Advertisement

ಕರಡಿ “ವಾದನ” ನಿಲ್ಲಿಸಿದ ಹಿರಿಯ ಕಲಾವಿದ ಗುರುಲಿಂಗಪ್ಪ ವೀರಸಂಗಪ್ಪ ಕರಡಿ

01:41 AM Jan 10, 2024 | Team Udayavani |

ಮಹಾಲಿಂಗಪುರ: ಕರಡಿ ಕಲೆಯ ಉಳಿಗಾಗಿ ಕಳೆದ 15 ತಲೆಮಾರುಗಳಿಂದ ಶ್ರಮಿಸುತ್ತಿರುವ ಪಟ್ಟಣದ ಕರಡಿ ಮನೆತನದ ಹಿರಿಯ ಕಲಾವಿದರು, ತಮ್ಮ ಕರಡಿ ಕಲೆಯಿಂದ ರಾಷ್ಟ್ರ ಮಟ್ಟದಲ್ಲಿ ಗುರುತಿಸಿಕೊಂಡ ಹಿರಿಯ ಜಾನಪದ ಕಲಾವಿದ ಗುರುಲಿಂಗಪ್ಪ ವೀರಸಂಗಪ್ಪ ಕರಡಿ(85) ಅವರು ಮಂಗಳವಾರ ವಯೋಸಹಜ ಕಾಯಿಲೆಯಿಂದಾಗಿ ನಿಧನ ಹೊಂದಿದರು. ಈ ಮೂಲಕ ಜಾನಪದ ಕ್ಷೇತ್ರ ಹಾಗೂ ಕರಡಿ ಕಲೆಯನ್ನೇ ಉಸಿರಾಗಿಸಿಕೊಂಡಿರುವ ಕರಡಿ ಮನೆತನದ ಹಿರಿಯ ಕೊಂಡಿಯೊಂದು ಕಳಚಿದಂತಾಗಿದೆ. ಇಬ್ಬರು ಪುತ್ರರು, ಇಬ್ಬರು ಪುತ್ರಿಯರು ಸೇರಿದಂತೆ ಅಪಾರ ಶಿಷ್ಯಬಳಗ ಹಾಗೂ ಬಂಧುಗಳನ್ನು ಅಗಲಿದ್ದಾರೆ.

Advertisement

ಗುರುಲಿಂಗಪ್ಪ ಕರಡಿ ಕಲಾ ಸಾಧನೆ
ಪಟ್ಟಣದ ಬಡನೇಕಾರ ಕುಟುಂಬದ ವೀರಸಂಗಪ್ಪ ಮತ್ತು ಬಸವ್ವ ದಂಪತಿಗಳ ಮಗನಾಗಿ 01-08-1939ರಂದು ಜನಿಸಿದ ಗುರುಲಿಂಗಪ್ಪ ಕರಡಿ ಕಲಿತದ್ದು ಕೇವಲ 5ನೇ ತರಗತಿ. ಕುಲಕಸಬು ನೇಕಾರಿಕೆಯಲ್ಲಿ ಜೀವನವನ್ನು ಸಾಗಿಸಿದ ಅವರು ತಂದೆ ವೀರಸಂಗಪ್ಪನ ಅವರಿಂದ ಡೂಳ್ಳಿನ ಕಲೆ ಮತ್ತು ದೊಡ್ಡಪ್ಪ ವೀರಭದ್ರಪ್ಪ ಕರಡಿಯವರಿಂದ ಕರಡಿಮಜಲು ಕಲೆಯ ಮಾರ್ಗದರ್ಶನದೊಂದಿಗೆ ಕಲಾವಿದರಾಗಿ ಹೊರಹೊಮ್ಮಿದರು.
ಮಹಾಲಿಂಗೇಶ್ವರ ಮಠದ ಹಿಂದಿನ ಪೀಠಾಧಿಪತಿಗಳಾಗಿದ್ದ ಗುರುಲಿಂಗೇಶ್ವರ ಸ್ವಾಮಿಗಳಿಂದ ಗುರುದಿಕ್ಷೆ ಹಾಗೂ ಮಲ್ಲಿಕಾರ್ಜುನ ಅಸುಂಡಿಯವರಿಂದ ಸಂಗೀತ ದೀಕ್ಷಯನ್ನು ಪಡೆದು ಸುಮಾರು 60 ವರ್ಷಗಳಿಂದ ಕರಡಿಮಜಲು ಕಲಾವಿದರಾಗಿ ರಾಜ್ಯ, ರಾಷ್ಟ್ರದಾದ್ಯಂತ ತಮ್ಮ ಕಲಾಪ್ರದರ್ಶನಗಳನ್ನು ನೀಡಿ ಸೈ ಎನಿಸಿಕೊಂಡಿದ್ದಾರೆ.

ಗಣ್ಯರ ಮುಂದೆ ಪ್ರದರ್ಶನ
ಗುರುಲಿಂಗಪ್ಪ ಕರಡಿ ಅವರು ತಮ್ಮ ಕಲಾತಂಡದೊಂದಿಗೆ 1963 ರಲ್ಲಿ ಪಶ್ಚಿಮ ಬಂಗಾಳ, 1964 ರಲ್ಲಿ ಆಸ್ಸಾಂ, ಮಣಿಪುರ, 1965 ರಲ್ಲಿ ಜಮ್ಮು-ಕಾಶ್ಮೀರ, 1966 ರಲ್ಲಿ ಮಹಾರಾಷ್ಟ್ರ 1967 ರಲ್ಲಿ ಒರಿಸ್ಸಾ, 1968ರಲ್ಲಿ ಆಂದ್ರಪ್ರದೇಶ, 1969ರಲ್ಲಿ ತಮಿಳ್ನಾಡು ಸೇರಿದಂತೆ ಭಾರತದಾದ್ಯಂತ ವಿವಿಧ ಸ್ಥಳಗಳಲ್ಲಿ ತಿಂಗಳುಗಟ್ಟಲೆ ಕಾರ್ಯಕ್ರಮ ನೀಡಿದ ಕೀರ್ತಿ ಜನಪದ ಕರಡಿ ಮೇಳ ತಂಡಕ್ಕಿದೆ. 1986ರಲ್ಲಿ ಅಂದಿನ ರಾಷ್ಟçಪತಿ ಶಂಕರದಯಾಳ ಶರ್ಮಾ, ಪ್ರಧಾನಮಂತ್ರಿ ರಾಜೀವ ಗಾಂಧಿ, ಕಾಂಗ್ರೆಸ್ ಪಕ್ಷದ ನಾಯಕಿ ಸೋನಿಯಾ ಗಾಂಧಿ, ಮಾಜಿ ಸಿಎಂ ದಿ.ರಾಮಕೃಷ್ಣ ಹೆಗಡೆಯವರ ಸಮ್ಮುಖದಲ್ಲಿ ಕರಡಿಮಜಲು ಕಲೆ ಪ್ರದರ್ಶಿಸಿ ಪ್ರಶಂಸೆಗೆ ಪಾತ್ರರಾಗಿದ್ದರು.

ಸಾವಿರಾರು ಕಲಾ ಪ್ರದರ್ಶನ
1963 ರಿಂದ ಇಲ್ಲಿನವರೆಗೆ 60 ವರ್ಷಗಳ ತಮ್ಮ ಕಲಾ ಜೀವನದಲ್ಲಿ ಪಾಂಡೀಚೆರಿ, ಕಲ್ಕತ್ತಾ, ದೆಹಲಿ, ಮದ್ರಾಸ, ಮಂತ್ರಾಲಯ, ಸೂರಜಕುಂಡ ಸೇರಿದಂತೆ ಕರ್ನಾಟಕದ ಪಟ್ಟದಕಲ್ಲು, ಬಿಜಾಪೂರ, ಹುಬ್ಬಳ್ಳಿ, ಬೀದರ, ಹಂಪಿ, ಸಮೀರವಾಡಿ ಸೇರಿದಂತೆ ದೇಶಾದ್ಯಂತ ಜರುಗಿದ ಎಲ್ಲಾ ಸಾಂಸ್ಕೃತಿಕ ಉತ್ಸವ, ಮೈಸೂರಿನಲ್ಲಿ ಜರುಗಿದ ಪ್ರಥಮ ಕನ್ನಡ ಸಾಹಿತ್ಯ ಸಮ್ಮೇಳನ, ಬೆಳಗಾವಿಯಲ್ಲಿ ಜರುಗಿದ ಎರಡನೇಯ ವಿಶ್ವಕನ್ನಡ ಸಮ್ಮೇಳನ, ಜನಪದ ಕಲಾ ಉತ್ಸವ, ದಸರಾ ಉತ್ಸವ, ಸುವರ್ಣ ಸಾಂಸ್ಕೃತಿಕ ದಿಬ್ಬಣ ಹಾಗೂ ದೂರದರ್ಶನದ ಚಂದನ ಮತ್ತು ಸುವರ್ಣ ವಾಹಿನಿ ಸೇರಿದಂತೆ ನೂರಾರು ಸ್ಥಳಗಳಲ್ಲಿ ಸಾವಿರಾರು ಕಲಾ ಪ್ರದರ್ಶನ ನೀಡಿದ ಕೀರ್ತಿ ಗುರುಲಿಂಗಪ್ಪ ಕರಡಿ ಅವರಿಗೆ ಸಲ್ಲುತ್ತದೆ.

2015ನೇ ಸಾಲಿನ ರಾಜ್ಯೋತ್ಸವ ಪ್ರಶಸ್ತಿ
ಗುರುಲಿಂಗಪ್ಪ ಕರಡಿ ಅವರ ಕಲೆಗೆ ಕರ್ನಾಟಕ ಜಾನಪದ ಅಕಾಡೆಮಿಯಿಂದ ವಾರ್ಷಿಕ ಪ್ರಶಸ್ತಿ ಹಾಗೂ ರಾಜ್ಯ ಸರ್ಕಾರದಿಂದ 2015ನೇ ಸಾಲಿನ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಸೇರಿದಂತೆ ಹತ್ತಾರು ಸಂಘ ಸಂಸ್ಥೆಗಳಿಂದ ಪ್ರಶಸ್ತಿ ಹಾಗೂ ಗೌರವ ಸನ್ಮಾನಗಳು ಅರಸಿ ಬಂದಿವೆ.

Advertisement

ಅಪಾರ ಶಿಷ್ಯ ಬಳಗ
ಗುರುಲಿಂಗಪ್ಪನವರ 60 ವರ್ಷಗಳ ಸುದೀರ್ಘ ಕಲಾಜೀವನದಲ್ಲಿ ಕರಡಿ ಮನೆತನದ 30ಕ್ಕೂ ಅಧಿಕ ಕಲಾವಿದರು ಹಾಗೂ ಸುತ್ತಮುತ್ತಲಿನ ಊರುಗಳ ಹತ್ತಾರು ಕಲಾವಿದರಿಗೆ ಕರಡಿ ಕಲೆಯ ಮಾರ್ಗದರ್ಶನ ನೀಡುವ ಮೂಲಕ ಜಾನಪದ ಸಂಗೀತ ಕಲೆಯ ಒಂದು ಭಾಗವಾದ ಕರಡಿ ಕಲೆಯನ್ನು ಉಳಿಸಿ ಬೆಳೆಸುವಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ. ಇವರ ನಿಧನದಿಂದಾಗಿ ಕರಡಿ ಕಲಾಕ್ಷೇತ್ರಕ್ಕೆ ತುಂಬಲಾರದ ನಷ್ಟವಾಗಿದೆ.

ಗಣ್ಯರಿಂದ ಅಂತಿಮ ನಮನ
ರಬಕವಿ-ಬನಹಟ್ಟಿ ತಾಲೂಕು ಆಡಳಿತದ ಪರವಾಗಿ ತಹಶೀಲ್ದಾರ ಗಿರೀಶ ಸ್ವಾದಿ, ಬಾಗಲಕೋಟೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಕರಣಕುಮಾರ ಸೇರಿದಂತೆ ಪಟ್ಟಣದ ಹಿರಿಯರು, ಕಲಾವಿದರು ಗುರುಲಿಂಗಪ್ಪ ಕರಡಿ ಅವರಿಗೆ ಅಂತಿಮ ದರ್ಶನ ಪಡೆದು ಗೌರವ ಸಲ್ಲಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next