Advertisement

ಉದ್ಯೋಗ ನೀತಿ ವಿರುದ್ಧ ಎಐಡಿಎಒ ಕಾರ್ಯಕರ್ತರ ತೀವ್ರ ಆಕ್ರೋಶ

06:17 PM Jun 28, 2022 | Nagendra Trasi |

ವಿಜಯಪುರ: ಯುವಜನತೆಗೆ ಮಾರಕವಾಗುವ ರೀತಿಯಲ್ಲಿ ಉದ್ಯೋಗ ಯೋಜನೆ ಜಾರಿ ಸೇರಿದಂತೆ ಕೇಂದ್ರ ಹಾಗೂ ರಾಜ್ಯ ಸರ್ಕಾರ ಜನ ವಿರೋಧಿ ನೀತಿ ಅನುಸರಿಸುತ್ತವೆ ಎಂದು ಆರೋಪಿಸಿ ಎಐಡಿಎಸ್‌ಒ ವಿಜಯಪುರ ಜಿಲ್ಲಾ ಘಟಕದ ನೇತೃತ್ವದಲ್ಲಿ ಪ್ರತಿಭಟನಾ ಧರಣಿ ನಡೆಯಿತು. ನಗರದ ಹುತಾತ್ಮ ವೃತ್ತದಲ್ಲಿ ಪ್ರತಿಭಟನೆ ನಡೆಸಿದ ಸಂಘಟನೆ ಕಾರ್ಯಕರ್ತರು ಉದ್ಯೋಗ ನೀತಿಯ ವಿರುದ್ಧ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

Advertisement

ಈ ವೇಳೆ ಎಐಡಿವೈಒ ರಾಜ್ಯ ಕಾರ್ಯದರ್ಶಿ ಸಿದ್ದಲಿಂಗ ಬಾಗೇವಾಡಿ ಮಾತನಾಡಿ, ಕೇಂದ್ರ ಸರ್ಕಾರಗಳು ಬಂಡವಾಳಶಾಹಿಗಳನ್ನು ಖುಷಿ ಪಡಿಸುವ ದೃಷ್ಟಿಯಿಂದ ಯುವ ಜನರಿಗೆ ಮಾರಕವಾಗುವ ಉದ್ಯೋಗ ನೀತಿಯನ್ನು ರೂಪಿಸುತ್ತಿವೆ. ಅಗ್ನಿಪಥ ಹೆಸರಿನ ಯೋಜನೆಯನ್ನು ಜಾರಿಗೊಳಿಸಿರುವ ಕೇಂದ್ರ ಸರ್ಕಾರ ಸೈನ್ಯ ಸೇರುವ ಲಕ್ಷಾಂತರ ಯುವಕರ ಕನಸುಗಳಿಗೆ ತಣ್ಣೀರೆರೆಚುವ ಕೆಲಸ ಮಾಡಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕೇಂದ್ರ ಸರ್ಕಾರದ ಅನೇಕ ಅವೈಜ್ಞಾನಿಕ ನೀತಿಯಿಂದ ಆರ್ಥಿಕ ಕುಸಿತ ಕಂಡು ಗುಡಿ ಕೈಗಾರಿಕೆಗಳು ಕಣ್ಮುಚ್ಚಿವೆ, ಇದರೆಲ್ಲದರ ಪರಿಣಾಮವಾಗಿ ಲಕ್ಷಾಂತರ ಯುವಕರು ತಮ್ಮ ಕೆಲಸ ಕಳೆದುಕೊಳ್ಳುವಂತಾಗಿದೆ ಎಂದು ಅಸಮಾಧಾನ ಹೊರ ಹಾಕಿದರು. ಬೆಲೆ ಗಗನ ಚುಂಬಿಯಾದರೆ ಆದಾಯ ಪಾತಾಳಕ್ಕೆ ತಲುಪಿದೆ. ನಿರುದ್ಯೋಗಿ ಯುವಕರ ಪಾಡು ಅಯೋಮಯವಾಗಿದೆ.

ಇಂತಹ ಸಂದರ್ಭದಲ್ಲಿ ಅಮೃತ ಮಹೋತ್ಸವ ಸಂಭ್ರಮ ಎನ್ನುವುದು ಕೇವಲ ಉಳ್ಳವರ ಸಂಭ್ರಮ ಆಗುವುದಿಲ್ಲವೇ ಎಂದು ಪ್ರಶ್ನಿಸಿದರು. 2022 ಮಾರ್ಚ್‌ನಲ್ಲಿ ನಿರುದ್ಯೋಗದ ಪ್ರಮಾಣ ಶೇಕಡ 7.60 ಇದ್ದರೆ, ಏಪ್ರಿಲ್‌ ತಿಂಗಳಿನಲ್ಲಿ ಶೇ.7.83ಕ್ಕೆ ಏರಿದ ಕುರಿತು ಸಿಎಂಐಇ ವರದಿ ಹೇಳುತ್ತದೆ. ಇನ್ನೂ ಹೊಸದಾಗಿ ಉದ್ಯೋಗ ಹುಡುಕಿ ಹೊರಡುವ ಲಕ್ಷಾಂತರ ಯುವಕರನ್ನು ಇದರಲ್ಲಿ ಪರಿಗಣನೆಗೇ ತೆಗೆದುಕೊಂಡಿಲ್ಲ. ಈ ಅಂಕಿ ಅಂಶಗಳು ನಿರುದ್ಯೋಗವು ರಾಕೆಟ್‌ ವೇಗದಲ್ಲಿ ಬೆಳೆಯುತ್ತಲೇ ಸಾಗಿರುವುದನ್ನು ತೋರಿಸುತ್ತವೆ ಎಂದರು.

ಶರಣು ಗಡ್ಡಿ ಮಾತನಾಡಿ, ಕೋವಿಡ್‌ ಸಂಕಟದ ಬಳಿಕ ಬದುಕನ್ನು ಕಟ್ಟಿಕೊಳ್ಳಲು ಪರದಾಡುವ ಜನರ ನಡುವೆ ಜಾತಿ ಹೆಸರಿನಲ್ಲಿ, ಧರ್ಮದ ಹೆಸರಿನಲ್ಲಿ ವಿವಿಧ ಕೋಮುಗಳ ನಡುವೆ ಉದ್ವಿಗ್ನತೆ ಹುಟ್ಟು ಹಾಕಲಾಗುತ್ತಿದೆ. ಶಾಲಾ-ಕಾಲೇಜಿನ ಮಕ್ಕಳ ನಡುವೆ ಧರ್ಮದ ಹೆಸರಿನಲ್ಲಿ ವಿಷ ಬೀಜ ಬಿತ್ತುವ ಪ್ರಯತ್ನಗಳು ನಡೆಯುತ್ತಿವೆ. ಹಿಜಾಬ್‌, ಜಟ್ಕಾ ಕಟ್‌- ಹಲಾಲ್‌ ಕಟ್‌, ಅಜಾನ್‌ ಆಯ್ತು, ಇದೀಗ ಮಂದಿರ-ಮಸೀದಿ ಹೆಸರಲ್ಲಿ ಸಮಾಜ ಒಡೆಯುವ ಕೆಲಸ ನಡೆಯುತ್ತಿವೆ ಎಂದು ದೂರಿದರು.

Advertisement

ಒಂದಾದ ನಂತರ ಒಂದರಂತೆ ಸಮಾಜದಲ್ಲಿ ಜನರ ಮನಸ್ಸುಗಳನ್ನು ಒಡೆಯುವ ವಿಷಯಗಳನ್ನೇ ಪ್ರಚೋದಿಸಿ ಭಾವನೆಗಳನ್ನು ಕೆರಳಿಸುವ ಕೆಲಸ ಮಾಡುತ್ತಿವೆ. ಕೋಮು ದೃವೀಕರಣ ಮಾಡಿ ಚುನಾವಣೆ ಗೆಲ್ಲುವ ಹುನ್ನಾರ ನಡೆಯುತ್ತಿದೆ. ಹೀಗಾಗಿ ಜನರು ಕೋಮು ಭಾವನೆ ಕೆರಳಿಸುವ ಹುನ್ನಾರಕ್ಕೆ ಬಲಿಯಾಗದೇ ಸಮಾಜದಲ್ಲಿ ಶಾಂತಿ ಕಾಯ್ದುಕೊಳ್ಳುವ ಮೂಲಕ ಸೂಕ್ತ ಉತ್ತರ ನೀಡಿದ್ದಾರೆ ಎಂದು ವಿಶ್ಲೇಷಿಸಿದರು. ಎಐಡಿವೈಒ ಜಿಲ್ಲಾಧ್ಯಕ್ಷ ಶ್ರೀಕಾಂತ ಕೊಂಡಗೂಳಿ, ಅನುರಾಗ ಸಾಳುಂಕೆ, ಸೋಮು ಮಡ್ಡಿ, ಸಯ್ಯದ್‌, ಕಲ್ಮೇಶ, ಪ್ರದೀಪ, ದೇವರಾಜ್‌ ಕೊಪ್ಪಳ, ಸಂದೀಪ ಜಾಧವ ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next