Advertisement

ಕಡಿಮೆ ಖರ್ಚಿನಲ್ಲಿ ಜನತೆಗೆ ಉತ್ತಮ ಸೇವೆ ನೀಡಿ

04:50 PM Sep 14, 2020 | Suhan S |

ಬೀದರ: ಪ್ರಧಾನಿ ನರೇಂದ್ರ ಮೋದಿ ಡಿಜಿಟಲ್‌ ಇಂಡಿಯಾದ ಕನಸು ಕಂಡಿದ್ದಾರೆ. ಜನರಿಗೆ ಎಲ್ಲ ಸೇವೆಗಳು ಸರಳವಾಗಿ ಮತ್ತು ಕಡಿಮೆ ದರದಲ್ಲಿ ದೊರೆಯಬೇಕು ಎನ್ನುವುದೇ ಸಾಮಾನ್ಯ ಸೇವಾ ಕೇಂದ್ರಗಳ ಉದ್ದೇಶವಾಗಿದೆ. ಗ್ರಾಮೀಣ ಭಾಗದಲ್ಲಿ ವಿಎಲ್‌ಇಗಳು ಉತ್ತಮ ಸೇವೆ ನೀಡಿ ಜನರ ಪ್ರೀತಿ, ಗೌರವಕ್ಕೆ ಪಾತ್ರರಾಗಬೇಕು ಎಂದು ಸಂಸದ ಭಗವಂತ ಖೂಬಾ ಕರೆ ನೀಡಿದರು.

Advertisement

ನಗರದ ಡಾ| ಚನ್ನಬಸವ ಪಟ್ಟದ್ದೇವರು ರಂಗ ಮಂದಿರದಲ್ಲಿ ರವಿವಾರ ನಡೆದ, ಸಂಸದ ಭಗವಂತ ಖೂಬಾ ಅವರ ಜತೆ ಜಿಲ್ಲೆಯ ಎಲ್ಲ ಸಾಮಾನ್ಯ ಸೇವಾ ಕೇಂದ್ರಗಳ ವಿಲೇಜ್‌ ಲೇವೆಲ್‌ ಎಂಟರ್‌ ಪ್ರೇನಿಯರ್‌ ಅವರ ಸಂವಾದ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಸಿಎಸ್‌ ಸಿಗಳಲ್ಲಿ ವಿಎಲ್‌ಇಗಳಾಗಿ ಸೇವೆ ಸಲ್ಲಿಸುತ್ತಿರುವ ಬೀದರ ಜಿಲ್ಲೆಯ 340 ಜನರು ಸ್ವಾವಲಂಬಿ ಜೀವನ ನಡೆಸುತ್ತಿದ್ದೀರಿ. ಅನೇಕ ಪದವೀಧರರಿಗೆ ಕೆಲಸಸಿಗುತ್ತಿಲ್ಲ. ಸ್ಥಳೀಯವಾಗಿ ಕೆಲಸ ಮಾಡಿ, ಹಣ ಗಳಿಸುತ್ತಿರುವ ನೀವೇ ಭಾಗ್ಯಶಾಲಿಗಳು ಎಂದು ಹೇಳಿದರು.

ಕಡಿಮೆ ಖರ್ಚಿನಲ್ಲಿ ಉತ್ತಮ ಸೇವೆ ನೀಡಿದರೆ ಮಾತ್ರ ಆರ್ಥಿಕ ಅಭಿವೃದ್ಧಿ ಸಾಧಿಸಲು ಸಾಧ್ಯವಾಗಲಿದೆ. ಸಿಎಸ್‌ಸಿನಿಂದ 400 ಸೇವೆಗಳನ್ನು ಕಡಿಮೆ ದರದಲ್ಲಿ ನೀಡಬಹುದಾಗಿದೆ. ಇಲ್ಲಿ ಕೆಲಸ ಮಾಡುವ ವಿಎಲ್‌ಇಗಳು ಗ್ರಾಮದ ಮಗ ಹಾಗೂ ಮನೆಯ ಮಗನಾಗಲು ಅವಕಾಶವಿದೆ. ಅದನ್ನು ಸದುಪಯೋಗಪಡಿಸಿಕೊಳ್ಳಬೇಕೆಂದು ಕಿವಿಮಾತು ಹೇಳಿದರು. ದೇಶದ ಎಲ್ಲರೂ ಆರ್ಥಿಕವಾಗಿ ಸದೃಢರಾದರೆ ಮಾತ್ರ ದೇಶವು ಬಲಿಷ್ಠವಾಗುತ್ತದೆ. ಎಲ್ಲರೂ ಈ ನಿಟ್ಟಿನಲ್ಲಿ ಸಾಥ್‌ ನೀಡಬೇಕೆಂದರು. ಜಿಲ್ಲಾಧಿಕಾರಿ ಆರ್‌. ರಾಮಚಂದ್ರನ್‌ ಮಾತನಾಡಿ, ನ್ಯಾಯಬೆಲೆ ಅಂಗಡಿಗಳಿಗೆ ಪಡಿತರ ಆಹಾರ ಪಡೆಯಲು ಬರುವವರಿಗೆ ಅಲ್ಲಿಯೇ ಆಯುಷ್ಮಾನ್‌ ಆರೋಗ್ಯ ಕಾರ್ಡ್‌ ವಿತರಣೆಗೆಅವಕಾಶ ನೀಡಬೇಕು ಎಂದು ವಿಎಲ್‌ಇ ಒಬ್ಬರು ನೀಡಿರುವ ಸಲಹೆ ಒಳ್ಳೆಯದು. ಈ ಬಗ್ಗೆ ಆಹಾರ ಇಲಾಖೆ ಉಪ ನಿರ್ದೇಶಕರೊಂದಿಗೆ ಚರ್ಚಿಸಿ, ಅನುಷ್ಠಾನಗೊಳಿಸಲಾಗುವುದು. ಸಿಎಸ್‌ಸಿಮೂಲಕ ಹೋಲ್ಡಿಂಗ್‌ ವಿತರಣೆ ಮತ್ತು ಎಸ್‌ಟಿ ಜಾತಿ ಪ್ರಮಾಣ ಪತ್ರಕ್ಕೆ ಅವಕಾಶ ನೀಡಬೇಕೆಂಬ ಬೇಡಿಕೆ ರಾಜ್ಯ ಮಟ್ಟದ ವಿಷಯಗಳಾಗಿದ್ದು, ಈ ಕುರಿತು ಪರಿಶೀಲಿಸಲಾಗುವುದು ಎಂದು ಭರವಸೆ ನೀಡಿದರು.

ಸಂವಾದದಲ್ಲಿ ಅನೇಕ ವಿಲೇಜ್‌ ಲೇವೆಲ್‌ ಎಂಟರ್‌ಪ್ರೇನಿಯರ್‌ಗಳು ತಮ್ಮ ಅನುಭವ ಮತ್ತು ಸಮಸ್ಯೆಗಳನ್ನು ಹೇಳಿಕೊಂಡರು. ಮಹಾನಂದ ಮಾತನಾಡಿ, ಸಿಎಸ್‌ಸಿ ಸ್ಥಾಪನೆ ಮೂಲಕ ತಮ್ಮ ಜೀವನ ಸುಧಾರಣೆ ಮತ್ತು ಕಷ್ಟಗಳನ್ನು ಮೆಟ್ಟಿ ತಾವು ಈ ಹಂತಕ್ಕೆ ಹೇಗೆ ತಲುಪಿದೆ ಎನ್ನುವ ಅನುಭವ ಹಂಚಿಕೊಂಡರಲ್ಲದೇ ತಾವು ಸ್ಯಾನಿಟರಿ ಪ್ಯಾಡ್‌ ತಯಾರಿಕಾ ಘಟಕ ಸ್ಥಾಪಿಸುತ್ತಿರುವುದಾಗಿಯೂ ತಿಳಿಸಿದರು. ಶೀಬಾ ರೋಜ್‌ ಅವರು ಆಯುಷ್ಮಾನ್‌ ಭಾರತ ಕಾರ್ಡ್‌ ವಿತರಣೆಯಲ್ಲಿನ ಸಾಧನೆ ವಿವರಿಸಿದರು.

ಡಿಎಚ್‌ಒ ಡಾ| ವಿ.ಜಿ. ರೆಡ್ಡಿ, ಯೋಜನಾ ವ್ಯವಸ್ಥಾಪಕ ಸಚಿನ್‌ ಉಪ್ಪೆ, ಸತೀಶ ವಾಲೆ, ಸಂಸದರ ಆಪ್ತ ಸಹಾಯಕ ಅಮರ ಹಿರೇಮಠ, ಶಂಕರ ದೇಶಮುಖ ಮತ್ತಿತರರು ಇದ್ದರು. ಚನ್ನಬಸವ ಹೇಡೆ ನಿರೂಪಿಸಿದರು. ಸಂವಾದದಲ್ಲಿ ಸಿಎಸ್‌ಸಿಗಳ ಸೊಸೈಟಿಗೆ ಕೇಕ್‌ ಕತ್ತರಿಸುವ ಮೂಲಕ ಸಂಸದ ಖೂಬಾ ಉದ್ಘಾಟಿಸಿದರು.

Advertisement

ಬ್ಯಾಂಕ್‌ಗೆ ನೋಟಿಸ್‌ ಕೊಡಿ :  ಭಾಲ್ಕಿಯ ಎಸ್‌ಬಿಐ ಬ್ಯಾಂಕ್‌ನಲ್ಲಿ ಆಧಾರ್‌ ಕಾರ್ಡ್‌ ನವೀಕರಣ ಮಾಡುತ್ತಿಲ್ಲ ಎಂದು ವಿಎಲ್‌ಇ ಒಬ್ಬರು ಸಂವಾದದಲ್ಲಿ ಗಮನ ಸೆಳೆದರು. ಇದಕ್ಕೆ ಸ್ಪಂದಿಸಿದ ಜಿಲ್ಲಾ ಧಿಕಾರಿ ರಾಮಚಂದ್ರನ್‌ ಆರ್‌. ಅವರು, ಸೇವೆ ನೀಡದ ಬ್ಯಾಂಕ್‌ನವರಿಗೆ ನೋಟೀಸ್‌ ಜಾರಿ ಮಾಡಿ ಎಂದು ಸಿಬ್ಬಂದಿಗೆ ಸೂಚಿಸಿದರಲ್ಲದೇ ಜಿಲ್ಲೆಯ ಎಲ್ಲ 340 ಸಿಎಸ್‌ಸಿಗಳಲ್ಲೂ ಆಧಾರ್‌ ನವೀಕರಣಕ್ಕೆ ಅವಕಾಶ ಕಲ್ಪಿಸಲಾಗುವುದು ಎಂದು ಘೋಷಿಸಿದರು.

2021ರ ಜನವರಿ ತಿಂಗಳೊಳಗೆ ಬೀದರ ಜಿಲ್ಲೆಯ 15 ಲಕ್ಷ ಅರ್ಹ ಫಲಾನುಭವಿಗಳಿಗೆ ಆಯುಷ್ಮಾನ್‌ ಆರೋಗ್ಯ ಕಾರ್ಡ್‌ ವಿತರಿಸಲು ಗುರಿ ಹಾಕಿಕೊಳ್ಳಬೇಕು. ಈ ಗುರಿಯನ್ನು ತಲುಪಿದರೆ ಕೇಂದ್ರ ಸಚಿವರನ್ನು ಬೀದರಗೆಕರೆಯಿಸಿ ಜಿಲ್ಲೆಯ ಸಾಮಾನ್ಯ ಸೇವಾ ಕೇಂದ್ರಗಳ ವಿಲೇಜ್‌ ಲೇವೆಲ್‌ ಎಂಟರ್‌ ಪ್ರೇನಿಯರ್‌ಗಳನ್ನು ಸನ್ಮಾನಿಸಲಾಗುವುದು. ರಾಷ್ಟ್ರೀಯ ಭಾವನೆ, ಸಾಮಾಜಿಕ ಕಾಳಜಿ ಇದ್ದರೆ ಮಾತ್ರ ಸಾಧನೆ ಸಾಧ್ಯವಾಗಲಿದೆ.- ಭಗವಂತ ಖೂಬಾ, ಸಂಸದ, ಬೀದರ.

Advertisement

Udayavani is now on Telegram. Click here to join our channel and stay updated with the latest news.

Next