ಬೆಂಗಳೂರು: ಚಿನ್ನದ ವ್ಯಾಪಾರಿಯ ಮನೆಗೆ ನುಗ್ಗಿ ಮಹಿಳೆಯರಿಗೆ ನಕಲಿ ಗನ್ ತೋರಿಸಿ ಚಿನ್ನಾಭರಣ ದರೋಡೆ ಮಾಡಿದ್ದ ಮೂವರು ಅಂತಾರಾಜ್ಯ ಸುಲಿಗೆಕೋರರನ್ನು ಯಶವಂತ ಪುರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಉತ್ತರ ಪ್ರದೇಶದ ಅಮಿತ್(28), ರಾಜಸ್ಥಾನದ ಮನೋಹರ್ ಸಿಂಗ್(27) ಮತ್ತು ರಮೇಶ್(32) ಬಂಧಿತರು. ತಲೆ ಮರೆಸಿಕೊಂಡಿರುವ ಮತ್ತೊಬ್ಬನಿಗಾಗಿ ಶೋಧ ಮುಂದುವರಿದಿದೆ. ಆರೋಪಿಗಳಿಂದ ಒಂದು ಚಿನ್ನದ ಓಲೆ, ಕೃತ್ಯಕ್ಕೆ ಬಳಸಿದ್ದ ನಕಲಿ ಗನ್ ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ಹೇಳಿದರು.
ಯಶವಂತಪುರ ನಿವಾಸಿ, ಚಿನ್ನಾಭರಣ ವ್ಯಾಪಾರಿ ಕಮಲ್ ಸಿಂಗ್ ಮಾ.15ರಂದು ಕಾರ್ಯ ನಿಮಿತ್ತ ಹೊರಗಡೆ ಹೋಗಿ ದ್ದರು. ಮನೆಯಲ್ಲಿ ಮಗಳು, ಪತ್ನಿ ಮತ್ತು ತಾಯಿ ಇದ್ದರು. ಮಧ್ಯಾಹ್ನ 1.20ರ ಸುಮಾರಿಗೆ ಮನೆಗೆ ನುಗ್ಗಿದ ಮೂವರು ಆರೋಪಿಗಳು, ಬಾಗಿಲು ಬಳಿ ಲೈಟರ್ ಗನ್ ತೋರಿಸಿ ಕೂಗಾಟ ನಡೆಸಿ, ಹಣ, ಚಿನ್ನಾಭರಣ ಕೊಡುವಂತೆ ಬೆದರಿಸಿದ್ದಾರೆ. ಇದರಿಂದ ಹೆದರಿದ ಮಹಿಳೆ ಮೈಮೇಲಿದ್ದ 15 ಗ್ರಾಂ ಚಿನ್ನ ಕೊಟ್ಟಿದ್ದಾರೆ. ಅಷ್ಟಕ್ಕೆ ಸುಮ್ಮನಾಗದ ದರೋಡೆಕೋರರು, ಅಜ್ಜಿ ಬಳಿಯಿದ್ದ ಮೊಬೈಲ್ ಕಿತ್ತುಕೊಳ್ಳಲು ಯತ್ನಿಸಿದ್ದಾರೆ.
ಆಗ ತಪ್ಪಿಸಿಕೊಳ್ಳಲು ಯತ್ನಿಸಿ ಜೋರಾಗಿ ಕೂಗಾಟ ನಡೆಸಿದರಿಂದ ಸ್ಥಳೀ ಯರು ಬರಬಹುದು ಎಂದು ದರೋಡೆಕೋರರು ಮನೆಯಿಂದ ಕಾಲ್ಕಿತ್ತಿದ್ದರು. ಈ ಸಂಬಂಧ ಕಮಲ್ ಸಿಂಗ್ ಪುತ್ರಿ ದೂರು ನೀಡಿದ್ದು, ಆರೋಪಿಗಳ ಪತ್ತೆಗಾಗಿ ವಿಶೇಷ ತಂಡ ರಚಿಸಲಾಗಿತ್ತು. ನಂತರ ಈ ತಂಡ ಆರೋಪಿಗಳನ್ನು ನೆರೆ ರಾಜ್ಯಗಳಲ್ಲಿ ಬಂಧಿಸಿ, ಬೆಂಗಳೂರಿಗೆ ಕರೆ ತಂದಿದೆ.
ಆರೋಪಿಗಳ ವಿಚಾರಣೆಯಲ್ಲಿ 15 ದಿನಗಳ ಹಿಂದಷ್ಟೇ ಅಮಿತ್ ಬೆಂಗಳೂರಿಗೆ ಬಂದು ಸ್ನೇಹಿತರ ಜತೆ ವಾಸವಾಗಿದ್ದ. ಎಲೆಕ್ಟ್ರಾನಿಕ್ ಸಿಟಿ ಯಲ್ಲಿರುವ ಹಾರ್ಡ್ವೇರ್ ಶಾಪ್ನಲ್ಲಿ ಕೆಲಸ ಮಾಡಿಕೊಂಡಿದ್ದಾನೆ. ನಂತರ ಇತರೆ ಇಬ್ಬರು ಆರೋಪಿಗಳು, ನಗರದಲ್ಲಿ ಸುತ್ತಾಡಿ, 10ಗಂಟೆ ನಂತರ ಮಹಿಳೆ ಯರೇ ಇರುವ ಮನೆಗಳನ್ನು ಪತ್ತೆ ಹಚ್ಚುತ್ತಿದ್ದರು. ಬಳಿಕ ಆ ನಿರ್ದಿಷ್ಟ ಮನೆಗಳಿಗೆ ನುಗ್ಗಿ ದರೋಡೆ ಮಾಡಿ ಪರಾರಿಯಾಗುತ್ತಿದ್ದರು.
ಆರೋಪಿಗಳ ಪೈಕಿ ಮನೋಹರ್ ಸಿಂಗ್ 2019ರಲ್ಲಿ ಗುಜರಾತ್ನಲ್ಲಿ ಮನೆಗೆ ನುಗ್ಗಿ ದರೋಡೆ ಮಾಡಿದ್ದ ಪ್ರಕರಣದಲ್ಲಿ ಬಂಧನಕ್ಕೊಳಗಾಗಿದ್ದ. ಈತನ ಸಲಹೆ ಮೇರೆಗೆ ಇತರೆ ಇಬ್ಬರು ಆರೋಪಿಗಳು ಕೃತ್ಯಕ್ಕೆ ಸಹಕಾರ ನೀಡುತ್ತಿದ್ದರು ಎಂದು ಪೊಲೀಸರು ಹೇಳಿದರು.
ಯಶವಂತಪುರ ಉಪ ವಿಭಾಗದ ಎಸಿಪಿ ಅರುಣ್ ನಾಗೇಗೌಡ, ಯಶವಂತಪುರ ಠಾಣೆ ಇನ್ಸ್ಪೆಕ್ಟರ್ ಸುರೇಶ್ ನೇತೃತ್ವ ದ ತಂಡ ಆರೋಪಿಗಳನ್ನು ಬಂಧಿಸಿದೆ.