Advertisement

ಉಡುಪಿ ತಾಲೂಕು ಕಚೇರಿಯಲ್ಲಿ ಸರ್ವರ್‌ ಸಮಸ್ಯೆ:  ಜಾತಿ, ಪಹಣಿ ದಾಖಲೆಗೆ ಸಾರ್ವಜನಿಕರ ಪರದಾಟ

10:25 PM Mar 09, 2021 | Team Udayavani |

ಉಡುಪಿ: ಉಡುಪಿ ತಾಲೂಕು ಕಚೇರಿಯಲ್ಲಿರುವ ಅಟಲ್‌ಜೀ ಜನಸ್ನೇಹಿ ಕೇಂದ್ರ ಸಾರ್ವಜನಿಕರಿಗೆ ಸಮರ್ಪಕವಾಗಿ ಸ್ಪಂದಿಸುತ್ತಿಲ್ಲ. ಹಲವು ದಾಖಲಾತಿ ಕಾರ್ಯಗಳಿಗಾಗಿ ಸುತ್ತಲಿನ ಪ್ರದೇಶಗಳ ಜನರು ಕೇಂದ್ರಕ್ಕೆ ಆಗಮಿಸಿ ಸರತಿ ಸಾಲಿನಲ್ಲಿ ನಿಂತರೂ ಕೆಲಸವಾಗದಿರುವುದು ಜನಾಕ್ರೋಶಕ್ಕೆ ಕಾರಣವಾಗಿದೆ.

Advertisement

ಒಂದು ಪ್ರಮಾಣಪತ್ರಕ್ಕಾಗಿ ಬೆಳಗ್ಗೆಯಿಂದ ಸಂಜೆಯವರೆಗೂ ಸರತಿ ಸಾಲಿನಲ್ಲಿ ನಿಲ್ಲಬೇಕಾಗಿದೆ. ಕೆಲವೊಮ್ಮೆ 3-4 ದಿನಗಳಾದರೂ ಪ್ರಮಾಣಪತ್ರ ಸಿಗುವುದಿಲ್ಲ. ಪುರುಷರು ಕೆಲಸಕ್ಕಾಗಿ ಹೊರಗಡೆ ತೆರಳಿರುತ್ತಾರೆ. ಮಹಿಳೆಯರು ಮಕ್ಕಳನ್ನು ಎತ್ತಿಕೊಂಡು ಹಲವು ಗಂಟೆಗಳ ಕಾಲ ಸರತಿ ಸಾಲಿನಲ್ಲಿ ನಿಂತು ಪ್ರಮಾಣಪತ್ರ ಪಡೆಯುವ ದುಃಸ್ಥಿತಿ ನಿರ್ಮಾಣವಾಗಿದೆ.

ಸಾರ್ವಜನಿಕರು ಬೆಳಗ್ಗೆ 9ರಿಂದ ಸರತಿ ಸಾಲಿನಲ್ಲಿ ನಿಲ್ಲುತ್ತಾರೆ. ಬೆಳಗ್ಗೆ 10 ಗಂಟೆಗೆ ಬರುವ ಸಿಬಂದಿ ದಾಖಲೆ ವಿತರಿಸುವ ಕೆಲಸ ನಿರ್ವಹಿಸಬೇಕಾಗಿದೆ. ಪ್ರಸ್ತುತ ಸರ್ವರ್‌ ಸಮಸ್ಯೆ ಇರುವುದರಿಂದ ದಿನಕ್ಕೆ ನಾಲ್ಕೈದು ಮಂದಿಯ ನೋಂದಣಿ ಮಾತ್ರ ಸಾಧ್ಯವಾಗುತ್ತದೆ.

ಹೆಚ್ಚುವರಿ ಕಂಪ್ಯೂಟರ್‌ಗೆ ಮನವಿ
ಕಂಪ್ಯೂಟರ್‌ಗಳ ಸಂಖ್ಯೆಯನ್ನು ಹೆಚ್ಚಿಸಿದರೆ, ಸರ್ವರ್‌ ಸಮಸ್ಯೆಗೆ ಪರಿಹಾರ ಕಂಡುಕೊಳ್ಳ ಬಹುದು. ಇದರಿಂದ ಸಾರ್ವಜನಿಕರು ನಾಲ್ಕೈದು ದಿನಗಳ ವರೆಗೆ ಸರತಿ ಸಾಲಿನಲ್ಲಿ ನಿಲ್ಲುವುದು ತಪ್ಪುತ್ತದೆ. ಸಾರ್ವಜನಿಕರು ಈ ಸಮಸ್ಯೆ ಪರಿಹಾರಕ್ಕೆ ತಹಶೀಲ್ದಾರ್‌ಗೆ ಹೆಚ್ಚುವರಿ ಕಂಪ್ಯೂಟರ್‌ಗಳನ್ನು ಆಳವಡಿಸಲು ಮನವಿ ನೀಡಿಕೊಂಡರೂ ಪ್ರಯೋಜನವಾಗಿಲ್ಲ ಎನ್ನುವ ದೂರು ಕೇಳಿ ಬರುತ್ತಿದೆ.

ಊಟ ಬಿಟ್ಟು ಕಾಯುವ ಪರಿಸ್ಥಿತಿ
ಮಕ್ಕಳ ವಿದ್ಯಾರ್ಥಿ ವೇತನಕ್ಕೆ ಜಾತಿ ಹಾಗೂ ಆದಾಯ ಪ್ರಮಾಣಪತ್ರ, ಮದುವೆಗಾಗಿ ಸಾಲ ತೆಗೆಯಲು ಅಗತ್ಯವಿರುವ ಪಹಣಿ ಸೇರಿದಂತೆ ಇತರ ದಾಖಲೆಗಳನ್ನು ನಿಗದಿತ ಸಮಯದೊಳಗೆ ಸಲ್ಲಿಸಬೇಕಾಗಿದೆ. ಇದರಿಂದ ಸಾರ್ವಜನಿಕರು ಕಷ್ಟವಾದರೂ ಸರಿಯೇ ಕಾದು ಪ್ರಮಾಣಪತ್ರ ಪಡೆಯಲೇ ಬೇಕು ಎನ್ನುವ ನೆಲೆಯಲ್ಲಿ ಬೆಳಗ್ಗೆಯಿಂದ ಊಟಕ್ಕೂ ತೆರಳದೆ, ಸಾಲು ತಪ್ಪುತ್ತದೆ ಎನ್ನುವ ಭಯದಿಂದ ಊಟ ಬಿಟ್ಟು ನಿಲ್ಲುವುದು ಸಾಮಾನ್ಯವಾಗಿದೆ. ಇದೀಗ ಸೂಕ್ತ ಸಮಯದಲ್ಲಿ ದಾಖಲೆಗಳನ್ನು ಅಟಲ್‌ಜೀ ಸ್ನೇಹ ಕೇಂದ್ರದಲ್ಲಿ ಸಿಗದ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳ ಶೈಕ್ಷಣಿಕ ಕೆಲಸಗಳಿಗೆ ತೊಡಕುಂಟಾಗುತ್ತಿದೆ ಎಂದು ಪೋಷಕಿ ಲೀಲಾ ತಿಳಿಸಿದರು.

Advertisement

ಪ್ರಯೋಜನ ದೊರಕುತ್ತಿಲ್ಲ
ದಿನದ 24 ಗಂಟೆ ಕೆಲಸ ಮಾಡಿದರೂ ನೀಗದಷ್ಟು ಕೆಲಸಗಳಿರುವಾಗ ಇರುವ ಅಟಲ್‌ಜೀ ಸ್ನೇಹ ಕೇಂದ್ರದ ಪ್ರಯೋಜನ ಜನರಿಗೆ ದೊರಕುತ್ತಿಲ್ಲ. ಶಾಲಾ-ಕಾಲೇಜುಗಳ ದಾಖಲಾತಿ, ಪಹಣಿ, ಸೇರಿದಂತೆ ಇತರೆ ದಾಖಲಾತಿಗಳು ತುರ್ತಾಗಿ ಪಡೆಯುವ ಸಂದರ್ಭ ಸರ್ವರ್‌ ಸಮಸ್ಯೆ ಜನರನ್ನು ಇನ್ನಷ್ಟು ಸಂಕಷ್ಟಕ್ಕೆ ಈಡು ಮಾಡಿದೆ.
-ಕಲ್ಯಾಣಿ ಭಟ್‌, ಉಡುಪಿ

ಸಮಸ್ಯೆ ಪರಿಹಾರ
ಮೂರರಿಂದ ಆರು ತಿಂಗಳುಗ ಳ ನಡುವೆ ತಂತ್ರಾಂಶವನ್ನು ಅಭಿವೃದ್ಧಿಪಡಿಸುವಾಗ ಇಂತಹ ಸರ್ವರ್‌ ಸಮಸ್ಯೆಗಳು ಎದುರಾಗುತ್ತದೆ. ಈ ಸಮಯದಲ್ಲಿ ಒಂದು ಅರ್ಜಿಯನ್ನು ತುಂಬಿಸಲು ಸಾಕಷ್ಟು ಬೇಕಾಗುತ್ತದೆ. ಇದೀಗ ಸರ್ವರ್‌ ಸಮಸ್ಯೆ ಪರಿಹಾರವಾಗಿದೆ.
-ಪ್ರದೀಪ್‌ ಕುಡೇìಕರ್‌, ತಹಶೀಲ್ದಾರ್‌ ಉಡುಪಿ

Advertisement

Udayavani is now on Telegram. Click here to join our channel and stay updated with the latest news.

Next