Advertisement

ಸೇವಾದಳದ ಕಾರ್ಯ ಚಟುವಟಿಕೆ ಸ್ತುತ್ಯರ್ಹ

03:23 PM May 02, 2022 | Team Udayavani |

ಚಿತ್ರದುರ್ಗ: ಮಕ್ಕಳಲ್ಲಿ ರಾಷ್ಟ್ರೀಯ ಭಾವೈಕ್ಯತಾ ಮನೋಭಾವ ಬೆಳೆಸಿ ಅವರನ್ನು ಭಾರತದ ಆದರ್ಶ ನಾಗರಿಕರನ್ನಾಗಿ ಮಾಡಲು ಭಾರತ ಸೇವಾದಳ ಶ್ರಮಿಸುತ್ತಿದೆ ಎಂದು ಶಾಸಕ ಜಿ.ಎಚ್. ತಿಪ್ಪಾರೆಡ್ಡಿ ಹೇಳಿದರು.

Advertisement

ಭಾರತ ಸೇವಾದಳ ಜಿಲ್ಲಾ ಸಮಿತಿ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆ ಸಹಯೋಗದಲ್ಲಿ ನಗರದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಭಾರತ ಸೇವಾದಳದ ನೂತನ ಜಿಲ್ಲಾ ಕಚೇರಿ ಕಟ್ಟಡ ಉದ್ಘಾಟಿಸಿ ಅವರು ಮಾತನಾಡಿದರು. ದೇಶದಿಂದ ಬ್ರಿಟಿಷರನ್ನು ತೊಲಗಿಸಲು ಹುಟ್ಟಿಕೊಂಡಿದ್ದ ಬಲಿಷ್ಠ ಮತ್ತು ನಿಸ್ವಾರ್ಥ ಸಂಘಟನೆ ಭಾರತ ಸೇವಾದಳ. ಇಂದು ವಿದ್ಯಾರ್ಥಿಗಳಿಗೆ ತರಬೇತಿ, ಶಿಕ್ಷಣ, ಸೇವೆ, ರಾಷ್ಟ್ರೀಯತೆ, ಸಾರ್ವಜನಿಕ ರಕ್ಷಣೆ ಮತ್ತು ಮಾನವ ಸಂಪನ್ಮೂಲ ಅಭಿವೃದ್ಧಿಗೆ ಪೂರಕವಾಗುವ ಕಾರ್ಯಕ್ರಮಗಳು ಸೇವಾದಳದಿಂದ ನಡೆಯುತ್ತಿವೆ ಎಂದರು.

ಭಾರತ ಸೇವಾದಳದಿಂದ ಒಗ್ಗಟ್ಟು ಪ್ರದರ್ಶನ ಸಾಧ್ಯವಿದೆ. ಜನರಲ್ಲಿ ದೇಶಭಕ್ತಿ ಮೂಡಿಸುವ ಸಲುವಾಗಿ ಹುಟ್ಟಿಕೊಂಡ ಸಂಘಟನೆ ಇದಾಗಿದೆ. ಇಲ್ಲಿ ಯಾವುದೇ ರಾಜಕೀಯ ಇಲ್ಲದೆ ಅಚ್ಚುಕಟ್ಟಾಗಿ ನಡೆಯುತ್ತಿದೆ. ಪ್ರತಿ ಶಾಲಾ-ಕಾಲೇಜುಗಳಲ್ಲಿ ಒಗ್ಗಟ್ಟಿನ ಭಾವನೆ ಮೂಡಿಸಲು, ದೇಶದ ಇತಿಹಾಸವನ್ನು ತಿಳಿಸುವ ಕೆಲಸ ಸಂಘಟನೆಯಿಂದ ಆಗಬೇಕಿದೆ. ಭಾರತ ಸೇವಾದಳ ಇತ್ತೀಚೆಗೆ ಕಣ್ಮರೆಯಾಗುತ್ತಿದೆ. ಆದರೆ ರಾಷ್ಟ್ರದ ಹಿತಾಸಕ್ತಿಗಾಗಿ ಸಂಘಟನೆಗಳ ಅವಶ್ಯಕತೆ ಇದೆ. ಎಲ್ಲಾ ಕಡೆಗಳಲ್ಲಿ ಭಾರತ ಸೇವಾದಳ ಕೆಲಸ ಮಾಡಬೇಕು. ಈ ನಿಟ್ಟಿನಲ್ಲಿ ಮುಖ್ಯಮಂತ್ರಿಯಾಗಿ ಬಸವರಾಜ ಬೊಮ್ಮಾಯಿ ಅ ಧಿಕಾರ ಸ್ವೀಕರಿಸಿದಾಗ ಕಾಲೇಜುಗಳಲ್ಲಿ ಭಾರತ ಸೇವಾದಳ ಪ್ರಾರಂಭಿಸಲು ತೆಗೆದುಕೊಂಡ ತೀರ್ಮಾನ ಉತ್ತಮವಾಗಿದೆ ಎಂದು ಶ್ಲಾಘಿಸಿದರು.

ಇದೇ ವೇಳೆ ಮುಂದಿನ ದಿನದಲ್ಲಿ ಎರಡನೇ ಹಂತದ ಕಟ್ಟಡ ನಿರ್ಮಾಣ ಮಾಡಲು ಶಾಸಕರ ಅನುದಾನದಲ್ಲಿ 5 ಲಕ್ಷ ರೂ. ಅನುದಾನ ನೀಡುವುದಾಗಿ ಭರವಸೆ ನೀಡಿದರು.

ಭಾರತ ಸೇವಾದಳದ ಜಿಲ್ಲಾಧ್ಯಕ್ಷ ಬಿ. ಸಂಜೀವಮೂರ್ತಿ ಮಾತನಾಡಿ, ಮೊದಲು ಭಾರತ ಸೇವಾದಳಕ್ಕೆ ಸ್ವಂತ ಕಟ್ಟಡ ಇರಲಿಲ್ಲ. ಜಿಲ್ಲಾಧಿಕಾರಿ ಮೂಲಕ ಜಾಗ ಪಡೆದು ಕಟ್ಟಡ ನಿರ್ಮಿಸಿದ್ದೇವೆ. ಸರ್ಕಾರದಿಂದ 20 ಲಕ್ಷ ರೂ., ರಾಜ್ಯಸಭಾ ಸದಸ್ಯರಾಗಿದ್ದ ಹನುಮಂತಪ್ಪ ನೀಡಿದ 10 ಲಕ್ಷ ರೂ. ಅನುದಾನದಲ್ಲಿ ಮುಂಭಾಗದ ಕಟ್ಟಡ ನಿರ್ಮಿಸಿದ್ದೆವು. ಅದರಿಂದ ಬಂದ ಬಾಡಿಗೆ ಮತ್ತು ದಾನಿಗಳು, ಪದಾಧಿಕಾರಿಗಳು ಆರ್ಥಿಕ ನೆರವು ನೀಡಿದ್ದರಿಂದ 41 ಲಕ್ಷ ರೂ. ವೆಚ್ಚದಲ್ಲಿ ನೂತನ ತರಬೇತಿ ಕಟ್ಟಡ ಪೂರ್ಣಗೊಳಿಸಲು ಸಾಧ್ಯವಾಗಿದೆ. ಶಾಸಕರು ಚಿತ್ರದುರ್ಗವನ್ನು ಮಾದರಿ ನಗರ ಮಾಡಿದ್ದಾರೆ. ಮನಸ್ಸು ಮಾಡಿದರೆ ಮತ್ತೂಂದು ಹಂತದ ಕಟ್ಟಡಕ್ಕೆ ಅನುದಾನ ನೀಡುತ್ತಾರೆ. ಸೇವಾದಳದ ಚಟುವಟಿಕೆಗಳನ್ನು ವಿಸ್ತರಿಸುವ ನಿಟ್ಟಿನಲ್ಲಿ ಇನ್ನೂ ಒಂದಿಷ್ಟು ಅಭಿವೃದ್ಧಿ ಕಾರ್ಯಗಳಾಗಬೇಕಿದೆ ಎಂದು ಮನವಿ ಮಾಡಿದರು.

Advertisement

ನಗರಸಭೆ ಅಧ್ಯಕ್ಷೆ ತಿಪ್ಪಮ್ಮ ವೆಂಕಟೇಶ್‌, ಅಪರ ಜಿಲ್ಲಾಧಿಕಾರಿ ಬಾಲಕೃಷ್ಣ, ನಗರಸಭೆ ಸದಸ್ಯೆ ಶ್ರೀದೇವಿ ಚಕ್ರವರ್ತಿ, ಸೇವಾದಳದ ರಾಜ್ಯಾಧ್ಯಕ್ಷ ಬಿ.ಸಿ. ವೆಂಕಟೇಶ್‌, ರಾಜ್ಯ ಪ್ರಧಾನ ಕಾರ್ಯದರ್ಶಿ ಎಂ.ಕೆ. ಕಮಲ್‌ಕುಮಾರ್‌, ಜಿಲ್ಲಾ ಉಪಾಧ್ಯಕ್ಷ ಎಂ.ಸಿ. ದೇವದಾಸ್‌, ಕಾರ್ಯದರ್ಶಿ ಶಿವಕುಮಾರ್‌, ಜಿಲ್ಲಾ ಸಂಘಟಕ ಬಸವರಾಜ್‌, ಕೋಶಾಧ್ಯಕ್ಷ ನಿರಂಜನ ಮೂರ್ತಿ ಮತ್ತು ಅರುಣ್‌ಕುಮಾರ್‌ ಇದ್ದರು.

ಭಾರತ ಸೇವಾದಳ ಪ್ರತಿ ಹಳ್ಳಿಯಲ್ಲಿ ಹೋರಾಟ ಮಾಡಿದೆ. ಭಾರತೀಯ ಸಂವಿಧಾನದಲ್ಲಿ ಭಾರತ ಸೇವಾದಳಕ್ಕೆ ವಿಶೇಷ ತಿದ್ದುಪಡಿ ತಂದು ಬಾವುಟ ಹಾರಿಸಲು ಅವಕಾಶ ಕಲ್ಪಿಸಲಾಗಿದೆ. ಯಾವುದೇ ರಾಜಕೀಯ ಪಕ್ಷಗಳಿಗೆ ಭಾರತ ಸೇವಾದಳ ಸೀಮಿತವಲ್ಲ. ಎಲ್ಲಾ ಸಂಘಗಳ ನಿರ್ಮಾತೃ ಸೇವಾದಳವಾಗಿದೆ. ರಾಷ್ಟ್ರದ ದೇಶದ ಏಕತೆ ಕಾಪಾಡಲು ಪ್ರಯತ್ನ ಮಾಡುತ್ತಿದೆ. -ಚಂದ್ರಶೇಖರ್‌ ಭಾರತ ಸೇವಾದಳದ ರಾಜ್ಯ ದಳಪತಿ

Advertisement

Udayavani is now on Telegram. Click here to join our channel and stay updated with the latest news.

Next