Advertisement

 ಶ್ರವಣಬೆಳಗೊಳ ಮಹಾಮಜ್ಜನದ ಮೆರವಣಿಗೆಯಲ್ಲಿ ಶಿಲ್ಪಾ ಗೊಂಬೆಗಳು

12:05 PM Feb 15, 2018 | |

ಬಂಟ್ವಾಳ: ಲಕ್ಷೋಪಲಕ್ಷ ಜನ ಭಾಗವಹಿಸುವ ಶ್ರವಣಬೆಳಗೊಳದ ಗೊಮ್ಮಟೇಶ್ವರನ ಮಹಾಮಸ್ತಾಕಾಭಿಷೇಕದ ಸಾಂಸ್ಕೃತಿಕ ಮೆರವಣಿಗೆಯ ಮುಂಚೂಣಿಯಲ್ಲಿ ರಮೇಶ್‌ ಕಲ್ಲಡ್ಕ ಅವರ ಶಿಲ್ಪಾ ಗೊಂಬೆ ಬಳಗ 3ನೇ ಅವಧಿಯಲ್ಲಿ ಪಾಲ್ಗೊಳ್ಳಲಿದ್ದು, ಈ ಮೂಲಕ ಹ್ಯಾಟ್ರಿಕ್‌ ಸಾಧನೆಗೆ ಪಾತ್ರವಾಗಲಿದೆ.

Advertisement

ಶಿಲ್ಪಾಗೊಂಬೆ ಬಳಗವು 1993, 2005ರಲ್ಲಿ ಶ್ರವಣ ಬೆಳಗೊಳದಲ್ಲಿ ನಡೆದ ಮಹಾ ಮಸ್ತಕಾಭಿಷೇಕದಲ್ಲಿ ಭಾಗವಹಿಸಿತ್ತು. ಇದೀಗ 2018ರಲ್ಲೂ ಪಾಲ್ಗೊಳ್ಳುತ್ತಿರುವುದು ಮಹತ್ವಪೂರ್ಣ ಎನಿಸಿದೆ.

ಕರಾವಳಿ ಕರ್ನಾಟಕದ ನಂ. 1 ಗೊಂಬೆ ಬಳಗ ಎಂಬ ಗೌರವಕ್ಕೆ ಪಾತ್ರವಾಗಿದ್ದ ಕಲ್ಲಡ್ಕದ ಶಿಲ್ಪಾ ಗೊಂಬೆ ಬಳಗ 1985ರಲ್ಲಿ ಅನುಷ್ಠಾನಕ್ಕೆ ಬಂದಿತ್ತು. ಹೊಸ ಆಕರ್ಷಣೆ, ವಿನೂತನ ಗೊಂಬೆಗಳ ನಿರ್ಮಾಣ, ವಿಶಿಷ್ಟಗಳ ಪ್ರಸ್ತುತಿ, ಗೊಂಬೆಗಳಲ್ಲಿ ಹೊಸ ಮಾದರಿ ತರುವುದರಲ್ಲಿ ಬಳಗದ ಸುದೀರ್ಘ‌ ಇತಿಹಾಸವಿದೆ.

ಅವಿಭಜಿತ ಕರಾವಳಿ ಜಿಲ್ಲೆಯಲ್ಲಿ ಆಧುನಿಕ ಸೌಲಭ್ಯಗಳು ಬರುವ ಪೂರ್ವದಲ್ಲಿ ಗೊಂಬೆ ಬಳಗವನ್ನು ಪರಿಚಯಿಸಿದ ಕೀರ್ತಿ ಶಿಲ್ಪಾ ಗೊಂಬೆ ಬಳಗಕ್ಕೆ ಸಲ್ಲುತ್ತದೆ. ಗೊಂಬೆ ಕುಣಿತದ ಮೂಲಕ ಮನೋರಂಜನೆ ಮೂಲ ಉದ್ದೇಶವಾಗಿತ್ತು. ಇಂದು ಸಣ್ಣಪುಟ್ಟ ಸಂಭ್ರಮದ ಕಾರ್ಯಕ್ರಮಗಳಿಂದ ಹಿಡಿದು ಅದ್ದೂರಿ ಕೂಟ ಗಳಿಗೆ ಗೊಂಬೆ ಕುಣಿತ ಅನಿವಾರ್ಯ ಎಂಬಷ್ಟರ ಮಟ್ಟಿಗೆ ಬೆಳೆದಿದೆ.

ಗೊಂಬೆ ಬಳಗದಲ್ಲಿ ಹೊಸತನ, ವೈಶಿಷ್ಟ್ಯ ಅದರ ಆಕರ್ಷಣೆ. ಅಲ್ಲಿ ಯಾವುದು ಇಲ್ಲ, ಯಾವುದು ಇದೆ. ಮೂರು ಪ್ರತ್ಯೇಕ ಗೊಂಬೆಗಳನ್ನು ಒಬ್ಬರೇ ವ್ಯಕ್ತಿ ನಡೆಸುವುದು. ಅಪ್ಪಟ ಗೊರಿಲ್ಲ ಕಲ್ಪನೆಯನ್ನು ಹುಟ್ಟಿಸುವ ಗೊಂಬೆ, ಕೇರಳ ಶೈಲಿಯ ಕಥಕ್ಕಳಿಯ ಗೊಂಬೆ, ತೆಂಕುತಿಟ್ಟಿನ ಯಕ್ಷಗಾನದ ಮುಖವರ್ಣಿಕೆಯ ಗೊಂಬೆ, ಐದು ಅಡಿಯಿಂದ 15 ಅಡಿ ಎತ್ತರದ ಗೊಂಬೆಗಳು, ರಾಜರಾಣಿ, ಜೋಕರ್‌, ಕಥಕ್ಕಳಿ, ಯಕ್ಷಗಾನ ತೆಂಕುತಿಟ್ಟು ಶೈಲಿಯ ಗೊಂಬೆ, ತಟ್ಟಿರಾಯ, ಕುಳ್ಳಕುಳ್ಳಿ ಗೊಂಬೆ, ಹತ್ತು ತಲೆಯ ರಾವಣ ಎಂಬಿತ್ಯಾದಿ ಗೊಂಬೆಗಳನ್ನು ನೋಡುವುದೇ ಒಂದು ಸಂಭ್ರಮದ ಕ್ಷಣ ಆಗುವುದು.

Advertisement

ಪ್ರಶಸ್ತಿ, ಸಮ್ಮಾನ 
ಗೊಂಬೆ ಬಳಗವನ್ನು ಹುಟ್ಟುಹಾಕಿ ಅದನ್ನು ಸಾರ್ವಜನಿಕವಾಗಿ ಪ್ರದರ್ಶಿಸಿದ ರಮೇಶ್‌ ಕಲ್ಲಡ್ಕರಿಗೆ ಮೊದಲಿಗೆ ಡಾ| ರಾಜ್‌ಕುಮಾರ್‌ ರಾಜ್ಯ ಪ್ರಶಸ್ತಿ, ಆರ್ಯ ಭಟ ಪ್ರಶಸ್ತಿ, ಜಾನಪದ ಕಲೆಯಲ್ಲಿ ರಾಜ್ಯೋತ್ಸವ ಮೊದಲಾದ ಪ್ರಮುಖ
ಪ್ರಶಸ್ತಿಗಳ ಜತೆ ಸ್ಥಳೀಯ ಸಂಘಸಂಸ್ಥೆಗಳಿಂದ ಸಮ್ಮಾನ, ಪ್ರಶಸ್ತಿ ಪುರಸ್ಕಾರ ಸಂದಿದೆ. 

ಅವರ ತಂಡಗಳು ಉಜಿರೆಯಲ್ಲಿ ನಡೆದ ವಿಶ್ವ ತುಳು ಸಮ್ಮೇಳನ, ಮೂಡಬಿದಿರೆಯಲ್ಲಿ ನಡೆದ 71ನೇ ಕ.ಸಾ. ಸಮ್ಮೇಳನ, ಉಡುಪಿ ಪರ್ಯಾಯ, ಮೈಸೂರು ದಸರಾ, ರಾಜ್ಯ ಯುವಜನ ಮೇಳ, ಮಂಗಳೂರು ದಸರಾ, ಆಳ್ವಾಸ್‌ ನುಡಿಸಿರಿ ಇತ್ಯಾದಿ ಪ್ರತಿಷ್ಠಿತ ಸಮಾ ರಂಭಗಳಲ್ಲಿ ಯಶಸ್ವಿ ಕಾರ್ಯಕ್ರಮ ನೀಡಿ ಸಾರ್ವ ಜನಿಕ ಮೆಚ್ಚುಗೆ ಪಡೆದಿದೆ. ಅವರ ತಂಡದಲ್ಲಿ 20ಕ್ಕೂ ಅಧಿಕ ನುರಿತ ಕಲಾವಿದರಿದ್ದಾರೆ.

ತರಬೇತಿ ಪಡೆದಿದ್ದೆ
ಪ್ರೌಢ ಶಿಕ್ಷಣ ಮುಗಿದ ಬಳಿಕ ಹಿರಿಯ ಸಹೋದರನ ಜತೆ ಪೈಂಟಿಂಗ್‌ ತರಬೇತಿ ಪಡೆದಿದ್ದೆ. ಶಿವಮೊಗ್ಗದಲ್ಲಿ ಮುಖವಾಡ ರಚನೆ ಬಗ್ಗೆ ತಿಳಿದು ಅದನ್ನು ಅಭ್ಯಾಸ ಮಾಡಿದೆ. ಪತ್ನಿ ಗೀತಾ, ಪುತ್ರ ನಿತಿನ್‌ ಕಲ್ಲಡ್ಕ, ಪುತ್ರಿ ರಚನಾ, ಅರ್ಚನಾ ನನ್ನ ಸಾಧನೆಯ ಹಿಂದೆ ತೊಡಗಿಸಿಕೊಂಡವರು. ಹೊಸ ಪರಿಕಲ್ಪನೆ ಬೆಳೆದಂತೆ ನಮ್ಮ ಶಿಲ್ಪಾ ಗೊಂಬೆ ಬಳಗ ರಾಜ್ಯ-ರಾಷ್ಟ್ರ ಮಟ್ಟದಲ್ಲಿ ಹೆಸರು ಪಡೆಯಿತು.
– ರಮೇಶ್‌ ಕಲ್ಲಡ್ಕ

ರಾಜಾ ಬಂಟ್ವಾಳ

Advertisement

Udayavani is now on Telegram. Click here to join our channel and stay updated with the latest news.

Next