Advertisement

ರಾಜನೀತಿ: ದ್ರಾವಿಡರಲ್ಲಿ ಶಾ ಮ್ಯಾಜಿಕ್‌ ನಡೆಯುತ್ತಾ?

10:58 PM Nov 22, 2020 | mahesh |

ಮೇರು ವ್ಯಕ್ತಿತ್ವದ ಕರುಣಾನಿಧಿ, ಜಯಲಲಿತಾ ಈಗ ಕಾಲವಾಗಿದ್ದಾರೆ. ಹೀಗಾಗಿ, ವಿಧಾನಸಭೆ ಚುನಾವಣೆ ಕುತೂಹಲ ಕೆರಳಿಸಿದೆ. ಅಂಥ ಸ್ಥಿತಿಯಲ್ಲಿ ಬಿಜೆಪಿ ತಮಿಳುನಾಡಲ್ಲಿ ನೆಲೆಯೂರಲು ಪ್ರಯತ್ನ ಮಾಡುತ್ತಿದೆ. ಗೃಹ ಸಚಿವ ಅಮಿತ್‌ ಶಾ ಚೆನ್ನೈ ಪ್ರವಾಸದ ಫ‌ಲಿತಾಂಶ ಪ್ರಕಟವಾಗಲು ಇನ್ನೂ ಕೊಂಚ ಸಮಯ ಬೇಕಾದೀತು.

Advertisement

ತಮಿಳುನಾಡು ವಿಧಾನಸಭೆ ಚುನಾವಣೆಗೆ ಉಳಿದಿರು ವುದು ಕೇವಲ ಆರು ತಿಂಗಳು ಮಾತ್ರ. ಸತತ ಮೂರನೇ ಬಾರಿಗೆ ಎಐಎಡಿಎಂಕೆ ಅಧಿಕಾರಕ್ಕೆ ಬರುತ್ತದೋ ಇಲ್ಲವೋ ಗೊತ್ತಿಲ್ಲ. 2016ರಲ್ಲಿ ನಡೆದ ಚುನಾವಣೆಯಲ್ಲಿ ದಶಕಗಳ ಬಳಿಕ ದ್ರಾವಿಡ ರಾಜ್ಯದಲ್ಲಿ ಸತತ ಎರಡನೇ ಬಾರಿಗೆ ಎಐಎಡಿಎಂಕೆ ಅಧಿಕಾರ ಉಳಿಸಿಕೊಂಡದ್ದು ಈಗ ಇತಿಹಾಸ. ಅದಕ್ಕಿಂತ ಮೊದಲು 1977ರಿಂದ 1984ರ ವರೆಗೆ ನಡೆದ ಚುನಾವಣೆಯಲ್ಲಿ ಅಣ್ಣಾಡಿಎಂಕೆ ಪಕ್ಷ ಸತತವಾಗಿ ಗೆದ್ದು ಅಧಿಕಾರ ಉಳಿಸಿಕೊಂಡಿತ್ತು. 1989ರಲ್ಲಿ ನಡೆದ ಚುನಾವಣೆ ಬಳಿಕ ಒಮ್ಮೆ ಡಿಎಂಕೆ, ಮತ್ತೂಮ್ಮೆ ಎಐಎಡಿಎಂಕೆ ಪಕ್ಷಗಳನ್ನು ದ್ರಾವಿಡ ರಾಜ್ಯದ ಜನರು ಆಯ್ಕೆ ಮಾಡುತ್ತಾ ಬರುತ್ತಿದ್ದರು. 2016ರಲ್ಲಿ ಅಲ್ಲಿನ ಜನರು ಮೂವತ್ತು ವರ್ಷಗಳ ಹಿಂದಿನ ನಿಲುವು ಪುನರಾವರ್ತಿಸಿದ್ದರು. ಆದರೆ ಈ ಬಾರಿ ಹಾಗೆ ಆಗಲು ಸಾಧ್ಯವೇ ಎನ್ನುವುದು ಪ್ರಶ್ನೆ.

ಪ್ರಸಕ್ತ ಸಾಲಿನ ಚುನಾವಣೆ 2021ರ ಎಪ್ರಿಲ್‌ – ಮೇನಲ್ಲಿ ನಡೆಯುವ ಸಾಧ್ಯತೆ ಇದೆ. ತಮಿಳುನಾಡಿನ ರಾಜಕೀಯ ಕ್ಷೇತ್ರದ ದಿಗ್ಗಜರಾಗಿದ್ದ ಮುತ್ತುವೇಲು ಕರುಣಾ ನಿಧಿ, ಜಯರಾಮ್‌ ಜಯಲಲಿತಾ ಕಾಲವಾಗಿ ದ್ದಾರೆ. ಹೀಗಾಗಿ, ಎರಡೂ ಪಕ್ಷಗಳಲ್ಲಿಯೂ ಪ್ರಬಲ ವರ್ಚಸ್ಸು ಇರುವ ನಾಯಕರು ಇಲ್ಲ. ಎಐಎಡಿ ಎಂಕೆ ಈಗಾಗಲೇ ಇಬ್ಟಾಗವಾಗಿದೆ. ಮುಖ್ಯಮಂತ್ರಿ ಕೆ.ಪಳನಿ ಸ್ವಾಮಿ ಮತ್ತು ಉಪಮುಖ್ಯಮಂತ್ರಿ ಒ.ಪನ್ನೀರ್‌ಸೆಲ್ವಂ ನೇತೃತ್ವದಲ್ಲಿ ಅಣ್ಣಾಡಿಎಂಕೆ ಇದೆ. ಡಿಎಂಕೆಯ ನೇತೃತ್ವ ವನ್ನು ಮುತ್ತುವೇಲು ಕರುಣಾನಿಧಿ ಸ್ಟಾಲಿನ್‌ ವಹಿಸಿಕೊಂ ಡಿ ದ್ದಾರೆ. ಹೀಗಾಗಿ, ಪ್ರಮುಖ ಧ್ರುವತಾರೆ ಗಳ ಅನುಪಸ್ಥಿತಿಯಲ್ಲಿ ತಮಿಳುನಾಡಿನ ಮುಂದಿನ ವರ್ಷದ ವಿಧಾನಸಭೆ ಕಬ್ಬಿಣದ ಕಡಲೇಕಾಯಿಯೇ ಸರಿ.

ಸದ್ಯ ಚರ್ಚೆಗೆ ಗ್ರಾಸವಾಗಿರುವ ವಿಚಾರವೇನೆಂದರೆ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಶನಿವಾರ ಮತ್ತು ರವಿವಾರ (ನ. 21, 22) ತಮಿಳುನಾಡು ಪ್ರವಾಸ ಕೈಗೊಂ ಡಿ ರುವುದು. 60 ಸಾವಿರ ಕೋಟಿ ರೂ. ಮೌಲ್ಯದ ವಿವಿಧ ಅಭಿವೃದ್ಧಿ ಕಾರ್ಯಗಳಿಗೆ ಶಿಲಾನ್ಯಾಸ ನೆರವೇರಿ ಸಲು ಶಾ ಭೇಟಿ ನೀಡಿದ್ದಾರೆ ಎನ್ನುವುದು ಮೇಲ್ನೋಟಕ್ಕೆ ತೋರಿಸಿಕೊಂಡಿರುವ ಅಂಶ. ಬಿಹಾರ ಚುನಾವಣೆ ಯಲ್ಲಿ ಹಾಗೂ-ಹೀಗೂ ಅಧಿಕಾರ ಹಿಡಿಯುವಲ್ಲಿ ಯಶ  ಸ್ವಿಯಾಗಿರುವ ಬಿಜೆಪಿ, ಒಂದೇ ಒಂದು ಸ್ಥಾನ ವನ್ನು ಹೊಂದಿಲ್ಲದೇ ಇರುವ ತಮಿಳುನಾಡು ವಿಧಾನ ಸಭೆ ಚುನಾವಣೆಯಲ್ಲಿ ಕೈಚಳಕ ತೋರಿಸಲು ಹೊರಟಿ ದೆ. ಅದು ಯಶಸ್ಸು ಕಾಣುತ್ತದೆಯೋ ಇಲ್ಲವೋ ಎನ್ನುವುದನ್ನು ತಿಳಿಯಬೇಕಾದರೆ ಫ‌ಲಿತಾಂಶ ಪ್ರಕಟವಾಗಬೇಕಷ್ಟೇ.

2016ರ ಡಿ.5ರಂದು ಎಐಎಡಿಎಂಕೆ ನಾಯಕಿ ಜಯಲಲಿತಾ ನಿಧನ ಹೊಂದಿದ ಬಳಿಕ ಬಿಜೆಪಿ ಸದ್ದಿಲ್ಲದೆ ತಮಿಳುನಾಡಿನ ರಾಜಕೀಯ ಕ್ಷೇತ್ರದ ನಾಯ ಕತ್ವದ ಕೊರತೆಯ ಆರಂಭದ ರೇಖೆಯನ್ನು ಪತ್ತೆ ಹಚ್ಚಿ, ದಾಳ ಉರುಳಿಸಲು ಶುರು ಮಾಡಿತ್ತು. ಅದರ ಪ್ರಭಾವವೇ ಸದ್ಯ ಬೆಂಗಳೂರಿನ ಪರಪ್ಪನ ಅಗ್ರಹಾರದ ಲ್ಲಿರುವ ವಿ.ಕೆ. ಶಶಿಕಲಾರನ್ನು ಎಐಎಡಿಎಂಕೆಯಿಂದ ದೂರ ಇರುವಂತೆ ಮಾಡಿ, ಪಳನಿಸ್ವಾಮಿ, ಪನ್ನೀರ್‌ ಸೆಲ್ವಂ ಅವರದ್ದೇ ನಿಜವಾದ ಎಐಎಡಿಎಂಕೆ ಎಂದು ಸಾರುವಂತೆ ಮಾಡಿತ್ತು. ಅಕ್ರಮ ಆಸ್ತಿ ಪ್ರಕರಣದಲ್ಲಿ ಜೈಲು ಶಿಕ್ಷೆ ಅನುಭವಿಸುತ್ತಿರುವ ಶಶಿಕಲಾ 10 ಕೋಟಿ ರೂ. ದಂಡ ಪಾವತಿ ಮಾಡಿ ಜ.27ರಂದು ಬಿಡುಗಡೆಯಾಗಲಿದ್ದಾರೆ. ಅವರು ಮತ್ತೆ ಸಕ್ರಿಯ ರಾಜಕೀಯಕ್ಕೆ ಬರುತ್ತಾರೋ ಅಥವಾ ನೇಪಥ್ಯದಲ್ಲಿದ್ದುಕೊಂಡು ಕೈಚಳಕ ತೋರಿಸಲಿ ದ್ದಾರೆಯೋ ಇನ್ನೂ ದೃಢವಾಗಿಲ್ಲ. ಅವರ ಸಂಬಂಧಿ ಟಿ.ಟಿ.ವಿ.ದಿನಕರನ್‌ ಅಮ್ಮಾ ಮಕ್ಕಳ್‌ ಮುನ್ನೇತ್ರ ಕಳಗಂ (ಎಎಂಎಂಕೆ) ಪಕ್ಷ ಸ್ಥಾಪನೆ ಮಾಡಿ, 2017ರಲ್ಲಿ ಚೆನ್ನೈನ ಪ್ರತಿಷ್ಠಿತ ಆರ್‌ . ಕೆ. ನಗರ ಕ್ಷೇತ್ರಕ್ಕೆ ನಡೆದ ಉಪ ಚುನಾವಣೆಯಲ್ಲಿ ಗೆದ್ದು ಶಾಸಕರಾಗಿದ್ದಾರೆ. ಅವರ ನಿಲುವು ಏನು ಸ್ಪಷ್ಟವಾಗಿ ಸದ್ಯಕ್ಕೆ ಗೋಚರವಾಗಿಲ್ಲ.

Advertisement

ಇತ್ತೀಚೆಗೆ ಕೆಲವು ಇಂಗ್ಲಿಷ್‌ ದಿನಪತ್ರಿಕೆಗಳಲ್ಲಿ ವರದಿ ಯಾದಂತೆ, ಬಿಜೆಪಿ ವರಿಷ್ಠರು ಶಶಿಕಲಾ ಅವರು ಮತ್ತೆ ಎಐಎಡಿಎಂಕೆಗೆ ವಾಪಸಾಗಬೇಕು ಮತ್ತು ಆ ಮೂಲಕ ಡಿಎಂಕೆ ನೇತೃತ್ವದ ಪಕ್ಷಗಳಿಗೆ ಪ್ರಬಲ ಶಕ್ತಿಯಾಗಿ ನಿಲ್ಲ ಬೇಕು ಎಂಬ ಒತ್ತಾಸೆ ಹೊಂದಿತ್ತು. ಸದ್ಯ ಅಮಿತ್‌ ಶಾ ಕೈಗೊಂಡಿರುವ ಪ್ರವಾಸದ ವೇಳೆ ಈ ಅಂಶವನ್ನು ಹಾಲಿ ಎಐಎಡಿಎಂಕೆ ನಾಯಕರ ಬಳಿ ಚರ್ಚೆ ಮಾಡಿದ್ದಾ ರೆಯೋ ಇಲ್ಲವೋ ಗೊತ್ತಿಲ್ಲ. ಹಾಗೆ ಆಗಿದ್ದೇ ಆದರೆ ಶಶಿಕಲಾ ಮರು ಸೇರ್ಪಡೆ ಎಂಬ ವರದಿ ದೃಢವಾದಂತೆ ಆಗುತ್ತದೆ. ಏಕೆಂದರೆ ರಾಜಕೀಯ ಎಂಬ ನೀರು, ಪಾತ್ರೆ ಇರುವಂತೆ ಆಕಾರ ತಳೆಯುತ್ತದೆ ಎನ್ನುವುದು ನಿರ್ವಿಕಲ್ಪಿತ ಸತ್ಯ. ಅದುವೇ ತಮಿಳುನಾಡಲ್ಲಿ ಆಗುತ್ತಿರುವುದು.

ಗೃಹ ಸಚಿವ ಅಮಿತ್‌ ಶಾ ಚೆನ್ನೈ ಪ್ರವಾಸ ಕೈಗೊಳ್ಳು ವುದಕ್ಕೆ ಮೂರು ದಿನಗಳ ಮೊದಲು ಮಾಧ್ಯಮಗಳಲ್ಲಿ ವರದಿಯಾದಂತೆ ಮಾಜಿ ಸಚಿವ ಎಂ.ಕೆ.ಅಳಗಿರಿ ಹೊಸ ಪಕ್ಷ ಸ್ಥಾಪಿಸಿ, ಚುನಾವಣೆಯಲ್ಲಿ ಬಿಜೆಪಿಗೆ ಬೆಂಬಲ ನೀಡು ತ್ತಾರೆ ಎಂದು ಪ್ರಚಾರವಾಯಿತು. ಹೊಸ ಪಕ್ಷ ಸ್ಥಾಪನೆ ಮತ್ತು ಬಿಜೆಪಿ ಜತೆಗೆ ಕೈಜೋಡಿಸುವುದು, ನ.21ರಂದು ಅಮಿತ್‌ ಶಾ ಜತೆಗೆ ಮಾತುಕತೆ ಇಲ್ಲ ವೆಂದು ಅಳಗಿರಿ ಹೇಳಿಕೊಂಡಿದ್ದರೂ, ಬೆಂಕಿ ಇರುವುದರ ಬಗ್ಗೆ ಹೊಗೆಯಾಡುತ್ತಿತ್ತು. ಅದಕ್ಕೆ ಪೂರಕವಾಗಿ ಶನಿವಾರ ಅಳಗಿರಿ ಆಪ್ತ ಮತ್ತು ರಾಜ್ಯಸಭೆ ಮಾಜಿ ಸದಸ್ಯ ಕೆ.ಪಿ.ರಾಮಲಿಂಗಮ್‌ ಬಿಜೆಪಿ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ನೇತೃತ್ವದಲ್ಲಿ ಬಿಜೆಪಿ ಸೇರ್ಪಡೆಯಾಗಿದ್ದಾರೆ. ಈ ಸಂದರ್ಭದಲ್ಲಿ ಅವರು ಹೇಳಿದ ಮಾತೆಂದರೆ ಅಳಗರಿಯನ್ನೂ ಕರೆ ತರುವಂತೆ ಮಾಡುತ್ತೇನೆ ಎಂದು. ಅದು ಕಾರ್ಯಸಾಧ್ಯವಾಗುತ್ತದೋ ಇಲ್ಲವೋ ಗೊತ್ತಿಲ್ಲ. ಒಂದು ವೇಳೆ ಆ ರೀತಿ ಆದರೆ, ಶಶಿಕಲಾರನ್ನು ಮತ್ತೆ ಎಐಎಡಿಎಂಕೆಗೆ ಕರೆತರುವ ಪ್ರಯತ್ನದಲ್ಲಿ ಬಿಜೆಪಿ ಯಶಸ್ಸು ಕಾಣದ್ದರಿಂದ ಅಳಗಿರಿಯವರಿಗೆ ಬಿಜೆಪಿಗೆ ಗಾಳ ಹಾಕಿದೆ ಎಂದರ್ಥ.

ಡಿಎಂಕೆಯಲ್ಲಿ ಅಳಗಿರಿ ಇದ್ದಾಗಲೇ ಅವರ ಪ್ರಭಾವ ಕೇವಲ ತಮಿಳುನಾಡಿನ ದಕ್ಷಿಣ ಭಾಗದ ಪ್ರದೇಶಗಳಲ್ಲಿ ಮಾತ್ರ ಇತ್ತು. ಅವರಿಗೆ ಇರುವ ಕೊರತೆ ಎಂದರೆ ತಮಿಳು ಬಿಟ್ಟು ಬೇರೆ ಭಾಷೆಯೇ ಗೊತ್ತಿಲ್ಲ. ಸ್ಟಾಲಿನ್‌ ವ್ಯಕ್ತಿತ್ವ ಹಾಗಲ್ಲ. ಔತ್ತರೇಯ ನಾಯಕರಲ್ಲಿ ವ್ಯವಹರಿ ಸುವ ಪ್ರಾಥಮಿಕ ಭಾಷಾ ಜ್ಞಾನ ಹೊಂದಿದ್ದಾರೆ ಮತ್ತು ಎಲ್ಲÉ ಜಿಲ್ಲಾ ಡಿಎಂಕೆ ಘಟಕಗಳಲ್ಲಿ ಹಿಡಿತ ಹೊಂದಿದ್ದಾರೆ. ಸ್ಟಾಲಿನ್‌ ವರ್ಸಸ್‌ ಅಳಗಿರಿ ಎಂದು ನೋಡಿದರೆ ನಾಯಕತ್ವದಲ್ಲಿ ಸ್ಟಾಲಿನ್‌ಗೆ ಪ್ರಥಮ ಪ್ರಾಶಸ್ತ್ಯ ನೀಡಬೇಕಾಗುತ್ತದೆ. ಹೀಗಿರುವಾಗ ಸೀಮಿತ ಪ್ರಭಾವಳಿ ಹೊಂದಿದ ಅಳಗಿರಿಗೆ ಬಿಜೆಪಿ ಕೆಂಪು ಹಾಸಿನ ಸ್ವಾಗತ ನೀಡುತ್ತದೆ ಎಂದಾದರೆ ಅದರ ಹಕೀಕತ್ತು ಬೇರೆಯೇ ಇದೆ ಎಂದು ಅರ್ಥ ಮಾಡಿಕೊಳ್ಳಲೇಬೇಕು.

ತಮಿಳುನಾಡು ಚುನಾವಣೆಯಲ್ಲಿ ಕರ್ನಾಟಕಕ್ಕೆ ಸಂಬಂಧಪಡುವ ಕೆಲವು ಅಂಶಗಳು ಇವೆ. ಅವುಗ ಳೆಂದರೆ ಬಿಜೆಪಿಯ ಪ್ರಧಾನ ಕಾರ್ಯದರ್ಶಿಯಾಗಿ ನಿಯುಕ್ತಿಗೊಂಡಿರುವ ಮಾಜಿ ಸಚಿವ ಸಿ.ಟಿ.ರವಿ ಆ ರಾಜ್ಯದ ಉಸ್ತುವಾರಿಯಾಗಿ ನೇಮಕಗೊಂಡಿದ್ದಾರೆ. ಹೀಗಾಗಿ ಅವರಿಗೆ ಇದೊಂದು ಪರೀಕ್ಷೆ. ರಾಜ್ಯದಲ್ಲಿ ಸೇವೆ ಸಲ್ಲಿಸಿದ್ದ ಇಬ್ಬರು ಅಧಿಕಾರಿಗಳು ಕ್ರಮವಾಗಿ ಬಿಜೆಪಿ ಮತ್ತು ಕಾಂಗ್ರೆಸ್‌ಗೆ ಸೇರ್ಪಡೆಯಾಗಿದ್ದಾರೆ. ಅವರೇ ನಿವೃತ್ತ ಐಪಿಎಸ್‌ ಅಧಿಕಾರಿ ಕೆ.ಅಣ್ಣಾಮಲೈ ಬಿಜೆಪಿಗೆ ಸೇರ್ಪಡೆಯಾಗಿದ್ದರೆ, ನಿವೃತ್ತ ಐಎಎಸ್‌ ಅಧಿಕಾರಿ ಶಶಿಕಾಂತ್‌ ಸೆಂಥಿಲ್‌ ಕಾಂಗ್ರೆಸ್‌ ತೆಕ್ಕೆಯಲ್ಲಿದ್ದಾರೆ. ಅವರಿಬ್ಬರು ಎರಡೂ ಪಕ್ಷಗಳಿಗೆ ಎಷ್ಟು ನೆರವಾಗಲಿದ್ದಾರೆಯೋ ಗೊತ್ತಿಲ್ಲ.

ಸಿನೆಮಾ ನಟರೇ ರಾಜಕೀಯ ಕ್ಷೇತ್ರವನ್ನು ದ್ರಾವಿಡ ರಾಜ್ಯದಲ್ಲಿ ಆಳಿದ್ದಾರೆ. ಅದರ ಪ್ರಭಾವಳಿ ಎಷ್ಟು ಉಳಿದಿದೆ ಎಂಬುದನ್ನೂ ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ನೋಡಲಾಗುತ್ತದೆ. ಬಹುಭಾಷಾ ತಾರೆ ಕಮಲ್‌ ಹಾಸನ್‌ ರಾಜಕೀಯ ಪ್ರವೇಶ ಮಾಡಿ ಮಕ್ಕಳ್‌ ನೀತಿ ಮಯ್ಯಂ ಪಕ್ಷ ಸ್ಥಾಪಿಸಿದ್ದಾರೆ. ಕಳೆದ ಲೋಕಸಭೆ ಚುನಾವಣೆ ಬಳಿಕ ತಣ್ಣಗಾಗಿದ್ದ ಹಾಸನ್‌ ಸಕ್ರಿಯರಾಗಿದ್ದಾರೆ. ಈ ತಿಂಗಳ ಆರಂಭದಲ್ಲಿ ಅವರೇ ಉದ್ಘೋಷಿಸಿದ್ದಂತೆ ಜನರೇ ಅವರ ಮಿತ್ರಪಕ್ಷಗಳಂತೆ. ಹೀಗಾಗಿ ಸದ್ಯಕ್ಕೆ ಯಾವ ಪಕ್ಷದ ಜತೆಗೂಡುವ ಸೂಚನೆಯನ್ನು ಹಾಸನ್‌ ನೀಡಿಲ್ಲ. ಮುಂದೆ ಈ ನಿಲುವಿನಲ್ಲಿ ಬದಲಾದರೂ ಆಗಬಹುದು.

ರಾಜಕೀಯ ಪ್ರವೇಶದ ಘೋಷಣೆ ಮಾಡಿದ್ದ ತಲೈವಾ ರಜನಿಕಾಂತ್‌ ಹಿಂದೇಟು ಹಾಕಿದಂತಿದೆ. ಅದಕ್ಕೆ ಕಾರಣವೂ ಇದೆ. ಅವರೇ ಹೇಳಿಕೊಂಡಂತೆ ವೈದ್ಯರ ಸಲಹೆ ಕಾರಣದಿಂದ ಪಕ್ಷ ಸ್ಥಾಪನೆ ಮತ್ತು ಸಕ್ರಿಯ ರಾಜ ಕಾರಣ ನಡೆಸುವುದು ಕಷ್ಟವೆಂದು ಹೇಳಲಾಗುತ್ತಿದೆ. ಅದೇನೇ ಇರಲಿ ಈಗ ಇರುವುದು 2020. ತಮಿಳು ನಾಡು ವಿಧಾನ ಕದನದ ಸ್ಪಷ್ಟ ಚಿತ್ರಣ ಬರಬೇಕೆಂದರೆ ಜನವರಿ 15 ಕಳೆಯಬೇಕು. ಏಕೆಂದರೆ ಆ ವೇಳೆಗೆ ಸಹಜವಾಗಿ ಕಣ ರಂಗೇರಿರುತ್ತದೆ. ಒಂದಂತೂ ಸ್ಪಷ್ಟ. ಕೇಂದ್ರದಲ್ಲಿನ ಸರಕಾರ ನಿಯಂತ್ರಿ ಸುತ್ತಿದ್ದ ತಮಿಳುನಾಡು ದಿಲ್ಲಿ ನಿಯಂತ್ರಿತವಾಗುತ್ತಿದೆ.

ಸದಾಶಿವ. ಕೆ

Advertisement

Udayavani is now on Telegram. Click here to join our channel and stay updated with the latest news.

Next