Advertisement

ಗೆದ್ದ ಖುಷಿಯಲ್ಲಿ ಶಿವಾಜಿ ಸುರತ್ಕಲ್‌-2: ಮುಂದಿನ ಭಾಗಕ್ಕೆ ತಯಾರಿ

06:11 PM Apr 21, 2023 | Team Udayavani |

ಕಳೆದ ವಾರ ತೆರೆಕಂಡ “ಶಿವಾಜಿ ಸುರತ್ಕಲ್‌-2′ ಸಿನಿಮಾಕ್ಕೆ ಪ್ರೇಕ್ಷಕರು ಮತ್ತು ವಿಮರ್ಶಕರಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಸಿನಿಮಾ ಬಿಡುಗಡೆಯಾದ ಬಹುತೇಕ ಎಲ್ಲ ಕೇಂದ್ರಗಳಲ್ಲಿ ತುಂಬಿದ ಪ್ರದರ್ಶನ ಕಾಣುತ್ತಿದೆ. ದಿನದಿಂದ ದಿನಕ್ಕೆ ಸಿನಿಮಾಕ್ಕೆ ಪ್ರೇಕ್ಷಕರ ಸಂಖ್ಯೆ ಮತ್ತು ಬಾಕ್ಸಾಫೀಸ್‌ ಗಳಿಕೆ ಎರಡೂ ಏರಿಕೆಯಾಗುತ್ತಿದ್ದು, ಚಿತ್ರತಂಡದ ಮುಖದಲ್ಲಿ ಮಂದಹಾಸ ಮೂಡಿಸಿದೆ.

Advertisement

ಇದೇ ಖುಷಿಯನ್ನು ಹಂಚಿಕೊಳ್ಳುವ ಸಲುವಾಗಿ ಮಾಧ್ಯಮಗಳ ಮುಂದೆ ಬಂದಿದ್ದ ಚಿತ್ರತಂಡ, “ಶಿವಾಜಿ ಸುರತ್ಕಲ್‌-2′ ಬಿಡುಗಡೆಯ ನಂತರದ ಬೆಳವಣಿಗೆಗಳ ಬಗ್ಗೆ ಮಾತನಾಡಿತು. ಮೊದಲಿಗೆ ಸಿನಿಮಾಕ್ಕೆ ಸಿಗುತ್ತಿರುವ ಪ್ರತಿಕ್ರಿಯೆ ಬಗ್ಗೆ ಮಾತಿಗಿಳಿದ ನಿರ್ಮಾಪಕ ಅನೂಪ್‌, “ಮೊದಲ ದಿನದಿಂದಲೇ ಸಿನಿಮಾಕ್ಕೆ ಒಳ್ಳೆಯ ಓಪನಿಂಗ್‌ ಸಿಕ್ಕಿದೆ. ಸಿನಿಮಾ ಬಿಡುಗಡೆಯಾದ ಎಲ್ಲ ಕೇಂದ್ರಗಳಲ್ಲೂ ಆಡಿಯನ್ಸ್‌ ಮತ್ತು ಥಿಯೇಟರ್‌ನವರ ಕಡೆಯಿಂದ ನಮ್ಮ ನಿರೀಕ್ಷೆಗೂ ಮೀರಿದ ರೆಸ್ಪಾನ್ಸ್‌ ಸಿಗುತ್ತಿದೆ. ಬಾಕ್ಸಾಫೀಸ್‌ ಕಲೆಕ್ಷನ್‌ ಕೂಡ ಏರಿಕೆಯಾಗುತ್ತಿದೆ. ಸಿನಿಮಾದ ಓಟಿಟಿ, ಡಬ್ಬಿಂಗ್‌ ಮತ್ತು ರೀಮೇಕ್‌ ರೈಟ್ಸ್‌ಗೆ ಸಾಕಷ್ಟು ಡಿಮ್ಯಾಂಡ್‌ ಬಂದಿದೆ’ ಎಂದರು.

“ಸಿನಿಮಾ ಎಲ್ಲ ವರ್ಗದ ಆಡಿಯನ್ಸ್‌ಗೂ ಇಷ್ಟವಾಗುತ್ತಿದೆ. ಸಿನಿಮಾ ನೋಡಿದ ಪ್ರತಿಯೊಬ್ಬರೂ “ಶಿವಾಜಿ’ಯ ಬಗ್ಗೆ ಮಾತನಾಡುತ್ತಿದ್ದಾರೆ. ಸಸ್ಪೆನ್ಸ್‌ ಮತ್ತು ಸೆಂಟಿಮೆಂಟ್‌ ಸಿನಿಮಾದಲ್ಲಿ ವರ್ಕೌಟ್‌ ಆಗಿದೆ. ಸಿನಿಮಾಕ್ಕೆ ಸಿಗುತ್ತಿರುವ ರೆಸ್ಪಾನ್ಸ್‌ ನೋಡಿ “ಶಿವಾಜಿ ಸುರತ್ಕಲ್‌-3′ ಮಾಡುವ ಯೋಚನೆ ಕೂಡ ಬಂದಿದೆ’ ಎನ್ನುವುದು ನಿರ್ದೇಶಕ ಆಕಾಶ್‌ ಶ್ರೀವತ್ಸ ಮಾತು.

ನಟ ರಮೇಶ್‌ ಅರವಿಂದ್‌ ಮಾತನಾಡಿ, “ನಾನು ಇಂಜಿನಿಯರಿಂಗ್‌ ಮಾಡುವಾಗ ನನ್ನ ಸ್ನೇಹಿತರ ಜೊತೆ ಸಿನಿಮಾ ನೋಡುತ್ತಿದ್ದೆ. ಬಹಳ ವರ್ಷಗಳ ನಂತರ ಅದೇ ಸ್ನೇಹಿತರ ಜೊತೆ ಮತ್ತೂಮ್ಮೆ “ಶಿವಾಜಿ ಸುರತ್ಕಲ್‌-2′ ಸಿನಿಮಾ ನೋಡುವಂತಾ ಯಿತು. ಸ್ನೇಹಿತರು, ಫ್ಯಾಮಿಲಿ ಎಲ್ಲರೂ ಸಿನಿಮಾ ನೋಡಿ ತುಂಬ ಒಳ್ಳೆಯ ಮಾತುಗಳನ್ನಾಡು ತ್ತಿದ್ದಾರೆ. ಒಂದು ಒಳ್ಳೆಯ ಸಿನಿಮಾಕ್ಕೆ ಇಷ್ಟೊಂದು ದೊಡ್ಡ ಮಟ್ಟದಲ್ಲಿ ರೆಸ್ಪಾನ್ಸ್‌ ಸಿಗುತ್ತಿರುವುದು ನಮಗೆ ಖುಷಿತಂದಿದೆ’ ಎಂದರು.

ನಟಿಯರಾದ ಮೇಘನಾ ಗಾಂವ್ಕರ್‌, ರಾಧಿಕಾ ನಾರಾಯಣ್‌, ಸಂಗೀತಾ ಶೃಂಗೇರಿ “ಶಿವಾಜಿ ಸುರತ್ಕಲ್‌-2′ ಸಿನಿಮಾಕ್ಕೆ ಸಿಗುತ್ತಿರುವ ಪ್ರತಿಕ್ರಿಯೆಗಳ ಬಗ್ಗೆ ಮಾತನಾಡಿದರು. ನಟರಾದ ವಿನಾಯಕ ಜೋಶಿ, ರಘು ರಾಮನಕೊಪ್ಪ, ಬೇಬಿ ಆರಾಧ್ಯ, ವಿದ್ಯಾಮೂರ್ತಿ ಸೇರಿದಂತೆ ಚಿತ್ರದ ಬಹುತೇಕ ಕಲಾವಿದರು ಮತ್ತು ತಂತ್ರಜ್ಞರು ಈ ವೇಳೆ ಹಾಜರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next