Advertisement

ಮಜ್ಜನ ಮೂರ್ತಿ

02:46 PM Feb 10, 2018 | |

 ಮುಂದಿನವಾರ ಮಹಾಮಸ್ತಕಾಭಿಷೇಕ. ಇದು ಹೇಗೆ ನಡೆಯುತ್ತದೆ, ಅಭಿಷೇಕಕ್ಕೆ ಏನೇನು ಬಳಸುತ್ತಾರೆ, ಎಷ್ಟು ಲೀಟರ್‌ ನೀರು ಬಳಕೆಯಾಗುತ್ತದೆ, ಇಷ್ಟೆಲ್ಲಾ ಆದನಂತರ ಮೂರ್ತಿಗೆ ಅಂದಗೆಡುವುದಿಲ್ಲವೇ? ಇಂಥವೇ  ಕುತೂಹಲ ಭರಿತ ಪ್ರಶ್ನೆಗಳಿಗೆ ಇಲ್ಲಿದೆ ಮಾಹಿತಿ…
    

ಅದು ಐವತ್ತೇಳು ಅಡಿಯ ವಿಗ್ರಹ. ಪಾದದ ಮುಂದೆ ನಿಂತು ತಲೆ ಎತ್ತಿದರೆ ಕಾಣುವುದು ಆಕಾಶದಲ್ಲಿ ನಿಂತ ಶಾಂತಮೂರ್ತಿ ಬಾಹುಬಲಿಯ ದರ್ಶನವಾಗುತ್ತದೆ. ಇದನ್ನು ನೋಡುತ್ತ ನಿಂತವರಿಗೆ ತಾವೆಷ್ಟು ಚಿಕ್ಕವರು ಅನ್ನೋದು ತಿಳಿಯುತ್ತದೆ. ಬಾಹುಬಲಿಯ ಮುಗ್ಧ ನಗು ಕಂಡೊಡನೆ ಮನಸ್ಸು ಪ್ರಫ‌ುಲ್ಲವಾಗುತ್ತದೆ. 

Advertisement

ಮಸ್ತಕಾಭಿಷೇಕಕ್ಕೆ ಎಂದೇ ಜರ್ಮನಿ ತಂತ್ರಜ್ಞಾನದಿಂದ ತಯಾರಾದ ಅಟ್ಟಣಿಗೆ ಅದರ ಬೆನ್ನ ಹಿಂದೆ. ಮಹಾಮಜ್ಜನಕ್ಕೆ ತಯಾರಾಗಿ ನಿಂತ ಶ್ರವಣಬೆಳಗೊಳದ ಬಾಹುಬಲಿಯ ಮುಖದಲ್ಲಿ ವಿಶೇಷ ಕಳೆಯಾಡುತ್ತಿದೆ. ಪ್ರತಿದಿನ ಮಂತ್ರಾರ್ಚನೆಗಳು ಶುರುವಾಗಿವೆ.  ಹನ್ನೆರಡು ವರ್ಷಕ್ಕೊಮ್ಮೆ ನಡೆಯುವ ಈ ದಿವ್ಯಮೂರ್ತಿಯ ಮಸ್ತಕಾಭಿಷೇಕದ ವೈಭವವನ್ನು ಕಣ್ತುಂಬಿ ಕೊಳ್ಳಲು ಇಡೀ ವಿಶ್ವವೇ ತುದಿಗಾಲಲ್ಲಿ ನಿಂತಿದೆ.

  ಮಸ್ತಕಾಭಿಷೇಕ ಹೇಗೆ ನಡೆಯುತ್ತದೆ?
 ಇದೇ ವಿಶೇಷ.  ಕ್ರಿ.ಶ. 1981ರಲ್ಲಿ ವಿರಾಟ್‌ಮೂರ್ತಿಯು ಸ್ಥಾಪನೆಯಾಗಿ ಸಾವಿರ ವರ್ಷಗಳು ತುಂಬಿದ್ದರ ಸವಿನೆನಪಿಗಾಗಿ ಸಹಸ್ರಮಾನೋತ್ಸವವನ್ನು ವೈಭವದಿಂದ ಆಚರಿಸಲಾಯಿತು.  ಶ್ರವಣಬೆಳಗೊಳದ ಶ್ರೀಮಠದ ಪೀಠಾಧಿಪತಿಗಳಾದ  ಶ್ರೀ ಶ್ರೀ ಚಾರುಕೀರ್ತಿಭಟ್ಟಾರಕ ಮಹಾಸ್ವಾಮಿಗಳ ನೇತೃತ್ವದಲ್ಲಿ ನಡೆಯುವ ಮಹಾಮಜ್ಜನದ ಮೊದಲದಿನ 108 ಕಳಶಗಳ ಜಲಾಭಿಷೇಕವಾಗುತ್ತದೆ.  ನಂತರ ಎಳನೀರಿನ ಅಭಿಷೇಕ, ತದನಂತರ ಕ್ಷೀರಾಭಿಷೇಕ.  ಕೊಡಗಳಲ್ಲಿ ಹಾಲನ್ನು ತಂದು ಮಸ್ತಕದ ಮೇಲಿನಿಂದ ಸುರಿಯುತ್ತಿದ್ದರೆ, ಅದು ಕ್ಷೀರ ಸಾಗರದ ಅಲೆಗಳ ರೀತಿ ಪಾದದವರೆಗೂ ಇಳಿಯುವ ದೃಶ್ಯವೇ ವರ್ಣನಾತೀತ.  ಕ್ಷೀರಾಭಿಷೇಕದ ನಂತರ ದೇವನಿಗೆ ಅಕ್ಕಿಹಿಟ್ಟಿನ ಅಭಿಷೇಕ.  ಶ್ವೇತವರ್ಣದ ಅಕ್ಕಿಹಿಟ್ಟನ್ನು ಬಾಹುಬಲಿಯ ಮೇಲೆ ಸುರಿದಾಗ ಆ ಮೂರ್ತಿಯನ್ನು ಮೋಡವು ಆವರಿಸಿದಂತೆ ಗೋಚರವಾಗುತ್ತದೆ.  ನಂತರ ಅರಿಶಿನದ ನೀರಿನಿಂದ ಮಾಡುವ ಅಭಿಷೇಕದಿಂದ  ಹಳದಿಬಣ್ಣದ ಸ್ವಾಮಿಯಾಗುತ್ತಾನೆ ಬಾಹುಬಲಿ. ಈ ಸಂದರ್ಭದಲ್ಲಿ  ಮೈಮೇಲೆ ಸೂರ್ಯನ ರಶ್ಮಿ ಧುಮ್ಮಿಕ್ಕಿ ಬಂದು, ಬಾಹುಬಲಿಯ ಮೈ ಮೇಲೆ ಹರಡಿಕೊಂಡಾಗ  ಸ್ವರ್ಣದ ಮೂರ್ತಿಯಂತೆ ಕಾಣುತ್ತದೆ.  ಕಶಾಯದ ಅಭಿಷೇಕ, ನಾಲ್ಕು ಕೊಡಗಳ ಚತುಷೊRàಣಾಭಿಷೇಕವಾಗುತ್ತದೆ.  ತದನಂತರ, ಬಿಳಿಗಂಧ, ಚಂದನ, ಅಷ್ಟಗಂಧ, ಕೇಸರಿ ದಳಗಳ ಅಭಿಷೇಕವಾಗುತ್ತದೆ.   ಚಂದನವನ್ನು ಸಿಂಪಡಿಸಿದಾಗ ಗೊಮ್ಮಟನು ಕೆಂಬಣ್ಣದಲ್ಲಿ ಹೊಳೆಯುತ್ತಾನೆ.  ಕೇಸರಿಯಲ್ಲಿ ಇಡೀ ವಾತಾವರಣವೇ ಸುವಾಸನಾಭರಿತವಾಗುತ್ತದೆ. ಬೆಳ್ಳಿಹೂವುಗಳು, ಚಿನ್ನದ ಹೂಗಳು, ನವರತ್ನಗಳ ಅಭಿಷೇಕದ ನಂತರ ದೇಶವಿದೇಶಗಳಿಂದ ತಂದ ಪುಷ್ಪ ಸ್ನಾನದ ಮೂಲಕ ಆ ದಿನದ ಮಸ್ತಕಾಭಿಷೇಕ ಮುಗಿಯುತ್ತದೆ.  ಈ ಪುಷ್ಪವೃಷ್ಟಿಗೂ, ಪುರಾಣಕ್ಕೂ ಸಂಬಂಧವಿದೆ.  ಬಾಹುಬಲಿಗೆ ಮೋಕ್ಷ ಕಲ್ಯಾಣವಾದಾಗ ಇಂದ್ರನೂ ದೇವಲೋಕದಿಂ¨ಪುಷ್ಪ ವೃಷ್ಟಿ ಸುರಿಸಿದ್ದನಂತೆ. ಅದರ ನೆನಪಿಗೆ ಪುಷ್ಪವೃಷ್ಟಿ ಮಾಡುತ್ತಾರೆ. 

  ಏನೇನು ಬಳಸುತ್ತಾರೆ?
  ಪ್ರತಿದಿನ ಬೆಳಗ್ಗೆ 10.30ಕ್ಕೆ ಜಲಾಭಿಷೇಕ, ಪಂಚಾಮೃತ (ಎಳೆನೀರು), ಇಕ್ಷುರಸ ( ಕಬ್ಬಿನ ಹಾಲು), ಕ್ಷೀರ, ಶ್ವೇತ ಕಲ್ಕ ಚೂರ್ಣ, ಅರಿಶಿಣ, ಕಷಾಯ ( ವಿವಿಧ ಗಿಡಮೂಲಿಕೆ ಪುಡಿಯ ನೀರು) ಶ್ರೀಗಂಧ, ಅಷ್ಟಗಂಧ ( ವನಸ್ಪತಿ ಕರ್ಪೂರ, ಲವಂಗ, ಏಲಕ್ಕಿ ಇತ್ಯಾದಿ) ಕೇಸರಿ, ರಜತ ಪುಷ್ಪಗಳ ಅಭಿಷೇಕ  ನಡೆಯುತ್ತದೆ. ಈ ಅಭಿಷೇಕದ ಸಾಮಗ್ರಿಗಳಿಗೆ ಮಿತಿ ಇಲ್ಲ. ಆಯಾಯ ಕಾಲ, ಸಂದರ್ಭಕ್ಕೆ ಲಭ್ಯವಾಗುವ ಪ್ರಮಾಣದ ಮೇಲೆ ಅಭಿಷೇಕಕ್ಕೆ ವಸ್ತುಗಳನ್ನು ಆಯ್ಕೆಮಾಡಿಳ್ಳುತ್ತಾರೆ. ದೇವರಿಗೆ ಅಭಿಷೇಕ ಮಾಡುವಾಗ ಯಾವುದೇ ವಸ್ತುವನ್ನು ಅಳತೆಯಾಗಲೀ, ಲೆಕ್ಕವಾಗಲೀ ಮಾಡಬಾರದು ಎಂಬ ನಂಬಿಕೆಯೂ ಇದೆ. ಅರಿಷಿಣವನ್ನು ಅಂಗಡಿಯಿಂದ ತರುವುದಿಲ್ಲ. ಬದಲಾಗಿ ಅರಿಷಿಣ ಕೊಂಬನ್ನು ತಂದು, ಕೆಲ ದಿನಗಳ ಮೊದಲು ಮಂತ್ರಾರ್ಚನೆ ಜೊತೆಗೆ ಪುಡಿ ಮಾಡಿಟ್ಟಿರುತ್ತಾರೆ. ಅದನ್ನು ನೀರಿಗೆ ಬೆರೆಸಿ ಅಭಿಷೇಕ ಮಾಡುತ್ತಾರೆ. 

 ಕಳಶಗಳ ಹರಾಜು
  ಕೊಡಗಳ (ಕಳಶ) ಮೂಲಕ ಮೂರ್ತಿಗೆ ಮಜ್ಜನ ಮಾಡಿಸುವುದು ಮಸ್ತಕಾಭಿಷೇಕದಲ್ಲಿ ಕಂಡುಬರುವ ಮತ್ತೂಂದು ಪ್ರಮುಖ ಆಚರಣೆ. ಒಂದೊಂದು ಕೊಡವೂ ಹೆಚ್ಚಾ ಕಮ್ಮಿ 15ರಿಂದ 20ಲೀಟರ್‌ ಸಾಮರ್ಥಯದ್ದಾಗಿರುತ್ತದೆ.  ಮೊದಲ ದಿನ ಸುಮಾರು 500 ಕೊಡಗಳು, ಎರಡನೆ ದಿನ ಸಾವಿರ…ಹೀಗೆ ದಿನದಿಂದ ದಿನಕ್ಕೆ ಕಳಸಗಳು ಹೆಚ್ಚುತ್ತಾ ಹೋಗುತ್ತದೆ.   ಕಳಶಗಳನ್ನು  ಹರಾಜಿನ ಮೂಲಕ ಭಕ್ತರಿಗೆ ಹಂಚಲಾಗುತ್ತದೆ.  ಪ್ರಥಮ ಕಳಶಕ್ಕೆ ಭಾರೀ ಮೌಲ್ಯ. ಕೋಟಿ ರೂ. ಮೀರಿದ ಮೌಲ್ಯಕ್ಕೆ ಅದನ್ನು ಖರೀಸುವರಿದ್ದಾರೆ. ಅಭಿಷೇಕದ ವೇಳೆ ನೂಕು ನುಗ್ಗಲು ತಪ್ಪಿಸಲು ಹಾಗೂ ಧಾರ್ಮಿಕ, ಜನಕಲ್ಯಾಣ  ಕಾರ್ಯಕ್ರಮಗಳಿಗೆ ಆರ್ಥಿಕ ಸಂಪನ್ಮೂಲ ಕ್ರೋಡೀಕರಣದ ಉದ್ದೇಶದಿಂದಲೂ ಹೀಗೆ ಕಳಶಗಳನ್ನು ವಿಲೇವಾರಿ ಮಾಡಲಾಗುತ್ತದೆಯಂತೆ. 

Advertisement

 ನೀರು ಸಂಗ್ರಹ
ದಿನಕ್ಕೆ ಹೆಚ್ಚಾ ಕಡಿಮೆ  ಸಾವಿರ ಲೀಟರ್‌ಗೂ ಅಧಿಕ ನೀರು ಬಳಕೆಯಾಗುತ್ತದೆ.  ಅಭಿಷೇಕದ  ನಂತರ ಹೊರ ಬೀಳುವ ನೀರನ್ನು ಗಂಧೋಧಕ ( ಪವಿತ್ರ ಜಲ ) ಎಂದು ಭಕ್ತರು ಸಂಗ್ರಹಿಸಿಟ್ಟುಕೊಳ್ಳುತ್ತಾರೆ.  ಈ ಪವಿತ್ರಜಲವನ್ನು ಮೈಮೇಲೆ ಪ್ರೋಕ್ಷಣೆ ಮಾಡಿಕೊಳ್ಳುವುದರಿಂದ ಇಷ್ಟಾರ್ಥ ಸಿದ್ಧಿಯಾಗುತ್ತದೆ ಎಂಬ ನಂಬಿಕೆಯಿದೆ.  ಕುಷ್ಠರೋಗಿಯಾಗಿದ್ದ ಶ್ರೀಪಾಲ ರಾಜನಿಗೆ ಆತನ ಧರ್ಮ ಪತ್ನಿ ಮೈನಾಸುಂದರಿ ಗಂಧೋಧಕವನ್ನು ಪ್ರೋಕ್ಷಣೆ ಮಾಡಿದ್ದರಿಂದ ಕುಷ್ಠರೋಗ ನಿವಾರಣೆಯಾಯಿತು. ಗಂಧೋಧಕದಿಂದ  700 ಮಂದಿ  ಕುಷ್ಠರೋಗದಿಂದ ವಿಮುಕ್ತಿ ಹೊಂದಿದ್ದರು ಎಂಬ ಪ್ರತೀತಿ ಇದೆ.  ಹಾಗಾಗಿ ಶ್ರೀ ಬಾಹುಬಲಿ ಮಹಾಮಸ್ತಕಾಭಿಷೇಕದ ಎಲ್ಲಾ ಗಂಧೋಧಕವನ್ನೂ ಭಕ್ತರು ಕೊಂಡೊಯ್ಯುವರು ಎಂದು ಮಹಾಮಸ್ತಕಾಭಿಷೇಕದಲ್ಲಿ ಪಾಲ್ಗೊಳ್ಳುತ್ತಾ ಬಂದಿರುವ ಚಂದ್ರಕಾಂತ ಪಂಡಿತರು ಹೇಳುತ್ತಾರೆ. 

  ಸಾವಿರ ಮೆಟ್ಟಿಲು
  ಬಾಹುಬಲಿ ಮೂರ್ತಿ ಬೆಟ್ಟದ ಮೇಲೆ ಇದೆ. ಅದನ್ನು ತಲುಪಲು ಸಾವಿರ ಮೆಟ್ಟಿಲು ಹತ್ತಬೇಕು. ಇದಾದ ನಂತರ ಅಟ್ಟಣಿಗೆ ಅತ್ತಿ ಅಭಿಷೇಕ ಮಾಡಬೇಕು. ಮೂರ್ತಿಯ ಎಡ, ಬಲ ಭಾಗದಿಂದ ಮೂರ್ತಿಯ ತಲೆಯ ಹಿಂಬದಿಯಲ್ಲಿ ನಿರ್ಮಿಸಿರುವ ಪ್ಲಾಟ್‌ಫಾರ್ಮ್ ತಲುಪಬಹುದು.  ಅಲ್ಲಿ ನಿಂತು ಅಭಿಷೇಕ ಮಾಡಬೇಕು. 

 ಕಣಶಿಲೆ
 ಐವತ್ತೇಳು ಅಡಿಯ ಬಾಹುಬಲಿ ಕಣಶಿಲೆ (ಗ್ರಾನೈಟ್‌)ಯಿಂದ ನಿರ್ಮಿತವಾಗಿದೆ. ಸತತ ಮಜ್ಜನದ ನಂತರ ಶಿಲೆಯನ್ನು ನೈಸರ್ಗಿಕ ವಸ್ತುಗಳನ್ನು ಬಳಸಿ ಶುದ್ಧಿ ಮಾಡುತ್ತಾರೆ. ಸಾವಿರ ವರ್ಷಗಳಿಂದಲೂ ಬಿಸಿಲು, ಮಳೆ, ಗಾಳಿಗೆ ಮೈ ಒಡ್ಡಿನಿಂತಿರುವ ಮೂರ್ತಿಗೆ ಯಾವುದೂ ಬಾಧಕವಾಗುವುದಿಲ್ಲ. ದೈವಕ್ಕೆ ಯಾವ ರೀತಿಯ ತೊಂದರೆಯೂ ಆಗದು ಎನ್ನುವುದು ದೈವ ಲೀಲೆ ಎನ್ನುವ ನಂಬಿಕೆ ಇದೆ. 

 ಹೀಗೊಂದು ಕಥೆ..
   ಗಂಗದೊರೆ ರಾಚಮಲ್ಲನ ಮಹಾಮಂತ್ರಿಯಾದ ಚಾವುಂಡರಾಯನು ತನ್ನ ತಾಯಿಯ ಮನೋಭಿಲಾಷೆಯಂತೆ ಪೌದನಾಪುರದಲ್ಲಿರುವ ಬಾಹುಬಲಿಯ ವಿಗ್ರಹದಂತೆ ಶ್ರವಣಬೆಳಗೊಳದಲ್ಲಿ( ಕ್ರಿ.ಶ. 981ರಲ್ಲಿ) ಈ ಮನೋಹರ ಗೊಮ್ಮಟಮೂರ್ತಿಯನ್ನು ಪ್ರತಿಷ್ಠಾಪಿಸಿದ.  ಲೋಕಕಲ್ಯಾಣಾರ್ಥವಾಗಿ ನಡೆಯುವ ಮಹಾಮಸ್ತಕಾಭಿಷೇಕದ ಪ್ರಥಮ ಅಭಿಷೇಕ ಚಾವುಂಡರಾಯನಿಂದಲೇ ನೆರವೇರಿತು.  ಪಿರಿಯಾಪಟ್ಟಣದ ದೊಡ್ಡಯ್ಯ, ದೇವಚಂದ್ರನ ರಾಜಾವಳಿ ಕಥಾಸಾರ ಹಾಗೂ ಅನೇಕ ಕವಿಗಳು ಚಾವುಂಡರಾಯನು ನಡೆಸಿದ ಉತ್ಸವದ ವೈಭವದ ಬಗ್ಗೆ ಉಲ್ಲೇಖೀಸಿದ್ದಾರೆ.  ಚಾವುಂಡರಾಯನು ಎಳನೀರು, ಜಲ, ಕ್ಷೀರ, ಮುಂತಾದ ಪಂಚಾಮೃತಗಳ ಅಭಿಷೇಕವನ್ನು ಮಾಡಿದರೂ ದೇವನು ಸಂಪೂರ್ಣವಾಗಿ ನೆನೆಯಲಿಲ್ಲವಂತೆ.  ಚಿಂತಾಕ್ರಾಂತನಾದ ರಾಯನು ಊರಿನವರನ್ನೆಲ್ಲಾ ಕರೆಸಲಾಗಿ,  ಅವರುಗಳೆಲ್ಲಾ ತಮ್ಮ ಶಕಾöನುಸಾರ ಅಭಿಷೇಕ ಮಾಡಿಸಿದರೂ ಪೂರ್ಣಾಭಿಷೇಕವಾಗಲಿಲ್ಲ!  ಕೂಷ್ಮಾಂಡಿನಿಯಕ್ಷಿಯು (ಅಂಬಿಕಾ ಯಕ್ಷಿ$) ವೃದ್ಧೆಯ ರೂಪದಲ್ಲಿ ಆಗಮಿಸಿ ಒಂದು ಸಣ್ಣ ಕುಡಿಕೆಯಲ್ಲಿ ಕ್ಷೀರವನ್ನು ತಂದು ಅಭಿಷೇಕ ಮಾಡಿದ ಕೂಡಲೇ ಗೊಮ್ಮಟನಿಗೆ ಪೂರ್ಣಾಭಿಷೇಕವಾಗಿ ಹಾಲಿನಹೊಳೆ ಹರಿದು,  ಬೆಟ್ಟದ ಕೆಳಗಿನ ಕೊಳ ತುಂಬಿತಂತೆ.  ನಂತರ  ಹಾಲು ಬೆಟ್ಟದಿಂದ ಹರಿದು ಬಂತು ಎಂಬ ಕಾರಣದಿಂದಲೇ ಊರಿಗೆ ಬೆಳ್ಗೊಳ ಎಂಬ ಹೆಸರು ಬಂತಂತೆ. ಮುಂದೆ ಅದೇ ಹೆಸರು ಬೆಳಗೊಳ ಎಂದಾಯಿತಂತೆ. ಕವಿ ದೇವಚಂದ್ರನು ತನ್ನ ರಾಜಾವಳಿ ಕಥಾಸಾರದಲ್ಲಿ ಶ್ರವಣಬೆಳಗೊಳದ ಸ್ಥಳಪುರಾಣವನ್ನು ಹೀಗೆ ವಿವರಿಸಿದ್ದಾನೆ.

Advertisement

Udayavani is now on Telegram. Click here to join our channel and stay updated with the latest news.

Next