Advertisement

ಹಾಳೆಯ ತಟ್ಟೆ!

08:16 PM Dec 08, 2019 | Lakshmi GovindaRaj |

ಅಡಿಕೆ ಹಾಳೆ ತಟ್ಟೆ ತಯಾರಿಸುವ ಕಾರ್ಖಾನೆಯದು. ದಕ್ಷಿಣ ಕನ್ನಡದ ಬಂಟ್ವಾಳ ತಾಲೂಕಿನ ಕೊಡಪದವಿನ ಕೊಡುಂಗೈಯಲ್ಲಿ ಇರುವ “ಇಕೋ ಬ್ಲಿಸ್‌’ ಸಂಸ್ಥೆಯಲ್ಲಿ ಕೋಟಿಗಟ್ಟಲೆ ವ್ಯವಹಾರ ನಡೆಯುತ್ತದೆ ಎನ್ನುವುದನ್ನು ಮೊದಲ ನೋಟಕ್ಕೆ ನಂಬುವುದು ಕಷ್ಟ. ಆದರೆ ಒಮ್ಮೆ ಒಳಹೊಕ್ಕು ನೋಡಿದರೆ ಅದರಲ್ಲಿ ಅತಿಶಯೋಕ್ತಿ ಎನಿಸದು…

Advertisement

ಫ‌ುಟ್‌ಬಾಲ್‌ ಅಂಕಣದಂತಿರುವ ಬೃಹತ್‌ ಕಟ್ಟಡ. ಅದರಲ್ಲಿ ನಾಲ್ಕು ಮಹಡಿಗಳು. ಒಳಗೆ ಕಾಲಿಟ್ಟರೆ, ಲಕ್ಷಗಟ್ಟಲೆ ಲೆಕ್ಕದಲ್ಲಿ ಮೂಟೆ ಕಟ್ಟಿರುವ ಅಡಿಕೆ ಹಾಳೆಯ ತಟ್ಟೆಗಳು ಕಾಣಸಿಗುತ್ತವೆ. ಅಲ್ಲಿರುವ ಕೆಲಸಗಾರರು ಸುಮಾರು 500 ಹಾಗೂ ಯಂತ್ರಗಳು ನೂರಾರು! ಇದು “ಇಕೊ ಬ್ಲಿಸ್‌’ ಅಡಿಕೆ ಹಾಳೆ ತಟ್ಟೆ ಕಾರ್ಖಾನೆಯ ಒಂದು ನೋಟ. ಅದರ ಮ್ಯಾನೇಜಿಂಗ್‌ ಡೈರೆಕ್ಟರ್‌ ಬಲಿಪಗುಳಿ ರಾಜಾರಾಮ್‌ ಸಿ.ಜಿ. ಅವರು ಕಾರ್ಖಾನೆಯನ್ನು ತೋರಿಸುತ್ತಾ, “ನಾವೀಗ ವಾರಕ್ಕೆ ಎರಡು- ಮೂರು ಕಂಟೈನರುಗಳಲ್ಲಿ 22 ನಮೂನೆಯ ಅಡಿಕೆ ಹಾಳೆ ತಟ್ಟೆಗಳನ್ನು ರಫ್ತು ಮಾಡುತ್ತೇವೆ. ಒಂದೊಂದು ಕಂಟೈನರಿನಲ್ಲಿ 3- 4 ಲಕ್ಷ ಅಡಿಕೆ ಹಾಳೆ ತಟ್ಟೆಗಳು ಇರುತ್ತವೆ’ ಎಂದಾಗ, ಕೋಟಿಗಟ್ಟಲೆ ರೂಪಾಯಿ ವಾರ್ಷಿಕ ವಹಿವಾಟಿನ ಆ ಉದ್ದಿಮೆಯ ಇನ್ನೊಂದು ನೋಟ ದಕ್ಕಿತು.

ಇತರರಿಂದಲೂ ಖರೀದಿಸುತ್ತಾರೆ: ಅಲ್ಲಿ 500 ಮಂದಿ ಕೆಲಸಗಾರರು ದುಡಿಯುತ್ತಿದ್ದಾರೆ. ಇದಲ್ಲದೆ, ಸುಮಾರು 1,500 ಫ್ರಾಂಚೈಸಿ ಕೊಟ್ಟಿದ್ದಾರೆ. ಪ್ರತಿಯೊಂದು ಘಟಕದಲ್ಲೂ ದುಡಿಯುತ್ತಿರುವವರ ಸರಾಸರಿ ಸಂಖ್ಯೆ ಐದು. ಒಟ್ಟಾರೆಯಾಗಿ, ನಮ್ಮ ಉದ್ದಿಮೆಯಿಂದ 7,000ಕ್ಕೂ ಹೆಚ್ಚು ಜನರಿಗೆ ಉದ್ಯೋಗ ಸಿಕ್ಕಿದೆ ಎಂದು ರಾಜಾರಾಮ್‌ ಮಾಹಿತಿ ನೀಡಿದಾಗ, ಆ ಉದ್ದಿಮೆಯ ಮತ್ತೂಂದು ನೋಟ ಕಾಣಿಸಿತು. ತನ್ನೂರಿನ ಸುತ್ತಮುತ್ತಲ ಹಳ್ಳಿಗಳ ತೋಟಗಳಿಂದ ಅಡಿಕೆ ಹಾಳೆ ಸಂಗ್ರಹಿಸುತ್ತಿದ್ದ ರಾಜಾರಾಮ್‌ ಅವರಿಗೆ, ಅದು ಏನೇನೂ ಸಾಲದೆಂದು ಆರಂಭದಲ್ಲಿಯೇ ಗೊತ್ತಾಯಿತು. ಹಾಗಾಗಿ ದೂರದ ಊರುಗಳಿಂದಲೂ ಅಡಿಕೆ ಹಾಳೆ ಖರೀದಿಸಿದರು. ಇದೀಗ ದಕ್ಷಿಣ ಕನ್ನಡ, ಶಿವಮೊಗ್ಗ, ಉತ್ತರ ಕನ್ನಡ, ಚಿಕ್ಕಮಗಳೂರು ಹಾಗೂ ಕೇರಳದ ಕಾಸರಗೋಡು ಜಿಲ್ಲೆಯಿಂದಲೂ ಅಡಿಕೆ ಹಾಳೆ ಖರೀದಿಸುತ್ತಿದ್ದಾರೆ.

ಅಡಿಕೆ ಹಾಳೆ ತಯಾರಿಯ ಹಂತಗಳು: ಅಡಿಕೆ ಹಾಳೆಯನ್ನು ಪೈಪಿನಿಂದ ರಭಸವಾಗಿ ನುಗ್ಗಿ ಬರುವ ನೀರಿನಿಂದ ತೊಳೆಯುವುದು ಮೊದಲ ಹಂತ. ಅನಂತರ ಅವನ್ನು ತುಂಡರಿಸಿ, ತುಂಡುಗಳನ್ನು ಒಂದೊಂದಾಗಿ ಯಂತ್ರಗಳ ಅಚ್ಚಿನಲ್ಲಿಟ್ಟು ಶಾಖ ನೀಡಿ ಒತ್ತುವುದು ಎರಡನೇ ಹಂತ. ಆಗ ವಿವಿಧ ವಿನ್ಯಾಸಗಳ ತಟ್ಟೆಗಳ ಅಚ್ಚು ಹಾಳೆಗಳಲ್ಲಿ ಮೂಡುತ್ತದೆ. ನಂತರ ಆ ತುಂಡುಗಳ ಅಂಚುಗಳನ್ನು ಕತ್ತರಿಸಿ, ಅವಕ್ಕೆ ಸೂಕ್ತ ವಿನ್ಯಾಸ ನೀಡುವ ಕೆಲಸ. ಬಳಿಕ ಆ ತಟ್ಟೆಗಳನ್ನು ಶುಚಿ ಮಾಡಿ, ಬೂಸ್ಟ್ ತಗುಲದಂತೆ ಅತಿನೇರಳೆ(ಅಲ್ಟ್ರಾವಯಲೆಟ್‌) ಕಿರಣಗಳಿಂದ ಕ್ರಿಮಿಶುದ್ಧೀಕರಣ ಮಾಡಲಾಗುತ್ತದೆ. ಕೊನೆಯ ಹಂತದಲ್ಲಿ, ತಟ್ಟೆಗಳನ್ನು ಕ್ಲಿಂಗ್‌- ಪ್ಲಾಸ್ಟಿಕ್‌ ಹಾಳೆಯಿಂದ ಸುತ್ತಿ, ರಟ್ಟಿನ ಪೆಟ್ಟಿಗೆಗಳಲ್ಲಿ ಪ್ಯಾಕ್‌ ಮಾಡಿದಾಗ ಅವು ಮಾರಾಟಕ್ಕೆ ತಯಾರು. ತಟ್ಟೆಗಳನ್ನು ಗ್ರೇಡಿಂಗ್‌ ಮಾಡಿ, ಮಾರುಕಟ್ಟೆಗೆ ಕಳುಹಿಸಲಾಗುವುದು. ಅಲ್ಲದೆ, ಅತ್ಯುತ್ತಮ ಗುಣಮಟ್ಟದವಾಗಿರುವುದರಿಂದ, ಹೊರದೇಶಗಳಿಗೆ ರಫ್ತು ಕೂಡಾ ಮಾಡಲಾಗುವುದು.

ಸಂಸ್ಥೆಯಲ್ಲಿನ ಸವಲತ್ತುಗಳು: ಕಾರ್ಮಿಕರ ಅಭಾವದ ಕುರಿತು ಕೇಳಿದಾಗ ರಾಜಾರಾಮ್‌ರವರು ಹೇಳಿದ್ದು “ನಮ್ಮಲ್ಲಿ ಆ ಸಮಸ್ಯೆಯಿಲ್ಲ. ಏಕೆಂದರೆ, ನಾವು ಕಾರ್ಮಿಕರಿಗೆ ಹಲವು ಸವಲತ್ತುಗಳನ್ನು ನೀಡುತ್ತಿದ್ದೇವೆ. ಪ್ರಾವಿಡೆಂಟ್‌ ಫ‌ಂಡ್‌(ಪಿ.ಎಫ್), ವಾರ್ಷಿಕ ಬೋನಸ್‌ನಂಥ ಆರ್ಥಿಕ ಸವಲತ್ತುಗಳ ಜೊತೆಗೆ, ಸುತ್ತಮುತ್ತಲಿನ ಹಳ್ಳಿಗಳಿಂದ ಬರುವ ಕೆಲಸಗಾರರಿಗೆ ವಾಹನ ವ್ಯವಸ್ಥೆಯನ್ನೂ ಒದಗಿಸುತ್ತಿದ್ದೇವೆ. ಹಲವರಿಗೆ ವಸತಿ ಸೌಕರ್ಯವನ್ನೂ ಕಲ್ಪಿಸಲಾಗಿದೆ. ಮಧ್ಯಾಹ್ನದ ಊಟವನ್ನೂ ನೀಡುತ್ತೇವೆ. ಇನ್ನೊಂದು ಗಮನಾರ್ಹ ಅಂಶವೆಂದರೆ, ಈ ವೃತ್ತಿಕ್ಷೇತ್ರದಲ್ಲಿ ಆರೋಗ್ಯಕ್ಕೆ ಹಾನಿಯಾಗುವ ಸಾಧ್ಯತೆಗಳು ತುಂಬಾ ಕಡಿಮೆ’. ಅಡಿಕೆ ಬೆಳೆಗಾರರಿಗಂತೂ ಈ ಉದ್ದಿಮೆಯಿಂದ ಬಹಳ ಪ್ರಯೋಜನವಾಗಿದೆ. ಮುಂಚೆ ಕಸವೆಂದು ಎಲ್ಲೆಂದರಲ್ಲಿ ಎಸೆಯುತ್ತಿದ್ದ ಅಡಿಕೆ ಹಾಳೆಗಳನ್ನು ಅವರೀಗ ಜೋಪಾನವಾಗಿ ತೆಗೆದಿಡುತ್ತಾರೆ.

Advertisement

ಯಾಕೆಂದರೆ ಇಕೊ ಬ್ಲಿಸ್‌ ಉದ್ದಿಮೆ, ಅಡಿಕೆ ಹಾಳೆಯನ್ನು ಸುಮಾರು 1.50 ರೂ. ದರದಲ್ಲಿ ಖರೀದಿಸುತ್ತಿದೆ. 1,000 ಹಾಳೆ ಮಾರಿದರೆ ರೈತರಿಗೆ ಏನಿಲ್ಲವೆಂದರೂ 1,500 ರೂ. ಆದಾಯ! ಇಕೊ ಬ್ಲಿಸ್‌, ಈಗಾಗಲೇ ಕೇಂದ್ರ ಸರಕಾರದಿಂದ ಎರಡು ಬಾರಿ ಗೌರವಕ್ಕೆ ಪಾತ್ರವಾಗಿದೆ. ತಾವು ಶುರುಮಾಡಿದಾಗ ಇಕೊ ಬ್ಲಿಸ್‌ ಸಂಸ್ಥೆ ಚಿಕ್ಕದಾಗಿತ್ತು. ಅದನ್ನು ಈಗಿರುವ ಹಂತಕ್ಕೆ ವಿಸ್ತರಿಸುವುದರಲ್ಲಿ ಪತ್ನಿ ರೇಷ್ಮಾ ಹಾಗೂ ಸೋದರರ ಬೆಂಬಲವನ್ನು ಸ್ಮರಿಸುತ್ತಾರೆ ರಾಜಾರಾಮ…. ಇದು ಗ್ರಾಮೀಣ ಪ್ರದೇಶಗಳಿಗೆ ಸೂಕ್ತವಾದ ಉದ್ದಿಮೆಗೊಂದು ಮಾದರಿ. ದಕ್ಷಿಣ ಕನ್ನಡದ ಬಂಟ್ವಾಳ ತಾಲೂಕಿನ ಕೊಡಪದವಿನ ಕೊಡುಂಗೈಯಲ್ಲಿರುವ “ಇಕೊ ಬ್ಲಿಸ್‌’ ಕಾರ್ಖಾನೆಗೆ ಮಂಗಳೂರಿನಿಂದ ವಾಹನದಲ್ಲಿ ಒಂದು ಗಂಟೆ ಪ್ರಯಾಣ. ಪ್ಲಾಸ್ಟಿಕ್‌ ನಿಷೇಧದ ಕೂಗು ಮೊಳಗುತ್ತಿರುವ ಇಂದಿನ ಸಮಯದಲ್ಲಿ, ಇಕೊ ಬ್ಲಿಸ್‌ ಸದ್ದಿಲ್ಲದೆ ಪರಿಸರಸ್ನೇಹಿ ಉತ್ಪನ್ನ ತಯಾರಿಕೆಯ ಜೊತೆಗೆ ಉದ್ಯೋಗ ಸೃಷ್ಟಿಗೂ ಕಾರಣವಾಗಿದೆ.

ಸ್ವಂತ ಉದ್ದಿಮೆಯ ಕನಸು: ಕೃಷಿಕ ಮನೆತನದವರಾದ ರಾಜಾರಾಮ್‌, ಇಂಜಿನಿಯರಿಂಗ್‌ ಶಿಕ್ಷಣದ ನಂತರ ಸ್ವಂತ ಉದ್ದಿಮೆ ಆರಂಭಿಸುವ ಕನಸಿನಲ್ಲಿ ಮುಳುಗಿದರು. ಅಂತೂ 1994ರಲ್ಲಿ ಅಡಿಕೆ ಹಾಳೆಯಿಂದ ತಟ್ಟೆಗಳನ್ನು ತಯಾರಿಸುವ ಯಂತ್ರವೊಂದನ್ನು ರೂಪಿಸಿದರು. ಮೊದಲ ಮೂರು ತಿಂಗಳಿನಲ್ಲಿ ಅವರು ಉತ್ಪಾದಿಸಿದ್ದು 10,000 ತಟ್ಟೆಗಳನ್ನು. ಕ್ರಮೇಣ ಉತ್ಪಾದನೆ ಹೆಚ್ಚಿಸುತ್ತಾ ಈಗ ಇದನ್ನು ಭಾರತದಲ್ಲಿ ಅತ್ಯಧಿಕ ಅಡಿಕೆ ಹಾಳೆ ತಟ್ಟೆ ಉತ್ಪಾದಿಸುವ ಕಾರ್ಖಾನೆಯನ್ನಾಗಿ ಬೆಳೆಸಿದ್ದಾರೆ.

ತರಿಸುವುದಕ್ಕಿಂತ ತಯಾರಿಸುವುದೇ ಲೇಸು: ಲಾರಿಯಲ್ಲಿ ಅಡಿಕೆ ಹಾಳೆ ತರಿಸುವುದು ದುಬಾರಿ ಎಂದು ರಾಜಾರಾಮ್‌ಅವರಿಗೆ ಬಹಳ ಬೇಗ ಸ್ಪಷ್ಟವಾಯಿತು. ಒಂದು ಲಾರಿ ಲೋಡ್‌ ಅಂದರೆ 15,000- 20,000 ಅಡಿಕೆ ಹಾಳೆ. ಇದನ್ನು ದೂರದ ಊರುಗಳಿಂದ ತರಿಸುವುದಕ್ಕೆ ಬದಲಾಗಿ, ಅಲ್ಲೇ ಅಡಿಕೆ ಹಾಳೆ ತಟ್ಟೆ ಉತ್ಪಾದಿಸುವ ಘಟಕ ಆರಂಭಿಸಿದರೆ, ವರ್ಷಕ್ಕೆ 7- 8 ಲಕ್ಷ ತಟ್ಟೆಗಳನ್ನು ಅಲ್ಲೇ ಉತ್ಪಾದಿಸಬಹುದು ಎಂಬುದು ಅವರ ಲೆಕ್ಕಾಚಾರ. ಹಾಗಾಗಿ, ಆಸಕ್ತರಿಗೆ ಅಡಿಕೆ ಹಾಳೆ ತಟ್ಟೆ ತಯಾರಿಸುವ ಯಂತ್ರಗಳನ್ನು ಒದಗಿಸಿ, ಅವರು ಉತ್ಪಾದಿಸಿದ ತಟ್ಟೆಗಳನ್ನು ಖರೀದಿಸಲು ಶುರು ಮಾಡಿದರು. ಮಾನವ ಶಕ್ತಿಯಿಂದ ಅಡಿಕೆ ಹಾಳೆ ತಟ್ಟೆ ತಯಾರಿಸುವ ಯಂತ್ರದ ಬೆಲೆ ರೂ. 18,000. ಅದರ ಜೊತೆಗೆ ಹಾಳೆ ಬಿಸಿ ಮಾಡಲಿಕ್ಕಾಗಿ ಅಡುಗೆ ಅನಿಲ ವ್ಯವಸ್ಥೆ ಮಾಡಿ ಘಟಕ ಆರಂಭಿಸಬಹುದು. ಅಡಿಕೆ ಹಾಳೆ ತಟ್ಟೆಯ ಗುಣಮಟ್ಟ ಕಾಯ್ದುಕೊಂಡ ಕಾರಣವೇ “ಇಕೊ ಬ್ಲಿಸ್‌’ ಕಾರ್ಖಾನೆಯ ಉತ್ಪನ್ನಗಳು ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಹೆಸರು ಗಳಿಸಲು ಸಾಧ್ಯವಾಗಿದೆ.

* ಅಡ್ಡೂರು ಕೃಷ್ಣ ರಾವ್‌

Advertisement

Udayavani is now on Telegram. Click here to join our channel and stay updated with the latest news.

Next