Advertisement

BJP ಕೆಡವಲು ಸ್ವಾರ್ಥಿಗಳಿಂದ ಯತ್ನ! : ಜಗದೀಶ್‌ ಶೆಟ್ಟರ್‌

11:32 PM Apr 16, 2023 | Team Udayavani |

ಹುಬ್ಬಳ್ಳಿ: ದಕ್ಷಿಣ ಭಾರತದಲ್ಲಿ ಬಿಜೆಪಿಗೆ ಕರ್ನಾಟಕ ಹೆಬ್ಟಾಗಿಲುನಂತಿದೆ. ಕೆಲವರು ತಮ್ಮ ಸ್ವಾರ್ಥಕ್ಕಾಗಿ ಹೆಬ್ಟಾಗಿಲು ಕೆಡವುವ ಕೆಲಸಕ್ಕೆ ಮುಂದಾಗಿದ್ದಾರೆ. ನನ್ನನ್ನು ರಾಜಕೀಯವಾಗಿ ತುಳಿಯಲು ಹೋಗಿ ಪಕ್ಷಕ್ಕೆ ಹಾನಿ ಮಾಡುತ್ತಿದ್ದಾರೆ. ಇದು ಪಕ್ಷದ ವರಿಷ್ಠರಿಗೇಕೆ ತಿಳಿಯುತ್ತಿಲ್ಲ ಎಂಬುದು ನನಗೆ ಅರ್ಥವಾಗುತ್ತಿಲ್ಲ. ರಾಜ್ಯದಲ್ಲಿ ಕೆಲವರು ಸರಕಾರ, ಪಕ್ಷದ ಮೇಲೆ ತಮ್ಮದೇ ನಿಯಂತ್ರಣ ಸಾಧಿಸಲು ಮುಂದಾಗಿದ್ದು, ಖಂಡಿತವಾಗಿಯೂ ಇದು ಕಂಟಕವಾಗುವುದು ಖಚಿತ.”

Advertisement

– ಕಳೆದ ಮೂರ್‍ನಾಲ್ಕು ದಶಕಗಳಿಂದ ಬಿಜೆಪಿಯೊಂದಿಗೆ ಗುರುತಿಸಿಕೊಂಡಿದ್ದ ಮಾಜಿ ಸಿಎಂ ಜಗದೀಶ್‌ ಶೆಟ್ಟರ್‌ ರವಿವಾರ “ಉದಯವಾಣಿ”ಗೆ ನೀಡಿದ ಸಂದರ್ಶನದಲ್ಲಿ ಹೇಳಿದ ಮಾತಿದು.

ಒಟ್ಟಾರೆ ಅವರು ಹೇಳಿದಿಷ್ಟು..
ನಿಜ ಹೇಳುತ್ತೇನೆ. ನಾವೇ ಕಟ್ಟಿ ಬೆಳೆಸಿದ ಪಕ್ಷವನ್ನು ಬಿಟ್ಟು ಹೊರಬರುತ್ತಿರುವುದಕ್ಕೆ ನೋವಾಗುತ್ತಿದೆ. ಆದರೆ ಯಾರಿಗೆ ಆಗಲಿ ಆತ್ಮಾಭಿಮಾನ, ಸ್ವಾಭಿಮಾನಕ್ಕೆ ಧಕ್ಕೆಯಾದಾಗ ಸಹಿಸಿಕೊಳ್ಳುವುದಕ್ಕೆ ಆಗುವುದಿಲ್ಲ. ಪಕ್ಷದಿಂದ ಇಲ್ಲವೇ ಆಕಸ್ಮಿಕವಾಗಿ ನೋವಾಗಿದೆ ಎಂದರೆ ಸರಿ. ಉದ್ದೇಶ ಪೂರ್ವಕವಾಗಿ ಅವಮಾನ ಮಾಡುವ, ರಾಜಕೀಯವಾಗಿ ಮೂಲೆಗುಂಪು ಮಾಡುವ ಹುನ್ನಾರ ನಡೆದಾಗ ಗೊತ್ತಿದ್ದು, ಗೊತ್ತಿದ್ದು ಅದನ್ನು ಸಹಿಸಿಕೊಂಡು ಇರಲು ಹೇಗೆ ಸಾಧ್ಯ ಹೇಳಿ.
ಇಡೀ ದಕ್ಷಿಣ ಭಾರತದಲ್ಲಿ ಬಿಜೆಪಿ ಮೊದಲ ಬಾರಿಗೆ ಅಧಿಕಾರಕ್ಕೆ ಬಂದಿದ್ದು ಕರ್ನಾಟಕದಲ್ಲಿ. ಪಕ್ಷ ದೃಷ್ಟಿಯಿಂದ ದಕ್ಷಿಣ ಭಾರತಕ್ಕೆ ಕರ್ನಾಟಕ ಹೆಬ್ಟಾಗಿಲು ಆಗಿದೆ. ಪಕ್ಷದ ಹಿತವನ್ನು ಬದಿಗೊತ್ತಿ ಕೆಲವರು ತಮ್ಮ ಸ್ವಾರ್ಥ ಸಾಧನೆ, ಅಧಿಕಾರ ಲಾಲಸೆಗೆ ಹೆಬ್ಟಾಗಿಲನ್ನೇ ಕೆಡವುವ ಕಾರ್ಯಕ್ಕೆ ಮುಂದಾಗಿದ್ದಾರೆ. ಇಂತಹ ಕಾರ್ಯ ದಿಂದ ಪಕ್ಷಕ್ಕೆ ಹೆಚ್ಚು ನಷ್ಟ ಆಗುತ್ತದೆ. ದಕ್ಷಿಣದ ಬೇರೆ ರಾಜ್ಯಗಳಲ್ಲಿ ಪಕ್ಷ ಬಲಾಡ್ಯವಿಲ್ಲ. ಇರುವ ಕರ್ನಾಟಕದಲ್ಲಿ ಪ್ರಾಬಲ್ಯ ಕುಸಿಯುವಂತೆ ಮಾಡಲಾಗುತ್ತಿದೆ.

ಪಕ್ಷ ನನಗೆ ಸಾಕಷ್ಟು ನೀಡಿದೆ. ಪಕ್ಷಕ್ಕಾಗಿಯೂ ಸಹ ಸಾಕಷ್ಟು ಶ್ರಮಿಸಿದ್ದೇನೆ. ಕಷ್ಟಕಾಲದಲ್ಲಿಯೂ ಪಕ್ಷಕ್ಕೆ ಬದ್ಧನಾಗಿದ್ದೆ, ಸಂಕಷ್ಟ ಸ್ಥಿತಿಯಲ್ಲಿ ಪಕ್ಷ ಬಲವರ್ಧನೆಗೆ ಶ್ರಮಿಸಿದ್ದೆ. ಪಕ್ಷದ ರಾಜ್ಯಾಧ್ಯಕ್ಷ, ವಿಪಕ್ಷ ನಾಯಕ, ಸಚಿವ, ಸ್ಪೀಕರ್‌, ಮುಖ್ಯಮಂತ್ರಿ ಸ್ಥಾನ ನಿರ್ವಹಿಸಿದ್ದೇನೆ. ಪಕ್ಷದಲ್ಲಿನ ನನ್ನ ಹಿರಿತನವನ್ನು ಲೆಕ್ಕಿಸದೆ ಕಳೆದೊಂದು ವರ್ಷದಿಂದ ಪ್ರತಿ ವಿಚಾರಕ್ಕೂ ಕಡೆ ಗಣಿಸಲಾಯಿತು. ಐದಾರು ತಿಂಗಳುಗಳಿಂದಂತೂ ಪಕ್ಷದ ಪ್ರಮುಖ ನಿರ್ಧಾರಗಳಾಗಲಿ, ರಹಸ್ಯ ಸಭೆಗಳಾಗಲಿ ಸರಿಯಾಗಿ ಕರೆಯುವುದಾಗಲಿ, ಪಕ್ಷದ ಉಸ್ತುವಾರಿ ಎನ್ನಿಸಿಕೊಂಡವರು ಸಹ ಹಿರಿಯನಾದ ನನ್ನನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಲಿಲ್ಲ. ಹುಬ್ಬಳ್ಳಿಯಲ್ಲಿ ನಡೆದ ರಾಷ್ಟ್ರಪತಿ ಸಮ್ಮಾನ, ಪ್ರಧಾನಿ ಆಗಮನ ವೇಳೆಯೂ ಉದ್ದೇಶಪೂರ್ವಕವಾಗಿ ಕಡೆಗಣಿಸಲಾಗಿತ್ತು. ಇದು ನನಗೆ ಮಾಡಿದ ಅಪಮಾನವಲ್ಲ, ಬದಲಾಗಿ ಹುಬ್ಬಳ್ಳಿ-ಧಾರವಾಡ ಹಾಗೂ ನನ್ನ ಮತಕ್ಷೇತ್ರದ ಜನತೆಗೆ ಮಾಡಿದ ಅಪಮಾನವಾಗಿದೆ. ಎಲ್ಲ ನೋವುಗಳನ್ನು ಸಹಿಕೊಂಡೇ ಬಂದಿದ್ದೆ.

ಮೋದಿ-ಶಾಗೆ ವಸ್ತುಸ್ಥಿತಿ ಗೊತ್ತಿಲ್ಲ: ಟಿಕೆಟ್‌ ತಪ್ಪಿಸುವುದು ಸೇರಿದಂತೆ ನನ್ನ ಕಡೆಗಣನೆ ಸೇಡಿನ ರಾಜಕಾರಣ ಎಂದು ಹೇಳಲಾರೆ. ಆದರೆ ಒಂದಂತೂ ನಿಜ, ಜಗದೀಶ್‌ ಶೆಟ್ಟರ್‌ಮುಂಚೂಣಿಯಲ್ಲಿದ್ದಾರೆ. ಮುಂದಿನ ದಿನಗಳಲ್ಲಿ ಅಧಿಕಾರದ ಅವಕಾಶ ಬಂದಾಗ ಮೊದಲ ಆಯ್ಕೆ ಅವರದ್ದಾಗಿರುತ್ತದೆ. ಎಲ್ಲಿ ನಮಗೆ ಅವಕಾಶ ಸಿಗುತ್ತದೆಯೋ ಇಲ್ಲವೋ ಎಂದು ಕೆಲವರಿಗೆ ಮೂಡಿದ ಭಯ ನನಗೆ ಟಿಕೆಟ್‌ ತಪ್ಪಿಸುವಂತೆ ಮಾಡಿದೆ. ನನಗನ್ನಿಸುತ್ತಿದೆ. ರಾಜ್ಯದಲ್ಲಿ ನಡೆಯುತ್ತಿರುವ ಪಕ್ಷದ ವಿದ್ಯಮಾನ ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಗೃಹ ಸಚಿವರ ಗಮನಕ್ಕೆ ಬಂದಂತಿಲ್ಲ. ಇಲ್ಲಿನ ವಸ್ತುಸ್ಥಿತಿ, ವಾಸ್ತವದ ಚಿತ್ರಣ ಅವರಿಗೆ ನೀಡದೆ ತಮಗೆ ಅನುಕೂಲಕರ ರೀತಿಯ ವರದಿ ನೀಡಲಾಗಿದೆ ಎಂದೆನಿಸುತ್ತದೆ.

Advertisement

ಅಭ್ಯರ್ಥಿಗಳ ಕುರಿತು ಸಮೀಕ್ಷೆ ಮಾಡಿಸಲಾಯಿತು. ಯಾವುದಾದರು ಒಂದು ಉತ್ತಮ ಸಂಸ್ಥೆ ಕೈಗೊಂಡ ಸಮೀಕ್ಷೆ ವರದಿಯನ್ನಾದರೂ ಬಹಿರಂಗ ಪಡಿಸಬೇಕಾಗಿತ್ತು. ನನಗನ್ನಿಸುತ್ತದೆ. ಸಮೀಕ್ಷೆ ಮಾಡುವವರನ್ನೇ ಬುಕ್‌ ಮಾಡಿ ಕೆಲವರು ತಮಗೆ ಹಿತವೆನ್ನಿಸುವ ರೀತಿ ಹಸ್ತಕ್ಷೇಪ ಮಾಡಿರಬಹುದು. ರಾಜ್ಯದಲ್ಲಿನ ಸ್ಥಿತಿ ಬಗ್ಗೆ ಗುಪ್ತದಳ, ಕೇಂದ್ರ ಗುಪ್ತದಳ ವರದಿ ನೀಡುತ್ತವೆ. ಆ ವರದಿಯನ್ನಾದರೂ ನೋಡಿ ಪಕ್ಷದ ವರಿಷ್ಠರು ಎಚ್ಚೆತ್ತುಕೊಳ್ಳಬೇಕಾಗಿತ್ತು. ಈ ಗುಪ್ತದಳ ವರದಿಯನ್ನೇ ಮ್ಯಾನಿಪ್ಲೇಟ್‌ ಮಾಡಿ ಕೇಂದ್ರಕ್ಕೆ ರವಾನಿಸಿರಬಹುದು ಎಂಬುದು ನನಗಿರುವ ಸಂಶಯ.

ವಾಜಪೇಯಿ, ಎಲ್‌.ಕೆ.ಆಡ್ವಾಣಿಯಂತಹ ಹಿರಿಯರು ಪಕ್ಷ ಕಟ್ಟಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅದನ್ನು ಬಲವರ್ಧನೆ ಗೊಳಿಸಿ ಎಲ್ಲೆಡೆ ಅಧಿಕಾರಕ್ಕೆ ಬರುವಂತೆ ಮಾಡಿದ್ದಾರೆ. ಆದರೆ ಕರ್ನಾಟಕದಲ್ಲಿ ಪಕ್ಷದಲ್ಲಿ ಆಗುತ್ತಿರುವ ಲೋಪಗಳ ಬಗ್ಗೆ ತಿದ್ದಿಕೊಳ್ಳಲು ಹೇಳಿದರೆ ಕೇಳುವ ಮನಸ್ಥಿತಿ ಇಲ್ಲವಾಗಿದೆ. ಬೇರುಮಟ್ಟದಿಂದ ಪಕ್ಷ ಕಟ್ಟಿದ ನಮ್ಮಂತಹವರಿಗೆ ಪಕ್ಷ ಸಾಗುವ ಸ್ಥಿತಿ ಕಂಡು ನೋವಾಗುವುದು ಸಹಜ. ಸರಕಾರದಲ್ಲಿಯೂ ಲೋಪಗಳಾಗುತ್ತಿವೆ ಎಂಬುದನ್ನು ಸೂಕ್ಷ್ಮವಾಗಿ ಅದರಲ್ಲೂ ಸದನದಲ್ಲೂ ಹೇಳಿದ್ದೆ. ಅದನ್ನು ಗಂಭೀರವಾಗಿ ತೆಗೆದುಕೊಳ್ಳಲಿಲ್ಲ ಎಂದರೆ ಏನು ಮಾಡಲು ಸಾಧ್ಯವಿದೆ ಹೇಳಿ?
ವರಿಷ್ಠರ ದ್ವಿಮುಖ ನೀತಿ: ಬಿಜೆಪಿ ತನ್ನದೇಯಾದ ತತ್ವ, ಸಿದ್ಧಾಂತ, ಶಿಸ್ತು ಹೊಂದಿದೆ. ಆದರೆ ರಾಜ್ಯದಲ್ಲಿನ ಬೆಳವಣಿಗೆ, ಪಕ್ಷದ ವರಿಷ್ಠರ ಕೆಲ ನಿಲುವುಗಳನ್ನು ನೋಡಿದರೆ ಹೊರಗಡೆ ಹೇಳುವುದಕ್ಕೂ, ವಾಸ್ತವದಲ್ಲಿ ನಡೆದುಕೊಳ್ಳುವುದಕ್ಕೂ ಸಾಕಷ್ಟು ವ್ಯತ್ಯಾಸವಿದೆ. ದ್ವಿಮುಖ ನೀತಿ ಇದೆ ಎಂದೆನಿಸದೆ ಇರದು. ಕುಟುಂಬ ರಾಜಕಾರಣಕ್ಕೆ ಅವಕಾಶ ಇಲ್ಲ ಎಂದು ಹೇಳಲಾಗುತ್ತದೆ. ಈ ಬಾರಿ ವಿಧಾನಸಭೆ ಚುನಾವಣೆಯ ಕೆಲ ಕ್ಷೇತ್ರಗಳನ್ನು ನೋಡಿ, ಅಷ್ಟೇ ಏಕೆ ನನ್ನದೇ ಪ್ರಕರಣ ನೋಡಿ. ನನಗೆ ಟಿಕೆಟ್‌ ನೀಡುವುದಿಲ್ಲವಂತೆ, ನನ್ನ ಕುಟುಂಬದಲ್ಲಿ ನಾನು ಸೂಚಿಸಿದವರಿಗೆ ಟಿಕೆಟ್‌ ನೀಡುತ್ತಾರಂತೆ. ಇದನ್ನು ದ್ವಿಮುಖ ನೀತಿ ಎನ್ನಬೇಕೋ ಏನನ್ನಬೇಕು.

ಹೋಗಲಿ ನನಗೆ ಟಿಕೆಟ್‌ ಇಲ್ಲ ಎನ್ನುವುದಕ್ಕೆ ಒಂದೇ ಒಂದು ಕಾರಣವನ್ನಾದರೂ ಕೊಡಿ ಎಂದರೂ ಒಬ್ಬರು ಕೊಡುತ್ತಿಲ್ಲ. ನನ್ನ ಮೈನಸ್‌ ಅಂಶಗಳನ್ನಾದರೂ ಹೇಳಿ ಎಂದರೆ ಹೇಳುತ್ತಿಲ್ಲ. ಕ್ರಿಯಾಶೀಲ ರಾಜಕಾರಣಿಯನ್ನು ಮೂಲೆಗುಂಪು ಮಾಡುವ ವ್ಯವಸ್ಥಿತ ಷಡ್ಯಂತ್ರ ನಡೆದಿದೆ ಎಂದು ಹೇಳದೆ ಬೇರೆ ವಿಧಿ ಇಲ್ಲವಾಗಿದೆ.

ನನ್ನ ಕ್ಷೇತ್ರದ ಜನತೆಯ ಪ್ರೀತಿ-ವಿಶ್ವಾಸದ ಬಗ್ಗೆ ನನಗೆ ಪೂರ್ಣ ನಂಬಿಕೆ ಇದೆ. ಯಾರು ಏನೇ ಅಪಪ್ರಚಾರ ಮಾಡಿ ದರೂ, ಷಡ್ಯಂತ್ರ ನಡೆಸಿದರೂ ಅವರು ನನಗೆ ಆಶೀರ್ವಾದ ಮಾಡಲಿದ್ದಾರೆ. ನನಗಾಗಿರುವ ಅನ್ಯಾಯ, ಮಾನಸಿಕ ಹಿಂಸೆ ಬಗ್ಗೆ ನೊಂದಿದ್ದಾರೆ. ನಾನು ಕೈಗೊಳ್ಳುವ ನಿರ್ಧಾರಕ್ಕೆ ಬೆಂಬಲಿಸುವುದಾಗಿ ತಿಳಿಸಿದ್ದಾರೆ. ನಾನು ಚುನಾವಣ ರಾಜಕೀಯ ದಿಂದ ಹಿಂದೆ ಸರಿಯಬೇಕು, ಈ ಚುನಾವಣೆ ಯನ್ನೇ ಕೊನೆಯದಾಗಿಸಬೇಕು ಎಂದುಕೊಂಡಿದ್ದೆ. ಪಕ್ಷದ ವರಿಷ್ಠರು ಕೇವಲ ಹದಿನೈದು ದಿನ ಮೊದಲ ಬಂದು ಟಿಕೆಟ್‌ ವಿಷಯವಾಗಿ ಹೇಳಿದ್ದರೂ ಹಿಂದೆ ಸರಿಯುತ್ತಿದ್ದೆ. ಆದರೆ ಪ್ರಚಾರ ಆರಂಭಿಸಿದ ನಂತರ ಕೇವಲ ದೂರವಾಣಿ ಕರೆ ಮಾಡಿ ಟಿಕೆಟ್‌ ಇಲ್ಲ ಎಂದು ಹೇಳುವುದು ಎಷ್ಟರ ಮಟ್ಟಿಗೆ ಸಮಂಜಸ ಯೋಚಿಸಿ. ವರಿಷ್ಠರ ನಿಲುವು, ಅವಮಾನದಿಂದಾಗಿ ಚುನಾ ವಣಾ ರಾಜಕೀಯದಿಂದ ಹಿಂದೆ ಸರಿಯಬೇಕೆಂದು ಕಂಡಿದ್ದೆ. ಆದರೆ,ಮನಸ್ಸು ಬದಲಾಯಿಸಿದ್ದೇನೆ. ಮುಂದಿನ 10 ವರ್ಷ ಸಕ್ರಿಯ ರಾಜಕೀಯದಲ್ಲಿ ಇರುತ್ತೇನೆ.

ಹಿತಶತ್ರುಗಳಿಗೆ ಶೆಟ್ಟರ್‌ ಏನೆಂದು ತೋರಿಸುತ್ತೇನೆ
ಬಿಜೆಪಿಯಲ್ಲಿ ನನ್ನಿಂದಲೇ ರಾಜಕೀಯ ನಡೆ ಕಂಡುಕೊಂಡವರು, ನನ್ನ ಕೈಯಿಂದಲೇ ಬಿ ಫಾರಂ ಪಡೆದು ಚುನಾವಣೆಗೆ ಸ್ಪರ್ಧಿಸಿದ ಕೆಲವರು ತಮಗೆ ತಾವೇ ದೊಡ್ಡವರೆಂದುಕೊಂಡು ಹಿತಶತ್ರುಗಳ ರೂಪದಲ್ಲಿ ಕಾಟ ಕೊಟ್ಟರು. ಕಾಲವೇ ಇಂತಹದ್ದಕ್ಕೆಲ್ಲ ಉತ್ತರ ನೀಡಲಿದೆ. ನನ್ನನ್ನು ರಾಜಕೀಯವಾಗಿ ಮೂಲೆಗುಂಪು ಮಾಡಲೆತ್ನಿಸಿದವರು ತಮ್ಮ ರಾಜಕೀಯ ಭವಿಷ್ಯದ ಮೇಲೆ ತಾವೇ ಕಲ್ಲು ಹಾಕಿಕೊಳ್ಳುತ್ತಿದ್ದೇವೆ ಎಂಬುದನ್ನು ಮರೆತಂತಿದೆ. ನೋಡೋಣ, ಶೆಟ್ಟರ್‌ನ್ನು ರಾಜಕೀಯವಾಗಿ ಮುಗಿಸಬಹುದು ಎಂದವರಿಗೆ ಶೆಟ್ಟರ್‌‌ ಎಂದರೆ ಏನು ಎಂಬುದು ಮನವರಿಕೆ ಆಗುವ ಸಮಯ ಬಂದರೂ ಬರಬಹುದು.

ವ್ಯವಸ್ಥಿತವಾಗಿ ಲಿಂಗಾಯತರ ಕಡೆಗಣನೆ
ಬಿಜೆಪಿಗೆ ಬಹುದೊಡ್ಡ ಮತಬ್ಯಾಂಕ್‌ ಎಂದರೆ ಲಿಂಗಾಯತ ಸಮಾಜವಾಗಿದೆ. ಆದರೆ ಇತ್ತೀಚೆಗಿನ ಬೆಳವಣಿಗೆ ಗಮನಿಸಿದರೆ ಪಕ್ಷದಲ್ಲಿ ಲಿಂಗಾಯತ ನಾಯಕರನ್ನು ವ್ಯವಸ್ಥಿತವಾಗಿ ಮೂಲೆಗುಂಪು ಮಾಡುವ ಹುನ್ನಾರ ನಡೆದಿದೆಯೇ ಎಂಬ ಶಂಕೆ ಮೂಡಿಸುವಂತೆ ಮಾಡಿದೆ. ರಾಜ್ಯದಲ್ಲಿ ಪಕ್ಷ ಅಧಿಕಾರಕ್ಕೆ ಬರುವಂತೆ ಮಾಡಿದ ಬಿ.ಎಸ್‌.ಯಡಿಯೂರಪ್ಪ ಅವರನ್ನು ವ್ಯವಸ್ಥಿತವಾಗಿ ಚುನಾವಣ ರಾಜಕೀಯದಿಂದ ನಿವೃತ್ತಿ ಮಾಡುವಂತೆ ಮಾಡಲಾಯಿತು. ಅವರಿಗೆ ವಯಸ್ಸಾಗಿದೆ ಎಂಬುದು ಬೇರೆ ಮಾತು. ಅವರ ಅನಂತರದಲ್ಲಿ ಪಕ್ಷದಲ್ಲಿ ಹಿರಿಯ ಲಿಂಗಾಯತ ನಾಯಕನ ಸ್ಥಾನದಲ್ಲಿ ನಾನಿದ್ದೇನೆ. ನನ್ನನ್ನು ಸಹ ಚುನಾವಣ ಕಣದಿಂದ ಹಿಂದೆ ಸರಿಸಿ ಬಿಟ್ಟರೆ ಅಲ್ಲಿಗೆ ಲಿಂಗಾಯತ ನಾಯಕತ್ವದ ಸ್ಪರ್ಧೆ ಇಲ್ಲದಂತಾಗುತ್ತದೆ ಎಂಬ ಹುನ್ನಾರದ ಲೆಕ್ಕಾಚಾರ ಇಲ್ಲದಿಲ್ಲ. ಲಕ್ಷ್ಮಣ ಸವದಿಯೂ ಲಿಂಗಾಯತ ನಾಯಕ. ಅವರಿಗೂ ಟಿಕೆಟ್‌ ನೀಡಲಿಲ್ಲ. ಬಹುತೇಕ ಲಿಂಗಾಯತ ನಾಯಕರನ್ನು ರಾಜಕೀಯವಾಗಿ ಮೂಲೆಗುಂಪು ಮಾಡುವ ಯತ್ನ ನಡೆದಿದೆಯೇ ಎಂದೆನಿಸುತ್ತದೆ. ಸಮಾಜದ ವಿಚಾರ ಬಂದಾಗಲೆಲ್ಲ ಧ್ವನಿ ಎತ್ತಿದ್ದೇನೆ. ಇದೀಗ ಇನ್ನಷ್ಟು ಪ್ರಖರವಾಗಿ ಧ್ವನಿ ಎತ್ತುತ್ತೇನೆ. ಮುಂದಿನ ರಾಜಕೀಯ ನಡೆಯಲ್ಲಿ ನನ್ನ ಮುಂದಿರುವುದು ಎರಡು ಆಯ್ಕೆ. ಒಂದು ಪಕ್ಷೇತರನಾಗಿ ಸ್ಪರ್ಧಿಸಬೇಕು ಇಲ್ಲವೇ ಕಾಂಗ್ರೆಸ್‌ ಸೇರಬೇಕು. ಸೋಮವಾರ ವೇಳೆಗೆ ಈ ಬಗ್ಗೆ ಸ್ಪಷ್ಟ ನಿರ್ಧಾರ ಪ್ರಕಟಿಸುತ್ತೇನೆ.

~ ಅಮರೇಗೌಡ ಗೋನವಾರ

Advertisement

Udayavani is now on Telegram. Click here to join our channel and stay updated with the latest news.

Next