Advertisement

ಜಾತ್ಯತೀತತೆ ದೇಶದ ರಕ್ತದಲ್ಲಿಯೇ ಇದೆ: ವೆಂಕಯ್ಯ ನಾಯ್ಡು

06:30 PM Jul 09, 2022 | Team Udayavani |

ಬೆಂಗಳೂರು: ಜಾತ್ಯತೀತತೆ ಮತ್ತು ಇತರರ ನಂಬಿಕೆಗಳ ಬಗ್ಗೆ ಸಹಿಷ್ಣುತೆ ಹೊಂದಿರುವುದು ಭಾರತೀಯ ನೈತಿಕತೆಯ ಪ್ರಮುಖ ಸಾರವಾಗಿದೆ. ದೇಶದ ಪ್ರತಿಯೊಬ್ಬರಲ್ಲಿಯೂ ಜಾತ್ಯತೀತತೆ ಎಂಬುದು ರಕ್ತಗತವಾಗಿಯೇ ಬರುತ್ತದೆ. ಇದು ಯಾವುದೇ ಸರ್ಕಾರ ಮತ್ತು ಪಕ್ಷಕ್ಕೆ ಸೀಮಿತವಾಗಿಲ್ಲ ಎಂದು ಉಪ ರಾಷ್ಟ್ರಪತಿ ಎಂ. ವೆಂಕಯ್ಯ ನಾಯ್ಡು ಅಭಿಪ್ರಾಯ ವ್ಯಕ್ತಪಡಿಸಿದರು.

Advertisement

ನಗರದಲ್ಲಿ ಶನಿವಾರ ಮೌಂಟ್‌ ಕಾರ್ಮೆಲ್‌ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ಸಂಸ್ಥೆಯ ವಜ್ರ ಮಹೋತ್ಸವ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಭಾರತವು ಯಾವುದೇ ದೇಶಗಳ ಮೇಲೆ ದಾಳಿ ನಡೆಸದೆ ಸಹಿಷ್ಣುತಾ ಮನೋಭಾವದಿಂದ ಇರುವುದು ದೇಶದ ಹಿರಿಮೆ ಮತ್ತು ಶ್ರೀಮಂತಿಕೆಯಾಗಿದೆ. ಇದು ನಮ್ಮ ಸಂಸ್ಕೃತಿ ಮತ್ತು ಪರಂಪರೆಯನ್ನು ತೋರಿಸುತ್ತದೆ ಎಂದು ಹೇಳಿದರು.

ದೇಶದಲ್ಲಿ ಧರ್ಮ ಪ್ರತಿಯೊಬ್ಬರ ವೈಯಕ್ತಿಕ ವಿಚಾರವಾಗಿದೆ ಎಂಬುದನ್ನು ಅರ್ಥಮಾಡಿಕೊಳ್ಳಬೇಕಿದೆ. ಯಾರೊಬ್ಬರು ತಮ್ಮ ಧರ್ಮದ ಬಗ್ಗೆ ಹೆಮ್ಮೆ ಪಡಬಹುದು ಮತ್ತು ಆಚರಣೆ ಮಾಡಬಹುದು. ಆದರೆ, ಇತರರ ಧಾರ್ಮಿಕ ನಂಬಿಕೆಗಳನ್ನು ಅವಹೇಳನ ಮಾಡುವ ಹಕ್ಕು ಯಾರಿಗೂ ಇಲ್ಲ. ಕೆಲವು ಘಟನೆಗಳು ದೇಶದ ಬಹುತ್ವ ಮತ್ತು ಒಳಗೊಳ್ಳುವಿಕೆಯ ಮೌಲ್ಯಗಳ ಬದ್ಧತೆಯನ್ನು ದುರ್ಬಲಗೊಳಿಸಲು ಸಾಧ್ಯವಿಲ್ಲ ಎಂದು ಪ್ರತಿಪಾದಿಸಿದರು.

ಮಹಿಳಾ ಶಿಕ್ಷಣಕ್ಕೆ ಆದ್ಯತೆ
ಭಾರತವು ಶಿಕ್ಷಣ ಕ್ಷೇತ್ರದಲ್ಲಿ ವೈಭವಯುತ ಪರಂಪರೆಯನ್ನು ಹೊಂದಿದೆ. ವೈದ್ಯ, ಖಗೋಳಶಾಸ್ತ್ರ, ಗಣಿತ, ವಿಜ್ಞಾನ, ಸಾಹಿತ್ಯ ಮತ್ತು ವಾಸ್ತುಶಿಲ್ಪದಲ್ಲಿ ವಿಶ್ವಗುರುವಾಗಿತ್ತು. ಅದೇ ರೀತಿ ಪ್ರಾಚೀತ ಭಾರತದ ಶ್ರೇಷ್ಠ ಮಹಿಳಾ ವಿದ್ವಾಂಸರಾದ ಗಾರ್ಗಿ ಮತ್ತು ಮೈತ್ರೇಯಿ ಮಹಿಳಾ ಶಿಕ್ಷಣಕ್ಕೆ ಒತ್ತು ನೀಡಿದ್ದರು.

ಕರ್ನಾಕಟದಲ್ಲಿ ಪ್ರಗತಿಪರ ಸುಧಾಕರರಾದ ಅತ್ತಿಮಬ್ಬೆ ಮತ್ತು ನೋವಲದೇವಿ ವೀರಶೈವ ಚಳವಳಿ ಮೂಲಕ ಮಹಿಳಾ ಶಿಕ್ಷಣದ ವಿಮೋಚನೆಗೆ ಶ್ರಮಿಸಿದ್ದಾರೆ ಎಂದು ಸ್ಮರಿಸಿದರು.

Advertisement

ಮೌಂಟ್‌ ಕಾರ್ಮೆಲ್‌ ಕಾಲೇಜಿನಲ್ಲಿ ವ್ಯಾಸಂಗ ಮಾಡಿರುವ ಮಾರ್ಗರೇಟ್‌ ಆಳ್ವಾ, ಕಿರಣ್‌ ಮಜುಂದರ್‌ ಶಾ, ಅಶ್ವಿ‌ನಿ ನಾಚಪ್ಪ ಸೇರಿದಂತೆ ಹಲವರು ವಿವಿಧ ರಂಗದಲ್ಲಿ ಸಾಧನೆ ಮಾಡಿದ್ದಾರೆ ಎಂದು ಶ್ಲಾಘಿಸಿದರು. ಕಾರ್ಯಕ್ರಮದಲ್ಲಿ ರಾಜ್ಯಪಾಲ ಥಾವರ್‌ಚಂದ್‌ ಗೆಹ್ಲೋಟ್‌, ಮಾಜಿ ರಾಜ್ಯಪಾಲೆ ಮಾರ್ಗರೇಟ್‌ ಆಳ್ವಾ, ಬೆಂ. ನಗರ ವಿವಿ ಕುಲಪತಿ ಪ್ರೊ. ಲಿಂಗರಾಜ ಗಾಂಧಿ, ಕರ್ನಾಟಕ ವೃತ್ತದ ಮುಖ್ಯ ಪೋಸ್ಟ್‌ ಮಾಸ್ಟರ್‌ ಜನರಲ್‌ ಡಾ.ಎಸ್‌.ರಾಜೇಂದ್ರ ಕುಮಾರ್‌, ಬೆಂಗಳೂರಿನ ಆರ್ಚ್‌ ಬಿಷಪ್‌ ಪೀಟರ್‌ ಮಚಾಡೊ, ಕಾಲೇಜಿನ ಪ್ರಾಂಶುಪಾಲರಾದ ಡಾ.ಸಿಸ್ಟರ್‌ ಅರ್ಪಣಾ, ಡಾ.ಸಿಸ್ಟರ್‌ ಕ್ರಿಸ್‌, ಸಿಸ್ಟರ್‌ ಬರ್ನಿಸ್‌ ಉಪಸ್ಥಿತರಿದ್ದರು.

ಮಾತೃಭಾಷೆ ಶಿಕ್ಷಣ ಮೊದಲ ಆದ್ಯತೆಯಾಗಲಿ
ಪ್ರಾಥಮಿಕ ಶಿಕ್ಷಣವನ್ನು ಮಾತೃಭಾಷೆಯಲ್ಲಿಯೇ ನೀಡುವುದು ಮೊದಲ ಆದ್ಯತೆಯಾಗಬೇಕು. ಇದರ ಜೊತೆಗೆ ಸಂವಹನಕ್ಕಾಗಿ ಅನ್ಯ ಭಾಷೆಗಳನ್ನು ಕೂಡ ನಿರ್ಲಕ್ಷ್ಯ ತೋರದೆ ಕಲಿಯಬೇಕು ಎಂದು ಉಪರಾಷ್ಟ್ರಪತಿ ಎಂ. ವೆಂಕಯ್ಯ ನಾಯ್ಡು ಸಲಹೆ ನೀಡಿದರು.

ಸಮಾರಂಭದಲ್ಲಿ ಕನ್ನಡದಲ್ಲೇ ತಮ್ಮ ಭಾಷಣ ಆರಂಭಿಸಿದ ಅವರು, ಮಾತೃಭಾಷೆ ಎಂಬುದು ಕಣ್ಣಿನ ದೃಷ್ಟಿ ಇದ್ದಂತೆ, ಉಳಿದ ಭಾಷೆಗಳು ಕನ್ನಡಕದ ರೀತಿ. ಕಣ್ಣಿನ ದೃಷ್ಟಿಯೇ ಇಲ್ಲದೆ ಕನ್ನಡಕ ಉಪಯೋಗಕ್ಕೆ ಬರುವುದಿಲ್ಲ. ಇದನ್ನು ಅರಿತು ನಾವು ನೂತನ ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಮಾತೃಭಾಷಾ ಶಿಕ್ಷಣಕ್ಕೆ ಪ್ರಾಮುಖ್ಯತೆ ನೀಡಲಾಗಿದೆ. ಮಾತೃಭಾಷೆ ಶಿಕ್ಷಣ ಮಕ್ಕಳಿಗೆ ಭದ್ರ ಬುನಾದಿ ಒದಗಿಸುತ್ತದೆ ಎಂದು ಹೇಳಿದರು.

ಉತ್ತಮ ಭವಿಷ್ಯ ರೂಪಿಸಿಕೊಳ್ಳಲು ಮಾತೃಭಾಷಾ ಶಿಕ್ಷಣವೇ ಮೂಲ ಶಕ್ತಿಯಾಗಿದೆ. ಇಂಗ್ಲೀಷ್‌ ಸೇರಿ ಬೇರೆ ಯಾವುದೇ ಭಾಷೆ ಕಲಿತರೂ ಅದು ಇದಕ್ಕೆ ಹೆಚ್ಚುವರಿ ಶಕ್ತಿ. ದೇಶದ ಹಾಲಿ ರಾಷ್ಟ್ರಪತಿ ಅವರು ಶಿಕ್ಷಣ ಪಡೆದಿದ್ದು ಗ್ರಾಮೀಣ ಶಾಲೆಯಲ್ಲಿ, ಉಪರಾಷ್ಟ್ರಪತಿಯಾದ ನಾನು ಕಾನ್ವೆಂಟ್‌ಗೆ ಹೋಗಿಲ್ಲ, ಪ್ರಧಾನಿ ಅವರು ಕೂಡ ಕಾನ್ವೆಂಟ್‌ ನೋಡಿಲ್ಲ, ಸುಪ್ರೀಂ ಕೋರ್ಟ್‌ನ ಮುಖ್ಯನ್ಯಾಯಮೂರ್ತಿ ಅವರು ತಮ್ಮ ಮಾತೃಭಾಷೆಯಲ್ಲೇ ಶಿಕ್ಷಣ ಪಡೆದಿದ್ದಾಗಿ ಹೇಳಿದ್ದಾರೆ. ಹಾಗಾಗಿ ಪ್ರತಿಯೊಬ್ಬರಿಗೂ ಮಾತೃಭಾಷೆಯ ಬಗ್ಗೆ ಹೆಮ್ಮೆ, ಗೌರವ ಇರಬೇಕು. ಆದೇ ರೀತಿ ಬೇರೆ ಭಾಷೆಗಳ ಬಗ್ಗೆ ಕೀಳರಿಮೆ, ನಿರ್ಲಕ್ಷ್ಯ ತೋರಬಾರದು ಎಂದರು.

Advertisement

Udayavani is now on Telegram. Click here to join our channel and stay updated with the latest news.

Next