Advertisement

ಶಿರೂರು ಮಠದ ಲಕ್ಷ್ಮೀವರ ತೀರ್ಥ ಶ್ರೀಪಾದರು ವಿಧಿವಶ Watch

09:03 AM Jul 19, 2018 | |

ಉಡುಪಿಯ ಅಷ್ಠಮಠಗಳಲ್ಲಿ ಒಂದಾಗಿರುವ ಶಿರೂರು ಮಠದ 30ನೇ ಯತಿವರ್ಯರಾದ ಶ್ರೀ ಶ್ರೀ ಲಕ್ಷ್ಮೀವರತೀರ್ಥ ಸ್ವಾಮೀಜಿಯವರು ತೀವ್ರ ಅನಾರೋಗ್ಯದಿಂದ ಇಂದು ಬೆಳಿಗ್ಗೆ ವಿಧಿವಶರಾದರು. ಅನಾರೋಗ್ಯದ ನಿಮಿತ್ತ ಮಣಿಪಾಲದ ಕೆಎಂಸಿ ಆಸ್ಪತ್ರೆಗೆ ದಾಖಲಾಗಿದ್ದ ಸ್ವಾಮೀಜಿಯವರು ಚಿಕಿತ್ಸೆಗೆ ಸ್ಪಂದಿಸದೆ ವಿಧಿವಶರಾದರು ಎಂದು ಆಸ್ಪತ್ರೆಯ ಮೂಲಗಳಿಂದ ತಿಳಿದುಬಂದಿದೆ. ಕಳೆದ ಕೆಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಸ್ವಾಮೀಜಿಯವರು ಮಂಗಳವಾರ ರಾತ್ರಿ ಫ‌ುಡ್‌ ಪಾಯ್ಸನ್‌ ಕಾರಣದಿಂದ ಮಣಿಪಾಲದ ಆಸ್ಪತ್ರೆಗೆ ದಾಖಲಾಗಿದ್ದರು.

Advertisement

ಶ್ರೀಗಳಿಗೆ ವಿಷಪ್ರಾಸನ ಮಾಡಲಾಯ್ತೇ…??
ಶಿರೂರು ಶ್ರೀಗಳ ದಿಢೀರ್ ಅನಾರೋಗ್ಯ ಮತ್ತು ನಿಧನ ಮಠದ ಭಕ್ತರಲ್ಲಿ ಹಾಗೂ ಜನಸಾಮಾನ್ಯರಲ್ಲಿ ಈ ಒಂದು ಶಂಕೆ ಇದೀಗ ವ್ಯಕ್ತವಾಗಿದೆ. ಇದಕ್ಕೆ ಪುಷ್ಠಿ ನೀಡಿದ್ದು ಕೆ.ಎಂ.ಸಿ. ಆಸ್ಪತ್ರೆ, ಮಣಿಪಾಲ ಇಲ್ಲಿನ ಅಧೀಕ್ಷಕ ಡಾ. ಅವಿನಾಶ್ ಶೆಟ್ಟಿ ಅವರ ಹೇಳಿಕೆ. ಮಾಧ್ಯಮದವರ ಜೊತೆಯಲ್ಲಿ ಮಾತನಾಡಿದ ಅವಿನಾಶ್ ಶೆಟ್ಟಿ ಅವರು, ಶಿರೂರು ಸ್ವಾಮೀಜಿಯವರ ಆಹಾರದಲ್ಲಿ ವಿಷಪ್ರಾಸನವಾಗಿರುವ ಸಾದ್ಯತೆಗಳಿವೆ ಎಂಬ ಮಾತನ್ನು ಹೇಳಿದ್ದಾರೆ. ಸ್ವಾಮೀಜಿಯವರ ಪಾರ್ಥೀವ ಶರೀರವನ್ನು ಇದೀಗ ಮರಣೋತ್ತರ ಪರೀಕ್ಷೆಗೆ ಒಳಪಡಿಸಲಾಗುತ್ತಿದೆ, ಇದರ ವರದಿ ಬಂದ ಬಳಿಕವಷ್ಟೇ ಸತ್ಯಾಸತ್ಯತೆ ಹೊರಬರಲಿದೆ.

ಇತ್ತೀಚೆಗೆ ಕರ್ನಾಟಕ ವಿಧಾನಸಭೆ ಚುನಾವಣೆಯ ಸಂದರ್ಭದಲ್ಲಿ ಶ್ರೀಗಳವರು ಉಡುಪಿ ವಿಧಾನಸಭಾ ಕ್ಷೇತ್ರದಿಂದ ಭಾರತೀಯ ಜನತಾ ಪಕ್ಷದ ಟಿಕೆಟ್ ನಿಂದ ಸ್ಪರ್ಧಿಸಲು ಬಯಸಿದ್ದರು. ಆದರೆ ಆ ಪಕ್ಷದಿಂದ ಟಿಕೆಟ್ ಸಿಗದೇ ಇದ್ದಾಗ ಸ್ವತಂತ್ರ್ಯ ಅಭ್ಯರ್ಥಿಯಾಗಿ ಉಮೇದುವಾರಿಕೆಯನ್ನು ಬಯಸಿ ನಾಮಪತ್ರ ಸಲ್ಲಿಸಿದ್ದರು. ಆದರೆ ಬಳಿಕ ನಾಮಪತ್ರ ವಾಪಾಸು ಪಡೆದುಕೊಂಡು ಸ್ಪರ್ಧೆಯಿಂದ ಹಿಂದೆ ಸರಿದಿದ್ದರು. ಆದರೆ ಶ್ರೀಗಳ ಈ ನಡೆ ರಾಜ್ಯಾದ್ಯಂತ ಸಂಚಲವನ್ನು ಸೃಷ್ಟಿಸಿತ್ತು.

ವೇಷಧಾರಿಗಳ ನೆಚ್ಚನ ಶ್ರೀ ಶೀರೂರು ಸ್ವಾಮಿಗಳು…
ಶ್ರೀ ಕೃಷ್ಣ ಜನ್ಮಾಷ್ಠಮಿ ಮತ್ತು ವಿಟ್ಲಪಿಂಡಿ ಉತ್ಸವಗಳು ಉಡುಪಿಯ ನಾಡಹಬ್ಬವೆಂದೇ ಜನಮನ್ನಣೆ ಗಳಿಸಿವೆ. ಈ ಸಂದರ್ಭದಲ್ಲಿ ಪ್ರತೀವರ್ಷ ಉಡುಪಿ ನಗರದಲ್ಲಿ ಮತ್ತು ರಥಬೀದಿ ಪರಿಸರದಲ್ಲಿ ವಿವಿಧ ವೇಷಗಳು ಮೇಳೈಸುತ್ತಿದ್ದವು. ಈ ಸಂದರ್ಭದಲ್ಲಿ ರಥಬೀದಿಯ ವಿವಿಧ ಕಡೆಗಳಲ್ಲಿ ವೇಷಧಾರಿಗಳ ಪ್ರದರ್ಶನ ಮತ್ತು ಪುರಸ್ಕಾರಗಳು ನಡೆಯುತ್ತಿರುತ್ತದೆ. ಇದರಲ್ಲಿ ಯಾವಾಗಲೂ ಶಿರೂರು ಮಠದ ಕಡೆಯಿಂದ ನಡೆಯುತ್ತಿದ್ದ ವೇಷಗಳ ಪ್ರದರ್ಶನ ಜನಾಕರ್ಷಣೆಯ ಕೇಂದ್ರವಾಗಿರುತ್ತಿತ್ತು. ಈ ಸಂದರ್ಭದಲ್ಲಿ ಹಿರಿ ಕಿರಿಯ ವೇಷಧಾರಿಗಳೆಂಬ ಬೇಧವನ್ನು ತೋರದೆ ಎಲ್ಲರಿಗೂ ತಮ್ಮ ವೇದಿಕೆಯಲ್ಲಿ ವೇಷಗಳ ಪ್ರದರ್ಶನಕ್ಕೆ ಅವಕಾಶ ನೀಡಿ ಸೂಕ್ತ ನಗದು ಪುರಸ್ಕಾರವನ್ನು ತಮ್ಮ ಕೈಯಾರೆ ನೀಡುತ್ತಿದ್ದರು. ಸುಮಾರು 5-6 ಗಂಟೆಗಳ ಕಾಲ ವೇದಿಕೆಯಲ್ಲೇ ಕುಳಿತು ವೇಷಧಾರಿಗಳ ಪ್ರದರ್ಶನವನ್ನು ಕಂಡು ಮಗುವಿನಂತೆ ಸಂತೋಷಪಟ್ಟು ಅವರಿಗೆ ಬಹುಮಾನ ನೀಡಿ ಕಳುಹಿಸುತ್ತಿದ್ದ ವಿಶಿಷ್ಠ ಗುಣ ಶ್ರೀಗಳದ್ದಾಗಿತ್ತು.

ಉಡುಪಿಯ ಅಷ್ಠಮಠಾಧೀಶರಲ್ಲಿಯೇ ವಿಶಿಷ್ಠವಾಗಿದ್ದ ವ್ಯಕ್ತಿತ್ವವನ್ನು ಹೊಂದಿದ್ದ ಶಿರೂರು ಮಠದ ಲಕ್ಷ್ಮೀವರತೀರ್ಥ ಶ್ರೀಪಾದರು ಬಹುಮುಖ ವ್ಯಕ್ತಿತ್ವವನ್ನು ಹೊಂದಿದವರಾಗಿದ್ದರು. ಉತ್ತಮ ಈಜುಪಟುವಾಗಿದ್ದ ಶ್ರೀಗಳವರು ಈ ಹಿಂದೆ ಗೋಪಾಲ ಖಾರ್ವಿ ಅವರು ಮಲ್ಪೆ ಸಮುದ್ರದಲ್ಲಿ ಗಿನ್ನೆಸ್ ರೆಕಾರ್ಡ್ ನಿರ್ಮಿಸುವ ಉದ್ದೇಶದಿಂದ ಮ್ಯಾರಥಾನ್ ಈಜಿನ ಸಂದರ್ಭದಲ್ಲಿ ಶ್ರೀಗಳವರೂ ಸಹ ಕೆಲವು ಕಿಲೋಮೀಟರುಗಳಷ್ಟು ದೂರ ಸಮುದ್ರದಲ್ಲಿ ಈಜಿ ತಾವೊಬ್ಬ ಉತ್ತಮ ಈಜುಪಟು ಎಂಬುದನ್ನು ನಿರೂಪಿಸಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next