Advertisement

ರುಂಡದೊಂದಿಗೆ ಪರಾರಿಯಾದವನಿಗೆ ಗುಂಡು

11:52 AM Sep 17, 2018 | Team Udayavani |

ಕಲಬುರಗಿ: ತಾಲೂಕಿನ ಆಲಗೂಡ ಬಳಿ ವ್ಯಕ್ತಿಯೊಬ್ಬನನ್ನು ಕೊಲೆ ಮಾಡಿ ಆತನ ಕತ್ತು ಕತ್ತರಿಸಿಕೊಂಡು ಪರಾರಿಯಾಗಿದ್ದ ಆರೋಪಿ ಕೆರೆ ಭೋಸಗಾ ಬಳಿ ಇರುವ ಮಾಹಿತಿ ಅರಿತ ಪೊಲೀಸರು ರವಿವಾರ ಆತನ ಬೆನ್ನುಹತ್ತಿ ಕಾಲಿಗೆ ಗುಂಡು ಹಾರಿಸಿ, ಆಸ್ಪತ್ರೆಗೆ ದಾಖಲಿಸಿದ್ದಾರೆ.

Advertisement

ಸೆ.10 ರಂದು ಆಲಗೂಡ ಬಳಿ ಸಿಧ್ದೋಜಿ ಎನ್ನುವಾತನನ್ನು ಹಣಕಾಸಿನ ವಿಷಯಕ್ಕೆ ಸಂಬಂಧಿಸಿದಂತೆ ಶಿವಾಜಿ ನಗರದ ನಾಗರಾಜ ಅಲಿಯಾಸ್‌ ನಾಗ್ಯಾ ಎನ್ನುವಾತ ತನ್ನ ಸಹಚರರೊಂದಿಗೆ ಸೇರಿ ಕೊಲೆ ಮಾಡಿ ರುಂಡ ಕತ್ತರಿಸಿ ಪರಾರಿಯಾಗಿದ್ದರು.

ಈ ಬಗ್ಗೆ ಸೆ.11 ರಂದು ಚೌಕ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಶನಿವಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಗಣೇಶ ಹಾಗೂ ಮಹಾಂತೇಶ ಎನ್ನುವನನ್ನು ಬಂಧಿಸಿ ವಿಚಾರಣೆ ನಡೆಸಿದಾಗ , ಪ್ರಮುಖ ಆರೋಪಿ ನಾಗರಾಜ ಕೆರೆ ಭೋಸಗಾ ಬಳಿ ಅವಿತಿರುವ ಮಾಹಿತಿ ಲಭ್ಯವಾಗಿತ್ತು.

ಎಸ್‌ಪಿ, ಹೆಚ್ಚುವರಿ ಎಸ್‌ಪಿಬಿ ಉಪವಿಭಾಗದ ಡಿಎಸ್‌ಪಿ ಮಾರ್ಗದರ್ಶನದಲ್ಲಿ ಚೌಕ್‌ ಪಿಐ ಸಂಗಮನಾಥ ಹಿರೇಮಠ ಹಾಗೂ ಸಿಬ್ಬಂದಿ ರಮೇಶ, ಸಿದ್ರಾಮಯ್ಯ, ಆಸೀಫ್‌, ಮೋಹನ ಎನ್ನುವರು ಸೇರಿ ನಾಗರಾಜನನ್ನು ಬಂಧಿಸಲು ಹೋದಾಗ ನಾಗರಾಜ ಪೊಲೀಸ್‌ ಸಿಬ್ಬಂದಿ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಪರಾರಿಯಾಗಲು ಯತ್ನಿಸಿದ್ದ. ಈ ವೇಳೆ ಆತನ ಕಾಲಿಗೆ ಗುಂಡು ಹಾರಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಕಾರ್ಯಾಚರಣೆ ಸಂದರ್ಭದಲ್ಲಿ ಗಾಯಗೊಂಡಿರುವ ಪೊಲೀಸ್‌ ಸಿಬ್ಬಂದಿ ರಮೇಶ ಹಾಗೂ ಸಿದ್ರಾಮಯ್ಯ ಅವರನ್ನು ನಗರದ ಯುನೈಟೆಡ್‌ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next