Advertisement

ಶಿಖಂಡಿ ರಾಜಕಾರಣ ನನ್ನದಲ್ಲ, ದುಷ್ಕೃತ್ಯಕ್ಕೆ ಅವಕಾಶ ನೀಡಲ್ಲ

09:27 PM Nov 16, 2019 | Lakshmi GovindaRaju |

ಹುಣಸೂರು: ತಾಲೂಕಿನಲ್ಲಿ ಕಳೆದ 10 ವರ್ಷಗಳ ಕಾಲ ಅಮಾಯಕರ ವಿರುದ್ಧ ಸುಳ್ಳು ಪ್ರಕರಣ ದಾಖಲು, ಅಟ್ರಾಸಿಟಿ, ಎತ್ತಿಕಟ್ಟಿ ಹೊಡೆದಾಡಿಸುವ ಆಡಳಿತವಿತ್ತು. ತಾವು ಶಾಸಕರಾಗಿದ್ದ ವೇಳೆ ಇಂತಹ ಯಾವುದೇ ದುಷ್ಕೃತ್ಯಗಳು ನಡೆಯಲು ಬಿಡಲಿಲ್ಲ. ಅಂತಹ ಶಿಖಂಡಿ ರಾಜಕಾರಣ ಕೂಡ ನನ್ನದಲ್ಲ ಎಂದು ಬಿಜೆಪಿ ಅಭ್ಯರ್ಥಿ ಎಚ್‌.ವಿಶ್ವನಾಥ್‌ ಹೇಳಿದರು.

Advertisement

ನಗರದ ರುಕ್ಮಿಣಿ ವಿಠಲಕಲ್ಯಾಣ ಮಂಟಪದಲ್ಲಿ ಶನಿವಾರ ಆಯೋಜಿಸಿದ್ದ ಬಿಜೆಪಿ ಸಮ್ಮಿಲನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪ್ರಧಾನಿ ಮೋದಿ ಅವರು ದೇವರಾಜ ಅರಸು ಹಾದಿಯಲ್ಲೇ ಸಾಗುತ್ತಿದ್ದು, ಅವರ ಎಲ್ಲಾ ಕಾರ್ಯಕ್ರಮಗಳು ಸಮೀಕರಣಗೊಂಡು ದೇಶದ ಎಲ್ಲಾ ಧರ್ಮ, ಭಾಷಿಕರ ಅಭಿವೃದ್ಧಿಗೆ ಪೂರಕವಾಗಿವೆ.

ಪಕ್ಷದ ರಾಷ್ಟ್ರಾಧ್ಯಕ್ಷ ಅಮಿತ್‌ ಶಾ, ಮುಖ್ಯಮಂತ್ರಿ ಯಡಿಯೂರಪ್ಪ, ರಾಜ್ಯಾಧ್ಯಕ್ಷ ನಳೀನ್‌ಕುಮಾರ್‌ ಕಟೀಲ್‌ ಸೇರಿದಂತೆ ಎಲ್ಲಾ ನಾಯಕರ ಪ್ರೀತಿ ವಿಶ್ವಾಸದೊಂದಿಗೆ ಪಕ್ಷ ಸೇರಿದ್ದೇನೆ. ನನ್ನ 40 ವರ್ಷಗಳ ಅನುಭವದಲ್ಲಿ ಮಂತ್ರಿಯಾಗಿ ಅನೇಕ ಕಾರ್ಯಕ್ರಮಗಳನ್ನು ನೀಡಿದ್ದೇನೆ. ಈ ಅನುಭವವನ್ನು ಪಕ್ಷ ಬಳಸಿಕೊಳ್ಳುವ ಮೂಲಕ ತಾಲೂಕಿನ ಸಮಗ್ರ ಅಭಿವೃದ್ಧಿಗೆ ಶ್ರಮಿಸುತ್ತೇನೆ ಎಂದರು.

ನನ್ನೊಂದಿಗೆ ಕೈಜೋಡಿಸಿ: ಮೋದಿ ಆಡಳಿತದ ಅವಧಿಯಲ್ಲಿ ದೇಶದ ಅಲ್ಪಸಂಖ್ಯಾತರಿಗೆ ಯಾವುದೇ ತೊಂದರೆ ಆಗಿಲ್ಲ. ವಿಪಕ್ಷಗಳು ದಲಿತರ ಕಾಲೋನಿಗೆ ಹೋಗಿ ಬಿಜೆಪಿ ಸಂವಿಧಾನಕ್ಕೆ ದ್ರೋಹ ಬಗೆಯುತ್ತದೆ ಎಂದು ಅಪಪ್ರಚಾರ ಮಾಡುತ್ತಿವೆ. ತಾಲೂಕಿನ ಅಲ್ಪಸಂಖ್ಯಾತರ ರಕ್ಷಣೆ ನಮ್ಮೆಲ್ಲರ ಹೊಣೆ. ಅಂಜಬೇಡಿ, ನನ್ನೊಂದಿಗೆ ಕೈಜೋಡಿಸಿ, ನಾನು ನಿಮ್ಮೊಂದಿಗಿರುತ್ತೇನೆ ಎಂದು ಭರವಸೆ ನೀಡಿದರು.

ಸಚಿವ ಸ್ಥಾನ: ಸಂಸದ ಪ್ರತಾಪ್‌ ಸಿಂಹ ಮಾತನಾಡಿ, ತಾಲೂಕಿನ ಸಮಗ್ರ ಅಭಿವೃದ್ಧಿಗೆ ವಿಶ್ವನಾಥ್‌ ಆಯ್ಕೆಯಾಗಬೇಕಿದೆ. ತಾಲೂಕಿನ ಮತದಾರರು ವಿಶ್ವನಾಥ್‌ ಅವರನ್ನು ಗೆಲ್ಲಿಸಿಕೊಟ್ಟರೆ, ಮುಖ್ಯಮಂತ್ರಿ ಯಡಿಯೂರಪ್ಪ ಇವರನ್ನು ಸಚಿವರನ್ನಾಗಿಸುತ್ತಾರೆ. ಕ್ಷೇತ್ರದಲ್ಲಿ ದ್ವೇಷದ ಮತ್ತು ದುಡ್ಡಿನ ರಾಜಕಾರಣ ನಿಲ್ಲಬೇಕಿದೆ. ವಿಶ್ವನಾಥ್‌ ಸೇರ್ಪಡೆಯಿಂದ ಪಕ್ಷಕ್ಕೆ ಬಲ ಬಂದಿದೆ ಎಂದರು. ಜಿಲ್ಲಾಧ್ಯಕ್ಷ ಎಂ.ಶಿವಣ್ಣ ಕಾರ್ಯಕರ್ತರ ಸಮ್ಮುಖದಲ್ಲಿ ವಿಶ್ವನಾಥ್‌ಗೆ ಬಿ.ಫಾರಂ ಹಸ್ತಾಂತರಿಸಿದರು.

Advertisement

ಕೊನೆ ಚುನಾವಣೆ: ಮಾಜಿ ಶಾಸಕ ಸಿ.ಎಚ್‌.ವಿಜಯಶಂಕರ್‌ ಮಾತನಾಡಿ, ಈ ಚುನಾವಣೆ ಬಹುಶಃ ವಿಶ್ವನಾಥ್‌ ಅವರ ಕೊನೆಯ ಚುನಾವಣೆಯಾಗಿರಬಹುದು. ಈ ಕಾರಣಕ್ಕಾಗಿ ಕ್ಷೇತ್ರದ ಜನತೆ ಅವರಿಗೆ ಮತ ನೀಡುವ ಮೂಲಕ ಮಂತ್ರಿಯನ್ನಾಗಿಸಬೇಕಿದೆ. ಹಿರಿಯರಾಗಿರುವ ವಿಶ್ವನಾಥ್‌ ಅನುಮತಿ ಇಲ್ಲದೆ ಘೋಷಣೆ ಮಾಡುತ್ತಿದ್ದೇನೆಂದರು. ವಿಧಾನಪರಿಷತ್‌ ಮಾಜಿ ಸದಸ್ಯ ಸಿದ್ದರಾಜು, ಮುಖಂಡ ನಾಗರಾಜ ಮಲ್ಲಾಡಿ, ನಗರಾಧ್ಯಕ್ಷ ರಾಜೇಂದ್ರ, ಮಹಿಳಾ ಘಟಕದ ಅಧ್ಯಕ್ಷೆ ವೆಂಕಟಮ್ಮ, ಜಿಲ್ಲಾ ಸಂಘಟನಾ ಕಾರ್ಯದರ್ಶಿ ಸುರೇಶ್‌ಬಾಬು, ಕೆ.ಟಿ.ಗೋಪಾಲ್‌, ಹನಗೋಡು ಮಂಜುನಾಥ್‌, ಜಿಲ್ಲಾ ರೈತಮೋರ್ಚಾ ಉಪಾಧ್ಯಕ್ಷ ಬಿ.ಎನ್‌.ನಾಗರಾಜಪ್ಪ, ಚಂದ್ರು ಇತರರಿದ್ದರು.

ತಾಲೂಕು ಅಧ್ಯಕ್ಷ ಗೈರು: ಕಾರ್ಯಕ್ರಮಕ್ಕೆ ಬಿಜೆಪಿ ತಾಲೂಕು ಅಧ್ಯಕ್ಷ ಯೋಗಾನಂದಕುಮಾರ್‌ ಗೈರಾಗಿದ್ದು, ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ. ಸಂಸದ ಪ್ರತಾಪಸಿಂಹ ಹಾಗೂ ಯೋಗಾನಂದರ ನಡುವೆ ಮುಸುಕಿನ ಗುದ್ದಾಟದಿಂದಾಗಿ ಗೈರಾಗಿದ್ದಾರೆ ಎನ್ನಲಾಗುತ್ತಿದೆ. ಕಾರ್ಯಕ್ರಮದಲ್ಲಿ ಜಿಪಂ ಮಾಜಿ ಸದಸ್ಯರಾದ ಮಂಜು, ಪರಮೇಶ್‌, ಅಬ್ಟಾಸ್‌, ಅಣ್ಣಯ್ಯನಾಯ್ಕ, ಎಂ.ಶಿವಕುಮಾರ್‌, ಎ.ಪಿ.ಸ್ವಾಮಿ, ಗಣೇಶ್‌ ಕುಮಾರಸ್ವಾಮಿ, ಕುನ್ನೇಗೌಡ, ನವೀನ್‌ ರೈ ಸೇರಿದಂತೆ ಅನೇಕ ಮುಖಂಡರು ಪಕ್ಷ ಸೇರಿದರು.

Advertisement

Udayavani is now on Telegram. Click here to join our channel and stay updated with the latest news.

Next