Advertisement

ಹಿಂಸಾಚಾರ ಭುಗಿಲೇಳಬಹುದು; ಇ.ಡಿ ಕಚೇರಿಗೆ ಭೇಟಿ ಕೊಡಲ್ಲ ಎಂದ ಶರದ್ ಪವಾರ್

08:26 AM Sep 28, 2019 | Nagendra Trasi |

ನವದೆಹಲಿ:ಹಿರಿಯ ರಾಜಕಾರಣಿ, ನ್ಯಾಶನಲಿಸ್ಟ್ ಕಾಂಗ್ರೆಸ್ ಪಕ್ಷದ ಮುಖ್ಯಸ್ಥ ಶರದ್ ಪವಾರ್ ಶುಕ್ರವಾರ ಮಧ್ಯಾಹ್ನ ವಿಚಾರಣೆಗೆ ಹಾಜರಾಗುವುದು ಬೇಡ ಎಂದು ಜಾರಿ ನಿರ್ದೇಶನಾಲಯ ಇ-ಮೇಲ್ ಮೂಲಕ ಸೂಚನೆ ನೀಡಿದೆ. ಯಾವಾಗ ವಿಚಾರಣೆಗೆ ಹಾಜರಾಗಬೇಕೋ ಆ ಸಂದರ್ಭದಲ್ಲಿ ಮಾಹಿತಿ ನೀಡಲಾಗುವುದು ಎಂದು ಇ.ಡಿ ತಿಳಿಸಿದೆ.

Advertisement

ಮಹಾರಾಷ್ಟ್ರ ಸ್ಟೇಟ್ ಕೋ ಆಪರೇಟಿವ್ ಬ್ಯಾಂಕ್(ಎಂಎಸ್ ಸಿಬಿ)ನ 25 ಸಾವಿರ ಕೋಟಿ ರೂಪಾಯಿ ಹಗಣರದ ಆರೋಪಕ್ಕೆ ಸಂಬಂಧಿಸಿದಂತೆ ದಾಖಲಾಗಿರುವ ಪ್ರಕರಣದ ಬಗ್ಗೆ ಸಿಬಿಐ ತನಿಖೆ ನಡೆಸುತ್ತಿದೆ. ಈ ಹಿನ್ನೆಲೆಯಲ್ಲಿ ಶರದ್ ಪವಾರ್ ಇಂದು ಮುಂಬೈನಲ್ಲಿರುವ ಇ.ಡಿ ಕಚೇರಿಗೆ ಹಾಜರಾಗುವುದಾಗಿ ತಿಳಿಸಿದ್ದರು.

ಏತನ್ಮಧ್ಯೆ ಶರದ್ ಪವಾರ್ ಜಾರಿ ನಿರ್ದೇಶನಾಲಯ ಕಚೇರಿಗೆ ಭೇಟಿ ನೀಡುವುದನ್ನು ಕೈಬಿಡಿ ಎಂದು ಮುಂಬೈ ಹಿರಿಯ ಪೊಲೀಸ್ ಅಧಿಕಾರಿಗಳು ಮನವಿ ಮಾಡಿಕೊಂಡಿದ್ದಾರೆ. ಭೇಟಿ ನೀಡಿದ್ದಲ್ಲಿ ಗಲಾಟೆ, ಹಿಂಸಾಚಾರ ನಡೆದರೆ ಕಾನೂನು ಸುವ್ಯವಸ್ಥೆಗೆ ಭಂಗ ಬರಬಹುದು ಎಂದು ಅಧಿಕಾರಿಗಳು ಎಚ್ಚರಿಸಿದ್ದರು ಎಂದು ವರದಿ ತಿಳಿಸಿದೆ. ಇ.ಡಿ ಕಚೇರಿಗೆ ಭೇಟಿ ನೀಡುವುದಾಗಿ ಪವಾರ್ ಹೇಳಿಕೆ ಕೊಟ್ಟಿದ್ದರಿಂದ ಪೊಲೀಸರು ಜಾರಿ ನಿರ್ದೇಶನಾಲಯದ ಸುತ್ತಮುತ್ತ ನಿಷೇಧಾಜ್ಞೆ ಜಾರಿಗೊಳಿಸಿದ್ದರು.

ಮುಂಬೈ ಪೊಲೀಸ್ ಅಧಿಕಾರಿಗಳ ಮನವಿ ಹಿನ್ನೆಲೆಯಲ್ಲಿ ತಾನು ಶುಕ್ರವಾರ ಇ.ಡಿ ಕಚೇರಿಗೆ ಭೇಟಿ ನೀಡುತ್ತಿಲ್ಲ ಎಂದು ಶರದ್ ಪವಾರ್ ಸುದ್ದಿಗಾರರ ಜತೆ ಮಾತನಾಡುತ್ತ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next