾಗ್ರ ಸುಧಾರಣೆಗಳನ್ನು ಜಾರಿಗೆ ತಂದಿದ್ದು, ಠೇವಣಿದಾರರ ಹಿತಾಸಕ್ತಿಗೆ ಸ್ಪಂದಿಸಿರುವುದು ಗಮನಾರ್ಹ. ಇದುವರೆಗೆ 1 ಲಕ್ಷಕ್ಕೂ ಅಧಿಕ ಠೇವಣಿದಾರರಿಗೆ 1300 ಕೋಟಿ ರೂ, ಗಳಿಗೂ ಅಧಿಕ ಮೊತ್ತದ ಠೇವಣಿ ವಿಮೆ ಮೊತ್ತ ಮರುಪಾವತಿಗೊಳಿಸಲಾಗಿದ್ದು, ಇನ್ನೂ 3 ಲಕ್ಷಕ್ಕೂ ಅಧಿಕ ಜನರೂ ಸಹ ತಮ್ಮ ಠೇವಣಿ ವಿಮೆ ಮೊತ್ತವನ್ನು ಪಡೆಯಲಿದ್ದಾರೆ. ಬ್ಯಾಂಕ್ ಗಳು ಕೆಲವೊಂದು ಕಾರಣಗಳಿಗಾಗಿ ವಿಶ್ವಾಸಾರ್ಹತೆಯನ್ನು ಕಳೆದುಕೊಳ್ಳಬಹುದು,ಆದರೆ ಠೇವಣಿದಾರರ ಹಣಕ್ಕೆ ಯಾವುದೇ ರೀತಿಯ ತೊಂದರೆಗೆ ಅವಕಾಶಗಳಿಲ್ಲ. ಬ್ಯಾಂಕಿಂಗ್ ಕ್ಷೇತ್ರದ ವಿಶ್ವಾಸಾರ್ಹತೆಗೆ ಅಗತ್ಯ ಕಾನೂನುಗಳನ್ನು ಜಾರಿಗೆ ತರಲಾಗಿದೆ” ಎಂದು ತಿಳಿಸಿದರು.

ಠೇವಣಿ ವಿಮೆ ಮೊತ್ತವನ್ನು ವೃದ್ಧಿಗೊಳಿಸಿರುವುದರಿಂದ, ಹೂಡಿಕೆದಾರರ ಶೇ.98 ರಷ್ಟು ಮೊತ್ತವು ಸಂಪೂರ್ಣ ಮರುಪಡೆಯಲು ಶಕ್ತವಾಗಿದ್ದು,3 ಲಕ್ಷಕ್ಕೂ ಅಧಿಕ ಠೇವಣಿದಾರರು, ವಿಮೆ ಮೊತ್ತ ವನ್ನು ಪಡೆಯಲಿದ್ದಾರೆ. ಈ ವ್ಯವಸ್ಥೆಯಿಂದಾಗಿ 76 ಲಕ್ಷ ಕೋಟಿ ರೂ, ಗಳು ಸಂಪೂರ್ಣ ವಿಮೆಗೆ ಒಳಪಡಿಸಲಾಗಿದ್ದನ್ನು ಶ್ರೀ ನರೇಂದ್ರ ಮೋದಿಯವರು ಇದೇ ಸಂದರ್ಭದಲ್ಲಿ ವಿವರಿಸಿದರು.

“ನಾನು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ, ಕೇಂದ್ರ ಸರ್ಕಾರಗಳಿಗೆ ವಿಮೆ ಮೊತ್ತವನ್ನು 1 ಲಕ್ಷದಿಂದ 5 ಲಕ್ಷಕ್ಕೆ ಏರಿಸುವಂತೆ ಮನವಿ ಸಲ್ಲಿಸಿದರೂ ಕೂಡ ಗಮನ ಹರಿಸಿರಲಿಲ್ಲ. ನಿಮ್ಮೆಲ್ಲರ ಸಹಕಾರದಿಂದ ಇಂದು ಠೇವಣಿ ವಿಮೆ ಮೊತ್ತವನ್ನು 5 ಲಕ್ಷಕ್ಕೆ ಏರಿಸಲು ಸಾಧ್ಯವಾಗಿದೆ ” ಎಂದರು.

ಇದೇ ಸಂದರ್ಭದಲ್ಲಿ, ಕೋ-ಆಪರೇಟಿವ್ ಬ್ಯಾಂಕ್ ಗಳನ್ನು ಆರ್.ಬಿ.ಐ ವ್ಯಾಪ್ತಿಗೆ ಒಳಪಡಿಸಿ, ಸಹಕಾರ ಕ್ಷೇತ್ರದಲ್ಲಿ ಠೇವಣಿದಾರರಿಗೆ ವಿಶ್ವಾಸಾರ್ಹತೆ ವೃದ್ಧಿಸಲು, ವಿಶೇಷವಾಗಿ ಸಹಕಾರ ಇಲಾಖೆಯನ್ನೇ ಹೊಸದಾಗಿ ಸ್ಥಾಪಿಸಲು ಕೈಗೊಂಡ ಕ್ರಮಗಳ ಬಗ್ಗೆ ನರೇಂದ್ರ ಮೋದಿರವರು ವಿವರಿಸಿದ್ದು ಗಮನಾರ್ಹ.

ಸಭೆಯಲ್ಲಿ ಪಾಲ್ಗೊಂಡಿದ್ದ ಶ್ರೀ ಗುರುರಾಘವೇಂದ್ರ ಬ್ಯಾಂಕ್‌ ನ ಇನ್ನೋರ್ವ ಠೇವಣಿದಾರರಾದ  ಬಿ ಶ್ರೀಧರ್ ಬಾಬು ಮಾತನಾಡಿ, ” ಠೇವಣಿದಾರರೊಂದಿಗೆ ನೇರವಾಗಿ ಸಂಪರ್ಕಿಸಿ, ಅವರೊಂದಿಗೆ ಸ್ಪಂದಿಸುವ ಪ್ರಧಾನಿಯವರ ಈ ರೀತಿಯ ನಡುವಳಿಕೆ ದೇಶದ ಎಲ್ಲ ವರ್ಗದ ಜನತೆಯ ಕುರಿತಾಗಿ ಅವರಿಗಿರುವ ವಿಶೇಷ ಕಾಳಜಿ ಅರ್ಥ ಮಾಡಿಕೊಳ್ಳಬಹುದು. ನಮ್ಮ ಠೇವಣಿ ಮೊತ್ತ ಪಡೆದಿದ್ದು ಹಾಗೂ ಪ್ರಧಾನಿ ಶ್ರೀ ನರೇಂದ್ರ ಮೋದಿ ರವರನ್ನು ಭೇಟಿಯಾಗಿ ಅವರೊಂದಿಗೆ ಮಾತನಾಡುವ ಅವಕಾಶ ದೊರೆತಿದ್ದಕ್ಕೆ ನಿಜಕ್ಕೂ ಸಂತಸವಾಗುತ್ತಿದೆ ” ಎಂದು ವಿವರಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next