Advertisement

ವಿಕಾಸಕ್ಕೆ ಶಂಕರರೇ ಸ್ಫೂರ್ತಿ

11:42 AM Oct 30, 2017 | |

ಬೆಂಗಳೂರು: ಸೌಂದರ್ಯ ಲಹರಿ ಸೇರಿದಂತೆ ಆದಿ ಶಂಕರಾಚಾರ್ಯರ ಸಿದ್ಧಾಂತಗಳೇ ಕೇಂದ್ರ ಸರ್ಕಾರದ ನ್ಯೂ ಇಂಡಿಯಾ ಮತ್ತು ಸಬ್‌ಕಾ ಸಾಥ್‌ ಸಬ್‌ಕಾ ವಿಕಾಸ್‌ ಕಾರ್ಯಕ್ರಮಗಳಿಗೆ ಸ್ಪೂರ್ತಿ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

Advertisement

ಇಡೀ ವಿಶ್ವವೇ ಒಂದು ಪರಿವಾರ. ಭಕ್ತರಲ್ಲಿ ಬೇಧ-ಭಾವ ಇಲ್ಲ. ಎಲ್ಲರೂ ಸಮಾನರು ಎಂಬ ಶಂಕರಾಚಾರ್ಯರ ಸಂಸ್ಕೃತಿಯ ಚಿಂತನೆ ವರ್ತಮಾನಕ್ಕೂ ಅನ್ವಯವಾಗುತ್ತದೆ. ನಮ್ಮಲ್ಲಿರುವ ನದಿ, ನೀರು, ಕಾಡು, ಗಾಳಿಯೊಂದಿಗೆ ಸಂಸ್ಕೃತಿ ಮಿಳಿತವಾಗಿದೆ ಎಂದು ಅವರು ಪ್ರತಿಪಾದಿಸುತ್ತಿದ್ದರು. ಇದರ ಆಧಾರದ ಮೇಲೆಯೇ ಕೇಂದ್ರ ಸರ್ಕಾರ ನ್ಯೂ ಇಂಡಿಯಾ ಮತ್ತು ಸಬ್‌ಕಾ ಸಾಥ್‌ ಸಬ್‌ಕಾ ವಿಕಾಸ್‌ ಕಾರ್ಯಕ್ರಮ ರೂಪಿಸಿದೆ ಎಂದರು.

ವೇದಾಂತ ಭಾರತೀ ಸಂಸ್ಥೆಯು ಯಡತೊರೆ ಯೋಗಾನಂದೇಶ್ವರ ಸರಸ್ವತೀ ಮಠದ ಶಂಕರ ಭಾರತೀ ಮಹಾಸ್ವಾಮಿಗಳ ಸಾನ್ನಿಧ್ಯದಲ್ಲಿ ಅರಮನೆ ಮೈದಾನದಲ್ಲಿ ಹಮ್ಮಿಕೊಂಡಿದ್ದ ಎರಡು ದಿನಗಳ ದಶಮ ಸೌಂದರ್ಯ ಲಹರೀ ಪಾರಾಯಣೋತ್ಸವ ಮತ್ತು ದಕ್ಷಿಣಾ ಮೂರ್ತಿ ಅಷ್ಟಕಗಳ ಮಹಾಸಮರ್ಪಣೆ ಕಾರ್ಯಕ್ರಮದಲ್ಲಿ ಭಾನುವಾರ ಪಾಲ್ಗೊಂಡು ಅವರು ಮಾತನಾಡಿದರು.

ಒಂದು ಜಾಗದಲ್ಲಿ, ಎಲ್ಲರೂ ಒಟ್ಟಾಗಿ ಒಂದೇ ಸ್ವರದಲ್ಲಿ ಮಂತ್ರಗಳನ್ನು ಪಠಿಸಿದರೆ ಆ ಜಾಗದಲ್ಲಿ ಒಂದು ಶಕ್ತಿ ಉದ್ಭವವಾಗುತ್ತದೆ. ಎಲ್ಲರಿಗೂ ಅನುಕೂಲವಾಗುವ ವಾತಾವರಣ ನಿರ್ಮಾಣವಾಗುತ್ತದೆ ಎಂದು ಪುರಾಣಗಳಲ್ಲಿ ಹೇಳುತ್ತಿದ್ದರು.

ಇದೀಗ ಸೌಂದರ್ಯ ಲಹರಿ ಮತ್ತು ದಕ್ಷಿಣಾ ಮೂರ್ತಿ ಅಷ್ಟಕಗಳನ್ನು ಸಹಸ್ರಾರು ಮಂದಿ ಒಂದೇ ಸ್ವರದಲ್ಲಿ ಪಠಿಸಿ ಬೆಂಗಳೂರಿನಲ್ಲೂ ಅಂತಹ ಶಕ್ತಿ ಉದ್ಭವವಾಗುವಂತೆ ನೋಡಿಕೊಂಡಿದ್ದಾರೆ. ಇಂತಹ ಕಾರ್ಯಕ್ರಮದಲ್ಲಿ ಭಾಗವಹಿಸುವ ಸೌಭಾಗ್ಯವನ್ನು ನನಗೆ ಕರುಣಿಸಿದ ಶಂಕರ ಭಾರತೀ ಸ್ವಾಮೀಜಿ ಮತ್ತು ವೇದಾಂತ ಭಾರತೀ ಸಂಸ್ಥೆಗೆ ತಾವು ಋಣಿಯಾಗಿರುವುದಾಗಿ ಹೇಳಿದರು.

Advertisement

ಸೌಂದರ್ಯ ಲಹರಿ ಪಠಿಸಿದ ಪ್ರಧಾನಿ
ಪ್ರಧಾನಿ ನರೇಂದ್ರ ಮೋದಿ ಅವರು ವೇದಿಕೆಗೆ ಬಂದ ಮೇಲೆ ನೆರೆದಿದ್ದ ಸಹಸ್ರಾರು ಮಂದಿ ಶಂಕರಾಚಾರ್ಯ ವಿರಚಿತ ಸೌಂದರ್ಯ ಲಹರಿಯ ಹತ್ತು ಶ್ಲೋಕಗಳು, ಕೊನೆಯ ಶ್ಲೋಕ ಮತ್ತು ದಕ್ಷಿಣಾ ಮೂರ್ತಿ ಅಷ್ಟಕಗಳ ಮೂರು ಸ್ತೋತ್ರಗಳನ್ನು ಪಠಿಸಿದರು. ಇದಕ್ಕೆ ಮುನ್ನ ಸ್ತೋತ್ರದ ಪುಸ್ತಕಗಳನ್ನು ಪ್ರಧಾನಿ ಸೇರಿದಂತೆ ಗಣ್ಯರಿಗೆ ವಿತರಿಸಲಾಯಿತು. ನೆರೆದಿದ್ದವರೊಂದಿಗೆ ಸೇರಿದ ಪ್ರಧಾನಿ ನರೇಂದ್ರ ಮೋದಿ ಅವರೂ ಸೌಂದರ್ಯ ಲಹರಿ ಶ್ಲೋಕ ಮತ್ತು ದಕ್ಷಿಣಾ ಮೂರ್ತಿ ಅಷ್ಟಕಗಳನ್ನು ಪಠಣ ಮಾಡಿದರು.

ನಂತರ ತಮ್ಮ ಭಾಷಣದಲ್ಲೂ ಸೌಂದರ್ಯ ಲಹರಿಯ ವಿಚಾರಗಳನ್ನು ಹೇಳಿದ ಪ್ರಧಾನಿ, ನಾನು ದಸರಾ ಸಂದರ್ಭದಲ್ಲಿ ಒಂಬತ್ತು ದಿನ ವೃತಾಚರಣೆ ಮಾಡುತ್ತಿದ್ದೆ. ಆ ವೇಳೆ ಸೌಂದರ್ಯ ಲಹರಿಯನ್ನೂ ಹೇಳುತ್ತಿದ್ದೆ ಎಂದಾಗ ಸಭಿಕರು ಚಪ್ಪಾಳೆ ತಟ್ಟಿ ಸಂತಸ ವ್ಯಕ್ತಪಡಿಸಿದರು.

ಮಹಾಸಮರ್ಪಣೆ
ಅರಮನೆ ಮೈದಾನದ ಕೃಷ್ಣ ವಿಹಾರದಲ್ಲಿ ಶನಿವಾರ ಸುಮಾರು 70 ಸಾವಿರ ಶಾಲಾ ಮಕ್ಕಳಿಂದ ಸೌಂದರ್ಯ ಲಹರಿ ಮತ್ತು ದಕ್ಷಿಣಾ ಮೂರ್ತಿ ಅಷ್ಟಕಗಳ ಪಠಮವಾಗಿದ್ದರೆ, ಭಾನುವಾರ ಸುಮಾರು ಅಷ್ಟೇ ಸಂಖ್ಯೆಯ ಮಹಿಳೆಯರು ಮತ್ತು ಪುರುಷರಿಂದ ಇವರೆಡರ ಪಠಣ ನಡೆಯಿತು. ಮಧ್ಯಾಹ್ನ 1 ಗಂಟೆಗೆ ಸರಿಯಾಗಿ ಆರಂಭವಾದ ಕಾರ್ಯಕ್ರಮದಲ್ಲಿ ಸುಮಾರು 1 ಗಂಟೆ 15 ನಿಮಿಷ ನೆರೆದಿದ್ದ ಸಹಸ್ರಾರು ಸಂಖ್ಯೆಯ ಜನರು ಸೌಂದರ್ಯ ಲಹರಿ ಮತ್ತು ದಕ್ಷಿಣಾಮೂರ್ತಿ ಅಷ್ಟಕಗಳನ್ನು ಪಟಣ ಮಾಡಿದರು. ನಂತರ ಶ್ಲೋಕಗಳ ಕುರಿತ ವಿವರಣೆ ನೀಡಲಾಯಿತು. 

ಕಾರ್ಯಕ್ರಮದಲ್ಲಿ ಹೆಚ್ಚು ಸಂಖ್ಯೆಯಲ್ಲಿ ಜನ ಸೇರಿದ್ದರಿಂದ ಪ್ರಧಾನಿ ಕಾರ್ಯಕ್ರಮ ವೀಕ್ಷಿಸಲು ಅಲ್ಲಲ್ಲಿ ಬೃಹತ್‌ ಎಲ್‌ಸಿಡಿ ಪರದೆಗಳನ್ನು ಹಾಕಲಾಗಿತ್ತು. ಬಂದಿದ್ದವರಿಗೆ ಅದಮ್ಯ ಚೇತನ ಸಂಸ್ಥೆಯಿಂದ ಉಪಹಾರ, ನೀರಿನ ವ್ಯವಸ್ಥೆ ಕಲ್ಪಿಸಿದ್ದರೆ, ಮೈಯಾಸ್‌ ಗ್ರೂಪ್‌ನ ಸದಾನಂದ ಮಯ್ಯ ಅವರು ಮೊಸರನ್ನದ ವ್ಯವಸ್ಥೆ ಮಾಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next