Advertisement

ತ್ಯಾಗ-ಸೇವಾ ಮನೋಭಾವ ಅಳವಡಿಸಿಕೊಳ್ಳಿ

06:41 AM Jan 27, 2019 | Team Udayavani |

ಅಕ್ಕಿಆಲೂರು: ಭಾರತದಲ್ಲಿ ಜನಿಸಿದ ಪ್ರತಿ ಪ್ರಜೆಗಳು ತ್ಯಾಗ ಮತ್ತು ಸೇವಾ ಮನೋಭಾವದಿಂದ ಬದುಕಿದರೆ ದೇಶ ಜಗತ್ತಿಗೆ ಜಗದ್ಗುರುವಾಗುವುದರಲ್ಲಿ ಸಂಶಯವಿಲ್ಲ ಎಂದು ವಿರಕ್ತಮಠದ ಶಿವಬಸವ ಶ್ರೀಗಳು ಹೇಳಿದರು.

Advertisement

ಪಟ್ಟಣದ ನರಸಿಂಗರಾವ್‌ ದೇಸಾಯಿ ಸಂಯುಕ್ತ ಪಪೂ ಕಾಲೇಜಿನ ಆವರಣದಲ್ಲಿ 70ನೇ ಗಣರಾಜ್ಯೋತ್ಸವದ ಪ್ರಯುಕ್ತ ಗ್ರಾಮ ಪಂಚಾಯತಿ ಆಶ್ರಯದಲ್ಲಿ ಏರ್ಪಡಿಸಲಾಗಿದ್ದ ಸಾರ್ವಜನಿಕ ಧ್ವಜಾರೋಹಣ ಸಮಾರಂಭದ ಸಾನ್ನಿಧ್ಯವಹಿಸಿ ಆಶೀರ್ವಚನ ನೀಡಿದರು.

ಪ್ರತಿಯೊಬ್ಬರೂ ವೈಯಕ್ತಿಕ ಹಿತಾಸಕ್ತಿಗಾಗಿ ಮಾತ್ರ ಶ್ರಮಿಸದೇ ಭಾರತದ ಮೂಲ ಆಚರಣೆಗಳನ್ನು ಅರಿತು, ಪ್ರಾಮಾಣಿಕ ಸೇವೆ ಸಲ್ಲಿಸಿದರೆ ಭಾರತ ಜಾಗತಿಕಮಟ್ಟದಲ್ಲಿ ಸ್ವಾವಲಂಬಿಯಾಗಿ ಮುನ್ನಡೆಯಬಲ್ಲದು. ವಿಶ್ವದಲ್ಲಿ ಅತೀ ಹೆಚ್ಚು ಯುವಜನಾಂಗ ಹೊಂದಿದ ನಮ್ಮ ದೇಶದಲ್ಲಿ ಬಹುತೇಕ ಯುವಕರಿಗೆ ಭಾರತದ ಸಂವಿಧಾನದ ಮಹತ್ವವೇ ತಿಳಿಯದಿರುವುದು ಬೇಸರದ ಸಂಗತಿ ಎಂದರು.

ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಗ್ರಾಪಂ ಅಧ್ಯಕ್ಷ ಪ್ರದೀಪ ಶೇಷಗಿರಿ, ದೇಶವನ್ನು ಮುನ್ನಡೆಸುವ ಮಹತ್ತರ ಜವಾಬ್ದಾರಿ ಯುವಶಕ್ತಿಯದಾಗಿದ್ದು, ಎಲ್ಲ ರಂಗಗಳಲ್ಲಿ ಉತ್ತಮ ಜ್ಞಾನ ಸಂಪಾದಿಸಿ ದೇಶದ ಆಸ್ತಿಯಾಗಿ ಹೊರಹೊಮ್ಮಬೇಕಾದ ಅಗತ್ಯತೆ ಇಂದಿನ ವಿದ್ಯಾರ್ಥಿಗಳಿಗಿದೆ ಎಂದರು.

ನಂತರ ಬ್ಯಾಡಗಿ ತಾಲೂಕಿನ ಬುಡಪನಹಳ್ಳಿಯ ಸರ್ಕಾರಿ ಪ್ರೌಢ ಶಾಲೆ ವಿದ್ಯಾರ್ಥಿಗಳು ಪ್ರದರ್ಶಿಸಿದ ಕಾರ್ಗಿಲ್‌ ವಿಜಯೋತ್ಸವದ ರೂಪಕ ನೆರೆದಿದ್ದ ಸಾವಿರಾರು ಜನರನ್ನು ಮಂತ್ರಮುಗ್ದಗೊಳಿಸಿತು. ದೇಶ ಕಾಯುವ ಯೋಧರು ವೀರ ಮರಣವನ್ನಪ್ಪಿದಾಗ ಅವರ ಅಂತ್ಯಕ್ರಿಯೆ ನೆರವೇರಿಸುವ ದೃಶ್ಯವಂತೂ ನೆರೆದವರನ್ನು ಭಾವನಾತ್ಮವಾಗಿ ಕಟ್ಟಿ ಹಾಕಿತು. ಶಿರಸಿಯ ವಿಶೇಷ ಚೇತನ ಕಲಾವಿದರಿಂದ ನಡೆದ ಸಂಗೀತ ಕಾರ್ಯಕ್ರಮದಲ್ಲಿ ದೇಶಭಕ್ತಿಗಳನ್ನು ಹಾಡಲಾಯಿತು.

Advertisement

ಇದಕ್ಕೂ ಮುನ್ನ ಪಟ್ಟಣದ 20ಕ್ಕೂ ಹೆಚ್ಚು ಶಾಲಾ-ಕಾಲೇಜು ವಿದ್ಯಾರ್ಥಿಗಳಿಂದ ನಡೆದ ಧ್ವಜವಂದನೆ ಪರೇಡ್‌, ಆಕರ್ಷಕ ಪಥಸಂಚಲನ, ನೇತಾಜಿ ಸುಭಾಸಚಂದ್ರ ಭೋಸ ಯುವಕ ಮಂಡಳದ ಬೈಕ್‌ ಪರೇಡ್‌ ಗಣರಾಜ್ಯೋತ್ಸವದ ಕಳೆ ಹೆಚ್ಚಿಸಿದವು.

ಜಿಪಂ ಸದಸ್ಯ ಟಾಕನಗೌಡ ಪಾಟೀಲ, ಗ್ರಾಪಂ ಉಪಾಧ್ಯಕ್ಷೆ ಸರೋಜಾ ಪಾಟೀಲ, ಬಸನಗೌಡ ಪಾಟೀಲ, ಎಚ್.ಬಿ.ಉಮಾಪತಿ, ಪಿಡಿಒ ಪಿ.ಎಸ್‌.ಬಿಜ್ಜೂರ, ಪ್ರತಾಪ ಎನ್‌.ಎಂ., ಶಿವಕುಮಾರ ದೇಶಮುಖ, ಷಣ್ಮುಖಪ್ಪ ಮುಚ್ಚಂಡಿ, ಬಸವರಾಜ ಕೋರಿ, ನಾಗರಾಜ ಪಾವಲಿ, ಕೃಷ್ಣ ಈಳಗೇರ, ವಿಶ್ವನಾಥ ಭಿಕ್ಷಾವರ್ತಿಮಠ, ಫಕ್ಕೀರಗೌಡ ಪಾಟೀಲ ಸೇರಿದಂತೆ ಗ್ರಾಪಂ ಪದಾಧಿಕಾರಿಗಳು, ಶಾಲಾ-ಕಾಲೇಜು ಸಿಬ್ಬಂದಿವರ್ಗದವರು, ಸಾರ್ವಜನಿಕರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next