ಕಂಪ್ಲಿ: ವಿವಿಧ ಗ್ರಾಮಗಳ ರೈತರ ಜಮೀನಿಗೆ 6 ದಿನಗಳಲ್ಲಿ ಹಗಲೊತ್ತಿನಲ್ಲಿ 7 ತಾಸು ತ್ರೀಫೇಸ್ ವಿದ್ಯುತ್ ನೀಡದಿದ್ದರೆ ಪಟ್ಟಣದ ಜೆಸ್ಕಾಂ ಕಚೇರಿ ಮುತ್ತಿಗೆ ಹಾಕಿ ಪ್ರತಿಭಟನೆ ಮಾಡಲಾಗುವುದು ಎಂದು ಕರ್ನಾಟಕ ರೈತ ಸಂಘದ ಜಿಲ್ಲಾಧ್ಯಕ್ಷ ಬಿ. ಗಂಗಾಧರ ಅಧಿಕಾರಿಗಳನ್ನು ಎಚ್ಚರಿಸಿದರು.
ಅವರು ತಾಲೂಕಿನ ವಿವಿಧ ಗ್ರಾಮಗಳಾದ ರಾಮಸಾಗರ, ನಂ10 ಮುದ್ದಾಪುರ, ಕಣ್ಣವಿ ತಿಮ್ಮಲಾಪುರ, ದೇವಸಮುದ್ರ ಗ್ರಾಮಗಳ ರೈತರೊಂದಿಗೆ ಪಟ್ಟಣದ ಜೆಸ್ಕಾಂ ಕಚೇರಿಯ 33 ಕೆವಿ ವಿದ್ಯುತ್ ವಿತರಣಾ ಕೇಂದ್ರಕ್ಕೆ ಮುತ್ತಿಗೆ ಹಾಕಿ ಅಧಿಕಾರಿಗಳಿಗೆ ಮನವಿ ಸಲ್ಲಿಸಿ ಮಾತನಾಡಿದರು.
ರಾಮಸಾಗರ, ನಂ10 ಮುದ್ದಾಪುರ, ಕಣ್ಣವಿ , ತಿಮ್ಮಲಾಪುರ ಸೇರಿದಂತೆ ವಿವಿಧ ಗ್ರಾಮಗಳಲ್ಲಿ ಜೆಸ್ಕಾಂ ನಿಗಮಂದಿಂದ ವಾರದ ಪಾಳಿಯಂತೆ ರಾತ್ರಿ ಹಾಗೂ ಹಗಲಿನ ವೇಳೆಯಲ್ಲಿ ವಿದ್ಯುತ್ ಪೂರೈಕೆಯನ್ನು ಮಾಡುತ್ತಿದ್ದು, ರಾತ್ರಿ ಸಮಯದಲ್ಲಿ ನೀರು ಹಾಯಿಸಲು ಹೋಗುವ ರೈತರು ಹಲವಾರು ತೊಂದರೆಗಳನ್ನು, ಕಾಡು ಪ್ರಾಣಿಗಳ ಕಾಟವನ್ನು ಅನುಭವಿಸಬೇಕಾಗಿದೆ. ಎಷ್ಟೋ ರೈತರು ತಮ್ಮ ಪ್ರಾಣಗಳನ್ನು ಕಳೆದುಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಈಗಾಗಲೇ ಹಲವಾರು ಸಲ ಜೆಸ್ಕಾಂ ಕಚೇರಿ ಅಧಿಕಾರಿಗಳೊಂದಿಗೆ ಚರ್ಚಿಸಿದರೂ ಕೇವಲ ಹಾರಿಕೆ ಉತ್ತರವನ್ನು ನೀಡುತ್ತಿದ್ದು, ರೈತರ ಸಮಸ್ಯೆಗಳಿಗೆ ಸ್ಪಂದಿಸುತ್ತಿಲ್ಲ ಎಂದರು.
ಗ್ರಾಮೀಣ ವಿಭಾಗದ ಜೆಸ್ಕಾಂ ಕಚೇರಿ ಎಇ ಷಣ್ಮುಖಪ್ಪ ಅವರಿಗೆ ಮನವಿ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಸಂಘಟನೆ ಪದಾಧಿ ಕಾರಿಗಳಾದ ಬಿ.ಬಲಕುಂದೆಪ್ಪ, ಕೆ. ಬಸವರಾಜ, ಬಿ. ವಾಹಬ್, ಜಿ. ರಾಮಾಂಜಿನಿ, ಕೆ. ಹರ್ಷಿತ್, ಎಸ್.ಬಸವರಾಜ್, ಪಂಪಾಪತಿ, ಮಹೇಶ್, ಜಿ.ನಾರಾಯಣಪ್ಪ, ಉಮೇಶಪ್ಪ, ಮಣಿಕುಮಾರ್ ಇದ್ದರು.