Advertisement

ಮಾದಪ್ಪನ ಬೆಟ್ಟದಲ್ಲಿ ಶಿವರಾತ್ರಿ ಉತ್ಸವ ವೈಭವ

09:49 PM Feb 21, 2020 | Lakshmi GovindaRaj |

ಹನೂರು: ಮಹಾಶಿವರಾತ್ರಿ ಪ್ರಯುಕ್ತ ಶ್ರೀ ಕ್ಷೇತ್ರ ಮಲೆ ಮಹದೇಶ್ವರ ಬೆಟ್ಟದಲ್ಲಿ ದೇವರಿಗೆ ಬಿಲ್ವಾರ್ಚನೆ, ವಿಭೂತಿ ಅರ್ಚನೆ, ಅಭಿಷೇಕ ಪೂಜಾ ಕೈಂಕರ್ಯಗಳು ವಿಧಿವಿಧಾನಗಳೊಂದಿಗೆ ಜರುಗಿದವು. ಮಹಾಶಿವರಾತ್ರಿ ಹಿನ್ನೆಲೆ ಕಳೆದ ಮೂರ್‍ನಾಲ್ಕು ದಿನಗಳಿಂದ ಪಾದಯಾತ್ರೆ ಮತ್ತು ವಾಹನಗಳ ಮೂಲಕ ಮಾದಯ್ಯನಗಿರಿ ತಲುಪಿರುವ ಲಕ್ಷಾಂತರ ಭಕ್ತರು ಪುಣ್ಯಸ್ನಾನ ಮಾಡಿ ಸರದಿ ಸಾಲಿನಲ್ಲಿ ನಿಂತು ಮಹದೇಶ್ವರನ ದರ್ಶನ ಪಡೆದು ಧನ್ಯತಾಭಾವ ಮೆರೆದರು.

Advertisement

ಬಳಿಕ ಭಕ್ತಾದಿಗಳು ಬಸವವಾಹನ, ಹುಲಿವಾಹನ, ರುದ್ರಾಕ್ಷಿ ಮಂಟಪ ಉತ್ಸವಗಳಲ್ಲಿ ಭಾಗವಹಿಸಿ ಹರಕೆ ಸಲ್ಲಿಸಿದರು. ಈ ವೇಳೆ ಭಕ್ತಾದಿಗಳು ತಮ್ಮ ಜಮೀನುಗಳಲ್ಲಿ ಬೆಳೆದಿದ್ದ ಧಾನ್ಯಗಳು, ಚಿಲ್ಲರೆ ನಾಣ್ಯಗಳನ್ನು ಎಸೆದು ಭಕ್ತಿ ಸಮರ್ಪಿಸಿದರು. ಕೆಲ ಯುವಕರು ವಾದ್ಯಮೇಳಕ್ಕೆ ತಕ್ಕಂತೆ ಕುಣಿತ ಹಾಕಿ ಸಂಭ್ರಮಿಸಿದರು.

ತರಕಾರಿ, ಹಣ್ಣುಗಳಿಂದ ಸಿಂಗಾರ: ಮಹಾ ಶಿವರಾತ್ರಿ ಹಿನ್ನೆಲೆ ಮಹದೇಶ್ವರ ಬೆಟ್ಟದ ಗರ್ಭಗುಡಿ ಮತ್ತು ಗರ್ಭಾಂಕಣವನ್ನು ವಿಶೇಷವಾಗಿ ತರಕಾರಿ ಮತ್ತು ವಿವಿಧ ಬಗೆಯ ಹಣ್ಣುಗಳಿಂದ ವಿಶೇಷವಾಗಿ ಅಲಂಕರಿಸಲಾಗಿತ್ತು. ಅಲ್ಲದೇ ದೇವಾಲಯದ ಮುಖ್ಯಗೋಪುರ, ರಾಜಗೋಪುರ, ಪ್ರವೇಶ ದ್ವಾರ ಅಳಮಬಾಡಿ ಬಸವೇಶ್ವರ, ವಾಣಿಜ್ಯ ಸಂಕೀರ್ಣಗಳು, ಪ್ರವೇಶ ದ್ವಾರ ಇನ್ನಿತರ ಕಡೆಗಳಲ್ಲಿ ಝಗಮಗಿಸುವ ವಿದ್ಯುತ್‌ ದೀಪಾಲಂಕಾರ ಮಾಡಲಾಗಿತ್ತು.

ನಿರಂತರ ದರ್ಶನ ವ್ಯವಸ್ಥೆ: ಮಹಾ ಶಿವರಾತ್ರಿ ಅಂಗವಾಗಿ ಶ್ರೀ ಕ್ಷೇತ್ರದಲ್ಲಿ ನಿರಂತರ ದರ್ಶನ ವ್ಯವಸ್ಥೆ ಕಲ್ಪಿಸಲಾಗಿದೆ. ಪ್ರತಿದಿನ ರಾತ್ರಿ 10.30 ರಿಂದ ಬೆಳಗ್ಗಿನ ಜಾವ 3.30ರವರೆಗೆ ದೇವಾಲಯವನ್ನು ಬಂದ್‌ ಮಾಡಲಾಗುತಿತ್ತು. ಆದರೆ, ಶುಕ್ರವಾರ ಮಹಾಶಿವರಾತ್ರಿ ಹಿನ್ನೆಲೆ ದೇವಾಲಯವನ್ನು ಬಂದ್‌ ಮಾಡದೆ ನಿರಂತರ ದರ್ಶನ ವ್ಯವಸ್ಥೆ ಕಲ್ಪಿಸಲಾಗಿದೆ.

ಶಿವರಾತ್ರಿ ಜಾಗರಣೆ: ಮಹಾಶಿವರಾತ್ರಿ ಪ್ರಯುಕ್ತ ಶುಕ್ರವಾರ ಇಡೀ ರಾತ್ರಿ ಶ್ರೀಕ್ಷೇತ್ರದಲ್ಲಿ ಭಾರೀ ಸಂಖ್ಯೆಯಲ್ಲಿ ಭಕ್ತರು ಜಾಗರಣೆ ಮಾಡಿದರು. ಇದಕ್ಕಾಗಿ ಸಕಲ ಸಿದ್ಧತೆ ಕೈಗೊಳ್ಳಲಾಗಿತ್ತು. ಪ್ರತಿನಿತ್ಯ ಜರುಗುವ ತ್ರಿಕಾಲ ಪೂಜೆಗಳಿಗಿಂತ ಮಧ್ಯರಾತ್ರಿ 12 ಗಂಟೆಗೆ ಒಂದು ಹೆಚ್ಚುವರಿ ಅಭಿಷೇಕ ಪೂಜೆ ಏರ್ಪಡಿಸಲಾಗಿತ್ತು.

Advertisement

ಶಿವರಾತ್ರಿ ಜಾಗರಣೆಯ ಪೂಜಾ ಕೈಂಕರ್ಯಗಳು ಬೇಡಗಂಪಣ ಪದ್ದತಿಯಂತೆ ಜರುಗಿದವು. ಅಲ್ಲದೇ ಶಿವರಾತ್ರಿ ಜಾಗರಣೆಯಲ್ಲಿ ಪಾಲ್ಗೊಳ್ಳುವ ಭಕ್ತಾದಿಗಳಿಗೆ ಮನರಂಜನೆ ನೀಡುವ ಸಲುವಾಗಿ ಹರಿಕಥೆ ಇನ್ನಿತರ ಸಾಂಸ್ಕೃತಿಕ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು.

* ವಿನೋದ್‌ ಎನ್‌

Advertisement

Udayavani is now on Telegram. Click here to join our channel and stay updated with the latest news.

Next