Advertisement

`ವ್ಯೋಮಕಾಯ ಸಿದ್ಧ ಶ್ರೀ ಅಲ್ಲಮಪ್ರಭು’ಚಿತ್ರ ರಾಜ್ಯಾದ್ಯಂತ ಬೆಳ್ಳಿ ತೆರೆಗೆ

07:56 PM Jun 09, 2022 | Team Udayavani |

ರಬಕವಿ-ಬನಹಟ್ಟಿ : 12ನೇ ಶತಮಾನದ ಶಿವಶರಣರಲ್ಲಿ ಅಲ್ಲಮಪ್ರಭು ಉಚ್ಛಸ್ಥಾನದಲ್ಲಿದ್ದಾರೆ. ಇವರು ಅರಸು ಮನೆತನದಲ್ಲಿಯೇ ಹುಟ್ಟಿ ಬೆಳೆದವರಾದರೂ, ಮನೆ ಬಿಟ್ಟು ತೆರಳಿ ಆಧ್ಯಾತ್ಮ ಸಾಧಕನಾದರೆಂದು ಹೇಳಲಾಗುತ್ತಿದೆ. ಬಸವಣ್ಣನ ಕಲ್ಯಾಣಕ್ಕೆ ಬಂದ ಅಲ್ಲಮಪ್ರಭು ಅಲ್ಲಿ ಅನುಭವ ಮಂಟಪದ ಶೂನ್ಯ ಸಿಂಹಾಸನದ ಅಧ್ಯಕ್ಷನಾಗುತ್ತಾರೆ. ಅಲ್ಲಮನ ವಚನಚದ್ರಿಕೆಯಲ್ಲಿ1294 ವಚನಗಳು ಲಭ್ಯವಾಗಿವೆ. ಅಲ್ಲಮಪ್ರಭು ತಮ್ಮ ಕೊನೆಯ ದಿನಗಳಲ್ಲಿ ಶ್ರೀಶೈಲಕ್ಕೆ ಹೊಗಿ ಅಲ್ಲಿಯ ವನದಲ್ಲಿ ಶಿವೈಕ್ಯನಾದನೆಂದು ಪ್ರತೀತಿ.

Advertisement

ಬಸವಣ್ಣನವರ ಸಮಕಾಲೀನರಾದ ಅಲ್ಲಮಪ್ರಭುವಿನ ವಚನಗಳ ಅಂಕಿತ `ಗುಹೇಶ್ವರ’ ಅಥವಾ `ಗೋಹೇಶ್ವರ’. ಇವರ ವಚನಗಳಲ್ಲಿ ಗಹನವಾದ ಆಧ್ಯಾತ್ಮ ಹಾಗು ತಾತ್ವಿಕ ವಿಚಾರಗಳಿವೆ. ಅಲ್ಲಮರ ಅಧ್ಯಾತ್ಮಿಕ ಅನುಭವಗಳ ಅಸಾಮಾನ್ಯತೆಯಿಂದ ಅವರ ವಚನಗಳನ್ನು ಅರ್ಥಮಾಡಿಕೊಳ್ಳುವದು ಕಷ್ಟ. ಅವರದು ಬಹುಮಟ್ಟಿಗೆ ರೂಪಕ ಭಾಷೆ. ಈ ಭಾಷೆ ಅವರ ವೈಶಿಷ್ಟ್ಯ ವೂ ಹೌದು.

ಇಂತಹ ಕಠಿಣ ಇತಿಹಾಸವನ್ನು ಸರಳವಾಗಿ ಕನ್ನಡದಲ್ಲಿ `ವ್ಯೋಮಕಾಯ ಸಿದ್ಧ ಶ್ರೀ ಅಲ್ಲಮಪ್ರಭು’ ಚಿತ್ರವನ್ನು ಅಮರ ಜ್ಯೋತಿ ಪಿಕ್ಚರ್ ಸಂಸ್ಥೆಯಿಂದ ನಿರ್ಮಾಣಗೊಂಡು, ಶುಕ್ರ ಫಿಲಂಸ್(ಸೋಮಣ್ಣ)ನವರ ಹಂಚಿಕೆಯಲ್ಲಿ ಇಡೀ ರಾಜ್ಯದ ಜನತೆ ತಿರುಗಿ ನೋಡುವಂತೆ ಮಾಡಿರುವದು ವಿಶೇಷ.

ಇತ್ತೀಚಿನ ದಿನಗಳಲ್ಲಿನ ಚಲನಚಿತ್ರಗಳು ರಕ್ತಪಾತ, ರಾಜಕೀಯ ಸೇರಿದಂತೆ ಇಲ್ಲದ ವೈಭವೀಕರಣಗಳಿಗೆ ವಿಭಿನ್ನವಾಗಿ ನೈಜತೆ ಹಾಗು ಆಧ್ಯಾತ್ಮದ ಬುತ್ತಿಯನ್ನು ಹೊತ್ತು ಕನ್ನಡಿಗರ ಮನೆ-ಮನ ಗೆಲ್ಲುವಲ್ಲಿ ಇಂದು ಶುಕ್ರವಾರ ರಾಜ್ಯಾದ್ಯಂತ ತೆರೆ ಕಾಣಲಿದೆ.

ಕಳೆದ ವಾರ ಅಲ್ಲಮಪ್ರಭು ಟ್ರೇಲರ್ ಬಿಡುಗಡೆಯು ಬೆಂಗಳೂರು ಹಾಗು ಉತ್ತರ ಕರ್ನಾಟಕದ ಬಾಗಲಕೋಟೆ ಜಿಲ್ಲೆಯ ತೇರದಾಳ ಪಟ್ಟಣದಿಂದ ಏಕಕಾಲಕ್ಕೆ ಬಿಡುಗಡೆಗೊಳಿಸಲಾಗಿತ್ತು. ಇದೀಗ ಚಲನಚಿತ್ರವು ಯುವಕ-ಯುವತಿಯರನ್ನು ವಿಶೇಷವಾಗಿ ಕೈಬೀಸಿ ಕರೆಯುವಲ್ಲಿ ಕಾರಣವಾಗಿ ಬೆಂಗಳೂರು, ಬಾಗಲಕೋಟೆ ಹಾಗು ಧಾರವಾಡ ಸೇರಿದಂತೆ ಇತರೆ ಜಿಲ್ಲೆಗಳಲ್ಲಿ ಸಾವಿರಾರುಗಟ್ಟಲೆ ಮುಂಗಡ ಟಿಕೆಟ್ ಬುಕಿಂಗ್ ಆಗಿರುವದು ವಿಶೇಷವಾಗಿದೆ.

Advertisement

ಈ ಚಿತ್ರ ನಿರ್ಮಾಣಕ್ಕೆ ಸಾಕಷ್ಟು ವರ್ಷ ಅಭ್ಯಸಿಸಿ ಕಥೆ-ಸಂಭಾಷಣೆ-ನಿರ್ಮಾಣ ಮಾಡುತ್ತಿರುವ ಮಾಧವಾನಂದ ಶೇಗುಣಸಿಯವರಿಗೆ ಶ್ರೀ ಮಹಾವೀರ ಪ್ರಭುರವರು ನಿರ್ಮಾಣಕ್ಕೆ ಜತೆಯಾಗಿದ್ದಾರೆ.

ಚಿತ್ರದ ತಾರಾಬಳಗದಲ್ಲಿ ಸಚೀನ ಸುವರ್ಣ, ನಿನಾಸಂ ಅಶ್ವಥ್. ರಮೇಶ ಪಂಡಿತ್, ಗಣೇಶರಾವ್ ಕೇಸರ್ಕರ್, ನಾರಾಯಣ ಸ್ವಾಮಿ, ವಿಕ್ರಂ ಸೂರಿ, ರಘು ಭಟ್, ಯತೀರಾಜ್, ಶೃಂಗೇರಿ ರಾಮಣ್ಣ, ಶಿವಮೊಗ್ಗ ಭಾಸ್ಕರ್, ಕಾವೇರಿ ಶ್ರೀಧರ್, ಶಿವಕುಮಾರ ಆರಾಧ್ಯ, ಡಾ. ಚಿಕ್ಕಹೆಜ್ಜಾಜಿ ಮಹಾದೇವ, ಸಂದೇಶ ರಾಜ್, ಸಂದೀಪ್ ಮಲಾನಿ, ಗುಬ್ಬಿ ನಟರಾಜ್, ಶಿವಮೊಗ್ಗ ರಾಮಣ್ಣ, ಅವಿನಾಶ ಪಾಟೀಲ್, ರಮಣಾಚಾರ್ಯ, ರಾಧಾ ಕೃಷ್ಣ ರಾವ್, ರಾಜ್ ಉದಯ್, ಸಂಭ್ರಮ ಶ್ರೀ, ಅಮೃತಾ, ವರ್ಷಿಣಿ ಹಾಗು ಇನ್ನಿತರರು.

ಈ ಚಿತ್ರಕ್ಕೆ ಚಿತ್ರರಂಗದಲ್ಲಿ ಹಲವು ಖ್ಯಾತ ನಿರ್ದೇಶಕರ ಜೊತೆ ಕೆಲಸ ಮಾಡಿದ ಅನುಭವಿ ಶರಣ್ ಗದ್ವಾಲ್ ಅವರು ಆಕ್ಷನ್ ಕಟ್ ಹೇಳಿದ್ದಾರೆ. ಕಥೆ-ಚಿತ್ರಕಥೆ-ಪರಿಕಲ್ಪನೆ ಮಾಧವಾನಂದ, ಛಾಯಾಗ್ರಹಣ ಆರ್. ಗಿರಿ ಹಾಗು ರವಿಶಂಕರ್, ಮಾಧವಾನಂದ ಸೇರಿ ಸಂಭಾಷಣೆ ಬರೆದಿದ್ದಾರೆ. ಸಂಗೀತ-ಕುಮಾರ ಈಶ್ವರ, ಸಂಕಲನ-ಬಿ.ಎಸ್. ಕೆಂಪರಾಜು, ಪ್ರಸಾದನ-ರಮೇಶ ಬಾಬು, ವಸ್ತ್ರಾಲಂಕಾರ ಬೆಳ್ಳು ಚುಕ್ಕಿ ವೀರೇಂದ್ರ, ಪ್ರಚಾರ ಕಲೆ-ಮಸ್ತಾನ್, ಪತ್ರಿಕಾ ಸಂಪರ್ಕ-ಎಂ.ಜಿ. ಲಿಂಗರಾಜ್, ಸ್ಥಿರ ಚಿತ್ರಣ-ಪ್ರೇಮ್‌ರಾಜ್ ಮಾಡಿದ್ದಾರೆ.

ವಿಶ್ವದಾದ್ಯಂತ ಕ್ರಾಂತಿ ಮಾಡಿದ `ಅಲ್ಲಮನ ಚಿತ್ರ ತೆರೆ ಕಾಣುವಲ್ಲಿ ಸಿದ್ಧವಾಗಿದ್ದು, ಅಷ್ಟೇ ಕಾತುರದಲ್ಲಿ ಅದರಲ್ಲೂ ಉತ್ತರ ಕರ್ನಾಟಕದ ಜನತೆ ಕಾಯುತ್ತಿರುವದು ಇಂದು ನನಸಾಗಲಿದೆ.ಜ್ಯಾದ್ಯಂತ ಅನೇಕ ಮಠಾಧೀಶರು ಅಲ್ಲಲ್ಲಿ ಚಿತ್ರ ಮಂದಿರಗಳಲ್ಲಿ ಮೊದಲ ಚಿತ್ರ ಪ್ರದರ್ಶನಕ್ಕೆ ಹಾಜರಾಗುವ ಮೂಲಕ ಚಲನಚಿತ್ರ ಸವಿಯುತ್ತಿದ್ದು, ರಾಜ್ಯದ ಬಹುತೇಕ ಚಿತ್ರಮಂದಿರಗಳಲ್ಲಿ `ಅಲ್ಲಮಪ್ರಭು’ವಿನ ಆರ್ಭಟ ಜೋರಾಗಲಿದೆ.

Advertisement

Udayavani is now on Telegram. Click here to join our channel and stay updated with the latest news.

Next