Advertisement

ಶಿರಾಡಿ ಘಾಟ್‌: ರಸ್ತೆಯಷ್ಟೇ ಅಲ್ಲ, ಬದುಕಿಗೂ ಬೇಕಿದೆ ರಿಪೇರಿ

12:30 AM Sep 11, 2018 | |

3-4 ಕಡೆ ರಸ್ತೆ ಕುಸಿತವಾಗಿರುವುದನ್ನು ಹಾಗೂ ಇನ್ನು ಕೆಲವು ಕಡೆ ಗುಡ್ಡಗಳು ಕುಸಿದಿರುವುದನ್ನು ನೋಡಿದೆ. ಆದರೆ, ಬೆಳಗ್ಗೆ  8 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ಶಿರಾಡಿ ಘಾಟ್‌ನಲ್ಲಿ ಓಡಾಡಿದ ನನಗೆ ಒಂದು ಕಡೆಯೂ ಕಾಮಗಾರಿ ಮಾಡುವ  ಕೆಲಸಗಾರರು, ಮೇಲ್ವಿಚಾರಕರು ಕಾಣಲೇ ಇಲ್ಲ. ಬದಲಿಗೆ ಅಲ್ಲಲ್ಲಿ ಕಂಡದ್ದು, “ಕಾಮಗಾರಿಯು ಪ್ರಗತಿಯಲ್ಲಿದೆ, ವಾಹನಗಳನ್ನು ನಿಧಾನವಾಗಿ ಚಲಿಸಿ’ ಎಂಬ ನಾಮಫ‌ಲಕಗಳು ಮಾತ್ರ. 

Advertisement

ಕಳೆದ ಒಂದು ತಿಂಗಳಿನಲ್ಲಿ ಎರಡು ವಿಶಿಷ್ಟ ಅನುಭವಗಳು ನನ್ನದಾದವು. ಆಗಸ್ಟ್‌ 23ರಿಂದ 26ರವರೆಗೆ ನಾಲ್ಕು ದಿನಗಳ ಕಾಲ ಕೊಡಗಿನಲ್ಲಿ ಅನಾಹುತಕ್ಕೆ ಒಳಗಾದ ಪ್ರದೇಶಗಳಿಗೆ ಭೇಟಿ ಕೊಟ್ಟು ಸಂತ್ರಸ್ತರ ನಡುವೆ ಇದ್ದು ಪರಿಹಾರ ಒದಗಿಸುವ ಕಾರ್ಯಗಳಲ್ಲಿ ಕೈಜೋಡಿಸಿದ್ದೆ. ಆ ಸಂದರ್ಭದಲ್ಲಿ ನಾನು ಸಾವು, ನೋವು, ನಷ್ಟ, ಆತಂಕ, ಹತಾಶೆ ಹೀಗೆ ಏಕಕಾಲದಲ್ಲಿ ಹತ್ತಾರು ಭಾವನೆಗಳಿಗೆ ಸಾಕ್ಷಿಯಾದೆ. ಇದರ ಜೊತೆಗೆ ಕರ್ನಾಟಕದ ವಿವಿಧ ಭಾಗಗಳಿಂದ ಅನೇಕ ಸಂಘ ಸಂಸ್ಥೆಗಳು ಸ್ವಯಂ ಪ್ರೇರಿತವಾಗಿ ಧಾವಿಸಿ ಬಂದು “ಕೊಡಗಿನ ಜನತೆಯ ಜೊತೆ ನಾವಿದ್ದೇವೆ’ ಎಂದು ಕೈ ಜೋಡಿಸಿದ್ದನ್ನು ಪ್ರತ್ಯಕ್ಷವಾಗಿ ನೋಡಿದ್ದೇನೆ. ಇದರೊಂದಿಗೆ ಜಿಲ್ಲಾಡಳಿತದ ಜನಪರ ಕಾರ್ಯವೈಖರಿಯನ್ನು ಗಮನಿಸಿದ್ದೇನೆ.

ಕೊಡಗಿನ ನಂತರ, ಭೂ ಕುಸಿತದಿಂದ ಹೆಚ್ಚು ಅನಾಹುತ ಸಂಭವಿಸಿದ್ದು ಶಿರಾಡಿ ಘಾಟ್‌ನಲ್ಲಿ. ಕಳೆದ ಎಂಟು ತಿಂಗಳುಗಳಿಂದ ಶಿರಾಡಿ ಘಾಟ್‌ನಲ್ಲಿ ವಾಹನ ಸಂಚಾರ ಮುಂಚಿನಂತಿಲ್ಲ. ಕಳೆದ ನಾಲ್ಕು ದಿನಗಳಿಂದ ಲಘು ವಾಹನಗಳ ಸಂಚಾರ ಪ್ರಾರಂಭವಾಗಿದೆ. ಅದು ಪ್ರಾರಂಭವಾಗಿರುವುದಕ್ಕೂ ಅಕ್ಕಪಕ್ಕದ ಹಾಸನ- ದಕ್ಷಿಣಕನ್ನಡ ಜಿಲ್ಲಾಡಳಿತಗಳಲ್ಲಿ ಒಮ್ಮತದ ಅಭಿಪ್ರಾಯ ಮೂಡದೆ ಗೊಂದಲ ನಿರ್ಮಾಣವಾಗಿತ್ತು. ಒಂದು ಜಿಲ್ಲೆಯವರು ವಾಹನ ಸಂಚಾರವನ್ನು  ಪ್ರಾರಂಭ ಮಾಡಲಾಗಿದೆ ಎಂದು ತಿಳಿಸಿದರೆ ಮತ್ತೂಂದು ಜಿಲ್ಲೆಯವರು ತಮ್ಮ ಅಸಮ್ಮತಿ ತೋರಿಸಿದ ಘಟನೆಯೂ ನಡೆದು ಹೋಯಿತು. ಈ ಹಿನ್ನೆಲೆಯಲ್ಲಿ ಇಂತಹ ಭೇಟಿಗಳಿಗೆ ಸದಾ ಸಿದ್ಧರಿರುವ ನನ್ನ ಯುವ ತಂಡದೊಡನೆ ಸೆಪ್ಟೆಂಬರ್‌ 8 ಹಾಗೂ 9 ರಂದು ಶಿರಾಡಿ ಘಾಟ್‌ನಲ್ಲಿ ಓಡಾಡಿದೆ. 

ಶನಿವಾರದಂದು (ಸೆಪ್ಟೆಂಬರ್‌ 8) ಬೆಳಗ್ಗೆ 8.00 ಗಂಟೆಗೆ ಸಕಲೇಶಪುರ ಹೊರವಲಯದಿಂದ ಹೊರಟ ನಾವು ಸಂಜೆ 6.00 ಗಂಟೆಯ ಆಸುಪಾಸಿಗೆ ಗುಂಡ್ಯಾ ಬಳಿ ಇರುವ ಚೌಡೇಶ್ವರಿ ದೇವಾಲಯದವರೆಗೆ ಸುಮಾರು 35 ಕಿ.ಮೀ ಪಾದಯಾತ್ರೆ ಮಾಡಿದೆವು. ಭಾನುವಾರ (ಸೆಪ್ಟೆಂಬರ್‌ 9) ದಂದು ಸುಬ್ರಹ್ಮಣ್ಯ, ಸಕಲೇಶಪುರ ನಡುವಿನ  ರೈಲು ಮಾರ್ಗದ ಮೇಲೆ ಭೂಕುಸಿತ ಉಂಟಾಗಿ ರೈಲು ಸಂಚಾರವೇ ಸ್ಥಗಿತಗೊಂಡಿದ್ದು ಎಲ್ಲರಿಗೂ ತಿಳಿದ ವಿಚಾರವೇ. ಈ ಮಾರ್ಗದಲ್ಲಿ ರೈಲ್ವೆ ಇಲಾಖೆಯವರು ಕೈಗೊಂಡ ಕಾರ್ಯಕ್ರಮಗಳನ್ನು ನೋಡಲು ಹೋದ ನಮಗೆ ಜಿಗಣೆಗಳು ಸಾಕಷ್ಟು ಅಡ್ಡಿ ಉಂಟು ಮಾಡಿದವು. ಅವುಗಳಿಗೆ ರಕ್ತದಾನ ಮಾಡುತ್ತಲೇ ಬಹಳಷ್ಟು ಶ್ರಮಪಟ್ಟು ಅಲ್ಲಿಗೆ ತಲುಪಿದೆವು. ಶಿರಿವಾಗಿಲು ಬಳಿ ಉಂಟಾಗಿರುವ ಭಾರಿ ಭೂಕುಸಿತವನ್ನು ಕಂಡೆವು. ಆ ಮಾರ್ಗದಲ್ಲಿ ಹಳಿಗಳ ಮೇಲೆ ಬಿದ್ದಿದ್ದ ಮಣ್ಣನ್ನು ತೆಗೆಯಲು ರೈಲ್ವೆ ಇಲಾಖೆಯ ಬೃಹತ್‌ ಯಂತ್ರೋಪಕರಣಗಳು ಎಡೆಬಿಡದೆ ಕಾರ್ಯ ನಿರ್ವಹಿಸುತ್ತಿದ್ದುದ್ದನ್ನು ಗಮನಿಸಿದೆವು. 

ನಾವೆಲ್ಲರೂ ಧರ್ಮಸ್ಥಳ, ಕುಕ್ಕೆ ಸುಬ್ರಹ್ಮಣ್ಯ, ಮಂಗಳೂರಿಗೆ ಶಿರಾಡಿ ಘಾಟ್‌ ಮೂಲಕ ಅದೆಷ್ಟೋ ಬಾರಿ ಓಡಾಡಿರಬಹುದು. ಅಲ್ಲಲ್ಲಿ ನಿಂತು ಪ್ರಕೃತಿ ಸೌಂದರ್ಯವನ್ನು ಸವಿದಿರಬಹುದು. ಅಲ್ಲಿರುವ ಸಣ್ಣ ಪುಟ್ಟ ಅಂಗಡಿಗಳಲ್ಲಿ ನಮಗೆ ಬೇಕಾದ ತಿಂಡಿ, ತಿನಿಸುಗಳನ್ನು ಕೊಂಡಿರಬಹುದು. ಆದರೆ, ನಾವ್ಯಾರೂ ಕಳೆದ ಎಂಟು ತಿಂಗಳುಗಳಿಂದ ಆ ರಸ್ತೆಯಲ್ಲಿ ಹೋಗದೆ ಇರುವುದರಿಂದ  ನಮ್ಮಂತಹವರಿಂದಲೇ ಬದುಕು ಸಾಗಿಸುವ ಆ ಸಣ್ಣಪುಟ್ಟ ಅಂಗಡಿಗಳವರ ಪರಿಸ್ಥಿತಿ ಏನು? ಶಿರಾಡಿ ಘಾಟ್‌ನಲ್ಲಿ ಇರುವ  ಅನೇಕ ಸಣ್ಣಪುಟ್ಟ  ಗ್ರಾಮಗಳ ಜನತೆ ಇತ್ತ ಸಕಲೇಶಪುರಕ್ಕೆ ಬರಲಾಗದೇ, ಕಾಯಿಲೆಗಳಿಂದ ಬಳಲುವವರು ವೈದ್ಯರನ್ನು ಭೇಟಿ ಮಾಡಲಾಗದೇ ಯಾವ ರೀತಿ ಬಳಲಿರಬಹುದು? ವಾಹನ ವ್ಯವಸ್ಥೆ ಇಲ್ಲದೆ ಮಕ್ಕಳು ಶಾಲೆಗಳಿಗೆ ಹೋಗಲು ಸಾಧ್ಯವಾಗದೆ ಎಷ್ಟು ಪರಿತಪಿಸಿರಬೇಕು? ಇವರಿಗೆ ವಿಶ್ವಾಸ ತುಂಬಲು ಯಾವ ರೀತಿಯ ಯೋಜನೆ, ಪರಿಹಾರ ಕಾರ್ಯಕ್ರಮ ನಡೆಯುತ್ತಿರ ಬಹುದು ಎಂಬುದನ್ನು ಅಧ್ಯಯನ ಮಾಡುವುದು ನನ್ನ ಎರಡು ದಿನಗಳ ಪಾದಯಾತ್ರೆಯ ಉದ್ದೇಶವಾಗಿತ್ತು. 

Advertisement

ಶನಿವಾರ ಶಿರಾಡಿ ಘಾಟಿನ ರಸ್ತೆಯಲ್ಲಿ ಇಳಿಯುವಾಗ ಅನೇಕರನ್ನು ಭೇಟಿ ಮಾಡಿದೆ. ಪುಟ್ಟ ಗೂಡಂಗಡಿಯ ಮಾಲೀಕ ಶೇಖರ್‌ನಿಂದ ಹಿಡಿದು ಅನೇಕ ಸಣ್ಣಪುಟ್ಟ ಅಂಗಡಿಯವರನ್ನು ಸಂಪರ್ಕಿಸಿದೆ. ಕೆಲವು ಮನೆಗಳಲ್ಲಿ ಕುಳಿತು ಆ ಕುಟುಂಬದವರ ಕಷ್ಟ ಸುಖಗಳನ್ನು ಆಲಿಸಿದೆ. ಜಿಲ್ಲಾಡಳಿತದ ಬಗ್ಗೆ ಅವರಿಂದ ಬಂದ ಅಸಮಾಧಾನದ ಮಾತುಗಳನ್ನು ಗಮನಿಸಿದೆ. ಒಂದು ಸಣ್ಣ ಹೋಟೆಲ್‌ ನಡೆಸುತ್ತಿರುವ ಕುಟುಂಬದವರನ್ನು ಭೇಟಿ ಮಾಡಿದಾಗ ಅವರು “ಸರ್‌, ನಮ್ಮ ಹೋಟೆಲಿನ ಕಟ್ಟಡದ ಬಾಡಿಗೆ ತಿಂಗಳಿಗೆ 15 ಸಾವಿರ ರೂಪಾಯಿಗಳು. ಕಳೆದ ಎಂಟು ತಿಂಗಳುಗಳಿಂದ ಯಾವುದೇ ವ್ಯಾಪಾರವಿಲ್ಲದೇ ಬಾಡಿಗೆ ಬಾಕಿ ಹಾಗೆಯೇ ಉಳಿದಿದೆ. ಮಕ್ಕಳ ಶಾಲಾ ಶುಲ್ಕ ಕಟ್ಟುವುದಕ್ಕೆ ಬಹಳ ಕಷ್ಟಪಟ್ಟೆವು. ಈಗ ಮಕ್ಕಳನ್ನು ಶಾಲೆಗೆ ಕರೆದೊಯ್ಯುವುದೇ ದೊಡ್ಡ ಸರ್ಕಸ್‌ ಸಾರ್‌. ಹೇಗಾದರೂ ಮಾಡಿ ಬೇಗ ವಾಹನಗಳ ಪೂರ್ಣ ಸಂಚಾರ ಪ್ರಾರಂಭ ಮಾಡುವಂತೆ ಸರ್ಕಾರಕ್ಕೆ ನೀವಾದರೂ ತಿಳಿಸಿ ನಮ್ಮನ್ನು ಉಳಿಸಿ’ ಎಂದು ಕಣ್ಣೀರು ತುಂಬಿಕೊಂಡು ಎರಡೂ ಕೈಜೋಡಿಸಿ ಆ ಮಹಿಳೆ ಹೇಳಿದ ಮಾತುಗಳನ್ನು ಎಂದೂ ಮರೆಯಲಾರೆ.

ಶಿರಾಡಿ ಘಾಟ್‌ನಲ್ಲಿ ಮಾರನಹಳ್ಳಿ ದೊಡ್ಡ ಗ್ರಾಮ. ಕಳೆದ ಎಂಟು ತಿಂಗಳುಗಳಿಂದ ಶಿರಾಡಿ ಘಾಟ್‌ನಲ್ಲಿ ಈ ಪರಿಸ್ಥಿತಿ ಇದ್ದರೂ ಆ ಗ್ರಾಮದಲ್ಲಿ ವೈದ್ಯಕೀಯ ವ್ಯವಸ್ಥೆ ಏರ್ಪಾಟು ಆಗಿಲ್ಲ ಎಂಬುದು ಅಲ್ಲಿನ ಹಳೆಯ ವಿದ್ಯಾರ್ಥಿಗಳ ಸಂಘದ ಸದಸ್ಯರ ತೀವ್ರವಾದ ಆಕ್ಷೇಪ. ಈ ಹಿನ್ನೆಲೆಯಲ್ಲಿ ಸಂಘದ ಸದಸ್ಯರು ಸಂಬಂಧಪಟ್ಟ ಎಲ್ಲಾ ಇಲಾಖೆಯವರನ್ನು ಭೇಟಿ ಮಾಡಿದ್ದಾರೆ. ಆದರೆ ಫ‌ಲಿತಾಂಶ ಮಾತ್ರ ಶೂನ್ಯ. ಚುನಾಯಿತ ಪ್ರತಿನಿಧಿಗಳ ಬಗ್ಗೆಯೂ ಇಲ್ಲಿ ಅಷ್ಟೇ ಅಸಮಾಧಾನ ಇದೆ. ತಾಲೂಕು ಪಂಚಾಯತಿಯಿಂದ ಹಿಡಿದು, ಜಿಲ್ಲಾ ಉಸ್ತುವಾರಿ ಸಚಿವರ ಕಾರ್ಯವೈಖರಿವರೆಗೂ ಈ ಅಸಮಾಧಾನ ಹೆಪ್ಪುಗಟ್ಟಿದೆ. ಜಿಲ್ಲಾ ಉಸ್ತುವಾರಿ ಸಚಿವರಿಗೆ ಈ ರಸ್ತೆಯಲ್ಲಿ ಓಡಾಡಿ ಜನರ ಸಂಕಷ್ಟವನ್ನು ಅರಿತು ಅಗತ್ಯ ಪರಿಹಾರವನ್ನು ಕೈಗೊಳ್ಳಲು ಯಾವ ವಾಸ್ತು ಅಡ್ಡವಾಗಿದೆಯೋ ತಿಳಿಯದು. 

3-4 ಕಡೆ ರಸ್ತೆ ಕುಸಿತವಾಗಿರುವುದನ್ನು ಹಾಗೂ ಇನ್ನು ಕೆಲವು ಕಡೆ ಗುಡ್ಡಗಳು ಕುಸಿದಿರುವುದನ್ನು ನೋಡಿದೆ. ಆದರೆ, ಬೆಳಗ್ಗೆ 8.00 ಗಂಟೆಯಿಂದ ಸಂಜೆ 6.00 ಗಂಟೆಯವರೆಗೆ ಶಿರಾಡಿ ಘಾಟ್‌ನಲ್ಲಿ ಓಡಾಡಿದ ನನಗೆ ಒಂದು ಕಡೆಯೂ ಕಾಮಗಾರಿ ಮಾಡುವ  ಕೆಲಸಗಾರರು, ಮೇಲ್ವಿಚಾರಕರು ಕಾಣಲೇ ಇಲ್ಲ. ಬದಲಿಗೆ ಅಲ್ಲಲ್ಲಿ ಕಂಡದ್ದು, “ಕಾಮಗಾರಿಯು ಪ್ರಗತಿಯಲ್ಲಿದೆ, ವಾಹನಗಳನ್ನು ನಿಧಾನವಾಗಿ ಚಲಿಸಿ’ ಎಂಬ ನಾಮಫ‌ಲಕಗಳು ಮಾತ್ರ. ಸಕಲೇಶಪುರ ಕಡೆಯಿಂದ ಇಳಿಯುವಾಗ ಎತ್ತಿನ ಹೊಳೆಯ ಬೃಹತ್‌ ಕಾಮಗಾರಿಯ ಪ್ರದೇಶವನ್ನು ಕಂಡೆ. ಅಲ್ಲಿ ಇಳಿದು ಹೋಗಿ ನೋಡೋಣವೆಂದುಕೊಂಡರೂ ಸದ್ಯಕ್ಕೆ ಗಮನ ವಿರುವ ಈ ಅಧ್ಯಯನದ ಭೇಟಿ ಮುಗಿಸೋಣ. ಮುಂದಿನ ದಿನಗಳಲ್ಲಿ ಕೇವಲ ಎತ್ತಿನಹೊಳೆಯ ಕಾಮಗಾರಿಯ ಕೆಲಸಗಳನ್ನೇ ನೋಡಲಿಕ್ಕೆ ಬರುವುದೆಂದು ಮನಸ್ಸಿನಲ್ಲಿ ತೀರ್ಮಾನಿಸಿದೆ. 

ಅಲ್ಲಿ ಸಣ್ಣ ಗೂಡಂಗಡಿಯಲ್ಲಿ ಕುಳಿತಿದ್ದ ಜೋಣಿ ಎಂಬ ವ್ಯಕ್ತಿಯೊಬ್ಬರಿಗೆ ಚುನಾಯಿತ ಪ್ರತಿನಿಧಿಯೊಬ್ಬರ ಹೆಸರನ್ನು ಕೇಳಿ ಇವರನ್ನು ಭೇಟಿಯಾಗುತ್ತೀರಾ ಎಂಬ ಪ್ರಶ್ನೆಯನ್ನು ಹಾಕಿದೆ. ಜೋಣಿ ಸಹಜವಾಗಿ “ಸಾರ್‌ ಆಗಾಗ ಭೇಟಿಯಾಗುತ್ತೇವೆ ಎಂದರು.’ ಎಲ್ಲಿ ಭೇಟಿಯಾಗುತ್ತೀರ ಎಂಬ ನನ್ನ ಮತ್ತೂಂದು ಪ್ರಶ್ನೆಗೆ  “ನಮ್ಮ ಕನಸಿನಲ್ಲಿ’ ಎಂದು ಖಾರವಾಗಿ ಪ್ರತಿಕ್ರಿಯಿಸಿದರು. 

ಈಗ ಯುದ್ದೋಪಾದಿಯಲ್ಲಿ ಆಗಬೇಕಾಗಿರುವುದು ರಸ್ತೆ ಕುಸಿತವಾಗಿರುವ ಕಡೆ ಅಗತ್ಯ ಕ್ರಮ ಕೈಗೊಂಡು ಬಸ್ಸುಗಳ‌ ಚಾಲನೆ ಕೂಡಲೇ ಪ್ರಾರಂಭಿಸುವುದು. ಶಿರಾಡಿ ಘಾಟ್‌ನಲ್ಲಿ ಬಸ್ಸು ಸಂಚಾರ ಒಂದೊಂದು ದಿನ ವಿಳಂಬವಾದರೂ ಅಲ್ಲಿಯ ವರಿಗೆ ವಿಶೇಷವಾಗಿ ಕಾಯಿಲೆ ಬಂದು ನರಳುವವರಿಗೆ, ಮಹಿಳೆಯರಿಗೆ, ಶಾಲಾ ಮಕ್ಕಳಿಗೆ ಸಂಕಷ್ಟ ಇನ್ನಷ್ಟು ಹೆಚ್ಚಾಗುತ್ತದೆ. ಇದರ ಬಗ್ಗೆ ಸಾರಿಗೆ ಸಚಿವರು ಹಾಗೂ ಜಿಲ್ಲಾಡಳಿತದ ಜೊತೆಗೆ ನಾನು ಮಾತನಾಡಲ್ಲಿದ್ದೇನೆ. ಕನಿಷ್ಠಪಕ್ಷ ಮಾರನಹಳ್ಳಿಯಲ್ಲಿ ಲೋಕಲ್‌ ಬಸ್‌ಗಳ ಸಂಚಾರ ಪ್ರಾರಂಭಿಸಿದರೂ ಇಲ್ಲಿಯ ಜನರ ಸಂಕಷ್ಟ ಸ್ವಲ್ಪವಾದರೂ ನೀಗುತ್ತದೆ. ಇದರೊಂದಿಗೆ ಮಾರನಹಳ್ಳಿಯಲ್ಲಿ ವೈದ್ಯರಿರುವ ಆರೋಗ್ಯ ಕೇಂದ್ರದ ಸ್ಥಾಪನೆ ಈ  ಕೂಡಲೇ ಆಗಬೇಕಿದೆ. ಆರೋಗ್ಯ ಕೇಂದ್ರ ಸ್ಥಾಪನೆ ಮಾಡುತ್ತೇವೆ ಎಂದು ನೀಡುತ್ತಲೇ ಬಂದಿರುವ ಆಶ್ವಾಸನೆಗಳು ಈ ಜನರನ್ನು ಹತಾಶೆ ಅಂಚಿಗೆ ತಳ್ಳಿದೆ. ಕೊನೆಯ ಪಕ್ಷ ಸುಸಜ್ಜಿತವಾದ ಮೊಬೈಲ್‌ ಆಸ್ಪತ್ರೆಯನ್ನು ಮಾರನಹಳ್ಳಿ ಸೇರಿದಂತೆ ಘಾಟಿಯಲ್ಲಿ ಓಡಾಡುವ ವ್ಯವಸ್ಥೆ ಮಾಡುವುದು ಅತ್ಯಂತ ಅವಶ್ಯಕ. 

ನಾನು ಈಗಾಗಲೇ ತಿಳಿಸಿದಂತೆ ಶಿರಾಡಿ ಘಾಟ್‌ನಲ್ಲಿ ಯಾವುದೇ ರೀತಿಯ ಕಾಮಗಾರಿಯ ಕೆಲಸಗಳು ನಡೆಯುತ್ತಿಲ್ಲ. ಅನಿರೀಕ್ಷಿತ  ಅನಾಹುತಗಳನ್ನು ಎದುರಿಸುವ ರೀತಿ ಇದಲ್ಲ. ವಿಪತ್ತಿನ ಸಂದರ್ಭಗಳು ಉಂಟಾದಾಗ ಅನೇಕ ದೇಶಗಳಲ್ಲಿ ರಸ್ತೆಗಳ ಕ್ಷಿಪ್ರ ನಿರ್ಮಾಣದ ಬಗ್ಗೆ ಓದಿದ್ದೇವೆ. ಕೇಳಿದ್ದೇವೆ. ಕೊನೆಯ ಪಕ್ಷ ಆಗಲೇಬೇಕಾದ ಕಾಮಗಾರಿಯ ಚಿಹ್ನೆಯೂ ಕಾಣಲಿಲ್ಲವೆಂದರೆ… “ರಸ್ತೆ ಕಾಮಗಾರಿ ಪ್ರಗತಿಯಲ್ಲಿದೆ’ ಎಂಬ ಬೋರ್ಡ್‌ ಕ್ರೂರ ಅಣಕವಾಗುತ್ತದೆ. ಘಾಟ್‌ನಲ್ಲಿ ವಾಸಿಸುತ್ತಿರುವ ನಾಗರಿಕರಿಗೆ ಸರ್ಕಾರದಿಂದ ಉಂಟಾಗಿರುವ ಅವ್ಯವಸ್ಥೆಗಳೇ  ಕಣ್ಣಿಗೆ ರಾಚುತ್ತಿವೆಯೇ ಹೊರತು ಆಗಬೇಕಾದ  ವ್ಯವಸ್ಥೆಯ ಬಗ್ಗೆ ವಿಶ್ವಾಸವೇ ಹೊರಟು ಹೋಗಿದೆ. ಈ ಕೂಡಲೇ ಲೋಕೋಪಯೋಗಿ ಸಚಿವರು ಈ ಕಾಮಗಾರಿ ಕುರಿತು ಅಗತ್ಯ ಬಿರುಸಿನ ಚಾಲನೆ ನೀಡುತ್ತಾರೆಂದು ಆಶಿಸುತ್ತೇನೆ. 

ನನ್ನ ಮನಸ್ಸಿನಲ್ಲಿ ಈ ಜನರನ್ನು ಕಂಡಾಗ  ಸಹಜವಾಗಿ ಬಂದದ್ದು, ಬದುಕೇ ದುಃಸ್ಥಿತಿಯಲ್ಲಿರುವ ಈ ಕುಟುಂಬಗಳಿಗೆ ಉಚಿತ ಆಹಾರ, ಪಡಿತರ ವ್ಯವಸ್ಥೆಯನ್ನು ಸರ್ಕಾರ ಮಾಡಬಹುದಾಗಿತ್ತಲ್ಲವೇ? ಆಡಳಿತದ ವೈಫ‌ಲ್ಯದಿಂದ ಸಂಕಷ್ಟಕ್ಕೆ ಸಿಲುಕಿರುವ ಇವರಿಗೆ ಆಹಾರ ಭದ್ರತೆಯ ಮೂಲಕ ಜೀವನ ಭದ್ರತೆ ನೀಡುವುದು ಸರ್ಕಾರದ ಆದ್ಯ ಕರ್ತವ್ಯವಾಗಿದೆ. ಶನಿವಾರದ ಈ ಪಾದಯಾತ್ರೆ ನನಗೆ ಶಿರಾಡಿ ಘಾಟ್‌ನ ಜನತೆಯ ಅಳಲುಗಳ ದೊಡ್ಡ ಪರಿಚಯವನ್ನೇ ಮಾಡಿಸಿದೆ. 

ಮಾರನೆಯ ದಿನ ಬೆಳಗ್ಗೆ ಸುಮಾರು 9.00 ಗಂಟೆಗೆ ಗುಂಡ್ಯಾದ ಅಟೋ ಚಾಲಕರ ಜೊತೆ ಮಾತನಾಡಿದೆ. ಯಾರಿಗೂ ವ್ಯಾಪಾರ ವಿಲ್ಲ. ಮುಖದಲ್ಲಿ ನಗು ಮಾಸಿ ಹೋಗಿದೆ. ಅಲ್ಲಿದ್ದ ಹೋಟೆಲ್‌ಗೆ ಹೋಗಿ ತಿಂಡಿ ಕೇಳಿದಾಗ, ಗಿರಾಕಿಗಳು ಬರುವ ಭರವಸೆ ಇಲ್ಲದಿರುವುದರಿಂದ ತಿಂಡಿಯನ್ನು ಮಾಡಿಲ್ಲ ಎಂಬ ಉತ್ತರ ದೊರಕಿತು. ಹೀಗಾಗಿ ನಮಗೆ  ತಿಂಡಿಯೂ ದೊರಕಲಿಲ್ಲ. ಗುಂಡ್ಯಾ ಎಂದರೆ ನನ್ನ ಮನಸ್ಸಿಗೆ ಬರುವುದು ಜನಸಂದಣಿಯಿಂದ ತುಳುಕುತ್ತಿದ್ದ ಜಾಗ. ಆದರೆ, ಇಂದು ಅಲ್ಲಿ ಅನಾಥ ವಾತಾವರಣ ಎದ್ದು ಕಾಣುತ್ತಿದೆ. ಕಾರುಗಳ ಓಡಾಟ ಪ್ರಾರಂಭವಾಗಿರುವುದು ಸ್ವಲ್ಪ ಆಶಾಭಾವನೆ ಜಾಗೃತವಾಗಿದೆ. ದಕ್ಷಿಣ ಕನ್ನಡ ಮತ್ತು ಹಾಸನ ಜಿಲ್ಲಾಡಳಿತ ಇದರ ಬಗ್ಗೆ  ಜಂಟಿಯಾಗಿ ಚಿಂತನೆ ನಡೆಸಿ ಇಲ್ಲಿಯ ವರಿಗೆ ಬದುಕು ಕಟ್ಟಿಕೊಡುವ ಕೆಲಸವನ್ನು ಶೀಘ್ರವಾಗಿ ಕೈಗೆತ್ತಿ ಕೊಂಡರೆ ಅವರ ಮೊಗದಲ್ಲಿ ಮತ್ತೆ ಆತ್ಮವಿಶ್ವಾಸ ಮೂಡುತ್ತದೆ.

ಎಸ್‌.ಸುರೇಶ್‌ಕುಮಾರ್‌ ಬಿಜೆಪಿ ಹಿರಿಯ ನಾಯಕ

Advertisement

Udayavani is now on Telegram. Click here to join our channel and stay updated with the latest news.

Next