Advertisement
ಕಚೇರಿಗೆ ಅಲೆದಾಡುವಂತಹ ಪರಿಸ್ಥಿತಿ: ಶಿಡ್ಲಘಟ್ಟ ನಗರದಲ್ಲಿರುವ ಅಂಚೆ ಕಚೇರಿ ಮೊದಲೇ ಸಾರ್ವಜನಿಕರಿಂದ ದೂರವಿದೆ. ಕೆಲವರಿಗೆ ಪೋಸ್ಟ್ ಆಫೀಸ್ ಇಲ್ಲಿದೆ ಎನ್ನುವುದೇ ಗೊತ್ತಿಲ್ಲ. ಮತ್ತೂಂದೆಡೆ ಸಿಬ್ಬಂದಿ ಕೊರತೆಯಿಂದ ಸಾರ್ವಜನಿಕರಿಗೆ ನಿರೀಕ್ಷಿತ ಪ್ರಮಾಣದಲ್ಲಿ ಸೇವೆ ನೀಡಲು ಸಿಬ್ಬಂದಿ ಹರಸಾಹಸ ಮಾಡುವಂತಾಗಿದೆ. ಸಾಮಾಜಿಕ ಭದ್ರತಾ ಯೋಜನೆಯಡಿ ಮಾಸಾಶನ ಪಡೆಯುತ್ತಿರುವ ಬಡವರು ಅಂಚೆ ಕಚೇರಿ ಮತ್ತು ತಾಲೂಕು ಕಚೇರಿಗೆ ಅಲೆದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.
Related Articles
Advertisement
ಮೂಲೆಗುಂಪಾದ ಆಧಾರ್ ನೋಂದಣಿ ಕೇಂದ್ರ: ಸರ್ಕಾರಿ ಸೌಲಭ್ಯಗಳನ್ನು ವ್ಯವಸ್ಥಿತವಾಗಿ ನೀಡಲು ಕೇಂದ್ರ ಮತ್ತು ರಾಜ್ಯ ಸರ್ಕಾರ ಪ್ರತಿಯೊಬ್ಬರಿಂದ ಆಧಾರ್ ಕಾರ್ಡ್ ಕಡ್ಡಾಯಗೊಳಿಸಿದೆ. ಆದರೆ ಜನಸಂಖ್ಯೆಗೆ ಅನುಗುಣವಾಗಿ ಆಧಾರ್ ನೋಂದಣಿ ಮತ್ತು ಪರಿಷ್ಕರಣೆ ಕೇಂದ್ರ ತೆರೆಯಲು ತಾಲೂಕು ಮತ್ತು ಜಿಲ್ಲಾಡಳಿತ ವಿಫಲಗೊಂಡಿದೆ. ಇದರಿಂದ ಸಾರ್ವಜನಿಕರು ಶಿಡ್ಲಘಟ್ಟ ನಗರದಲ್ಲಿರುವ ಏಕೈಕ ಆಧಾರ್ ನೋಂದಣಿ ಕೇಂದ್ರ (ಪ್ರಗತಿ ಕೃಷಿ ಗ್ರಾಮೀಣ ಬ್ಯಾಂಕ್)ನಲ್ಲಿ ಟೋಕನ್ ಪಡೆದುಕೊಂಡು ಕೆಲಸ ಕಾರ್ಯಗಳನ್ನು ಬಿಟ್ಟು ತಮ್ಮ ಸರದಿಗಾಗಿ ಗಂಟೆಗಟ್ಟಲೇ ಕಾಯಬೇಕಾದ ಶೋಚನೀಯ ಪರಿಸ್ಥಿತಿ ನಿರ್ಮಾಣವಾಗಿದೆ.
ನಗರದ ಅಂಚೆ ಕಚೇರಿಯಲ್ಲಿರುವ ಆಧಾರ್ ನೋಂದಣಿ ಕೇಂದ್ರ ಸಿಬ್ಬಂದಿ ಕೊರತೆಯಿಂದ ಮೂಲೆಗುಂಪಾಗಿದೆ. ಈ ಸಂಬಂಧ ಅಂಚೆ ಕಚೇರಿಯ ಅಧಿಕಾರಿಗಳನ್ನು ಕೇಳಿದರೆ ಆಧಾರ್ ನೋಂದಣಿ ಮಾಡಿಸಲು ಸಿಸ್ಟಮ್ ಆನ್ ಆಗುತ್ತದೆ. ಆದರೆ ನಂತರ ಯಾವುದೇ ಪ್ರಕ್ರಿಯೆ ನಡೆಯುತ್ತಿಲ್ಲ. ಈ ಸಂಬಂಧ ಇಲಾಖೆಯ ಹಿರಿಯ ಅಧಿಕಾರಿಗಳಿಗೆ ಪತ್ರದ ಮೂಲಕ ಮಾಹಿತಿ ನೀಡಿದ್ದೇವೆ. ನಮ್ಮಲ್ಲಿ ಸಿಬ್ಬಂದಿ ಕೊರತೆಯಿಂದ ಕೆಲಸವನ್ನು ಸಕಾಲದಲ್ಲಿ ಮಾಡಲು ಹರಸಾಹಸ ಮಾಡುತ್ತಿದ್ದೇವೆ. ಸಿಬ್ಬಂದಿಯ ಕೊರತೆಯ ನಡುವೆಯೂ ಅತಿ ಹೆಚ್ಚು ಕೆಲಸ ಮಾಡುತ್ತಿದ್ದೇವೆ ಎನ್ನುತ್ತಾರೆ ಸಿಬ್ಬಂದಿ ವರ್ಗ.
ಮಾಸಾಶನಕ್ಕಾಗಿ ಪರದಾಟ: ಸಾಮಾಜಿಕ ಭದ್ರತಾ ಯೋಜನೆಯಡಿ ಮಾಸಾಶನವನ್ನು ಪಡೆದುಕೊಳ್ಳುತ್ತಿರುವ ಬಹುತೇಕ ವಯೋವೃದ್ಧರು, ವಿಧವೆಯರು, ಅಂಗವಿಕಲರಿಗೆ ಕಳೆದ ನಾಲೈದು ತಿಂಗಳಿಂದ ಮಾಸಾಶನ ಬಂದಿಲ್ಲ ಎಂಬ ದೂರು ಸರ್ವೇ ಸಾಮಾನ್ಯವಾಗಿದೆ. ಅಂಚೆ ಕಚೇರಿಯಲ್ಲಿ ಕೇಳಿದರೆ ನಿಮ್ಮ ಪೆನ್ಷನ್ ಹಣ ಬಂದಿಲ್ಲ. ಬಂದರೆ ಕೊಡ್ತೀವಿ ಎನ್ನುತ್ತಾರೆ. ಮತ್ತೂಂದೆಡೆ ತಾಲೂಕು ಕಚೇರಿಯಲ್ಲಿ ಕೇಳಿದರೆ ನಮ್ಮಿಂದ ಯಾವುದು ಬಾಕಿ ಎಲ್ಲಾ ಕಳುಹಿಸಿದ್ದೇವೆ.
ಬೇಕಾದರೆ ಖಜಾನೆ ಇಲಾಖೆಯಲ್ಲಿ ಕೇಳಿ ಎನ್ನುತ್ತಾರೆ. ಅಲ್ಲಿ ಕೇಳಿದರೆ ಇಲ್ಲಿ ಯಾವುದು ಸಹ ಗೌಪ್ಯವಾಗಿಲ್ಲ. ಎಲ್ಲವೋ ಆನ್ಲೈನ್ ಆಗಿರುವುದರಿಂದ ವಿಳಂಬ ಆಗಲು ಸಾಧ್ಯವಿಲ್ಲ. ಸರ್ಕಾರದಿಂದ ಹಣ ಬಂದರೆ ನೇರವಾಗಿ ಫಲಾನುಭವಿಗಳ ಖಾತೆಗೆ ಜಮಾ ಆಗುತ್ತದೆ ಎನ್ನುತ್ತಾರೆ. ಆದರೆ ಕಳೆದ ನಾಲೈದು ತಿಂಗಳಿಂದ ಮಾಸಾಶನ ಪಡೆಯಲು ಫಲಾನುಭವಿಗಳು ಅಂಚೆ ಕಚೇರಿ, ತಾಲೂಕು ಕಚೇರಿ ಹಾಗೂ ಖಜಾನೆ ಇಲಾಖೆ ಕಚೇರಿಗಳಿಗೆ ಅಲೆದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.
ಅಧೀಕ್ಷಕರ ಗಮನಕ್ಕೆ ತರುವ ಭರವಸೆ: ಅಂಚೆ ಕಚೇರಿಯ ಸಿಬ್ಬಂದಿ ಕೊರತೆಯಿಂದ ಸಾರ್ವಜನಿಕರಿಗೆ ಆಗುತ್ತಿರುವ ಸಮಸ್ಯೆಗಳ ಕುರಿತು ಅಂಚೆ ಇಲಾಖೆಯ ಅಧೀಕ್ಷಕರೊಂದಿಗೆ ದೂರವಾಣಿ ಮೂಲಕ ಪತ್ರಿಕೆ ಪ್ರಯತ್ನಿಸಿದರೂ ಸಹ ಸಫಲವಾಗಿಲ್ಲ. ವೀಡಿಯೋ ಕಾನ್ಫೆರನ್ಸ್ದಲ್ಲಿ ಮಗ್ನರಾಗಿದ್ದರಿಂದ ಅವರ ಅಧೀನ ಸಿಬ್ಬಂದಿ ಮಾತನಾಡಿ, ಶಿಡ್ಲಘಟ್ಟ ತಾಲೂಕಿನ ಅಂಚೆ ಕಚೇರಿಯ ಸಮಸ್ಯೆಗಳ ಕುರಿತು ಅಧೀಕ್ಷಕರ ಗಮನಕ್ಕೆ ತರಲಾಗುವುದು ಎಂದು ಭರವಸೆ ನೀಡಿದ್ದಾರೆ. ಒಟ್ಟಾರೆ ಕೇಂದ್ರ ಸರ್ಕಾರದ ಅಧೀನದಲ್ಲಿ ನಡೆಯುತ್ತಿರುವ ಅಂಚೆ ಇಲಾಖೆಯಲ್ಲಿ ಸಿಬ್ಬಂದಿ ಕೊರತೆಯನ್ನು ಸಂಬಂಧಪಟ್ಟ ಇಲಾಖೆಯ ಹಿರಿಯ ಅಧಿಕಾರಿಗಳು ಹೇಗೆ ನಿಭಾಯಿಸುತ್ತಾರೆ ಎಂಬುದು ಯಕ್ಷ ಪ್ರಶ್ನೆಯಾಗಿದೆ.
ಶಿಡ್ಲಘಟ್ಟ ತಾಲೂಕು ಕಚೇರಿಯಲ್ಲಿ ಆಧಾರ್ ನೋಂದಣಿ ಕೇಂದ್ರ ಮಾಡಲು ಪ್ರಾಮಾಣಿಕ ಪ್ರಯತ್ನ ಮಾಡಿದ್ದೇವೆ. ಅದರೆ ಆಧುನಿಕ ವ್ಯವಸ್ಥೆಯನ್ನು ಅಪ್ಡೇಟ್ ಮಾಡಲು ವಿಳಂಬವಾಗಿದೆ. ಅಂಚೆ ಕಚೇರಿಯಲ್ಲಿ ಮಾಸಾಶನ ಹಣ ವಿತರಣೆ ವಿಚಾರದಲ್ಲಿ ಯಾವ ಕಾರಣಕ್ಕೆ ವಿಳಂಬವಾಗಿದೆ ಎಂಬುದನ್ನು ಪರಿಶೀಲಿಸಿ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳಿಗೆ ವರದಿ ಸಲ್ಲಿಸುತ್ತೇವೆ. -ಎಂ.ದಯಾನಂದ್, ತಹಶೀಲ್ದಾರ್ ಶಿಡ್ಲಘಟ್ಟ * ಎಂ.ಎ.ತಮೀಮ್ ಪಾಷ