Advertisement

ಶಿವಾಜಿಯ ಗೂಢಚಾರಿಗಳ ಜಾಡು ಹಿಡಿದು…

11:09 AM Mar 08, 2020 | Lakshmi GovindaRaj |

ಮನುಷ್ಯನ ಬಹುದೊಡ್ಡ ಉದ್ದೇಶ, ತನ್ನ ಜೀವನದಲ್ಲಿ ಉತ್ತಮ ಕಾಯಕವನ್ನು ಹಿಡಿಯುವುದು. ಆದರೆ, ಮತ್ತೆ ಕೆಲವರ ಹಾದಿಯೇ ಬೇರೆ. ಅವರು, ವಂಶಪಾರಂಪರ್ಯವಾಗಿ ಬಂದ ಕುಲಕಸುಬನ್ನೇ ಉಸಿರಾಡುವ ಮನೋಭಾವದವರು. ಹೀಗೆ, ಕುಲಕಸುಬಿನ ಸಾಂಸ್ಕೃತಿಕ ದೋಣಿಯಲ್ಲಿ ಪಯಣಿಸುತ್ತಿರುವ ಒಂದು ಸಮುದಾಯವೇ “ಗೊಂದಲಿಗರು’. ಬಳ್ಳಾರಿ ಜಿಲ್ಲೆ ಕೂಡ್ಲಿಗಿ ತಾಲೂಕಿನ ಗಜಾಪುರದಲ್ಲಿ ಗೊಂದಲಿಗರ ಬದುಕು ಹಬ್ಬಿಕೊಂಡಿದೆ.

Advertisement

ಆಧುನಿಕ ಮಾಯಾಲೋಕದಲ್ಲಿ ಮುಳುಗಿರುವ ಜನರಿಗೆ, ಇತಿಹಾಸ ಹಾಗೂ ಜಾನಪದ ಕತೆಗಳನ್ನು ಉಣಬಡಿಸುತ್ತಿರುವ ಗೊಂದಲಿಗರು ಮೂಲತಃ ಮಹಾರಾಷ್ಟ್ರದವರು. ಶಿವಾಜಿ ಆಸ್ಥಾನದಲ್ಲಿ ಗುಪ್ತಚರದಳದಂಥ ಕಾರ್ಯಗಳಲ್ಲಿ ತಲ್ಲೀನರಾಗಿದ್ದರು. ಉತ್ತಮವಾದ ಮಾತಿನ ಶೈಲಿಯಲ್ಲಿ ಕರಗತವಾಗಿರುವ ಇವರು ಆ ದಿನಗಳಲ್ಲಿ ಕತೆಗಳನ್ನು ಹೇಳುತ್ತಾ ಗೂಢಚರ್ಯೆ ಮಾಡುತ್ತಿದ್ದರು ಎಂದು ಹೇಳಲಾಗುತ್ತದೆ. ಶಿವಾಜಿ ಸಾಮ್ರಾಜ್ಯ ಪತನವಾದ ನಂತರ ತಮ್ಮ ವೃತ್ತಿಯನ್ನು ಬದಲಾಯಿಸಿಕೊಂಡು, ಇವರು ಕರ್ನಾಟಕಕ್ಕೆ ಬಂದರು ಎನ್ನುವುದು ಇತಿಹಾಸ ತಜ್ಞರ ಅಭಿಪ್ರಾಯ.

ಈಗಲೂ ಇವರ ಮನೆಮಾತು ಮರಾಠಿ. ತುಳುಜಾಭವಾನಿ, ಅಂಬಾಭವಾನಿಯ ದೇವತೆಗಳ ಆರಾಧಕರು. ದೇವರ ಮುಂದೆ ಗೊಂದಲ ಮಾಡುವುದು ಇಷ್ಟದ ಕಾಯಕ. “ಗೊಂದಲ’ವೆಂದರೆ ದೇವರನ್ನು ಆರಾಧಿಸುವುದು ಎಂದರ್ಥ. ಇದೊಂದು ರೀತಿಯ ಪೂಜಾ ವಿಧಾನವಾಗಿದ್ದು, ಇದಕ್ಕೆ “ಗೊಂದಲ ಹಾಕುವುದು’ ಎಂದೇ ಕರೆಯುತ್ತಾರೆ. ಇದೇ ಇವರ ಕುಲಕಸುಬಾಗಿ ಮಾರ್ಪಟ್ಟಿದೆ. ಹಳ್ಳಿ ಹಳ್ಳಿಗಳಿಗೂ ತೆರಳಿ ಕರ್ಚಿ, ದೋತ್ರದೊಂದಿಗೆ ತಲೆಗೊಂದು ರುಮಾಲು ಧರಿಸಿ, ಪುಟ್ಟ ತಬಲ, ಕಂಚಿನತಾಳ ಹಾಗೂ ಚೌಟಿಯನ್ನು (ತುಂತುನಿ) ಬಳಸಿ, ಜನರ ಮುಂದೆ ಗೊಂದಲ ಪ್ರಸ್ತುತಪಡಿಸುತ್ತಾರೆ.

ಇವರ ಬಾಯಿಯಲ್ಲಿ ಇತಿಹಾಸ ಹಾಡಾಗುತ್ತದೆ, ಕಥೆಯಾಗುತ್ತದೆ. ಇವರ ವರ್ಣನೆಯ ಇತಿಹಾಸದಲ್ಲಿ ವೀರರಸ ಮೈದುಂಬಿರುತ್ತದೆ. ಸಂದಭೋಚಿತ ಹಾಡುಗಳನ್ನು ಹಾಡುತ್ತಾರೆ. ರಾಜರ ಕತೆಗಳನ್ನು ಪುಂಖಾನುಪುಂಖವಾಗಿ ಹೇಳುವ ಇವರು, ಬನ್ನಿ ಮಹಾಕಾಳಿ, ವೀರ ಪರಾಕ್ರಮಿ ಮಹಾರಾಜ, ಬಾಳ ಭಿಕ್ಷುಕ ಮಹಾರಾಜ, ಶೀಲಾವತಿ ಮಹಾರಾಣಿ, ಅರಣ್ಯಕುಮಾರನ ಕತೆಗಳನ್ನು ಹೇಳುವುದರಲ್ಲಿ ನಿಸ್ಸೀಮರು. ಬಂಜೆಯರ ಕತೆಗಳು, ಮಲತಾಯಿಯ ಮತ್ಸರ, ಸವತಿಯರ ಕಾಟದಂಥ ಉಪಕತೆಗಳನ್ನು ಹೇಳಿ ಸಹೋದರ ಭಾವನೆ, ಸಂಬಂಧಗಳ ಮೌಲ್ಯವನ್ನು ಅರಿಯುವಂತೆ ತಿಳಿ ಹೇಳುತ್ತಾರೆ.

ಲೋಕದ ಅಂಕುಡೊಂಕುಗಳನ್ನು ತಮ್ಮ ಕಥನ ಶೈಲಿಯ ಮುಖಾಂತರ ತಿದ್ದಲು ಯತ್ನಿಸುತ್ತಾರೆ. ಇದಲ್ಲದೆ, ಮಳೆಗಾಲದಲ್ಲಿ ಸರಿಯಾಗಿ ಮಳೆ ಬಾರದೆ ಕ್ಷಾಮ ತಲೆದೋರಿದಾಗ, ಗ್ರಾಮಗಳಲ್ಲಿ ರಾತ್ರಿಯಿಡೀ ಗೊಂದಲಿಗರ ಮೇಳವನ್ನು ಏರ್ಪಡಿಸಿ, ಮಳೆ ಕರೆಯುವ ಸಂಪ್ರದಾಯ ಇಂದಿಗೂ ಇದೆ. ಗೊಂದಲಿಗರು ಹೆಚ್ಚೇನೂ ಓದಿದವರಲ್ಲ. ಆದರೆ, ಇವರ ಶಬ್ದಸಂಪತ್ತು ಅಪಾರ. “ಹೆಚ್ಚು ಓದಬೇಕು ಎನ್ನುವ ಹಂಬಲವಿತ್ತು. ಆದರೆ, ಬಡತನ ಅದಕ್ಕೆ ಅವಕಾಶ ಕೊಡಲಿಲ್ಲ. ಕುಲಕಸುಬು ನಮ್ಮ ಹೊಟ್ಟೆ ತುಂಬಿಸುತ್ತಿದೆ’ ಎಂದು ಆಕಾಶವಾಣಿ ಕಲಾವಿದರಾದ, ಇದೇ ಸಮುದಾಯದ ಕುಬೇರಪ್ಪ, ದುರುಗಪ್ಪ ಹೇಳಿದರು.

Advertisement

ಗೊಂದಲಿಗರ ಈ ದಿನಗಳ ಚಿತ್ರ: ಅಲೆಮಾರಿ ಜೀವನ ನಡೆಸುತ್ತಾ ಸಾಗುವ ಇವರಲ್ಲಿ ಅನೇಕರು ವೃತ್ತಿಯಿಂದ ವಿಮುಖರಾಗಿ, ಮೀನು ಹಿಡಿಯುವುದು, ಜಾತ್ರೆಗಳಲ್ಲಿ ಆಟದ ಸಾಮಾನು, ಪಾತ್ರೆಗಳನ್ನು ಮಾರುವ ಕಾರ್ಯಗಳಲ್ಲಿ ತೊಡಗುತ್ತಿದ್ದಾರೆ. ಇವರ ಜಾನಪದ ಶ್ರೀಮಂತಿಕೆಯನ್ನು ಸಮಾಜ ಅರಿಯದೇ, ಗೊಂದಲಿಗರ ಬದುಕು ಗೊಂದಲಕ್ಕೆ ತುತ್ತಾಗುತ್ತಿದೆ.

* ಪ್ರದೀಪ ಎಂ.ಬಿ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next